ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಜಿ, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜಿ, ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಜಿ ಮತ್ತು ಶ್ರೀ ಅಜಿತ್ ಪವಾರ್ ಜಿ, ರಾಜ್ಯ ಸರ್ಕಾರದ ಸಚಿವರೇ, ಸಂಸದರೇ, ವಿಧಾನಸಭಾ ಸದಸ್ಯರೇ, ಇತರ ಹಿರಿಯ ಗಣ್ಯರೇ ಮತ್ತು ನನ್ನ ಮಹಾರಾಷ್ಟ್ರದ ಆತ್ಮೀಯ ಸಹೋದರ ಸಹೋದರಿಯರೇ!
ಮಹಾರಾಷ್ಟ್ರದ ಮೂರೂವರೆ ಶಕ್ತಿ ಪೀಠಗಳಿಗೆ ನನ್ನ ಅಪಾರ ಶಿರಸಾಂಗ ಪ್ರಣಾಮಗಳು : ತುಳಜಾಪುರದ ಭವಾನಿ ದೇವಿ, ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ, ಮಾಹೂರಿನ ರೇಣುಕಾ ದೇವಿ ಮತ್ತು ವಾಣಿಯ ಸಪ್ತಶೃಂಗಿ ದೇವಿ. ಥಾಣೆಯಲ್ಲಿರುವ ಶ್ರೀ ಕೊಪಿನೇಶ್ವರ ಪಾದಗಳಿಗೆ ನಮಸ್ಕರಿಸುತ್ತೇನೆ. ನಾನು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ನಮಸ್ಕರಿಸುತ್ತೇನೆ.
ಸಹೋದರ ಸಹೋದರಿಯರೇ,
ಇಂದು ನಾನು ನಿಮ್ಮೊಂದಿಗೆ ಉತ್ತಮ ಸುದ್ದಿಯನ್ನು ಹಂಚಿಕೊಳ್ಳಲು ಮಹಾರಾಷ್ಟ್ರಕ್ಕೆ ಬಂದಿದ್ದೇನೆ. ಕೇಂದ್ರ ಸರ್ಕಾರ ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಇದು ಕೇವಲ ಮರಾಠಿ ಅಥವಾ ಮಹಾರಾಷ್ಟ್ರಕ್ಕೆ ಸಂದ ಗೌರವವಲ್ಲ. ದೇಶಕ್ಕೆ ಜ್ಞಾನ, ತತ್ವಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಸಾಹಿತ್ಯದ ಶ್ರೀಮಂತ ಸಂಸ್ಕೃತಿಯನ್ನು ನೀಡಿದ ಸಂಪ್ರದಾಯಕ್ಕೆ ಇದು ಗೌರವವಾಗಿದೆ. ಇದಕ್ಕಾಗಿ ಭಾರತ ಮತ್ತು ಪ್ರಪಂಚದ ಎಲ್ಲಾ ಮರಾಠಿ ಮಾತನಾಡುವ ಜನರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ನವರಾತ್ರಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲು ಸೌಭಾಗ್ಯ ನಾನು ಹೊಂದಿದ್ದೇನೆ. ಥಾಣೆಗೆ ಆಗಮಿಸುವ ಮೊದಲು, ನಾನು ವಾಶಿಮ್ ನಲ್ಲಿದ್ದೆ, ಅಲ್ಲಿ ದೇಶದ 9.5 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯನ್ನು ಬಿಡುಗಡೆ ಮಾಡಲು ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿತು. ಈಗ, ಥಾಣೆಯಲ್ಲಿ, ನಾವು ಮಹಾರಾಷ್ಟ್ರದ ಆಧುನಿಕ ಅಭಿವೃದ್ಧಿಗೆ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದೇವೆ. ಮಹಾರಾಷ್ಟ್ರದ ಅಭಿವೃದ್ಧಿಯ ಸೂಪರ್ಫಾಸ್ಟ್ ವೇಗ, ಮುಂಬೈ-ಎಂಎಂಆರ್ (ಮುಂಬೈ ಮೆಟ್ರೋಪಾಲಿಟನ್ ಪ್ರದೇಶ), ಇಂದು ರಾಜ್ಯದ ಉಜ್ವಲ ಭವಿಷ್ಯದ ನೋಟವನ್ನು ನೀಡುತ್ತದೆ. ಇಂದು ಮಹಾಯುತಿ ಸರ್ಕಾರವು ಮುಂಬೈ-ಎಂಎಂಆರ್ ನಲ್ಲಿ 30 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಯೋಜನೆಗಳನ್ನು ಪ್ರಾರಂಭಿಸಿದೆ. 12,000 ಕೋಟಿ ರೂಪಾಯಿ ವೆಚ್ಚದ ಥಾಣೆ ಇಂಟೆಗ್ರಲ್ ರಿಂಗ್ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹೆಚ್ಚುವರಿಯಾಗಿ, ನವಿ ಮುಂಬೈ ವಿಮಾನ ನಿಲ್ದಾಣದ ಪ್ರಭಾವದ ಅಧಿಸೂಚಿತ ಪ್ರದೇಶ (ನೈನಾ ಪ್ರಾಜೆಕ್ಟ್), ಚೆಡ್ಡಾ ನಗರದಿಂದ ಆನಂದ್ ನಗರಕ್ಕೆ ಎತ್ತರಿಸಿದ ಪೂರ್ವ ಮುಕ್ತಮಾರ್ಗ ಮತ್ತು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನ ಹೊಸ ಪ್ರಧಾನ ಕಛೇರಿಯಂತಹ ಯೋಜನೆಗಳಿಗೆ ಇಂದು ಅಡಿಪಾಯ ಹಾಕಲಾಯಿತು. ಈ ಯೋಜನೆಗಳು ಮುಂಬೈ ಮತ್ತು ಥಾಣೆಗೆ ಆಧುನಿಕ ಗುರುತನ್ನು ನೀಡುತ್ತವೆ.
![](https://cdn.narendramodi.in/cmsuploads/0.41383500_1728133859_1.jpg)
ಸ್ನೇಹಿತರೇ,
ಇಂದು, ಮುಂಬೈನ ಆರೆಯಿಂದ ಬಿಕೆಸಿ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್) ವರೆಗಿನ ಆಕ್ವಾ ಲೈನ್ ಮೆಟ್ರೋವನ್ನು ಸಹ ಉದ್ಘಾಟಿಸಲಾಗುತ್ತಿದೆ. ಮುಂಬೈನವರು ಈ ಮೆಟ್ರೋ ಮಾರ್ಗಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ನಾನು ಇಂದು ಜಪಾನ್ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಜಪಾನ್ ದೇಶವು ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯ ಮೂಲಕ, ಈ ಯೋಜನೆಗೆ ಅಪಾರ ಬೆಂಬಲವನ್ನು ಒದಗಿಸಿದೆ, ಈ ಮೆಟ್ರೋವನ್ನು ಭಾರತ ಮತ್ತು ಜಪಾನ್ ನಡುವಿನ ಸ್ನೇಹದ ಸಂಕೇತವನ್ನಾಗಿಸಿದೆ.
ಸಹೋದರ ಸಹೋದರಿಯರೇ,
ಬಾಳಾಸಾಹೇಬ್ ಠಾಕ್ರೆ ಅವರು ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದರು. ಇದು ದಿವಂಗತ ಆನಂದ್ ದಿಘೆ ಜಿಯವರ ನಗರವೂ ಹೌದು. ಈ ನಗರವು ದೇಶಕ್ಕೆ ಮೊದಲ ಮಹಿಳಾ ವೈದ್ಯೆ ಆನಂದಿಬಾಯಿ ಜೋಶಿಯನ್ನು ನೀಡಿದೆ. ಇಂದು ನಾವು ಈ ಅಭಿವೃದ್ಧಿ ಯೋಜನೆಗಳ ಮೂಲಕ ಈ ಮಹಾನ್ ವ್ಯಕ್ತಿಗಳ ಕನಸುಗಳನ್ನು ಈಡೇರಿಸುತ್ತಿದ್ದೇವೆ. ಈ ಯೋಜನೆಗಳಿಗಾಗಿ ನಾನು ಥಾಣೆ ಮತ್ತು ಮುಂಬೈನ ಎಲ್ಲಾ ಜನರಿಗೆ ಮತ್ತು ಮಹಾರಾಷ್ಟ್ರದ ಎಲ್ಲ ಜನರನ್ನು ಅಭಿನಂದಿಸುತ್ತೇನೆ.
![](https://cdn.narendramodi.in/cmsuploads/0.87242400_1728133870_3.jpg)
ಸ್ನೇಹಿತರೇ,
ಇಂದು, ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದೇ ಗುರಿಯಿದೆ- ‘ವಿಕಸಿತ ಭಾರತʼ! ಅದಕ್ಕಾಗಿಯೇ ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ, ಪ್ರತಿ ಪ್ರತಿಜ್ಞೆ ಮತ್ತು ಪ್ರತಿಯೊಂದು ಕನಸು ‘ವಿಕಸಿತ ಭಾರತʼ ಕ್ಕೆ ಸಮರ್ಪಿತವಾಗಿದೆ. ಈ ಗುರಿಯನ್ನು ಸಾಧಿಸಲು, ನಾವು ಮುಂಬೈ ಮತ್ತು ಥಾಣೆಯಂತಹ ನಗರಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸಬೇಕಾಗಿದೆ. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರಗಳ ಕೊರತೆಯನ್ನು ತುಂಬುವ ಜೊತೆಗೆ ನಾವು ವೇಗವಾಗಿ ಅಭಿವೃದ್ಧಿ ಹೊಂದಬೇಕಾಗಿರುವುದರಿಂದ ನಾವು ದುಪ್ಪಟ್ಟು ಶ್ರಮಿಸಬೇಕಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮುಂಬೈ ಮತ್ತು ಥಾಣೆಯಂತಹ ನಗರಗಳನ್ನು ಹೇಗೆ ಮುನ್ನಡೆಸುತ್ತಿದ್ದವು ಎನ್ನುವುದನ್ನು ನೆನಪಿಸಿಕೊಳ್ಳಿ? ಜನಸಂಖ್ಯೆ ಬೆಳೆಯುತ್ತಿದೆ, ಸಂಚಾರ ದಟ್ಟಣೆ ಹೆಚ್ಚುತ್ತಿದೆ, ಆದರೆ ಯಾವುದೇ ಪರಿಹಾರಗಳಿಲ್ಲ! ದೇಶದ ಆರ್ಥಿಕ ರಾಜಧಾನಿ ಮುಂಬೈನ ಭಯವು ನಿಧಾನವಾಗುತ್ತಿದೆ ಅಥವಾ ಸ್ಥಗಿತಗೊಳ್ಳುತ್ತದೆ ಎನ್ನುವ ಭಯವು ವಾಸ್ತವವಾಗುತ್ತಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸಲು ನಮ್ಮ ಸರ್ಕಾರ ಶ್ರಮಿಸಿದೆ. ಇಂದು, ಮುಂಬೈ ಮಹಾನಗರ ಪ್ರದೇಶದಲ್ಲಿ ಸುಮಾರು 300 ಕಿಲೋಮೀಟರ್ಗಳ ಮೆಟ್ರೋ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೆರೈನ್ ಡ್ರೈವ್ ನಿಂದ ಬಾಂದ್ರಾವರೆಗಿನ ಪ್ರಯಾಣವು ಕರಾವಳಿ ರಸ್ತೆಯ ಮೂಲಕ 12 ನಿಮಿಷಗಳಲ್ಲಿ ಪೂರ್ಣಗೊಂಡಿದೆ. ಅಟಲ್ ಸೇತು ದಕ್ಷಿಣ ಮುಂಬೈ ಮತ್ತು ನವಿ ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಆರೆಂಜ್ ಗೇಟ್ನಿಂದ ಮರೈನ್ ಡ್ರೈವ್ ವರೆಗಿನ ಭೂಗತ ಸುರಂಗ ಯೋಜನೆಯು ವೇಗವಾಗಿ ಪ್ರಗತಿಯಲ್ಲಿದೆ. ನಾನು ಪಟ್ಟಿ ಮಾಡಬಹುದಾದ ಹಲವಾರು ಯೋಜನೆಗಳಿವೆ, ಆದರೆ ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ವರ್ಸೋವಾ-ಬಾಂದ್ರಾ ಸಮುದ್ರ ಸೇತುವೆ, ಪೂರ್ವ ಮುಕ್ತಮಾರ್ಗ, ಥಾಣೆ-ಬೊರಿವಲಿ ಸುರಂಗ ಮತ್ತು ಥಾಣೆ ವೃತ್ತಾಕಾರದ ಮೆಟ್ರೋ ರೈಲು ಯೋಜನೆಗಳಂತಹ ಯೋಜನೆಗಳು ಈ ನಗರಗಳನ್ನು ಪರಿವರ್ತಿಸುತ್ತಿವೆ. ಇದರಿಂದ ಮುಂಬೈ ಜನತೆಗೆ ಹೆಚ್ಚಿನ ಲಾಭವಾಗಲಿದೆ. ಇದು ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ಕೈಗಾರಿಕೆಗಳು ಇಲ್ಲಿ ಬೆಳೆಯುತ್ತವೆ.
ಸ್ನೇಹಿತರೇ,
ಒಂದು ಕಡೆ ಮಹಾರಾಷ್ಟ್ರದ ಅಭಿವೃದ್ಧಿಗೆ ಮುಡಿಪಾಗಿರುವ ಮಹಾಯುತಿ ಸರಕಾರವಿದೆ. ಮತ್ತೊಂದೆಡೆ ನಮ್ಮಲ್ಲಿ ಕಾಂಗ್ರೆಸ್ ಮತ್ತು ಮಹಾ ಅಘಾಢಿ (ಮೈತ್ರಿಕೂಟ) ಜನಗಳಿದ್ದಾರೆ, ಅವಕಾಶ ಸಿಕ್ಕಾಗಲೆಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುತ್ತಾರೆ. ಮಹಾ ಅಘಾಡಿ ಅಭಿವೃದ್ಧಿ ಯೋಜನೆಗಳನ್ನು ವಿಳಂಬಗೊಳಿಸಲು, ಅಡ್ಡಿಪಡಿಸಲು ಮತ್ತು ದಾರಿ ತಪ್ಪಿಸಲು ಹೆಸರುವಾಸಿಯಾಗಿದೆ. ಇದಕ್ಕೆ ಸಾಕ್ಷಿ ಮುಂಬೈ ಮೆಟ್ರೋ! ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಂಬೈ ಮೆಟ್ರೋ ಲೈನ್ 3 ಅನ್ನು ಪ್ರಾರಂಭಿಸಲಾಯಿತು ಮತ್ತು ಅವರ ಅಧಿಕಾರಾವಧಿಯಲ್ಲಿ 60 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಆದರೆ ನಂತರ ಮಹಾ ಅಘಾಡಿ ಸರ್ಕಾರ ಬಂದು ದುರಹಂಕಾರದಿಂದ ಯೋಜನೆಯನ್ನು ಸ್ಥಗಿತಗೊಳಿಸಿತು. ಯೋಜನೆಯು ಎರಡೂವರೆ ವರ್ಷಗಳ ಕಾಲ ಸ್ಥಗಿತಗೊಂಡಿತು, ಇದರ ವೆಚ್ಚವು 14,000 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ! ಈ 14,000 ಕೋಟಿ ರೂಪಾಯಿ ಯಾರ ಹಣ? ಅದು ಮಹಾರಾಷ್ಟ್ರದ ಹಣವಲ್ಲವೇ? ಅದು ಮಹಾರಾಷ್ಟ್ರದ ಪ್ರಜೆಗಳ ಹಣವಲ್ಲವೇ? ಇದು ಮಹಾರಾಷ್ಟ್ರದ ತೆರಿಗೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವಾಗಿತ್ತು.
![](https://cdn.narendramodi.in/cmsuploads/0.54844900_1728133891_2.jpg)
ಸಹೋದರ ಸಹೋದರಿಯರೇ,
ಒಂದೆಡೆ ಕಾಮಗಾರಿ ಪೂರ್ಣಗೊಳಿಸುವ ಮಹಾಯುತಿ ಸರಕಾರ, ಇನ್ನೊಂದೆಡೆ ಅಭಿವೃದ್ಧಿಗೆ ಅಡ್ಡಿಪಡಿಸುವ ಮಹಾ ಅಘಾಡಿಗರಿದ್ದಾರೆ. ಮಹಾ ಅಘಾಡಿ ಅಭಿವೃದ್ಧಿ ವಿರೋಧಿ ಎಂಬುದನ್ನು ತನ್ನ ಟ್ರ್ಯಾಕ್ ರೆಕಾರ್ಡ್ ಮೂಲಕ ಸಾಬೀತುಪಡಿಸಿದೆ! ಅವರು ಅಟಲ್ ಸೇತುವನ್ನು ವಿರೋಧಿಸಿದರು. ಮುಂಬೈ-ಅಹಮದಾಬಾದ್ ಬುಲೆಟ್ ರೈಲನ್ನು ನಿಲ್ಲಿಸಲು ಸಂಚು ರೂಪಿಸಿದ್ದರು. ಅಧಿಕಾರದಲ್ಲಿದ್ದಾಗ, ಬುಲೆಟ್ ಟ್ರೈನ್ ಯೋಜನೆಯನ್ನು ಮುಂದುವರಿಸಲು ಅವರು ಅನುಮತಿಸಲಿಲ್ಲ. ಮಹಾರಾಷ್ಟ್ರದ ಬರ ಪೀಡಿತ ಪ್ರದೇಶಗಳಲ್ಲಿ ನೀರಿಗೆ ಸಂಬಂಧಿಸಿದ ಯೋಜನೆಗಳಿಗೂ ಅವರು ಅಡ್ಡಿಪಡಿಸಿದರು. ಈ ಯೋಜನೆಗಳು ಮಹಾರಾಷ್ಟ್ರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ಉದ್ದೇಶವನ್ನು ಹೊಂದಿದ್ದವು, ಆದರೆ ಮಹಾ ಅಘಾಡಿ ಸರ್ಕಾರವು ಅವುಗಳನ್ನು ನಿಲ್ಲಿಸಿತು. ಅವರು ನಿಮ್ಮ ಎಲ್ಲಾ ಕೆಲಸಗಳನ್ನು ನಿಲ್ಲಿಸಿದರು. ಈಗ ನೀವು ಅವುಗಳನ್ನು ನಿಲ್ಲಿಸಬೇಕು. ಅಭಿವೃದ್ಧಿಯ ಈ ಶತ್ರುಗಳನ್ನು ನೀವು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ದೂರವಿಡಬೇಕು. ಅವರನ್ನು ತುಂಬಾ ದೂರದಲ್ಲಿರಿಸಿ!
ಸ್ನೇಹಿತರೇ,
ಕಾಂಗ್ರೆಸ್ ಭಾರತದ ಅತ್ಯಂತ ಅಪ್ರಾಮಾಣಿಕ ಮತ್ತು ಭ್ರಷ್ಟ ಪಕ್ಷವಾಗಿದೆ. ಯುಗ ಅಥವಾ ರಾಜ್ಯ ಯಾವುದೇ ಇರಲಿ, ಕಾಂಗ್ರೆಸ್ನ ಗುಣ ಎಂದಿಗೂ ಬದಲಾಗುವುದಿಲ್ಲ! ಕಳೆದ ವಾರದ ಘಟನೆಗಳನ್ನು ನೋಡಿ. ಭೂ ಹಗರಣದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರ ಹೆಸರು ಹೊರಬಿದ್ದಿದೆ. ಅವರ ಮಂತ್ರಿಯೊಬ್ಬರು ಮಹಿಳೆಯರನ್ನು ನಿಂದಿಸುತ್ತಿದ್ದಾರೆ ಮತ್ತು ಅವಮಾನಿಸುತ್ತಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಭರವಸೆಗಳನ್ನು ನೀಡುತ್ತದೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಸಾರ್ವಜನಿಕರ ಶೋಷಣೆಗೆ ಹೊಸ ದಾರಿಗಳನ್ನು ಕಂಡುಕೊಳ್ಳುತ್ತದೆ. ತಮ್ಮ ವಂಚನೆಗಳಿಗೆ ಪ್ರತಿನಿತ್ಯ ಹೊಸ ತೆರಿಗೆಗಳನ್ನು ವಿಧಿಸುವುದು ಅವರ ಕಾರ್ಯಸೂಚಿಯಾಗಿದೆ. ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ಮಿತಿಗಳನ್ನು ಮೀರಿದೆ. ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ಹೊಸ ತೆರಿಗೆ ವಿಧಿಸಿದೆ. ಅದು ಏನೆಂದು ನೀವು ಊಹಿಸಲೂ ಸಾಧ್ಯವಿಲ್ಲ. ಈ ಹೊಸ ತೆರಿಗೆ ಏನು? ಅವರು "ಶೌಚಾಲಯ ತೆರಿಗೆ" ವಿಧಿಸಿದ್ದಾರೆ! ಒಂದೆಡೆ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಮೋದಿ ಹೇಳುತ್ತಿದ್ದರೆ, ಇನ್ನೊಂದೆಡೆ ಶೌಚಾಲಯದ ಮೇಲೆ ತೆರಿಗೆ ಹಾಕುತ್ತೇವೆ ಎನ್ನುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾಂಗ್ರೆಸ್ ನಿಜವಾಗಿಯೂ ಲೂಟಿ ಮತ್ತು ವಂಚನೆಯ ಪ್ಯಾಕೇಜ್ ಆಗಿದೆ. ಅವರು ನಿಮ್ಮ ಭೂಮಿಯನ್ನು ಕದಿಯುತ್ತಾರೆ, ಯುವಕರನ್ನು ಮಾದಕ ದ್ರವ್ಯಗಳಿಗೆ ತಳ್ಳುತ್ತಾರೆ, ತೆರಿಗೆಯಿಂದ ನಿಮಗೆ ಹೊರೆಯಾಗುತ್ತಾರೆ ಮತ್ತು ಮಹಿಳೆಯರನ್ನು ನಿಂದಿಸುತ್ತಾರೆ. ಸುಳ್ಳು, ಭ್ರಷ್ಟಾಚಾರ ಮತ್ತು ದುರಾಡಳಿತದ ಈ ಸಂಪೂರ್ಣ ಪ್ಯಾಕೇಜ್ ಕಾಂಗ್ರೆಸ್ನ ಗುರುತಾಗಿದೆ. ನೆನಪಿಡಿ, ನಾನು ನಿಮ್ಮೊಂದಿಗೆ ಇತ್ತೀಚಿನ ದಿನಗಳ ಒಂದು ಚಿತ್ರಣವನ್ನು ಮಾತ್ರ ಹಂಚಿಕೊಂಡಿದ್ದೇನೆ, ಅದು ಸಂಪೂರ್ಣವಾಗಿ ಅಲ್ಲ, ಏಕೆಂದರೆ ಸಮಯದ ಕೊರತೆಯಿದೆ. ಇದನ್ನು ಕಾಂಗ್ರೆಸ್ ವರ್ಷಗಳಿಂದ ಮಾಡುತ್ತಿದೆ.
![](https://cdn.narendramodi.in/cmsuploads/0.09909000_1728133912_4.jpg)
ಸಹೋದರ ಸಹೋದರಿಯರೇ,
ಅವರು ಈಗಾಗಲೇ ಮಹಾರಾಷ್ಟ್ರದಲ್ಲಿ ತಮ್ಮ ನಿಜವಾದ ಬಣ್ಣವನ್ನು ತೋರಿಸಲು ಪ್ರಾರಂಭಿಸಿದ್ದಾರೆ. ನೋಡಿ, ಮಹಾಯುತಿ ಸರ್ಕಾರವು ಮಹಾರಾಷ್ಟ್ರದ ಮಹಿಳೆಯರಿಗಾಗಿ ‘ಲಡ್ಕಿ ಬಹಿನ್ ಯೋಜನೆ’ ಆರಂಭಿಸಿದೆ. ಈ ಯೋಜನೆಯಡಿ, ಮಹಿಳೆಯರು ತಿಂಗಳಿಗೆ 1,500 ರೂಪಾಯಿಗಳನ್ನು ಮತ್ತು ವರ್ಷಕ್ಕೆ ಮೂರು ಉಚಿತ ಎಲ್ಪಿಜಿ ಸಿಲಿಂಡರ್ಗಳನ್ನು ಪಡೆಯುತ್ತಾರೆ. ಮಹಾ ಅಘಾಡಿಗರಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಆದರೆ ಅದು ಅವರಿಗೆ ಸಿಗುವುದಿಲ್ಲ, ಸಿಕ್ಕರೆ ಅವರು ಮಾಡುವ ಮೊದಲ ಕೆಲಸವೆಂದರೆ ಶಿಂಧೆ ಜಿ ಮೇಲಿನ ಕೋಪವನ್ನು ಹೊರಹಾಕುವುದು ಮತ್ತು ಅವರು ಶಿಂಧೆ ಜಿ ಪರಿಚಯಿಸಿದ ಎಲ್ಲಾ ಯೋಜನೆಗಳನ್ನು ಮುಚ್ಚುವುದು. ಮಹಾ ಅಘಾಡಿಯು ಹಣವು ಸಹೋದರಿಯರ ಕೈಗೆ ತಲುಪಬಾರದು ಆದರೆ ಅವರ ಮಧ್ಯವರ್ತಿಗಳ ಜೇಬಿಗೆ ಸೇರಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ನಮ್ಮ ತಾಯಂದಿರು ಮತ್ತು ಸಹೋದರಿಯರು ಕಾಂಗ್ರೆಸ್ ಮತ್ತು ಮಹಾ ಅಘಾಡಿ ಜನರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.
ಸ್ನೇಹಿತರೇ,
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ದೇಶದ ಅಭಿವೃದ್ಧಿಯಿಂದ ಕಾಂಗ್ರೆಸ್ ಏಕೆ ತೊಂದರೆಯಾಗುತ್ತಿದೆ ಎಂಬ ಪ್ರಶ್ನೆ ಆಗಾಗ್ಗೆ ಬರುತ್ತಿತ್ತು. ಆದರೆ ಅಧಿಕಾರದಿಂದ ಹೊರಗುಳಿದ ನಂತರ, ಅವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಇಂದು ಕಾಂಗ್ರೆಸ್ನ ನೈಜ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಈಗ ಅರ್ಬನ್ ನಕ್ಸಲ್ ಗ್ಯಾಂಗ್ ನಡೆಸುತ್ತಿದೆ. ಪ್ರಪಂಚದಾದ್ಯಂತ, ಭಾರತದ ಪ್ರಗತಿಯನ್ನು ತಡೆಯಲು ಬಯಸುವವರು - ಕಾಂಗ್ರೆಸ್ ಈಗ ಬಹಿರಂಗವಾಗಿ ಅವರೊಂದಿಗೆ ನಿಂತಿದೆ. ಆದ್ದರಿಂದಲೇ, ತಮ್ಮ ಭಾರೀ ವೈಫಲ್ಯಗಳ ಹೊರತಾಗಿಯೂ, ಕಾಂಗ್ರೆಸ್ ಇನ್ನೂ ಸರ್ಕಾರ ರಚಿಸುವ ಕನಸು ಕಾಣುತ್ತಿದೆ! ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಹಾಗೇ ಉಳಿಯುತ್ತದೆ ಆದರೆ ಇತರ ಜನರು ಸುಲಭವಾಗಿ ಬೇರೆ ಬೇರೆಯಾಗುತ್ತಾರೆ ಎಂದು ತಿಳಿದಿದೆ. ಆದ್ದರಿಂದ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಒಂದೇ ಧ್ಯೇಯವನ್ನು ಹೊಂದಿವೆ: ಸಮಾಜವನ್ನು ವಿಭಜಿಸಿ, ಜನರನ್ನು ವಿಭಜಿಸಿ ಮತ್ತು ಅಧಿಕಾರವನ್ನು ಹಿಡಿಯಿರಿ. ಆದ್ದರಿಂದ, ನಾವು ಕಳೆದ ದಿನಗಳಿಂದ ಪಾಠ ಕಲಿಯಬೇಕು. ನಮ್ಮ ಒಗ್ಗಟ್ಟನ್ನು ದೇಶದ ಗುರಾಣಿಯನ್ನಾಗಿ ಮಾಡಿಕೊಳ್ಳಬೇಕು. ಒಡೆದರೆ ಒಡೆದವರೇ ಸಂಭ್ರಮಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು. ನಾವು ಕಾಂಗ್ರೆಸ್ ಮತ್ತು ಮಹಾ ಅಘಾಡಿ ಜನರ ಯೋಜನೆಗಳನ್ನು ಯಶಸ್ವಿಯಾಗಲು ಬಿಡಬಾರದು.
![](https://cdn.narendramodi.in/cmsuploads/0.30949100_1728133923_5.jpg)
ಸ್ನೇಹಿತರೇ,
ಕಾಂಗ್ರೆಸ್ ಎಲ್ಲಿ ಕಾಲಿಟ್ಟರೂ ಅದು ವಿನಾಶಕ್ಕೆ ಕಾರಣವಾಗುತ್ತದೆ. ಅವರು ದೇಶವನ್ನು ಬಡತನಕ್ಕೆ ತಳ್ಳಿದ್ದಾರೆ! ಅವರು ಮಹಾರಾಷ್ಟ್ರವನ್ನು ನಾಶಪಡಿಸಿದರು, ಅವರು ಮಹಾರಾಷ್ಟ್ರದ ರೈತರನ್ನು ನಾಶಪಡಿಸಿದರು. ಎಲ್ಲೆಲ್ಲಿ ಸರ್ಕಾರ ರಚನೆ ಮಾಡಿದರೂ ಆ ರಾಜ್ಯಗಳನ್ನು ನಾಶ ಮಾಡಿದ್ದಾರೆ. ಅದಷ್ಟೇ ಅಲ್ಲ, ಅವರ ಜೊತೆಗೆ ಮೈತ್ರಿ ಮಾಡಿದ ಪಕ್ಷಗಳೂ ನಾಶವಾಗುತ್ತಿವೆ. ಮೊದಲೆಲ್ಲಾ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಿದ್ದವರು ಈಗ ತುಷ್ಟೀಕರಣದ ರಾಜಕಾರಣ ಮಾಡಲು ಆರಂಭಿಸಿದ್ದಾರೆ . ವಕ್ಫ್ ಮಂಡಳಿಯ ಅಕ್ರಮ ಒತ್ತುವರಿ ಬಗ್ಗೆ ನಮ್ಮ ಸರ್ಕಾರ ಮಸೂದೆ ತಂದಿರುವುದು ನಿಮಗೂ ಗೊತ್ತಿದೆ. ಆದರೆ, ತುಷ್ಟೀಕರಣದ ರಾಜಕಾರಣದಲ್ಲಿ ಕಾಂಗ್ರೆಸ್ ನ ಹೊಸ ಶಿಷ್ಯರು ನಮ್ಮ ವಕ್ಫ್ ಬೋರ್ಡ್ ಮಸೂದೆಯನ್ನು ವಿರೋಧಿಸುವ ಪಾಪ ಮಾಡುತ್ತಿದ್ದಾರೆ. ವಕ್ಫ್ ಅಕ್ರಮ ಒತ್ತುವರಿ ತೆರವಿಗೆ ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ನವರು ವೀರ ಸಾವರ್ಕರ್ ಜೀ ಅವರನ್ನು ನಿಂದಿಸುತ್ತಾರೆ ಮತ್ತು ಅವಮಾನಿಸುತ್ತಾರೆ ಆದರೂ ಅವರ ಬೆನ್ನಿಗೆ ಕಾಂಗ್ರೆಸ್ ಅನುನಾಯಿಗಳು ನಿಂತಿದ್ದಾರೆ. ಇಂದು ಜಮ್ಮು-ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೆ ತರುವುದಾಗಿ ಕಾಂಗ್ರೆಸ್ ಘೋಷಣೆ ಮಾಡುತ್ತಿದ್ದು, ಕಾಂಗ್ರೆಸ್ ಅನುನಾಯಿಗಳು ಮೌನವಾಗಿದ್ದಾರೆ. ಸಿದ್ಧಾಂತದ ಅಧಃಪತನ, ಕಾಂಗ್ರೆಸ್ನ ಅಸ್ತಿತ್ವ, ಹೊಸ ವೋಟ್ ಬ್ಯಾಂಕ್ ಸೃಷ್ಟಿಸಲು ಕಾಂಗ್ರೆಸ್ಸಿನ ಈ ತುಷ್ಟೀಕರಣ ಧೋರಣೆ ಮತ್ತು ಕಾಂಗ್ರೆಸ್ನ ಪ್ರಭಾವಕ್ಕೆ ಒಳಗಾದ ಯಾರೇ ಆಗಲಿ ಅವರ ಅವನತಿ ಎದ್ದು ಕಾಣುತ್ತಿದೆ.
ಸ್ನೇಹಿತರೇ,
ಇಂದು, ದೇಶ ಮತ್ತು ಮಹಾರಾಷ್ಟ್ರಕ್ಕೆ ಸ್ಪಷ್ಟ ನೀತಿಗಳೊಂದಿಗೆ ಪ್ರಾಮಾಣಿಕ ಮತ್ತು ಸ್ಥಿರ ಸರ್ಕಾರದ ಅಗತ್ಯವಿದೆ. ಬಿಜೆಪಿ ಮತ್ತು ಮಹಾಯುತಿ ಸರ್ಕಾರ ಮಾತ್ರ ಇದನ್ನು ಸಾಧಿಸಬಲ್ಲದು. ಸಾಮಾಜಿಕ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ದೇಶದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಿದ್ದು ಬಿಜೆಪಿ ಮಾತ್ರ. ಹೆದ್ದಾರಿಗಳು, ಎಕ್ಸ್ಪ್ರೆಸ್ ವೇಗಳು, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾವು ದಾಖಲೆ ಮಾಡಿದ್ದೇವೆ ಮತ್ತು ನಾವು 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ. ದೇಶವನ್ನು ಮುನ್ನಡೆಸಲು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಮಹಾರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಈ ಸಂಕಲ್ಪದೊಂದಿಗೆ ನಿಲ್ಲುತ್ತಾರೆ, ಎನ್ ಡಿಎ ಜೊತೆ ನಿಲ್ಲುತ್ತಾರೆ ಎಂದು ನನಗೆ ವಿಶ್ವಾಸವಿದೆ. ಒಟ್ಟಾಗಿ ನಾವು ಮಹಾರಾಷ್ಟ್ರದ ಕನಸುಗಳನ್ನು ಈಡೇರಿಸುತ್ತೇವೆ. ಈ ವಿಶ್ವಾಸದೊಂದಿಗೆ, ಎಲ್ಲಾ ಅಭಿವೃದ್ಧಿ ಯೋಜನೆಗಳು ಮತ್ತು ಅಪಾರ ಪ್ರಮಾಣದ ಕೆಲಸಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನನ್ನೊಂದಿಗೆ ಸೇರಿ ಹೇಳಿರಿ:
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ತುಂಬಾ ಧನ್ಯವಾದಗಳು.