"ಕ್ರೀಡಾ ಮನೋಭಾವವು ಭವಿಷ್ಯದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ"
ಪ್ರಾದೇಶಿಕ ಮಟ್ಟದ ಸ್ಪರ್ಧೆಗಳು ಸ್ಥಳೀಯ ಪ್ರತಿಭೆಗಳ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಇಡೀ ಪ್ರದೇಶದ ಆಟಗಾರರ ನೈತಿಕ ಸ್ಥೈರ್ಯವನ್ನೂ ಹೆಚ್ಚಿಸುತ್ತದೆ"
ಸಂಸದ್ ಖೇಲ್ ಮಹಾಕುಂಭವು ಹೊಸ ಮಾರ್ಗ, ಹೊಸ ವ್ಯವಸ್ಥೆ"ಯಾಗಿದೆ
ಕ್ರೀಡಾ ಜಗತ್ತಿನಲ್ಲಿ ದೇಶದ ಸಾಮರ್ಥ್ಯವನ್ನು ಎತ್ತಿ ತೋರಿಸುವಲ್ಲಿ ಸಂಸದ್ ಖೇಲ್ ಮಹಾಕುಂಭವು ದೊಡ್ಡ ಪಾತ್ರವನ್ನು ವಹಿಸುತ್ತದೆ"
ಸಂಸದ್ ಖೇಲ್ ಮಹಾಕುಂಭವು ಕ್ರೀಡೆಯ ಭವಿಷ್ಯದ ಭವ್ಯ ಮೂಲಸೌಕರ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತದೆ"
ಕ್ರೀಡಾ ಸಚಿವಾಲಯದ ಬಜೆಟ್ ಹಂಚಿಕೆ 2014ಕ್ಕೆ ಹೋಲಿಸಿದರೆ ಸುಮಾರು 3 ಪಟ್ಟು ಹೆಚ್ಚಾಗಿದೆ"

 ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಗೋರಖ್‌ಪುರ ಸಂಸದ ರವಿಕಿಶನ್ ಶುಕ್ಲಾ ಜಿ, ಇಲ್ಲಿ ನೆರೆದಿರುವ ಯುವ ಕ್ರೀಡಾಪಟುಗಳೆ,  ತರಬೇತುದಾರರೆ, ಪೋಷಕರೆ ಮತ್ತು ಸಹೋದ್ಯೋಗಿ ಮಿತ್ರರೆ!

ಮೊದಲನೆಯದಾಗಿ ನಾನು ಮಹಾಯೋಗಿ ಗುರು ಗೋರಖ್ ನಾಥರ ಈ ಪುಣ್ಯಭೂಮಿಗೆ ನಮಸ್ಕರಿಸುತ್ತೇನೆ. 'ಸಂಸದ್ ಖೇಲ್' ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ. ನೀವೆಲ್ಲರೂ ತುಂಬಾ ಕಷ್ಟಪಟ್ಟಿದ್ದೀರಿ. ಈ ಸ್ಪರ್ಧೆಯಲ್ಲಿ ಕೆಲವು ಆಟಗಾರರು ಗೆಲ್ಲಬಹುದು, ಮತ್ತೆ ಕೆಲವರು ಸೋಲಬಹುದು. ಆದರೆ ಆಟದ ಮೈದಾನವೇ ಆಗಲಿ ಅಥವಾ ಜೀವನವೆಂಬ ಹೋರಾಟವೇ ಆಗಲಿ ಸೋಲು, ಗೆಲುವು ಎಂಬುದು ಕ್ರೀಡೆ ಮತ್ತು ಜೀವನದ ಭಾಗವಾಗಿದೆ. ಆಟಗಾರರು ಇಲ್ಲಿಯವರೆಗೆ ಬಂದಿದ್ದಾರೆ ಎಂದರೆ ಅವರು ಸೋತವರಲ್ಲ ಎಂದು ನಾನು ಭಾವಿಸುತ್ತೇನೆ. ನೀವು ಬಹಳಷ್ಟು ಕಲಿತಿದ್ದೀರಿ, ಜ್ಞಾನ ಮತ್ತು ಅನುಭವ ಗಳಿಸಿದ್ದೀರಿ. ಇದು ವಿಜಯದ ಬಹುದೊಡ್ಡ ಬಂಡವಾಳವಾಗಿದೆ. ನಿಮ್ಮ ಕ್ರೀಡಾ ಮನೋಭಾವವು ಭವಿಷ್ಯದಲ್ಲಿ ನಿಮಗೆ ಯಶಸ್ಸಿನ ಬಾಗಿಲುಗಳನ್ನು ಹೇಗೆ ತೆರೆಯುತ್ತದೆ ಎಂಬುದನ್ನು ನೀವು ಇದರಿಂದ ಅರಿತುಕೊಳ್ಳುತ್ತೀರಿ.
 
ನನ್ನ ಯುವ ಗೆಳೆಯರೇ,
ಈ ಸ್ಪರ್ಧೆಯಲ್ಲಿ ಕುಸ್ತಿ, ಕಬಡ್ಡಿ, ಹಾಕಿ ಮುಂತಾದ ಕ್ರೀಡಾಕೂಟಗಳ ಜತೆಗೆ ಚಿತ್ರಕಲೆ, ಜಾನಪದ ಗೀತೆಗಳು, ಜಾನಪದ ನೃತ್ಯ, ತಬಲಾ, ಕೊಳಲು ಇತ್ಯಾದಿ ಕ್ರೀಡೆ ಅಥವಾ ಸ್ಪರ್ಧೆಗಳಲ್ಲಿ ಕಲಾವಿದರು ಭಾಗವಹಿಸಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಇದು ಅತ್ಯಂತ ಸುಂದರವಾದ, ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ ಉಪಕ್ರಮವಾಗಿದೆ. ಕ್ರೀಡೆ ಅಥವಾ ಕಲೆ ಮತ್ತು ಸಂಗೀತದಲ್ಲಿ ಪ್ರತಿಭೆ ಇರಲಿ, ಅದರ ಉತ್ಸಾಹ ಮತ್ತು ಶಕ್ತಿ ಒಂದೇ ಆಗಿರುತ್ತದೆ. ಜಾನಪದ ರೂಪದ ನಮ್ಮ ಭಾರತೀಯ ಸಂಪ್ರದಾಯಗಳನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಸಮಾನ ನೈತಿಕ ಜವಾಬ್ದಾರಿಯಾಗಿದೆ. ರವಿ ಕಿಶನ್ ಜಿ ಅವರೇ ಅಂತಹ ಪ್ರತಿಭಾವಂತ ಕಲಾವಿದರಾಗಿದ್ದು, ಅವರಿಗೆ ಕಲೆಯ ಮಹತ್ವ ಚೆನ್ನಾಗಿ ಅರ್ಥವಾಗುವುದು ಸಹಜ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ರವಿಕಿಶನ್ ಜಿ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.
 
ಸ್ನೇಹಿತರೆ,
ಕಳೆದ ಕೆಲವು ವಾರಗಳಲ್ಲಿ ನಾನು ಅಂತಹ 3ನೇ ಸಂಸದ್ ಖೇಲ್ ಮಹಾಕುಂಭದಲ್ಲಿ ಭಾಗವಹಿಸುತ್ತಿದ್ದೇನೆ. ಭಾರತವು ವಿಶ್ವದ ಅತ್ಯುತ್ತಮ ಕ್ರೀಡಾ ಶಕ್ತಿಯಾಗಬೇಕಾದರೆ, ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು, ಹೊಸ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಈ ಸಂಸದ್ ಖೇಲ್ ಮಹಾಕುಂಭವು ಅಂತಹ ಒಂದು ಮಾರ್ಗ ಮತ್ತು ವ್ಯವಸ್ಥೆಯಾಗಿದೆ. ಕ್ರೀಡಾ ಪ್ರತಿಭೆಗಳನ್ನು ಸುಧಾರಿಸಲು ಸ್ಥಳೀಯ ಮಟ್ಟದಲ್ಲಿ ನಿಯಮಿತವಾಗಿ ಕ್ರೀಡಾ ಸ್ಪರ್ಧೆಗಳು ನಡೆಯುವುದು ಬಹಳ ಮುಖ್ಯ. ಲೋಕಸಭೆಯ ಮಟ್ಟದಲ್ಲಿ ನಡೆಯುವ ಇಂತಹ ಸ್ಪರ್ಧೆಗಳು ಸ್ಥಳೀಯ ಪ್ರತಿಭೆಗಳನ್ನು ಹೆಚ್ಚಿಸುವುದಲ್ಲದೆ, ಇಡೀ ಪ್ರದೇಶದ ಆಟಗಾರರ ಮನೋಬಲವನ್ನು ಹೆಚ್ಚಿಸುತ್ತವೆ. ನೀವು ನೋಡಿ, ಗೋರಖ್‌ಪುರದಲ್ಲಿ ಖೇಲ್ ಮಹಾಕುಂಭ ನಡೆದಾಗ ಸುಮಾರು 18,000-20,000 ಆಟಗಾರರು ಭಾಗವಹಿಸಿದ್ದರು. ಈ ಬಾರಿ ಈ ಸಂಖ್ಯೆ ಸುಮಾರು 24,000-25,000ಕ್ಕೆ ಏರಿಕೆಯಾಗಿದೆ. ಈ ಯುವ ಆಟಗಾರರಲ್ಲಿ ಸುಮಾರು 9,000 ನಮ್ಮ ಹೆಣ್ಣುಮಕ್ಕಳು ಭಾಗವಹಿಸಿದ್ದಾರೆ. ಕುಗ್ರಾಮಗಳಿಂದ ಅಥವಾ ಸಣ್ಣ ಪಟ್ಟಣಗಳಿಂದ ಬಂದ ಸಾವಿರಾರು ಯುವಕರು ನಮ್ಮ ನಡುವೆ ಇದ್ದಾರೆ. ಯುವ ಆಟಗಾರರಿಗೆ ಹೊಸ ಅವಕಾಶಗಳನ್ನು ನೀಡಲು ಸಂಸದ್ ಖೇಲ್ ಸ್ಪರ್ಧೆಗಳು ಹೇಗೆ ಹೊಸ ವೇದಿಕೆಯಾಗುತ್ತಿವೆ ಎಂಬುದನ್ನು ಇದು ತೋರಿಸುತ್ತಿದೆ.
 
ಸ್ನೇಹಿತರೆ,
ಹದಿಹರೆಯದ ಮಕ್ಕಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಯಾವುದೋ ಎತ್ತರದಲ್ಲಿ ಜೋತು ಬೀಳುವುದನ್ನು ಅಥವಾ ಮರದ ಕೊಂಬೆಯನ್ನು ಹಿಡಿದುಕೊಳ್ಳುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಅದೇನೆಂದರೆ, ಯಾವುದೇ ವಯಸ್ಸಿನವರಾಗಿರಲಿ, ಫಿಟ್ ಆಗಿರಲು ಯಾವಾಗಲೂ ಅಂತರ್ಗತ ಬಯಕೆ ಇರುತ್ತದೆ. ಒಂದು ಕಾಲದಲ್ಲಿ ಗ್ರಾಮೀಣ ಜಾತ್ರೆಗಳಲ್ಲಿ ಸಾಕಷ್ಟು ಕ್ರೀಡಾ ಚಟುವಟಿಕೆಗಳು, ಆಟಗಳು ನಡೆಯುತ್ತಿದ್ದವು. ಅಖಾಡಗಳಲ್ಲಿ ವಿವಿಧ ಆಟಗಳನ್ನೂ ಆಯೋಜಿಸಲಾಗುತ್ತಿತ್ತು. ಆದರೆ ಕಾಲ ಬದಲಾಯಿತು ಮತ್ತು ಈ ಎಲ್ಲಾ ಹಳೆಯ ವ್ಯವಸ್ಥೆಗಳು ಕ್ರಮೇಣ ಅವನತಿ ಹೊಂದಲು ಪ್ರಾರಂಭಿಸಿದವು. ಶಾಲೆಗಳಲ್ಲಿ ಪಿಟಿ ಪೀರಿಯಡ್ ಗಳನ್ನೂ ಟೈಮ್ ಪಾಸ್ ಪಿರಿಯಡ್ ಎಂದು ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಕ್ರಮದಿಂದ ದೇಶ ತನ್ನ 3-4 ತಲೆಮಾರುಗಳನ್ನು ಕಳೆದುಕೊಂಡಿತು. ಪರಿಣಾಮವಾಗಿ, ಭಾರತದಲ್ಲಿ ಕ್ರೀಡಾ ಸೌಲಭ್ಯಗಳು ಬೆಳೆಯಲಿಲ್ಲ ಅಥವಾ ಹೊಸ ಕ್ರೀಡಾ ವ್ಯವಸ್ಥೆಗಳು ರೂಪುಗೊಳ್ಳಲಿಲ್ಲ. ನೀವು ಟಿವಿಯಲ್ಲಿ ವಿಭಿನ್ನ ಪ್ರತಿಭಾನ್ವೇಷಣೆ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ, ಅನೇಕ ಮಕ್ಕಳು ಸಣ್ಣ ಪಟ್ಟಣಗಳಿಂದ ಬಂದವರು ಎಂದು ನೀವು ಕಂಡುಕೊಳ್ಳುತ್ತೀರಿ. ಅಂತೆಯೇ, ನಮ್ಮ ದೇಶದಲ್ಲಿ ಸಾಕಷ್ಟು ಮತ್ತು ಸುಪ್ತ ಪ್ರತಿಭೆಗಳು ಮತ್ತು ಸಾಮರ್ಥ್ಯಗಳಿವೆ, ಅವು ಹೊರಬರಲು ಉತ್ಸುಕವಾಗಿವೆ. ಕ್ರೀಡಾ ಜಗತ್ತಿನಲ್ಲಿ ಅಂತಹ ಪ್ರತಿಭೆಗಳನ್ನು ಹೊರತರುವಲ್ಲಿ ಸಂಸದ್ ಖೇಲ್ ಮಹಾಕುಂಭ ದೊಡ್ಡ ಪಾತ್ರ ಹೊಂದಿದೆ. ಇಂದು ಬಿಜೆಪಿಯ ನೂರಾರು ಸಂಸದರು ದೇಶದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ. ಊಹಿಸಿಕೊಳ್ಳಿ, ಇಷ್ಟು ದೊಡ್ಡ ಸಂಖ್ಯೆಯ ಯುವ ಆಟಗಾರರು ಮುಂದೆ ಸಾಗಲು ಅವಕಾಶವನ್ನು ಪಡೆಯುತ್ತಿದ್ದಾರೆ. ಈ ಆಟಗಾರರಲ್ಲಿ ಅನೇಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಲು ಹೋಗುತ್ತಾರೆ. ಒಲಿಂಪಿಕ್ಸ್‌ನಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲುವ ಅನೇಕರು ನಿಮ್ಮಲ್ಲಿ ಹೊರಹೊಮ್ಮುತ್ತಾರೆ. ಆದ್ದರಿಂದ, ನಾನು ಸಂಸದ್ ಖೇಲ್ ಮಹಾಕುಂಭವನ್ನು ಬಲವಾದ ಅಡಿಪಾಯ ಅಥವಾ ಬುನಾದಿ ಎದು ಪರಿಗಣಿಸುತ್ತೇನೆ, ಅದರ ಮೇಲೆ ಭವಿಷ್ಯದ ಭವ್ಯ ಕಟ್ಟಡ ನಿರ್ಮಿಸಲಾಗುವುದು.
 
ಸ್ನೇಹಿತರೆ,
ಖೇಲ್ ಮಹಾಕುಂಭದಂತಹ ಕಾರ್ಯಕ್ರಮಗಳ ಜತೆಗೆ, ಇಂದು ಸಣ್ಣ ಪಟ್ಟಣಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲು ದೇಶವು  ಒತ್ತು ನೀಡುತ್ತಿದೆ. ಗೋರಖ್‌ಪುರದ ಪ್ರಾದೇಶಿಕ ಕ್ರೀಡಾಂಗಣ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಗೋರಖ್‌ಪುರದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗಾಗಿ 100ಕ್ಕೂ ಹೆಚ್ಚು ಆಟದ ಮೈದಾನಗಳನ್ನು ನಿರ್ಮಿಸಲಾಗಿದೆ. ಚೌರಿ ಚೌರಾದಲ್ಲಿ ಗ್ರಾಮೀಣ ಮಿನಿ ಕ್ರೀಡಾಂಗಣವನ್ನು ಸಹ ನಿರ್ಮಿಸಲಾಗುತ್ತಿದೆ. ಖೇಲೋ ಇಂಡಿಯಾ ಆಂದೋಲನದ ಅಡಿ, ಇತರ ಕ್ರೀಡಾ ಸೌಲಭ್ಯಗಳೊಂದಿಗೆ, ಆಟಗಾರರ ತರಬೇತಿಗೂ ಗಮನ ನೀಡಲಾಗುತ್ತಿದೆ. ಈಗ ದೇಶವು ಸಮಗ್ರ ದೃಷ್ಟಿಕೋನದಿಂದ ಮುನ್ನಡೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ನಿಟ್ಟಿನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. 2014ಕ್ಕೆ ಹೋಲಿಸಿದರೆ, ಕ್ರೀಡಾ ಸಚಿವಾಲಯದ ಬಜೆಟ್ ಈಗ ಸುಮಾರು 3 ಪಟ್ಟು ಹೆಚ್ಚಾಗಿದೆ. ಇಂದು ದೇಶದಲ್ಲಿ ಅನೇಕ ಆಧುನಿಕ ಕ್ರೀಡಾಂಗಣಗಳು ನಿರ್ಮಾಣವಾಗುತ್ತಿವೆ. ಟಾಪ್ಸ್ ನಂತಹ ಯೋಜನೆಗಳ ಮೂಲಕ ಆಟಗಾರರಿಗೆ ತರಬೇತಿಗಾಗಿ ಲಕ್ಷ ಲಕ್ಷ ರೂಪಾಯಿ  ನೆರವು ನೀಡಲಾಗುತ್ತಿದೆ. ಖೇಲೋ ಇಂಡಿಯಾದ ಜತೆಗೆ ಫಿಟ್ ಇಂಡಿಯಾ ಮತ್ತು ಯೋಗದಂತಹ ಅಭಿಯಾನಗಳು ಕೂಡ ವೇಗ ಪಡೆಯುತ್ತಿವೆ. ಉತ್ತಮ ಪೋಷಣೆಗಾಗಿ ಸಿರಿಧಾನ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಜೋಳ, ಬಜ್ರಾ ಮುಂತಾದ ಸಿರಿಧಾನ್ಯಗಳು ಉತ್ಕೃಷ್ಟ ಆಹಾರಗಳ ವರ್ಗದಲ್ಲಿ ಬರುತ್ತವೆ. ಅದಕ್ಕಾಗಿಯೇ ಈಗ ದೇಶವು ಸಿರಿಧಾನ್ಯಗಳಿಗೆ ಶ್ರೀ ಅನ್ನದ ಗುರುತು ನೀಡಲಾಗಿದೆ. ನೀವೆಲ್ಲರೂ ಈ ಅಭಿಯಾನಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ದೇಶದ ಈ ಧ್ಯೇಯವನ್ನು ಮುನ್ನಡೆಸಬೇಕು. ಇಂದು ಭಾರತೀಯ ಆಟಗಾರರು ಒಲಿಂಪಿಕ್ಸ್ ಮತ್ತು ಇತರ ದೊಡ್ಡ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ರೀತಿಯಲ್ಲಿ, ನಿಮ್ಮಂತಹ ಯುವ ಆಟಗಾರರು ಆ ಪರಂಪರೆಯನ್ನು ಮುನ್ನಡೆಸುತ್ತಾರೆ.
ನೀವೆಲ್ಲರೂ ಮಿಂಚುತ್ತೀರಿ ಮತ್ತು ನಿಮ್ಮ ಯಶಸ್ಸಿನಿಂದ ದೇಶಕ್ಕೆ ಕೀರ್ತಿ ತರುತ್ತೀರಿ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಶುಭಾಶಯಗಳೊಂದಿಗೆ, ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು!
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSME exports touch Rs 9.52 lakh crore in April–September FY26: Govt tells Parliament

Media Coverage

MSME exports touch Rs 9.52 lakh crore in April–September FY26: Govt tells Parliament
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2025
December 21, 2025

Assam Rising, Bharat Shining: PM Modi’s Vision Unlocks North East’s Golden Era