ಮುಂದಿನ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಗ್ರಹಕ್ಕೆ ರಕ್ಷಣೆಯ ಅಗತ್ಯವಿದೆ: ಪ್ರಧಾನಿ
ಸಾಂಕ್ರಾಮಿಕ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನವು ನಿಭಾಯಿಸಲು, ಸಂಪರ್ಕಿಸಲು, ಸೌಕರ್ಯ ಕಲ್ಪಿಸಲು ಮತ್ತು ಸಾಂತ್ವನಕ್ಕೆ ನೆರವಾಯಿತು: ಪ್ರಧಾನಿ
ಅಡಚಣೆಯಿಂದ ಹತಾಶರಾಗಬೇಕಿಲ್ಲ, ದುರಸ್ತಿ ಮತ್ತು ಸಿದ್ಧತೆ ಎಂಬ ಅವಳಿ ಅಡಿಪಾಯಗಳತ್ತ ನಾವು ಗಮನ ಹರಿಸಬೇಕು: ಪ್ರಧಾನಿ
ನಮ್ಮ ಗ್ರಹವು ಎದುರಿಸುತ್ತಿರುವ ಸವಾಲುಗಳನ್ನು ಸಾಮೂಹಿಕ ಮನೋಭಾವ ಮತ್ತು ಮಾನವ ಕೇಂದ್ರಿತ ವಿಧಾನದಿಂದ ಮಾತ್ರ ನಿವಾರಿಸಬಹುದು: ಪ್ರಧಾನಿ
ಸಾಂಕ್ರಾಮಿಕವು ನಮ್ಮ ಸ್ಥಿತಿಸ್ಥಾಪಕತ್ವವನ್ನು ಮಾತ್ರ ಪರೀಕ್ಷಿಸುತ್ತಿಲ್ಲ, ನಮ್ಮ ಕಲ್ಪನೆಯನ್ನೂ ಪರೀಕ್ಷಿಸುತ್ತಿದೆ. ಪ್ರತಿಯೊಬ್ಬರಿಗೂ ಹೆಚ್ಚು ಅಂತರ್ಗತವಾದ, ಕಾಳಜಿಯ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಇದೊಂದು ಅವಕಾಶ: ಪ್ರಧಾನಿ
ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ವ್ಯವಸ್ಥೆಗಳಲ್ಲಿ ಒಂದಾಗಿದೆ, ಭಾರತವು ನಾವೀನ್ಯಕಾರರು ಮತ್ತು ಹೂಡಿಕೆದಾರರಿಗೆ ಬೇಕಾದುದನ್ನು ನೀಡುತ್ತದೆ: ಪ್ರಧಾನಿ
ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಪರಿಸರ ವ್ಯವಸ್ಥೆ ಮತ್ತು ಮುಕ್ತ ಸಂಸ್ಕೃತಿ ಎಂಬ ಐದು ಸ್ತಂಭಗಳ ಆಧಾರದ ಮೇಲೆ ನಿಂತಿರುವ ಭಾರತದಲ್ಲಿ ಹೂಡಿಕೆ ಮಾಡಲು ಜಗತ್ತನ್ನು ಆಹ್ವಾನಿಸುತ್ತೇನೆ: ಪ್ರಧಾನಿ
ಫ್ರಾನ್ಸ್ ಮತ್ತು ಯುರೋಪ್ ನಮ್ಮ ಪ್ರಮುಖ ಪಾಲುದಾರರು, ನಮ್ಮ ಪಾಲುದಾರಿಕೆಗಳು ಮನುಕುಲದ ಸೇವೆಯ ದೊಡ್ಡ ಉದ್ದೇಶವನ್ನು ಪೂರೈಸಬೇಕು: ಪ್ರಧಾನಿ

ಗೌರವಾನ್ವಿತ, ನನ್ನ ನಲ್ಮೆಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರಾನ್

ಪಬ್ಲಿಸಿಸ್ ಗುಂಪಿನ ಅಧ್ಯಕ್ಷ ಶ್ರೀ ಮೌರಿಸ್ ಲೆವಿ

ವಿಶ್ವದಾದ್ಯಂತದಿಂದ ಇದರಲ್ಲಿ ಭಾಗವಹಿಸಿರುವ ಪ್ರತಿನಿಧಿಗಳೇ

ನಮಸ್ತೇ!

ಈ ಕಷ್ಟದ ಸಮಯದಲ್ಲಿಯೂ ವಿವಾಟೆಕ್ ನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದಕ್ಕೆ ಸಂಘಟಕರಿಗೆ ಅಭಿನಂದನೆಗಳು.

ಈ ವೇದಿಕೆಯು ಫ್ರಾನ್ಸ್ ನ ತಾಂತ್ರಿಕ ಮುನ್ನೋಟವನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಫ್ರಾನ್ಸ್ ಗಳು ಅನೇಕ ವಿಷಯಗಳಲ್ಲಿ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ, ತಂತ್ರಜ್ಞಾನ ಮತ್ತು ಡಿಜಿಟಲ್ ಕ್ಷೇತ್ರಗಳು ಸಹಕಾರದ ವಲಯಗಳಾಗಿ ಮೂಡಿ ಬರುತ್ತಿವೆ. ಇಂತಹ ಸಹಕಾರ ಇನ್ನಷ್ಟು ಬೆಳೆಯಬೇಕು ಎನ್ನುವುದು ಈ ಸಮಯದ ಆವಶ್ಯಕತೆಯಾಗಿದೆ. ಇದರಿಂದ ನಮ್ಮ ದೇಶಗಳಿಗೆ ಲಾಭವಾಗುವುದು ಮಾತ್ರವಲ್ಲ ವಿಸ್ತಾರವ್ಯಾಪ್ತಿಯಲ್ಲಿ ವಿಶ್ವಕ್ಕೂ ಲಾಭವಾಗಲಿದೆ.

ಬಹಳಷ್ಟು ಯುವಜನತೆ ಫ್ರೆಂಚ್ ಓಪನ್ ನ್ನು ಬಹಳ ಉತ್ಸಾಹದಿಂದ ನೋಡಿದ್ದಾರೆ. ಭಾರತದ ಟೆಕ್ ಕಂಪೆನಿಗಳಲ್ಲಿ ಒಂದಾದ ಇನ್ಫೋಸಿಸ್ ಈ ಪಂದ್ಯಾಟಕ್ಕೆ ತಾಂತ್ರಿಕ ಬೆಂಬಲವನ್ನು ಒದಗಿಸಿದೆ. ಅದೇ ರೀತಿ ಫ್ರೆಂಚ್ ಕಂಪೆನಿ ಅಟೋಸ್ ಭಾರತದಲ್ಲಿ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ ನಿರ್ಮಾಣ ಮಾಡುವ ಯೋಜನೆಯಲ್ಲಿ ಭಾಗಿಯಾಗಿದೆ. ಫ್ರಾನ್ಸಿನ ಕ್ಯಾಪ್ ಜೆಮಿನಿ ಇರಲಿ ಅಥವಾ ಭಾರತದ ಟಿ.ಸಿ.ಎಸ್. ಮತ್ತು ವಿಪ್ರೋ ಇರಲಿ, ನಮ್ಮ ಐ.ಟಿ. ಪ್ರತಿಭೆಗಳು ಜಗತ್ತಿನಾದ್ಯಂತ ಕಂಪೆನಿಗಳಿಗೆ  ಮತ್ತು ನಾಗರಿಕರಿಗೆ ಸೇವೆಯನ್ನು ಒದಗಿಸುತ್ತಿವೆ.

ಸ್ನೇಹಿತರೇ,

ನಾನು ನಂಬುತ್ತೇನೆ- ಸಂಪ್ರದಾಯಗಳು ವಿಫಲವಾಗುವಲ್ಲಿ, ಅನ್ವೇಷಣೆ ಸಹಾಯ ಮಾಡಬಲ್ಲದು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಇದನ್ನು ನೋಡಬಹುದು. ಇದು ನಮ್ಮ ಕಾಲದ ಅತ್ಯಂತ ದೊಡ್ಡ ಅಸ್ತವ್ಯಸ್ತ ಸ್ಥಿತಿ. ಎಲ್ಲಾ ರಾಷ್ಟ್ರಗಳೂ ನಷ್ಟ ಅನುಭವಿಸಿವೆ ಮತ್ತು ಭವಿಷ್ಯದ ಬಗ್ಗೆ ಆತಂಕದಿಂದಿವೆ. ಕೋವಿಡ್ -19 ನಮ್ಮ ಹಲವು ಸಾಂಪ್ರದಾಯಿಕ ವಿಧಾನಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಆದಾಗ್ಯೂ ಅನ್ವೇಷಣೆ ನಮ್ಮನ್ನು ರಕ್ಷಿಸಿತು. ಅನ್ವೇಷಣೆಯನ್ನು ನಾನು ಹೀಗೆ ಉಲ್ಲೇಖಿಸುತ್ತೇನೆ:

ಜಾಗತಿಕ ಸಾಂಕ್ರಾಮಿಕಕ್ಕೆ ಮೊದಲು ಅನ್ವೇಷಣೆ.

ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲ್ಲಿ ಅನ್ವೇಷಣೆ.

ಜಾಗತಿಕ ಸಾಂಕ್ರಾಮಿಕಕ್ಕೆ ಮೊದಲಿನ ಅನ್ವೇಷಣೆಯ ಬಗ್ಗೆ ನಾನು ಮಾತನಾಡುವಾಗ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ ನೆರವಿಗೆ ಬಂದ ಈ ಮೊದಲು ಇದ್ದಂತಹ ಸವಲತ್ತುಗಳನ್ನು ಪ್ರಸ್ತಾಪಿಸುತ್ತೇನೆ. ಡಿಜಿಟಲ್ ತಂತ್ರಜ್ಞಾನ ನಮಗೆ ಸಂದರ್ಭವನ್ನು ನಿಭಾಯಿಸಲು, ಸಂಪರ್ಕ ಮಾಡಲು, ಸವಲತ್ತುಗಳನ್ನು ಒದಗಿಸಲು ಮತ್ತು ಸಮಾಧಾನ ಮಾಡಲು ಸಹಾಯ ಮಾಡಿತು. ಡಿಜಿಟಲ್ ಮಾಧ್ಯಮದ ಮೂಲಕ ನಾವು ಕೆಲಸ ಮಾಡಲು ಸಾಧ್ಯವಾಯಿತು. ನಮ್ಮ ಪ್ರೀತಿ ಪಾತ್ರರ ಜೊತೆ ಮಾತನಾಡಲು ಮತ್ತು ಇತರರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಭಾರತದ ಸಾರ್ವತ್ರಿಕ ಮತ್ತು ವಿಶಿಷ್ಟ ಬಯೋಮೆಟ್ರಿಕ್ ಡಿಜಿಟಲ್ ಗುರುತಿಸುವ ವ್ಯವಸ್ಥೆ –ಆಧಾರ್- ಬಡವರಿಗೆ ಸಕಾಲದಲ್ಲಿ ಹಣಕಾಸು ಬೆಂಬಲ ನೀಡುವುದಕ್ಕೆ ಸಹಕಾರಿಯಾಯಿತು. ನಮಗೆ 800 ಮಿಲಿಯನ್ ಜನರಿಗೆ ಉಚಿತ ಆಹಾರ ಪೂರೈಕೆ ಮಾಡಲು ಮತ್ತು ಅಡುಗೆ ಅನಿಲ ಸಬ್ಸಿಡಿಗಳನ್ನು ಹಲವಾರು ಮನೆಗಳಿಗೆ ತಲುಪಿಸುವುದಕ್ಕೆ ಸಾಧ್ಯವಾಯಿತು. ನಾವು ಭಾರತದಲ್ಲಿದ್ದವರು ಎರಡು ಸಾರ್ವಜನಿಕ ಡಿಜಿಟಲ್ ಶಿಕ್ಷಣ ಕಾರ್ಯಕ್ರಮಗಳಾದ –ಸ್ವಯಂ ಮತ್ತು ದೀಕ್ಷಾ ಗಳನ್ನು ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಿ ಬಹಳ ತ್ವರಿತವಾಗಿ ಕಾರ್ಯಾಚರಿಸುವಂತೆ ಮಾಡಲು ಸಮರ್ಥರಾದೆವು.

ಎರಡನೇ ಭಾಗದಲ್ಲಿ, ಜಾಗತಿಕ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಅನ್ವೇಷಣೆಯನ್ನು ಉಲ್ಲೇಖಿಸುವಾಗ ಆ ಸಂದರ್ಭಕ್ಕೆ ಅನುಗುಣವಾಗಿ ಹೇಗೆ ಮಾನವತೆ ಜಾಗೃತವಾಯಿತು ಮತ್ತು ಅದರ ವಿರುದ್ಧದ ಹೋರಾಟ ಹೇಗೆ ಹೆಚ್ಚು ಪರಿಣಾಮಕಾರಿಯಾಯಿತು ಎಂಬುದರ ಉಲ್ಲೇಖ ಅವಶ್ಯ. ಈ ನಿಟ್ಟಿನಲ್ಲಿ ನಮ್ಮ ನವೋದ್ಯಮ ವಲಯದ ಪಾತ್ರ ಬಹಳ ಮುಖ್ಯ. ನಾನು ನಿಮಗೆ ಭಾರತದ ಉದಾಹರಣೆಯೊಂದನ್ನು ಕೊಡುತ್ತೇನೆ. ಜಾಗತಿಕ ಸಾಂಕ್ರಾಮಿಕ ನಮ್ಮ ತೀರಗಳನ್ನು ಅಪ್ಪಳಿಸಿದಾಗ ನಮ್ಮಲ್ಲಿ ಸಾಕಷ್ಟು ಪರೀಕ್ಷಾ ಸಾಮರ್ಥ್ಯ ಇರಲಿಲ್ಲ. ಮುಖಗವಸು, ಪಿ.ಪಿ.ಇ., ವೆಂಟಿಲೇಟರುಗಳು ಮತ್ತು ಇತರ ಇಂತಹ ಸಲಕರಣೆಗಳ ಕೊರತೆ ಇತ್ತು. ಈ ಕೊರತೆಯನ್ನು ನಿಭಾಯಿಸುವಲ್ಲಿ ನಮ್ಮ ಖಾಸಗಿ ವಲಯ ಪ್ರಮುಖ ಪಾತ್ರವನ್ನು ವಹಿಸಿತು. ಕೆಲವು ಕೋವಿಡ್ ಮತ್ತು ಕೋವಿಡೇತರ ವಿಷಯಗಳನ್ನು ವರ್ಚುವಲ್ ಆಗಿ ನಿರ್ವಹಿಸಲು ನಮ್ಮ ವೈದ್ಯರು ಟೆಲಿಮೆಡಿಸಿನ್ ನ್ನು ಬಹಳ ದೊಡ್ಡ ಮಟ್ಟದಲ್ಲಿ ಬಳಸಿಕೊಂಡರು. ಭಾರತದಲ್ಲಿ ಎರಡು ಲಸಿಕೆಗಳನ್ನು ತಯಾರಿಸಲಾಯಿತು. ಮತ್ತು ಇನ್ನೂ ಕೆಲವು ಅಭಿವೃದ್ಧಿಯಾಗುತ್ತಿವೆ ಇಲ್ಲವೇ ಪರೀಕ್ಷಾ ಹಂತದಲ್ಲಿವೆ. ಸರಕಾರದ ವತಿಯಿಂದ ನಮ್ಮ ದೇಶೀಯ ಐ.ಟಿ. ವೇದಿಕೆ, ಆರೋಗ್ಯ ಸೇತು ಸಮರ್ಪಕವಾಗಿ ಸಂಪರ್ಕ ಪತ್ತೆಗೆ ಸಹಾಯ ಮಾಡಿತು.ನಮ್ಮ ಕೊವಿನ್ ಡಿಜಿಟಲ್ ವೇದಿಕೆ ಈಗಾಗಲೇ ಮಿಲಿಯಾಂತರ ಜನರಿಗೆ ಲಸಿಕೆಗಳನ್ನು ಖಾತ್ರಿಪಡಿಸಲು ಸಹಾಯ ಮಾಡಿದೆ. ನಾವು ಅನ್ವೇಷಣೆ ಮಾಡದೇ ಇರುತ್ತಿದ್ದರೆ, ಆಗ ಕೋವಿಡ್ -19 ವಿರುದ್ಧದ ನಮ್ಮ ಹೋರಾಟ ಬಹಳಷ್ಟು ದುರ್ಬಲವಾಗಿರುತ್ತಿತ್ತು. ನಾವು ಈ ಅನ್ವೇಷಣಾ ಉತ್ಸಾಹವನ್ನು,  ಹಟವನ್ನು   ಕೈಬಿಡಬಾರದು, ಅದರಿಂದ  ಮುಂದಿನ ಸವಾಲು ಬಂದಪ್ಪಳಿಸುವಾಗ ನಾವು ಇನ್ನಷ್ಟು ಉತ್ತಮವಾಗಿ ಸಿದ್ದತೆಗಳನ್ನು ಮಾಡಿಕೊಂಡಿರುತ್ತೇವೆ.

ಸ್ನೇಹಿತರೇ,

ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಭಾರತದ ದಾಪುಗಾಲು ಜನಜನಿತವಾಗಿದೆ. ನಮ್ಮ ದೇಶವು ವಿಶ್ವದ ಅತ್ಯಂತ ದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗೆ ಮನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಬೃಹತ್ ನವೋದ್ಯಮ ಕಂಪೆನಿಗಳು (ಯೂನಿಕಾರ್ನ್ –ಸಾಫ್ಟ್ ವೇರ್ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಒಂದು ಬಿಲಿಯನ್ ಡಾಲರಿಗಿಂತ ಹೆಚ್ಚು ಮೌಲ್ಯದ ನವೋದ್ಯಮ  ಕಂಪೆನಿ)  ತಲೆ ಎತ್ತಿವೆ. ಭಾರತವು ಅನ್ವೇಷಕರಿಗೆ ಮತ್ತು ಹೂಡಿಕೆದಾರರಿಗೆ ಏನು ಬೇಕೋ ಅದನ್ನು ಒದಗಿಸುತ್ತಿದೆ. ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಪರಿಸರ ವ್ಯವಸ್ಥೆ ಮತ್ತು ಮುಕ್ತತೆಯ ಸಂಸ್ಕೃತಿ-ಎಂಬ ಐದು ಸ್ತಂಭಗಳ ಆಧಾರದ ಮೇಲೆ ಭಾರತದಲ್ಲಿ ಹೂಡಿಕೆ ಮಾಡುವಂತೆ ನಾನು ವಿಶ್ವಕ್ಕೆ ಆಹ್ವಾನ ನೀಡುತ್ತೇನೆ.

ಭಾರತದ ತಂತ್ರಜ್ಞಾನ ಪ್ರತಿಭಾ ಸಮೂಹ ಜಗತ್ತಿನಾದ್ಯಂತ ಪ್ರಖ್ಯಾತವಾಗಿದೆ. ಭಾರತೀಯ ಯುವಜನತೆ ಜಗತ್ತಿನ ಅತ್ಯಂತ ಜರೂರಿನ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಒದಗಿಸಿದ್ದಾರೆ. ಇಂದು ಭಾರತವು ಒಂದು ಬಿಂದು ಒಂದು ಎಂಟು ಬಿಲಿಯನ್ ಮೊಬೈಲ್ ಫೋನುಗಳನ್ನು ಮತ್ತು 775 ಮಿಲಿಯನ್ ಅಂತರ್ಜಾಲ ಬಳಕೆದಾರರನ್ನು ಹೊಂದಿದೆ. ಇದು ಹಲವು ರಾಷ್ಟ್ರಗಳ ಜನಸಂಖ್ಯೆಗಿಂತ ಹೆಚ್ಚು. ಭಾರತದಲ್ಲಿ ದತ್ತಾಂಶ ಬಳಕೆ ವಿಶ್ವದಲ್ಲಿಯೇ ಗರಿಷ್ಠ ಮತ್ತು ಅತ್ಯಂತ ಅಗ್ಗ. ಭಾರತೀಯರು ಸಾಮಾಜಿಕ ತಾಣಗಳ ಬೃಹತ್ ಬಳಕೆದಾರರು. ಅಲ್ಲಿ ವೈವಿಧ್ಯಮಯ ಮತ್ತು ವಿಸ್ತಾರ ವ್ಯಾಪ್ತಿಯ ಮಾರುಕಟ್ಟೆ ನಿಮಗಾಗಿ ಕಾಯುತ್ತಿದೆ.

ಸ್ನೇಹಿತರೇ,

ಈ ಡಿಜಿಟಲ್ ವಿಸ್ತರಣೆಗೆ ಅತ್ಯಾಧುನಿಕ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ರೂಪಿಸುವ ಮೂಲಕ ಬಲ ತುಂಬಲಾಗುತ್ತಿದೆ. ಐನೂರ ಇಪ್ಪತ್ತಮೂರು ಸಾವಿರ ಕಿಲೋಮೀಟರ್ ಫೈಬರ್ ಜಾಲ ಈಗಾಗಲೇ ನಮ್ಮ ನೂರ ಐವತ್ತಾರು ಗ್ರಾಮ ಪಂಚಾಯತ್ ಗಳಿಗೆ ಸಂಪರ್ಕ ಬೆಸೆದಿದೆ. ಬರಲಿರುವ ದಿನಗಳಲ್ಲಿ ಇನ್ನಷ್ಟು ಗ್ರಾಮ ಪಂಚಾಯತ್ ಗಳಿಗೆ ಸಂಪರ್ಕ ಒದಗಿಸಲಾಗುವುದು. ದೇಶಾದ್ಯಂತ ಸಾರ್ವಜನಿಕ ವೈ-ಫೈ ಜಾಲ ವಿಸ್ತರಣೆಯಾಗುತ್ತಿದೆ. ಅದೇ ರೀತಿ ಭಾರತವು ಅನ್ವೇಷಣೆಯ ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಏಳು ಸಾವಿರದ ಐನೂರು ಶಾಲೆಗಳು ಅಟಲ್ ಅನ್ವೇಷಣಾ ಆಂದೋಲನದಡಿಯಲ್ಲಿ ಅತ್ಯಾಧುನಿಕ ಅನ್ವೇಷಣಾ ಪ್ರಯೋಗಾಲಯಗಳನ್ನು ಹೊಂದಿವೆ. ನಮ್ಮ ವಿದ್ಯಾರ್ಥಿಗಳು ವಿದೇಶಗಳಲ್ಲಿರುವ ವಿದ್ಯಾರ್ಥಿಗಳನ್ನೂ ಒಳಗೊಂಡ ಹಲವಾರು ಹ್ಯಾಕಥಾನ್ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಅವರಿಗೆ ಅತ್ಯಂತ ಅವಶ್ಯವಾದ ಜಾಗತಿಕ ಪ್ರತಿಭೆ ಮತ್ತು ಉತ್ತಮ ಪದ್ಧತಿಗಳ ಬಗ್ಗೆ ಅರಿವು ಮೂಡಿಸುತ್ತಿದೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ವಿವಿಧ ವಲಯಗಳಲ್ಲಿ ಬಹಳಷ್ಟು ಅಸ್ತವ್ಯಸ್ತ ಸ್ಥಿತಿಯನ್ನು ನಾವು ಸಾಕ್ಷೀಕರಿಸಿದ್ದೇವೆ. ಇದರಲ್ಲಿ ಬಹುಪಾಲು ಈಗಲೂ ಇದೆ. ಆದಾಗ್ಯೂ ಅಸ್ತವ್ಯಸ್ತ ಸ್ಥಿತಿ ಎಂದರೆ ಕಂಗೆಡಬೇಕಾಗಿಲ್ಲ. ಅದಕ್ಕೆ ಬದಲು ನಾವು ದುರಸ್ಥಿ ಮತ್ತು ಸಿದ್ಧತೆ ಎಂಬ ಎರಡು ಸ್ಥಂಭಗಳ ಮೇಲೆ ನಮ್ಮ ಗಮನ ನೆಟ್ಟರಾಯಿತು. ಕಳೆದ ವರ್ಷ ಈ ಸಮಯಕ್ಕೆ ವಿಶ್ವವು ಇನ್ನೂ ಲಸಿಕೆಯನ್ನು ಹುಡುಕುತ್ತಿತ್ತು. ಇಂದು ನಮ್ಮ ಬಳಿ ಕೆಲವು ಇವೆ. ಅದೇ ರೀತಿ ನಾವು ಆರೋಗ್ಯ ಮೂಲಸೌಕರ್ಯ ಮತ್ತು ನಮ್ಮ ಆರ್ಥಿಕತೆಗಳನ್ನು ದುರಸ್ತಿ ಮಾಡುವುದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಭಾರತದಲ್ಲಿ ನಾವು ವಿವಿಧ ರಂಗಗಳಲ್ಲಿ ಭಾರೀ ಪ್ರಮಾಣದ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಗಣಿಗಾರಿಕೆ, ಬಾಹ್ಯಾಕಾಶ, ಬ್ಯಾಂಕಿಂಗ್, ಅಣು ವಿದ್ಯುತ್, ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಸುಧಾರಣೆಗಳಾಗಿವೆ. ಇದು ಭಾರತವು ಒಂದು ದೇಶವಾಗಿ ಜಾಗತಿಕ ಸಾಂಕ್ರಾಮಿಕದ ನಡುವೆಯೂ ಹೊಂದಿಕೊಳ್ಳಬಲ್ಲ  ಮತ್ತು ಚುರುಕಿನ ದೇಶ ಎಂಬುದನ್ನು ತೋರಿಸುತ್ತದೆ. ಮತ್ತು ನಾನು ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳುವಾಗ ಅದರ ಅರ್ಥ ನಮ್ಮ ಭೂಗ್ರಹಕ್ಕೆ ಇನ್ನೊಂದು ಜಾಗತಿಕ ಸಾಂಕ್ರಾಮಿಕದ ವಿರುದ್ಧ  ರಕ್ಷಾಕವಚ ತೊಡಿಸಬೇಕು ಎಂಬುದಾಗಿದೆ. ಪರಿಸರವನ್ನು ಹಾಳುಗೆಡವುದನ್ನು ತಡೆಯುವ ಸುಸ್ಥಿರ ಜೀವನ ಶೈಲಿಯತ್ತ ನಾವು ಗಮನ ಕೊಟ್ಟಿದ್ದೇವೆ. ಇನ್ನಷ್ಟು ಸಂಶೋಧನೆ ಮತು ಅನ್ವೇಷಣೆಯಲ್ಲಿಯೂ ಸಹಕಾರವನ್ನು ವಿಸ್ತರಿಸಿ ಬಲಪಡಿಸುವುದಕ್ಕೂ ಆದ್ಯತೆ ನೀಡುತ್ತೇವೆ.

ಸ್ನೇಹಿತರೇ,

ನಮ್ಮ ಭೂಗ್ರಹ ಎದುರಿಸುತ್ತಿರುವ ಸವಾಲುಗಳನ್ನು ಸಾಮೂಹಿಕ ಸ್ಫೂರ್ತಿ ಮತ್ತು ಮಾನವ ಕೇಂದ್ರಿತ ಧೋರಣೆಯ ನಿವಾರಿಸಬಹುದು. ಇದಕ್ಕಾಗಿ ನವೋದ್ಯಮ ಸಮುದಾಯಗಳು ಮುಂಚೂಣಿ ನಾಯಕತ್ವ ವಹಿಸಬೇಕು ಎಂದು ನಾನು ಕೋರುತ್ತೇನೆ. ನವೋದ್ಯಮದಲ್ಲಿ ಯುವಜನತೆಯ ಪ್ರಾಬಲ್ಯವಿದೆ. ಈ ಜನರು ಭೂತಕಾಲದ ಹೊರೆಯಿಂದ ಮುಕ್ತರು. ಅವರು ಜಾಗತಿಕ ಪರಿವರ್ತನೆಯ ಶಕ್ತಿಯನ್ನು ನಿಭಾಯಿಸಲು ಅತ್ಯಂತ ಸಮರ್ಥರು. ನಮ್ಮ ನವೋದ್ಯಮಗಳು ಆರೋಗ್ಯ ರಕ್ಷಣೆ, ತ್ಯಾಜ್ಯ ಮರುಬಳಕೆ ಸಹಿತ ಪರಿಸರ ಸ್ನೇಹಿ ತಂತ್ರಜ್ಞಾನ, ಕೃಷಿ, ಹೊಸ ಕಾಲದ ಕಲಿಕಾ ಸಲಕರಣೆಗಳು ಕ್ಷೇತ್ರಗಳಲ್ಲಿ ಅನ್ವೇಷಣೆಯನ್ನು ಕೈಗೊಳ್ಳಬೇಕು.

ಸ್ನೇಹಿತರೇ,

ಮುಕ್ತ ಸಮಾಜ ಮತ್ತು ಆರ್ಥಿಕತೆಯಲ್ಲಿ, ಅಂತಾರಾಷ್ಟ್ರೀಯ ವ್ಯವಸ್ಥೆಗೆ ಬದ್ಧವಾದ ರಾಷ್ಟ್ರವಾಗಿ ನಮಗೆ ಸಹಭಾಗಿತ್ವ ಮುಖ್ಯ ವಿಷಯವಾಗುತ್ತದೆ. ಫ್ರಾನ್ಸ್ ಮತ್ತು ಯುರೋಪ್ ಗಳು ನಮ್ಮ ಪ್ರಮುಖ ಸಹಭಾಗಿಗಳಲ್ಲಿ ಸೇರಿದ್ದಾರೆ. ಅಧ್ಯಕ್ಷ ಮ್ಯಾಕ್ರಾನ್ ಜೊತೆಗಿನ ನನ್ನ ಸಂಭಾಷಣೆಯಲ್ಲಿ,  ಮೇ ತಿಂಗಳಲ್ಲಿ ಪೋರ್ಟೋದಲ್ಲಿ ನಡೆದ ಇ.ಯು. ನಾಯಕರ ಜೊತೆಗಿನ ನನ್ನ ಶೃಂಗದಲ್ಲಿ ಡಿಜಿಟಲ್ ಸಹಭಾಗಿತ್ವ, ನವೋದ್ಯಮಗಳಿಂದ ಹಿಡಿದು ಕ್ವಾಂಟಂ ಕಂಪ್ಯೂಟಿಂಗ್ ವರೆಗಿನ ಕ್ಷೇತ್ರಗಳು  ಪ್ರಮುಖ ಆದ್ಯತೆಯ ಕ್ಷೇತ್ರಗಳಾಗಿದ್ದವು.  ನವ ತಂತ್ರಜ್ಞಾನ  ಕ್ಷೇತ್ರದಲ್ಲಿಯ ನಾಯಕತ್ವವು ಆರ್ಥಿಕ ಶಕ್ತಿ, ಉದ್ಯೋಗ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಆದರೆ, ನಮ್ಮ ಸಹಭಾಗಿತ್ವ ವಿಸ್ತಾರವಾದ ಉದ್ದೇಶವನ್ನು ಈಡೇರಿಸುವಂತಿರಬೇಕು ಮತ್ತು ಮಾನವತೆಗೆ ಸೇವೆ ಸಲ್ಲಿಸುವಂತಿರಬೇಕು. ಈ ಜಾಗತಿಕ ಸಾಂಕ್ರಾಮಿಕವು ನಮ್ಮ ಪುನಶ್ಚೇತನಕ್ಕೆ ಪರೀಕ್ಷೆ ಮಾತ್ರವಲ್ಲ ನಮ್ಮ ಕಲ್ಪನಾ ಶಕ್ತಿಗೂ ಪರೀಕ್ಷೆ. ಇದು ಹೆಚ್ಚು ಒಳಗೊಳ್ಳುವಂತಹ, ಪೋಷಣೆ ಮಾಡುವಂತಹ ಮತ್ತು ಎಲ್ಲರಿಗೂ ಸುಸ್ಥಿರ ಭವಿಷ್ಯವನ್ನು ನಿರ್ಮಾಣ ಮಾಡುವ ಅವಕಾಶ ಕೂಡಾ. ಆಧ್ಯಕ್ಷರಾದ ಮ್ಯಾಕ್ರಾನ್ ಅವರಂತೆ ನಾನು ಕೂಡಾ ವಿಜ್ಞಾನದ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇನೆ ಮತ್ತು ಅನ್ವೇಷಣೆಯ ಸಾಧ್ಯತೆಗಳು ಆ ಭವಿಷ್ಯದ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡಬಹುದು ಎಂದೂ ನಂಬಿದ್ದೇನೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
‘Make in India’ is working, says DP World Chairman

Media Coverage

‘Make in India’ is working, says DP World Chairman
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”