Quoteಭಾರತ ಎಂದಿಗೂ ತನ್ನ ಸ್ವಾತಂತ್ರ್ಯ ಯೋಧರನ್ನು ಮರೆಯುವುದಿಲ್ಲ: ಪ್ರಧಾನಮಂತ್ರಿ
Quoteಕಳೆದ ಆರು ವರ್ಷಗಳಲ್ಲಿ ಎಲೆಮರೆಯ ಕಾಯಿಯಂತಹ ನಾಯಕರ ಇತಿಹಾಸದ ರಕ್ಷಣೆಗೆ ನಿರಂತರ ಪ್ರಯತ್ನ: ಪ್ರಧಾನಮಂತ್ರಿ
Quoteನಮ್ಮ ಸಂವಿಧಾನ ಮತ್ತು ನಮ್ಮ ಲೋಕತಂತ್ರದ ಸಂಪ್ರದಾಯದ ಬಗ್ಗೆ ನಮಗೆ ಹೆಮ್ಮೆ ಇದೆ: ಪ್ರಧಾನಮಂತ್ರಿ

ವೇದಿಕೆಯಲ್ಲಿ ಹಾಜರಿರುವ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವ ವ್ರತ ಜೀ, ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಜೀ, ಕೇಂದ್ರ ಮಂತ್ರಿ ಮಂಡಲದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಪ್ರಹ್ಲಾದ ಪಟೇಲ್ ಜೀ, ಲೋಕಸಭೆಯಲ್ಲಿ ನನ್ನ ಸಹವರ್ತಿಯಾಗಿರುವ ಶ್ರೀ ಸಿ.ಆರ್.ಪಾಟೀಲ್ ಜೀ, ಅಹ್ಮದಾಬಾದಿನ ನೂತನವಾಗಿ ಆಯ್ಕೆಯಾಗಿರುವ ಮೇಯರ್ ಶ್ರೀ ಕಿರೀಟಿ ಸಿಂಗ್ ಭಾಯಿ, ಸಾಬರಮತಿ ಆಶ್ರಮದ ಟ್ರಸ್ಟೀ ಆಗಿರುವ ಶ್ರೀ ಕಾರ್ತಿಕೇಯ ಸಾರಭಾಯಿ ಜೀ ಮತ್ತು ಸಾಬರಮತಿ ಆಶ್ರಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಗೌರವಾನ್ವಿತ ಅಮೃತ್ ಮೋದಿ ಜೀ, ಎಲ್ಲಾ ಗಣ್ಯರೇ, ಮಹಿಳೆಯರೇ, ಮಹನೀಯರೇ ಮತ್ತು ದೇಶಾದ್ಯಂತದ ನನ್ನ ಯುವ ಸಹೋದ್ಯೋಗಿಗಳೇ!.

ಇಂದು ಬೆಳಿಗ್ಗೆ ನಾನು ದಿಲ್ಲಿಯಿಂದ ಹೊರಟಾಗ, ಇದು ಬಹಳ ಅದ್ಭುತ ಕಾಕತಾಳೀಯವಾದ ಘಟನೆಯಾಯಿತು. ಅಮೃತ್ ಉತ್ಸವ ಮುಂದಿರುವಂತೆಯೇ ಮಳೆ ಮತ್ತು ಸೂರ್ಯ ಭಗವಾನ್ ದೇಶದ ರಾಜಧಾನಿಯನ್ನು ಆಶೀರ್ವದಿಸಿದರು. ಸ್ವತಂತ್ರ ಭಾರತದ ಈ ಚಾರಿತ್ರಿಕ ಅವಧಿಯನ್ನು ಸಾಕ್ಷೀಕರಿಸುವ ಸೌಭಾಗ್ಯ ನಮ್ಮೆಲ್ಲರಿಗೂ ಲಭಿಸಿದೆ. ಬಾಪುವಿನ ಕರ್ಮಭೂಮಿಯಲ್ಲಿ ಇಂದು ದಂಡಿ ಯಾತ್ರೆಯ ವಾರ್ಷಿಕೋತ್ಸವದಂದು ಚರಿತ್ರೆ ನಿರ್ಮಾಣವಾಗುತ್ತಿರುವುದನ್ನು ನಾವು ಸಾಕ್ಷೀಕರಿಸುತ್ತಿದ್ದೇವೆ. ಮತ್ತು ಚರಿತ್ರೆಯ ಭಾಗವಾಗುತ್ತಿದ್ದೇವೆ. ಇಂದಿನ ದಿನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೊದಲ ದಿನ. ಅಮೃತ ಮಹೋತ್ಸವ ಇಂದು 2022ರ ಆಗಸ್ಟ್ 15 ಕ್ಕೆ 75 ವಾರಗಳ ಮುಂಚಿತವಾಗಿ ಆರಂಭಗೊಂಡಿದೆ. ಮತ್ತು ಅದು 2023 ರ ಆಗಸ್ಟ್ 15 ರವರೆಗೆ ಮುಂದುವರೆಯಲಿದೆ. ನಮ್ಮ ದೇಶದಲ್ಲಿ ಇಂತಹದೊಂದು ಸಂದರ್ಭ ಬಂದಾಗ ಅಲ್ಲಿ ಎಲ್ಲಾ ಯಾತ್ರೆಗಳ ಸಂಗಮ ಇರುತ್ತದೆ ಎಂದು ನಂಬಲಾಗುತ್ತದೆ. ಒಂದು ರಾಷ್ಟ್ರವಾಗಿ ನಮಗೆ ಈ ಸಂದರ್ಭವು ಶ್ರದ್ಧಾಪೂರ್ವಕವಾದ ಸಂದರ್ಭ. ನಮ್ಮ ಸ್ವಾತಂತ್ರ್ಯ ಹೋರಾಟದ ಹಲವಾರು ಪರಮ ಪವಿತ್ರ ಕೇಂದ್ರಗಳು ಸಾಬರಮತಿ ಆಶ್ರಮದ ಜೊತೆ ಬೆಸೆದುಕೊಳ್ಳತೊಡಗಿವೆ.

ಈ ಅಮೃತ ಉತ್ಸವವು ಇಂದು ಏಕಕಾಲದಲ್ಲಿ ಅಂಡಮಾನ್ ಸೆಲ್ಯುಲಾರ್ ಜೈಲು ಸಹಿತ ಹಲವಾರು ಕಡೆಗಳಲ್ಲಿ ಆರಂಭಗೊಳ್ಳುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಶಿರೋಬಿಂದುವಿಗೆ ನಮಿಸುವ ಮೂಲಕ ಆರಂಭಗೊಳ್ಳುತ್ತಿದೆ. ಅದು ಅರುಣಾಚಲ ಪ್ರದೇಶದ ಕೇಕರ್ ಮೋನ್ಯಿಂಗ್ ಸ್ಥಳ, ಅದು ಆಂಗ್ಲೋ-ಭಾರತ ಯುದ್ದವನ್ನು ಸಾಕ್ಷೀಕರಿಸಿದೆ. ಮುಂಬಯಿಯಲ್ಲಿ ಆಗಸ್ಟ್ ಕ್ರಾಂತಿ ಮೈದಾನ, ಪಂಜಾಬಿನಲ್ಲಿ ಜಲಿಯನ್ ವಾಲಾ ಭಾಗ್ ಮತ್ತು ಉತ್ತರ ಪ್ರದೇಶದ ಮೀರತ್, ಕಕೋರಿ ಹಾಗು ಝಾನ್ಸಿಗಳಲ್ಲಿ ಇದು ಆರಂಭವಾಗಿದೆ. ಸ್ವಾತಂತ್ರ್ಯದ ಅಸಂಖ್ಯಾತ ಹೋರಾಟಗಳು, ಅಸಂಖ್ಯಾತ ತ್ಯಾಗಗಳು ಮತ್ತು ಅಪಾರ ಜನ ಸೈನ್ಯಗಳನ್ನು ಮತ್ತೆ ದೇಶಾದ್ಯಂತ ನೆನಪು ಮಾಡಿಕೊಳ್ಳಲಾಗುತ್ತಿದೆ. ಈ ಪವಿತ್ರ ಸಂದರ್ಭದಲ್ಲಿ ನಾನು ಬಾಪು ಅವರಿಗೆ ಪುಷ್ಪ ನಮನವನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣಾರ್ಪನೆ ಮಾಡಿದ ಪ್ರತಿಯೊಬ್ಬ ಹೋರಾಟಗಾರರಿಗೆ ಮತ್ತು ದೇಶದ ಚಳವಳಿಯನ್ನು ಮುನ್ನಡೆಸಿದ ಶ್ರೇಷ್ಟ ವ್ಯಕ್ತಿತ್ವಗಳಿಗೆ ನಾನು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯದ ಬಳಿಕವೂ ಸಾಂಪ್ರದಾಯಿಕ ಭದ್ರತಾ ಪರಂಪರೆಯನ್ನು ಜೀವಂತವಾಗಿಟ್ಟ ಧೈರ್ಯಶಾಲೀ ಸೈನಿಕರಿಗೆ, ದೇಶದ ಭದ್ರತೆಗಾಗಿ ಪರಮೋಚ್ಛ ತ್ಯಾಗ ಮಾಡಿದ ಸೈನಿಕರಿಗೆ, ಹುತಾತ್ಮರಾದವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಸ್ವತಂತ್ರ ಭಾರತದ ಪುನರ್ನಿರ್ಮಾಣದ ಪ್ರಗತಿಯಲ್ಲಿ ಪ್ರತಿಯೊಂದು ಇಟ್ಟಿಗೆಗಳನ್ನಿಟ್ಟ ಮತ್ತು ದೇಶವನ್ನು ಸ್ವಾತಂತ್ರ್ಯದ 75 ನೇ ವರ್ಷದತ್ತ ಮುನ್ನಡೆಸಿದ ಸದ್ಗುಣಶೀಲ ಆತ್ಮಗಳಿಗೆ ನಾನು ಶಿರಬಾಗಿ ನಮಿಸುತ್ತೇನೆ.

|

ಸ್ನೇಹಿತರೇ,

ಮಿಲಿಯಾಂತರ ಜನರು ಶತಮಾನಗಳ ಕಾಲ ಸ್ವಾತಂತ್ರ್ಯದ ಸೂರ್ಯೋದಯಕ್ಕೆ ಕಾತರಿಸುತ್ತಿದ್ದಂತಹ ಗುಲಾಮಗಿರಿಯ ಅವಧಿಯನ್ನು ಕಲ್ಪಿಸಿಕೊಂಡರೆ, 75 ವರ್ಷಗಳ ಸ್ವಾತಂತ್ರ್ಯದ ಚಾರಿತ್ರಿಕ ಸಂದರ್ಭ ಎಷ್ಟೊಂದು ಪ್ರಖ್ಯಾತವಾದುದು, ಮಹತ್ವದ್ದು ಎಂಬುದು ಅರಿವಿಗೆ ಬರುತ್ತದೆ. ಈ ಉತ್ಸವವು ಭಾರತದ ಸನಾತನ ಪರಂಪರೆಯನ್ನೂ, ಸ್ವಾತಂತ್ರ್ಯ ಹೋರಾಟದ ನೆರಳನ್ನು ಮತ್ತು ಸ್ವತಂತ್ರ ಭಾರತದ ಪ್ರಗತಿಯ ದರ್ಶನವನ್ನೂ ಒಳಗೊಂಡಿದೆ. ಆದುದರಿಂದ ನಿಮ್ಮೆದುರು ಮಾಡಲಾಗಿರುವ ಪ್ರದರ್ಶಿಕೆಯು ಅಮೃತ್ ಉತ್ಸವದ ಐದು ಸ್ಥಂಭಗಳಿಗೆ ಹೆಚ್ಚಿನ ಒತ್ತು ನೀಡಿದೆ. ಆ ಐದು ಸ್ಥಂಭಗಳೆಂದರೆ ಸ್ವಾತಂತ್ರ್ಯ ಹೋರಾಟ, 75 ರ ಚಿಂತನೆ, 75 ರಲ್ಲಿ ಸಾಧನೆಗಳು, 75 ರಲ್ಲಿಯ ಕಾರ್ಯಕ್ರಮಗಳು ಮತ್ತು 75 ರ ನಿರ್ಧಾರಗಳು. ಇವು ಸ್ವತಂತ್ರ ಭಾರತಕ್ಕೆ ಮುನ್ನಡೆಯಲು ಕನಸು ಮತ್ತು ಕರ್ತವ್ಯಗಳಿಗೆ ಪ್ರೇರಣೆ ನೀಡಲಿದೆ. ಈ ಸಂದೇಶಗಳ ಆಧಾರದಲ್ಲಿ ’ಅಮೃತ ಉತ್ಸವ’ ಜಾಲತಾಣ ಜೊತೆಗೆ ಚರಕ ಅಭಿಯಾನ ಮತ್ತು ಆತ್ಮ ನಿರ್ಭರ ಇನ್ಕ್ಯುಬೇಟರ್ ಗಳನ್ನೂ ಇಂದು ಆರಂಭಿಸಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಆತ್ಮ ಗೌರವ ಮತ್ತು ತ್ಯಾಗದ ಬಗ್ಗೆ ಮುಂದಿನ ಜನಾಂಗಗಳಿಗೆ ಬೋಧಿಸಿದಾಗ ಮಾತ್ರ ದೇಶದ ಪ್ರಖ್ಯಾತಿ, ವೈಭವ ಪ್ರಜ್ಞಾವಸ್ಥೆಯಲ್ಲಿರುತ್ತದೆ ಎಂಬುದನ್ನು ಇತಿಹಾಸ ಸಾಕ್ಷೀಕರಿಸಿದೆ. ಆಗ ಮಾತ್ರ ಅದು ನಿರಂತರವಾದ ಪ್ರೇರಣೆಯನ್ನು ಒದಗಿಸಬಲ್ಲುದು. ದೇಶದ ಭವಿಷ್ಯ ಉಜ್ವಲವಾಗಿರಬೇಕಾದರೆ ಅದು ಅದರ ಹಿಂದಿನ ಅನುಭವಗಳನ್ನು ಕುರಿತ ಹೆಮ್ಮೆ ಮತ್ತು ಪರಂಪರೆಯನ್ನು ಹೊಂದಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಭಾರತವು ಹೆಮ್ಮೆ ಪಡಲು ಶ್ರೀಮಂತವಾದ ಚರಿತ್ರೆ ಮತ್ತು ಪ್ರಜ್ಞಾಪೂರ್ವಕವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಆದುದರಿಂದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭ ಪ್ರಸ್ತುತ ತಲೆಮಾರಿಗೆ ಅಮೃತದಂತೆ, ದೇಶಕ್ಕಾಗಿ ಬದುಕಲು ನಮ್ಮೆಲ್ಲರಿಗೂ ಪ್ರೇರಣೆ ನೀಡುವ ಸ್ಪರ್ಷಮಣಿಯಂತೆ ಮತ್ತು ದೇಶಕ್ಕಾಗಿ ಪ್ರತೀ ಸಂದರ್ಭದಲ್ಲಿಯೂ ಏನಾದರೊಂದು ಮಾಡಲು ಇರುವ ಅವಕಾಶದಂತೆ.

ಸ್ನೇಹಿತರೇ,

ನಮ್ಮ ವೇದಗಳಲ್ಲಿ ಬರೆದಿದೆ: मृत्योः मुक्षीय मामृतात् (ಸಾವಿನಿಂದ ಮುಕ್ತಿ ಎಂದರೆ ಅಮರತ್ವ) ಅಂದರೆ, ನಾವು ದುಃಖವನ್ನು ತೊರೆದು, ಹತಾಶೆ, ಕ್ಲೇಶ ಮತ್ತು ಹಾನಿಯನ್ನು ತೊರೆದು ಅಮರತ್ವದತ್ತ ಸಾಗಬೇಕು. ಇದು ಈ ಸ್ವಾತಂತ್ರ್ಯದ ಅಮೃತ ಉತ್ಸವದ ನಿರ್ಧಾರ. ಅಜಾದಿ ಅಮೃತ ಮಹೋತ್ಸವ ಎಂದರೆ ಸ್ವಾತಂತ್ರ್ಯದ ಶಕ್ತಿಯ ಅಮೃತ. ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣೆಗಳ ಸ್ಪರ್ಶಮಣಿ. ಹೊಸ ಚಿಂತನೆಗಳು ಮತ್ತು ಪ್ರತಿಜ್ಞೆಗಳ ಸಂಗಮ ಮತ್ತು ಆತ್ಮನಿರ್ಭರದ ಸಂಕೇತ. ಆದುದರಿಂದ ಈ ಮಹೋತ್ಸವವು ರಾಷ್ಟ್ರ ಜಾಗೃತಿಯ ಹಬ್ಬ. ಉತ್ತಮ ಆಡಳಿತದ ಕನಸನ್ನು ನನಸು ಮಾಡುವ ಉತ್ಸವ. ಜಾಗತಿಕ ಶಾಂತಿಯ ಹಾಗು ಅಭಿವೃದ್ಧಿಯ ಹಬ್ಬ.

|

ಸ್ನೇಹಿತರೇ,

ಅಮೃತ ಉತ್ಸವವನ್ನು ದಂಡಿ ಯಾತ್ರಾ ದಿನದಂದು ಉದ್ಘಾಟಿಸಲಾಗುತ್ತಿದೆ. ಆ ಯಾತ್ರೆಗೆ ಆ ಚಾರಿತ್ರಿಕ ಘಟನೆಯನ್ನು ನೆನಪಿಸುವಂತೆ ಹಸಿರು ನಿಶಾನೆ ತೋರಲಾಗುತ್ತದೆ. ದಂಡಿ ಯಾತ್ರೆಯ ಸಂದೇಶ ಮತ್ತು ಪರಿಣಾಮ ಹಾಗು ಅಮೃತ ಉತ್ಸವದ ಮೂಲಕ ದೇಶವು ಮುನ್ನಡೆ ಸಾಧಿಸುವ ಹಂಬಲ ಪರಸ್ಪರ ಅದ್ಭುತ ಕಾಕತಾಳಿಯವಾದ ಸಂಗತಿಗಳು. ಗಾಂಧೀಜಿ ಅವರ ಈ ಒಂದು ಯಾತ್ರೆ ಜನಸಮೂಹವನ್ನು ಕೈಜೋಡಿಸುವಂತೆ ಮಾಡಲು ಪ್ರೇರಣೆಯಾಯಿತು ಮತ್ತು ಮುಂದೆ ಸ್ವಾತಂತ್ರ್ಯ ಹೋರಾಟವಾಯಿತು. ಈ ಒಂದು ಯಾತ್ರೆಯು ಭಾರತದ ಸ್ವಾತಂತ್ರ್ಯ ಕುರಿತ ಅದರ ಹಂಬಲವನ್ನು ಇಡೀ ವಿಶ್ವಕ್ಕೆ ಹರಡಿತು. ಇದು ಚಾರಿತ್ರಿಕ ಯಾಕೆಂದರೆ ಬಾಪು ಅವರ ದಂಡಿ ಯಾತ್ರೆ ಸ್ವಾತಂತ್ರ್ಯದ ಹಂಬಲವನ್ನು ಹಾಗು ಭಾರತದ ತತ್ವಗಳನ್ನು ಅಡಕಗೊಳಿಸಿತ್ತು.

ಉಪ್ಪನ್ನು ಎಂದೂ ಅದರ ತಯಾರಿಕಾ ವೆಚ್ಚದ ಮೇಲೆ ಮೌಲ್ಯಮಾಪನ ಮಾಡಲಾಗುತ್ತಿರಲಿಲ್ಲ. ನಮಗೆ ಉಪ್ಪು ಎಂದರೆ ಅದು ನಿಷ್ಟೆಯ, ಪ್ರಾಮಾಣಿಕತೆಯ ಮತ್ತು ನಂಬಿಕೆಯ ಪ್ರತೀಕ. ನಾವು ಈಗಲೂ ಹೇಳುತ್ತೇವೆ, ನಾವು ಈ ದೇಶದ ಉಪ್ಪು ತಿಂದಿದ್ದೇವೆ ಎಂಬುದಾಗಿ.ಇದು ಉಪ್ಪು ಬಹಳ ಅಮೂಲ್ಯವಾದುದು ಎಂಬುದಕ್ಕಲ್ಲ. ಅದು ಯಾಕೆಂದರೆ ಉಪ್ಪು ಶ್ರಮ ಮತ್ತು ಸಮಾನತೆಯನ್ನು ಪ್ರತಿನಿಧಿಸುತ್ತದೆ. ಆ ಕಾಲದಲ್ಲಿ ಉಪ್ಪು ಭಾರತದ ಸ್ವಾವಲಂಬನೆಯ ಸಂಕೇತವಾಗಿತ್ತು. ಬ್ರಿಟಿಷರು ಭಾರತದ ಮೌಲ್ಯಗಳಿಗೆ ಹಾನಿ ಮಾಡಿದ್ದಲ್ಲದೆ, ಈ ಸ್ವಾವಲಂಬನೆಗೂ ಧಕ್ಕೆ ತಂದರು. ಭಾರತದ ಜನರು ಇಂಗ್ಲೆಂಡಿನಿಂದ ಬರುವ ಉಪ್ಪನ್ನು ಅವಲಂಬಿಸಬೇಕಾಯಿತು. ಗಾಂಧೀಜಿ ಅವರು ದೇಶದ ಈ ನೋವನ್ನು ಅರ್ಥ ಮಾಡಿಕೊಂಡರು, ಜನರ ನಾಡಿ ಮಿಡಿತವನು ಅರ್ಥೈಸಿಕೊಂಡರು. ಮತ್ತು ಅದನ್ನು ಪ್ರತಿಯೊಬ್ಬ ಭಾರತೀಯರ ಚಳವಳಿಯನ್ನಾಗಿ ಮಾರ್ಪಡಿಸಿದರು ಮತ್ತು ಅದು ಪ್ರತಿಯೊಬ್ಬ ಭಾರತೀಯರ ನಿರ್ಧಾರವೂ ಆಯಿತು.

ಸ್ನೇಹಿತರೇ,

ಅದೇ ರೀತಿ ಭಾರತಕ್ಕೆ ವಿವಿಧ ಯುದ್ಧಗಳ ಮತ್ತು ಸ್ವಾತಂತ್ರ್ಯ ಚಳವಳಿಯ ವಿವಿಧ ಘಟಕಗಳ ಪ್ರೇರಣೆಗಳು ಮತ್ತು ಸಂದೇಶಗಳನ್ನು ಅಡಕಗೊಳಿಸಿಕೊಂಡು ಮುನ್ನಡೆಯಬಹುದಾದ ಅವಕಾಶಗಳು ಲಭಿಸಿದವು. 1857ರ ಸ್ವಾತಂತ್ರ್ಯ ಹೋರಾಟ, ವಿದೇಶದಿಂದ ಮಹಾತ್ಮಾ ಗಾಂಧಿ ಅವರ ಮರಳುವಿಕೆ, ದೇಶಕ್ಕೆ ಸತ್ಯಾಗ್ರಹದ ಶಕ್ತಿಯ ಮನವರಿಕೆ, ಲೋಕಮಾನ್ಯ ತಿಲಕರ ಸಂಪೂರ್ಣ ಸ್ವಾತಂತ್ರ್ಯದ ಕರೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಅಜಾದ್ ಹಿಂದ್ ಪೌಜ್ ನ ದಿಲ್ಲಿ ಯಾತ್ರೆ ಮತ್ತು ದಿಲ್ಲಿ ಚಲೋ ಘೋಷಣೆಗಳನ್ನು ಭಾರತವು ಇಂದಿಗೂ ಮರೆಯಲಾರದು. 1942 ರ ಮರೆಯಲಾಗದ ಘಟನೆಯ ಜೊತೆ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆ ಸಹಿತ ಅಲ್ಲಿ ಅಸಂಖ್ಯಾತ ಮೈಲಿಗಲ್ಲುಗಳಿವೆ. ಅವುಗಳಿಂದ ನಾವು ಪ್ರೇರಣೆ ಪಡೆಯಲು ಮತ್ತು ಶಕ್ತಿ ಪಡೆಯಲು ಸಾಧ್ಯವಿದೆ. ದೇಶವು ದಿನ ನಿತ್ಯ ತನ್ನ ಕೃತಜ್ಞತೆಯನ್ನು ಸಲ್ಲಿಸುವಂತಹ ಹಲವಾರು ಸ್ಪೂರ್ತಿಯುತ ಹೋರಾಟಗಾರರು ನಮ್ಮಲ್ಲಿದ್ದಾರೆ.

1857 ರ ಕ್ರಾಂತಿಯ ಧೈರ್ಯಶಾಲೀ ಮಂಗಲ್ ಪಾಂಡೇ ಮತ್ತು ತಾತ್ಯ ಟೋಪೇ ಇರಲಿ, ಬ್ರಿಟಿಷ್ ಸೇನೆಯ ವಿರುದ್ಧ ಕಾದಾಟ ನಡೆಸಿದ ಧೈರ್ಯಶಾಲೀ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ, ರಾಣಿ ಗೈದಿನ್ಲು, ಚಂದ್ರ ಶೇಖರ ಅಜಾದ್, ರಾಂ ಪ್ರಸಾದ್ ಬಿಸ್ಮಿಲ್, ಭಗತ್ ಸಿಂಗ್, ಸುಖ್ ದೇವ್, ರಾಜಗುರು, ಅಶ್ಫಾಕುಲ್ಲಾ ಖಾನ್, ಗುರು ರಾಮ್ ಸಿಂಗ್, ಟೈಟಸ್ ಜೀ, ಪೌಲ್ ರಾಮಸಾಮಿ, ಅಥವಾ ಅಸಂಖ್ಯಾತ ಜನನಾಯಕರಾದಂತಹ ಪಂಡಿತ್ ನೆಹರೂ, ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಜಾದ್, ಖಾನ್ ಅಬ್ದುಲ್ ಗಫಾರ್ ಖಾನ್, ವೀರ ಸಾವರ್ಕರ್!, ಇರಲಿ- ಈ ಎಲ್ಲ ಶ್ರೇಷ್ಟ ವ್ಯಕ್ತಿತ್ವಗಳು ಸ್ವಾತಂತ್ರ್ಯ ಚಳವಳಿಯ ಪ್ರವರ್ತಕರು. ಇಂದು ನಾವು ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಅವರಿಂದ ಪ್ರೇರಣೆಯನ್ನು ಪಡೆದುಕೊಳ್ಳುತ್ತಿದ್ದೇವೆ.

|

ಸ್ನೇಹಿತರೇ,

ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಹಲವಾರು ಚಳವಳಿಗಳು ಮತ್ತು ಯುದ್ಧಗಳು ಪ್ರಸ್ತಾಪವೇ ಇಲ್ಲದೆ ಅವು ತೆರೆ ಮರೆಗೆ ಸರಿದಿವೆ. ಈ ಎಲ್ಲಾ ಹೋರಾಟಗಳೂ ಸುಳ್ಳಿನ ವಿರುದ್ಧ ಭಾರತದ ಸತ್ಯ ಘೋಷಣೆಯ ಶಕ್ತಿಶಾಲೀ ಘೋಷಣೆಗಳೇ ಆಗಿವೆ. ಮತ್ತು ಭಾರತದ ಸ್ವತಂತ್ರ ಪ್ರವೃತ್ತಿಗೆ ಸಾಕ್ಷಿಯಾಗಿವೆ. ಭಾರತದ ಅಂತಃಸಾಕ್ಷಿಯು ಅನ್ಯಾಯ, ಶೋಷಣೆ ಮತ್ತು ಹಿಂಸಾಚಾರದ ವಿರುದ್ಧ ಇರುವುದಕ್ಕೆ ಈ ಯುದ್ದಗಳು ಸಾಕ್ಷಿಯಾಗಿವೆ. ರಾಮನ ಕಾಲದಲ್ಲಿದ್ದಂತಹ ಈ ಪ್ರಜ್ಞೆ ಮಹಾಭಾರತದ ಕುರುಕ್ಷೇತ್ರದಲ್ಲಿತ್ತು ಮತ್ತು ಹಲ್ದೀಘಾಟಿನ ಯುದ್ಧಭೂಮಿಯಲ್ಲಿತ್ತು, ಶಿವಾಜಿಯ ಯುದ್ಧ ಕರೆಯಲ್ಲಿತ್ತು ಮತ್ತು ಅದೇ ಸನಾತನ ಪ್ರಜ್ಞೆ , ಅದೇ ಶೌರ್ಯ ಪ್ರತೀ ವಲಯ, ವಿಭಾಗ ಮತ್ತು ಭಾರತದ ಸಮಾಜದೊಳಗೆ ಜ್ವಲಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿತು. जननि जन्मभूमिश्च, स्वर्गादपि गरीयसी ಅಂದರೆ ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತ ಮಿಗಿಲು ಎಂಬ ಮಂತ್ರ ಇಂದಿಗೂ ನಮಗೆ ಪ್ರೇರಣೆಯನ್ನು ಒದಗಿಸುತ್ತಿದೆ.

ಕೋಲ್ ದಂಗೆ ಇರಲಿ, ಅಥವಾ ಹೋ ಚಳವಳಿ ಇರಲಿ, ಖಾಸಿ ಚಳವಳಿ ಅಥವಾ ಸಂತಾಲ್ ಕ್ರಾಂತಿ ಇರಲಿ, ಕಾಚಾರ್ ನಾಗಾ ಚಳವಳಿ ಅಥವಾ ಕುಕಾ ಚಳವಳಿ ಇರಲಿ, ಭಿಲ್ ಚಳವಳಿ ಅಥವಾ ಮುಂಡಾ ಕ್ರಾಂತಿಯಾಗಿರಲಿ, ಸನ್ಯಾಸಿ ಆಂದೋಲನ ಅಥವಾ ರಾಮೋಸಿ ದಂಗೆಯಾಗಿರಲಿ, ಕಿತ್ತೂರು ಚಳವಳಿಯಾಗಿರಲಿ, ಟ್ರಾವಂಕೂರ್ ಆಂದೋಲನವಾಗಿರಲಿ, ಬಾರ್ಡೋಲಿ ಸತ್ಯಾಗ್ರಹವಾಗಿರಲಿ, ಚಂಪಾರಣ್ಯ ಸತ್ಯಾಗ್ರಹ, ಸಂಭಾಲ್ಪುರ ಬಿಕ್ಕಟ್ಟು, ಚೌವಾರ್ ಬಂಡಾಯ, ಬುಂದೇಲ್ ಚಳವಳಿ..ಇಂತಹ ಹಲವಾರು ಚಳವಳಿಗಳು ಮತ್ತು ಆಂದೋಲನಗಳು ದೇಶದ ಪ್ರತೀ ಭಾಗಗಳಲ್ಲಿಯೂ ಸ್ವಾತಂತ್ರ್ಯದ ಕಿಡಿ ಎಲ್ಲಾ ಕಾಲದಲ್ಲಿಯೂ ಸದಾ ಜ್ವಲಿಸುತ್ತಿರುವಂತೆ ನೋಡಿಕೊಂಡವು. ಇದೇ ವೇಳೆ ನಮ್ಮ ಸಿಖ್ ಗುರು ಪರಂಪರೆ ನಮಗೆ ಹೊಸ ಶಕ್ತಿಯನ್ನು, ಉತ್ತೇಜನ, ಪ್ರೇರಣೆಯನ್ನು ನೀಡಿತು ಮತ್ತು ದೇಶದ ಸಂಸ್ಕೃತಿ ಹಾಗು ಪದ್ಧತಿಗಳ ರಕ್ಷಣೆಗೆ ತ್ಯಾಗ ಮಾಡುವುದಕ್ಕೆ ಹುರಿದುಂಬಿಸಿತು. ಅಲ್ಲಿ ನಾವು ಸದಾ ನೆನಪಿಡಬೇಕಾದ ಇನ್ನೊಂದು ಸಂಗತಿ ಇದೆ.

ಸ್ನೇಹಿತರೇ,

ನಮ್ಮ ಸಂತರು, ಆಚಾರ್ಯರು ಮತ್ತು ಶಿಕ್ಷಕರು ಈ ಸ್ವಾತಂತ್ರ್ಯದ ಚಳವಳಿಯ ಜ್ವಾಲೆಯನ್ನು ನಿರಂತರವಾಗಿ ಜಾಗೃತಗೊಳಿಸುತ್ತಾ ಬಂದರು. ಪೂರ್ವ-ಪಶ್ಚಿಮ, ಉತ್ತರ , ದಕ್ಷಿಣ ಸಹಿತ ಎಲ್ಲಾ ದಿಕ್ಕುಗಳಲ್ಲಿಯೂ ಮತ್ತು ಎಲ್ಲಾ ವಲಯಗಳಲ್ಲಿಯೂ ಈ ಜಾಗೃತಿ ನಡೆಯಿತು. ಇದೇ ರೀತಿಯಲ್ಲಿ ಭಕ್ತಿ ಚಳವಳಿ ದೇಶವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಚಳವಳಿಗೆ ವೇದಿಕೆಯನ್ನು ನಿರ್ಮಾಣ ಮಾಡಿತು. ಪೂರ್ವದಲ್ಲಿ ಸಂತರಾದ ಚೈತನ್ಯ ಮಹಾಪ್ರಭು, ರಾಮಕೃಷ್ಣ ಪರಮಹಂಸ ಮತ್ತು ಶ್ರೀಮಂತ ಶಂಕರದೇವ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು ಮತ್ತು ಅವರ ಗುರಿಗಳತ್ತ ಗಮನ ಕೇಂದ್ರೀಕರಿಸಿದರು. ಪಶ್ಚಿಮದಲ್ಲಿ ಮೀರಾಬಾಯಿ, ಏಕನಾಥ್, ತುಕಾರಾಂ, ರಾಮದಾಸ, ನರ್ಸೀ ಮೆಹ್ತಾ, ಉತ್ತರದಲ್ಲಿ ಸಂತ ರಮಾನಂದ, ಕಬೀರದಾಸ, ಗೋಸ್ವಾಮಿ ತುಲಸೀದಾಸ, ಸೂರದಾಸ, ಗುರುನಾನಕ ದೇವ, ಸಂತ ರೈದಾಸ ಮತ್ತು ದಕ್ಷಿಣದಲ್ಲಿ ಮಧ್ವಾಚಾರ್ಯ, ನಿಂಬರಕಾಚಾರ್ಯ, ವಲ್ಲಭಾಚಾರ್ಯ, ರಾಮಾನುಜಾಚಾರ್ಯರು ಭಕ್ತಿ ಪಂಥದ ಕಾಲದಲ್ಲಿ ಸಮಾಜದ ಮೇಲೆ ಪ್ರಭಾವ ಬೀರಿದರು. ಮಲಿಕ್ ಮುಹಮ್ಮದ್ ಜಯೇಸಿ, ರಶ್ಕಾಣ್, ಸೂರದಾಸ್, ಕೇಶವದಾಸ, ವಿದ್ಯಾಪತಿ ಅವರೂ ಸಮಾಜದ ದೌರ್ಬಲ್ಯಗಳನ್ನು ಮೀರಲು ಉತ್ತೇಜನ ನೀಡಿದರು.

|

ಇಂತಹ ಹಲವಾರು ವ್ಯಕ್ತಿತ್ವಗಳ ಕಾರಣದಿಂದಾಗಿ ಈ ಚಳವಳಿ ಗಡಿಗಳನ್ನು ದಾಟಿತು ಮತ್ತು ಎಲ್ಲಾ ಭಾರತೀಯರನ್ನು ಆವರಿಸಿತು. ಇಂತಹ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಳಲ್ಲಿ, ಹಲವಾರು ಮಂದಿ ಹೋರಾಟಗಾರರು, ಸಂತರು, ಆತ್ಮಗಳು, ವೀರ ಹುತಾತ್ಮರು ಪಾಲ್ಗೊಂಡಿದ್ದರು, ಅವರ ಕಥೆ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ!. ಈ ಶ್ರೇಷ್ಟ ನಾಯಕರ ಜೀವನ ಚರಿತ್ರೆಯನ್ನು ಹೊರತೆಗೆದು ಜನ ಸಮೂಹದತ್ತ ಕೊಂಡೊಯ್ಯಬೇಕು. ಈ ಜನರ ಜೀವನ ಚರಿತ್ರೆಗಳು, ಅವರ ಬದುಕಿನ ಹೋರಾಟಗಳು, ನಮ್ಮ ಸ್ವಾತಂತ್ರ್ಯ ಹೋರಾಟದ ಏಳು ಬೀಳುಗಳು ನಮ್ಮ ಈಗಿನ ತಲೆಮಾರಿಗೆ ಜೀವನದ ಪ್ರತಿಯೊಂದು ಪಾಠಗಳನ್ನು ಕಲಿಸಬಲ್ಲವು.

ಸಹೋದರರೇ ಮತ್ತು ಸಹೋದರಿಯರೇ,

ಈ ನಾಡಿನ ವೀರ ಪುತ್ರ ಶ್ಯಾಮಜೀ ಕೃಷ್ಣ ವರ್ಮಾ ತಮ್ಮ ಕೊನೆಯ ಉಸಿರು ಇರುವವರೆಗೂ ಬ್ರಿಟಿಷರ ಮೂಗಿನಡಿಯಲ್ಲಿ ಹೇಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಭಾರತ ಮಾತೆಯ ತೊಡೆಯ ಮೇಲೆ ಅವರ ಪಾರ್ಥಿವ ಅವಶೇಷಗಳು ಪವಡಿಸಬೇಕಾದರೆ ಏಳು ದಶಕಗಳು ಬೇಕಾದವು. ಅಂತಿಮವಾಗಿ ನಾನು ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಪಾರ್ಥಿವ ಅವಶೇಷಗಳನ್ನು 2003 ರಲ್ಲಿ ವಿದೇಶದಿಂದ ತಂದೆ. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅನೇಕ ಹೋರಾಟಗಾರರಿದ್ದಾರೆ. ದಲಿತರು, ಆದಿವಾಸಿಗಳು, ಮಹಿಳೆಯರು, ಮತ್ತು ಯುವಕರು ಅಗಣಿತ ತ್ಯಾಗಗಳನ್ನು ಮಾಡಿದ್ದಾರೆ. ತಮಿಳುನಾಡಿನ 32 ವರ್ಷದ ಯುವಕ ಕೋಡಿ ಕಥಾ ಕುಮಾರನ್ ರನ್ನು ನೆನಪಿಸಿಕೊಳ್ಳಿ, ಬ್ರಿಟಿಷರು ತಲೆಗೆ ಗುಂಡು ಹೊಡೆದರೂ ಅವರು ದೇಶದ ಧ್ವಜ ನೆಲಕ್ಕೆ ಬೀಳಲು ಬಿಡಲಿಲ್ಲ. ತಮಿಳುನಾಡಿನಲ್ಲಿ ಕೋಡಿ ಕಥಾ ಎಂದರೆ ಧ್ವಜದ ಸಂರಕ್ಷಕ. ತಮಿಳುನಾಡಿನ ವೇಲು ನಾಚಿಯಾರ್ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಮೊದಲ ರಾಣಿ.

ಅದೇ ರೀತಿ, ನಮ್ಮ ದೇಶದ ಬುಡಕಟ್ಟು ಸಮಾಜವು ತನ್ನ ಶೌರ್ಯ ಮತ್ತು ವೀರತ್ವದಿಂದ ವಿದೇಶಿ ಶಕ್ತಿಯನ್ನು ಮೊಣಕಾಲೂರುವಂತೆ ಮಾಡಿದ್ದಿದೆ. ಜಾರ್ಖಂಡದಲ್ಲಿ ಬ್ರಿಟಿಷರಿಗೆ ಬಿರ್ಸಾ ಮುಂಡಾ ಸವಾಲೆಸೆದರಲ್ಲದೆ, ಮುರ್ಮು ಸಹೋದರರು ಸಂತಾಲ್ ಚಳವಳಿಯ ನಾಯಕತ್ವ ವಹಿಸಿದರು. ಒಡಿಶಾದಲ್ಲಿ ಬ್ರಿಟಿಷರ ವಿರುದ್ಧ ಚಕ್ರಾ ಬಿಸೋಯಿ ಯುದ್ಧ ಸಾರಿದರು. ಲಕ್ಷ್ಮಣ ನಾಯಕ್ ಅವರು ಗಾಂಧಿ ವಿಧಾನಗಳ ಮೂಲಕ ಜಾಗೃತಿ ಮೂಡಿಸಿದರು. ಆಂಧ್ರ ಪ್ರದೇಶದಲ್ಲಿ ಮನ್ಯಾಂ ವಿರುಡು ಮತ್ತು ಅಲ್ಲೂರಿ ಸಿರಾರಾಂ ರಾಜು ಅವರು ರಾಂಪಾ ಚಳವಳಿಯ ನೇತೃತ್ವ ವಹಿಸಿದರು. ಮಿಜೋರಾಂನ ಗುಡ್ಡಗಾಡುಗಳಲ್ಲಿ ಪಸಾಲ್ತಾ ಖುಂಗ್ಚೇರಾ ಬ್ರಿಟಿಷರನ್ನು ಎದುರಿಸಿದರು. ಅಸ್ಸಾಂ ಮತ್ತು ಈಶಾನ್ಯದ ಇತರ ಸ್ವಾತಂತ್ರ್ಯ ಹೋರಾಟಗಾರರಾದ ಗೋಮ್ದರ್ ಕೋನ್ವಾರ್, ಲಚಿತ್ ಬೋರ್ಫುಕಾನ್ ಹಾಗು ಸೀರತ್ ಸಿಂಗ್ ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ಕಾಣಿಕೆ ನೀಡಿದ್ದಾರೆ. ಗುಜರಾತಿನ ಜಾಂಬುಗೋಡಾದಲ್ಲಿ ನಾಯಕ್ ಬುಡಕಟ್ಟು ಜನರ ತ್ಯಾಗವನ್ನು ಮರೆಯಲು ಹೇಗೆ ಸಾಧ್ಯ. ಮಂಗಧ್ ನಲ್ಲಿ ಗೋವಿಂದ ನೇತೃತ್ವದಲ್ಲಿ ನೂರಾರು ಬುಡಕಟ್ಟು ಜನರ ತ್ಯಾಗವನ್ನು ಹೇಗೆ ಮರೆಯುವುದು?. ದೇಶವು ಅವರೆಲ್ಲರ ತ್ಯಾಗವನ್ನು ಸದಾ ಸ್ಮರಿಸುತ್ತಿರುತ್ತದೆ.

|

ಸ್ನೇಹಿತರೇ,

ಭಾರತ ಮಾತೆಯ ಇಂತಹ ಧೀರ ಪುತ್ರರ ಇತಿಹಾಸ ದೇಶದ ಪ್ರತೀ ಗ್ರಾಮಗಳಲ್ಲಿಯೂ, ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಪಸರಿಸಿದೆ. ಈ ಚರಿತ್ರೆಯನ್ನು ಕಾಪಿಡಲು ಕಳೆದ ಆರು ವರ್ಷಗಳಲ್ಲಿ ದೇಶವು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಪ್ರತಿಯೊಂದು ರಾಜ್ಯದಲ್ಲಿಯೂ ಮತ್ತು ಪ್ರತಿಯೊಂದು ವಲಯದಲ್ಲಿಯೂ ಮಾಡುತ್ತಿದೆ. ದಂಡಿ ಯಾತ್ರೆಗೆ ಸಂಬಂಧಿಸಿದ ಸ್ಥಳದ ನವೀಕರಣವನ್ನು ದೇಶವು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿದೆ. ಆ ಸಂದರ್ಭದಲ್ಲಿ ದಂಡಿಗೆ ಹೋಗುವ ಅವಕಾಶ ನನಗೆ ಲಭ್ಯವಾಗಿತ್ತು. ದೇಶದ ಮೊದಲ ಸ್ವತಂತ್ರ ಸರಕಾರವನ್ನು ರಚಿಸಿದ ಬಳಿಕ ಅಂಡಮಾನಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದ ಸ್ಥಳವನ್ನೂ ಜೀರ್ಣೋದ್ಧಾರ ಮಾಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಸ್ವಾತಂತ್ರ್ಯ ಹೋರಾಟದ ಬಳಿಕ ನಾಮಕರಣ ಮಾಡಲಾಗಿದೆ. ಅಜಾದ್ ಹಿಂದ್ ಸರಕಾರದ 75 ವರ್ಷಗಳು ಪೂರ್ಣಗೊಂಡ ಸ್ಮರಣಾರ್ಥ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವವನ್ನು ಸಲ್ಲಿಸಲಾಗಿದೆ. ಗುಜರಾತಿನಲ್ಲಿ ಸರ್ದಾರ್ ಪಟೇಲರ ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆಯು ಅವರ ಪ್ರಖ್ಯಾತಿಯನ್ನು ವಿಶ್ವದಾದ್ಯಂತ ಸಾರುತ್ತಿದೆ. ಜಲಿಯನ್ ವಾಲಾ ಭಾಗ್ ಮತ್ತು ಪೈಕಾ ಚಳವಳಿಯ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಾಬಾಸಾಹೇಬ್ ಅವರಿಗೆ ಸಂಬಂಧಪಟ್ಟ ಆದರೆ ಹಲವಾರು ದಶಕಗಳಿಂದ ಮರೆಗೆ ಸರಿದಿದ್ದ ಸ್ಥಳಗಳನ್ನು “ಪಂಚತೀರ್ಥ” ಎಂಬುದಾಗಿ ದೇಶವು ಅಭಿವೃದ್ಧಿ ಮಾಡಿದೆ. ಇದೇ ವೇಳೆ ದೇಶವು ಬುಡಕಟ್ಟು ಸ್ವಾತಂತ್ರ್ಯ ವೀರರ ಚರಿತ್ರೆಯನ್ನು ಮುನ್ನೆಲೆಗೆ ತರಲು ಮತ್ತು ಅವುಗಳ ಬಗ್ಗೆ ಭವಿಷ್ಯದ ಜನಾಂಗಕ್ಕೆ ತಿಳುವಳಿಕೆ ನೀಡಲು ದೇಶದಲ್ಲಿ ವಸ್ತು ಸಂಗ್ರಹಾಲಯಗಳನ್ನು ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ.

ಸ್ನೇಹಿತರೇ,

ಸ್ವಾತಂತ್ರ್ಯ ಚಳವಳಿಯ ಚರಿತ್ರೆಯಂತೆಯೇ, ಸ್ವಾತಂತ್ರ್ಯದ ಬಳಿಕದ 75 ವರ್ಷಗಳ ಯಾತ್ರೆಯೂ ಕೂಡಾ ಕಠಿಣ ದುಡಿಮೆ, ಅನ್ವೇಷಣೆ, ಸಾಮಾನ್ಯ ಭಾರತೀಯರ ಉದ್ಯಮದ ಪ್ರತಿಫಲನ. ದೇಶದಲ್ಲಿರಲಿ, ವಿದೇಶೀ ನೆಲದಲ್ಲಿರಲಿ, ನಾವು ಭಾರತೀಯರು ನಮ್ಮ ಕಠಿಣ ದುಡಿಮೆಯನ್ನು ಸಾಬೀತು ಮಾಡಿದ್ದೇವೆ. ನಾವು ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ನಮಗೆ ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳ ಬಗೆ ಹೆಮ್ಮೆ ಇದೆ. ಪ್ರಜಾಪ್ರಭುತ್ವದ ತಾಯಿ, ಭಾರತವು ಈಗಲೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೂಲಕ ಮುನ್ನಡೆಯುತ್ತಿದೆ. ಭಾರತವು ಜ್ಞಾನ ಮತ್ತು ವಿಜ್ಞಾನದಲ್ಲಿ ಸಂಪದ್ಭರಿತವಾಗಿದೆ, ಅದು ತನ್ನ ಗುರುತನ್ನು ಮಂಗಳ, ಚಂದ್ರನವರೆಗೆ ವಿಸ್ತರಿಸಿದೆ. ಇಂದು, ಭಾರತೀಯ ಸೇನೆಯ ಬಲ ಅತ್ಯಂತ ಪ್ರಬಲವಾಗಿದೆ ಹಾಗು ಆರ್ಥಿಕವಾಗಿ ಕೂಡಾ ನಾವು ತ್ವರಿತವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಇಂದು ಭಾರತದ ನವೋದ್ಯಮ ಪರಿಸರ ವಿಶ್ವಕ್ಕೆ ಆಕರ್ಷಣೆಯ ಕೇಂದ್ರವಾಗಿದೆ ಎಂಬುದೇ ಈಗ ಚರ್ಚಿಸಲ್ಪಡಬೇಕಾದ ವಿಷಯವಾಗಿದೆ. ಇಂದು ಭಾರತದ ಸಾಮರ್ಥ್ಯ ಮತ್ತು ಪ್ರತಿಭೆ ಜಗತ್ತಿನ ಪ್ರತೀ ವೇದಿಕೆಯಲ್ಲೂ ಅನುರಣಿಸುತ್ತಿದೆ. ಇಂದು ಭಾರತವು ಕೊರತೆಯ ಕತ್ತಲೆಯಿಂದ 130 ಕೋಟಿಗೂ ಅಧಿಕ ಜನರ ಆಶೋತ್ತರಗಳನ್ನು ಈಡೇರಿಸುವತ್ತ ಸಾಗುತ್ತಿದೆ.

|

ಸ್ನೇಹಿತರೇ,

ಸ್ವತಂತ್ರ ಭಾರತದ 75 ವರ್ಷಗಳನ್ನು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವರ್ಷಾಚರಣೆಯನ್ನು ಒಟ್ಟಾಗಿ ಆಚರಿಸುವಂತಹ ಸುಯೋಗ ನಮಗೆ ದೊರಕಿದೆ. ಈ ಸಂಗಮವು ದಿನಾಂಕಗಳ ಸಂಗಮ ಮಾತ್ರವಲ್ಲ, ಭಾರತದ ಹಿನ್ನೋಟ ಮತ್ತು ಮುನ್ನೋಟಗಳ ಸಂಗಮ ಕೂಡಾ. ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಳಿದ್ದರು ಭಾರತದ ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ಸಾಮ್ರಾಜ್ಯ ಶಾಹಿ ವಿರುದ್ಧ ಮಾತ್ರವಲ್ಲ ಅದು ಜಾಗತಿಕ ಸಾಮ್ರಾಜ್ಯಶಾಹಿ ವಿರುದ್ಧ ಕೂಡಾ ಎಂದು. ನೇತಾಜಿ ಅವರು ಭಾರತದ ಸ್ವಾತಂತ್ರ್ಯ ಇಡೀ ಮಾನವತೆಗೆ ಅವಶ್ಯವಾದಂತಹದು ಎಂದು ಬಣ್ಣಿಸಿದ್ದರು. ಕಾಲಾನುಕ್ರಮದಲ್ಲಿ ನೇತಾಜಿ ಅವರ ಈ ಹೇಳಿಕೆ ಸರಿಯೆಂಬುದು ಸಾಬೀತಾಗಿದೆ. ಭಾರತವು ಸ್ವತಂತ್ರಗೊಂಡಾಗ, ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯದ ಧ್ವನಿಗಳು ಮೊಳಗಿದವು ಅದೂ ಬಹಳ ಅತ್ಯಲ್ಪ ಕಾಲದಲ್ಲಿ. ಸಾಮ್ರಾಜ್ಯ ಶಾಹಿಯ ವ್ಯಾಪ್ತಿ ಕುಗ್ಗತೊಡಗಿತು. ಮತ್ತು ಸ್ನೇಹಿತರೇ, ಭಾರತದ ಸಾಧನೆಗಳು ಬರೇ ನಮ್ಮವು ಮಾತ್ರವೇ ಅಲ್ಲ, ಅವುಗಳು ಇಡೀ ಜಗತ್ತಿಗೆ ಅರಿವನ್ನು ಹಂಚಬಲ್ಲಂತಹವು. ಮತ್ತು ಇಡೀ ಮಾನವತೆಯಲ್ಲಿ ಜಾಗೃತಿ ಮೂಡಿಸಬಲ್ಲಂತಹವು. ಭಾರತದ ಸ್ವಾವಲಂಬನೆಯೊಂದಿಗಿನ ಪಯಣ ಇಡೀ ವಿಶ್ವದ ಅಭಿವೃದ್ಧಿಯ ಪಯಣಕ್ಕೆ ವೇಗವನ್ನು ಕೊಡಬಲ್ಲದು

ಕೊರೊನಾ ಅವಧಿಯಲ್ಲಿ ಇದು ಸಾಬೀತಾಗಿದೆ. ಲಸಿಕೆ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಇಂದು ಇಡೀ ವಿಶ್ವಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಮಾನವತೆಯನ್ನು ಜಾಗತಿಕ ಸಾಂಕ್ರಾಮಿಕದಿಂದ ಪಾರು ಮಾಡಿದೆ. ಇಂದು ಭಾರತವು ಲಸಿಕೆಯ ಶಕ್ತಿಯನ್ನು ಹೊಂದಿದೆ ಮತ್ತು ನಾವು ವಸುದೈವ ಕುಟುಂಬಕಂ ಸ್ಪೂರ್ತಿಯಲ್ಲಿ ಎಲ್ಲರ ದುಃಖ ದುಮ್ಮಾನಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ನಾವು ಯಾರಿಗೂ ದುಃಖವನ್ನು ನೀಡಿದವರಲ್ಲ. ಆದರೆ ನಾವು ಇತರರ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇವೆ. ಇದು ಭಾರತದ ಆದರ್ಶ ಮತ್ತು ಸನಾತನ ತತ್ವಜ್ಞಾನ. ಮತ್ತು ಇದು ಆತ್ಮನಿರ್ಭರ ಭಾರತದ ತತ್ವಜ್ಞಾನ ಕೂಡಾ. ಇಂದು, ಜಗತ್ತಿನಾದ್ಯಂತದ ದೇಶಗಳು ಭಾರತಕ್ಕೆ ವಂದನೆ ಹೇಳುತ್ತಿವೆ ಮತ್ತು ಭಾರತದ ಮೇಲೆ ವಿಶ್ವಾಸ ಇರಿಸಿವೆ. ಇದು ನವಭಾರತದ ನವೋದಯದ ಮೊದಲ ರಂಗು ಮತ್ತು ನಮ್ಮ ಭವ್ಯ ಭವಿತವ್ಯದ ಮೊದಲ ಹೊಳಪು.

ಸ್ನೇಹಿತರೇ,

ಗೀತಾದಲ್ಲಿ ಕೃಷ್ಣ ಭಗವಾನ್ ಹೇಳಿದ್ದಾರೆ -‘सम-दुःख-सुखम् धीरम् सः अमृतत्वाय कल्पते’ ಅಂದರೆ ಸಂತೋಷದಲ್ಲಿ ಮತ್ತು ದುಃಖದಲ್ಲಿಯೂ ಸ್ಥಿತಪ್ರಜ್ಞರಾಗಿರುವವರು ಮುಕ್ತಿಗೆ ಮತ್ತು ಅಮರತ್ವಕ್ಕೆ ಅರ್ಹರಾಗಿರುತ್ತಾರೆ. ಇದು ಅಮೃತ ಉತ್ಸವದಿಂದ ಭಾರತದ ಭವ್ಯ ಭವಿಷ್ಯದ ಮಕರಂದವನ್ನು ಪಡೆಯಲು ನಮಗೆ ಪ್ರೇರಣೆ. ನಾವೆಲ್ಲರೂ ಈ ರಾಷ್ಟ್ರೀಯ ಯಜ್ಞದಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ಕಟಿಬದ್ಧರಾಗೋಣ.

ಸ್ನೇಹಿತರೇ,

ಅಜಾದಿ ಕ ಅಮೃತ ಮಹೋತ್ಸವದಲ್ಲಿ ದೇಶವಾಸಿಗಳ ಸಲಹೆಗಳಿಂದ ಸಂಖ್ಯಾತೀತ ಕಲ್ಪನೆಗಳು, ಚಿಂತನೆಗಳು ಮೂಡಿಬರಲಿವೆ ಮತ್ತು ಅವರ ಮೂಲ ಚಿಂತನೆಗಳು ಹೊರಹೊಮ್ಮಲಿವೆ. ಇಲ್ಲಿಗೆ ಬರುವಾಗ ಹಲವಾರು ಸಂಗತಿಗಳು ನನ್ನ ಮನಸ್ಸಿನಲ್ಲಿ ತುಂಬಿಕೊಂಡಿದ್ದವು. ಸಾರ್ವಜನಿಕ ಸಹಭಾಗಿತ್ವ, ಜನಸಮೂಹದ ಜೊತೆ ಸಂಪರ್ಕ, ದೇಶದ ಪ್ರತಿಯೊಬ್ಬ ನಾಗರಿಕರ ಜೊತೆಗೂ ಸಂಪರ್ಕ-ಇವು ಈ ಅಮೃತ ಉತ್ಸವದ ಭಾಗವಾಗಿರಬೇಕು. ಉದಾಹರಣೆಗೆ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 75 ಘಟನೆಗಳನ್ನು ಸಂಕಲಿಸಬೇಕು. 75 ಗುಂಪುಗಳನ್ನು ರಚಿಸಿಕೊಳ್ಳಬೇಕು-ಅದರಲ್ಲಿ 800-2000ದವರೆಗೆ ವಿದ್ಯಾರ್ಥಿಗಳು ಇರಬಹುದು. ಒಂದು ಶಾಲೆ ಇದನ್ನು ಮಾಡಬಹುದು. ನಮ್ಮ ಶಿಶು ಮಂದಿರ ಮತ್ತು ಬಾಲ ಮಂದಿರಗಳ ಮಕ್ಕಳು ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ 75 ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿ ಮಾಡಬಹುದು. ಅವರ ವೇಷ ಭೂಷಣಗಳನ್ನು ತಯಾರಿಸಿ, ಅವರ ಭಾಷಣಗಳನ್ನು ಮಾಡಬಹುದು. ಮತ್ತು ಅಲ್ಲಿ ಸ್ಪರ್ಧೆ ಇರಬೇಕು. ಭಾರತದ ನಕ್ಷೆಯಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ 75 ಸ್ಥಳಗಳನ್ನು ಗುರುತಿಸಬೇಕು. ಮಕ್ಕಳಿಗೆ ಬಾರ್ಡೋಲಿ ಅಥವಾ ಚಂಪಾರಣ್ ಎಲ್ಲಿದೆ ಎಂದು ಕೇಳಬೇಕು?. ಕಾನೂನು ಕಾಲೇಜಿನ ವಿದ್ಯಾರ್ಥಿಗಳಲ್ಲಿ ನನ್ನ ಮನವಿ ಏನೆಂದರೆ, ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆಯುತ್ತಿದ್ದ ಕಾನೂನು ಸಮರದ 75 ಘಟನೆಗಳನ್ನು ಹುಡುಕಬೇಕು. ಕಾನೂನು ಸಮರ ನಡೆಸುತ್ತಿದ್ದವರು ಯಾರು? ಸ್ವಾತಂತ್ರ್ಯ ಹೋರಾಟದ ನಾಯಕರನ್ನು ಉಳಿಸಲು ಯಾವ ರೀತಿಯ ಪ್ರಯತ್ನಗಳು ನಡೆಯುತ್ತಿದ್ದವು?. ನ್ಯಾಯಾಂಗದ ಬಗ್ಗೆ ಬ್ರಿಟಿಷ್ ಸಾಮ್ರಾಜ್ಯದ ಧೋರಣೆ ಏನಾಗಿತ್ತು?. ನಾವು ಈ ಎಲ್ಲಾ ಸಂಗತಿಗಳನ್ನು ಸಂಕಲಿಸಬಹುದು. ನಾಟಕಗಳಲ್ಲಿ ಆಸಕ್ತಿ ಹೊಂದಿದವರು ನಾಟಕಗಳನ್ನು ಬರೆಯಬೇಕು. ಲಲಿತಕಲಾ ವಿದ್ಯಾರ್ಥಿಗಳು ಆ ಘಟನೆಗಳ ಪೈಂಟಿಂಗ್ ರಚಿಸಬೇಕು. ಕವನಗಳನ್ನು ಬರೆಯಲು ಇಚ್ಛಿಸುವವರು ಕವನಗಳನ್ನು ಬರೆಯಬೇಕು. ಇವೆಲ್ಲವನ್ನೂ ಮೊದಲು ಕೈಬರಹದಲ್ಲಿ ಬರೆಯಿರಿ. ಬಳಿಕ ಅದನ್ನು ಡಿಜಿಟಲ್ ಸಂಗ್ರಹಕ್ಕೆ ಸೇರಿಸಬಹುದು. ಪ್ರತೀ ಶಾಲೆ ಮತ್ತು ಕಾಲೇಜು ಇದನ್ನು ಅವರ ಶೈಕ್ಷಣಿಕ ಸಂಸ್ಥೆಗಳ ಪರಂಪರೆಯಾಗಿಸುವ ಪ್ರಯತ್ನಗಳನ್ನು ನಾನು ಮೆಚ್ಚುತ್ತೇನೆ. ಇವನ್ನೆಲ್ಲಾ ಈ ವರ್ಷದ ಆಗಸ್ಟ್ 15 ರೊಳಗೆ ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಬೇಕು. ನೀವು ನೋಡಿ, ಈ ಮೂಲಕ ಸಂಪೂರ್ಣ ಚಿಂತನಾ ಆಧಾರಿತ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತದೆ. ಬಳಿಕ ಜಿಲ್ಲಾ, ರಾಜ್ಯ ಮತ್ತು ದೇಶದ ಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

|

ನಮ್ಮ ಯುವ ಜನತೆ ಮತ್ತು ವಿದ್ವಾಂಸರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಬರೆಯುವ ದೇಶದ ಪ್ರಯತ್ನಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಮತ್ತು ಜಗತ್ತಿನೆದುರು ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯಾನಂತರದ ಸಾಧನೆಗಳನ್ನು ಪ್ರಸ್ತುತಪಡಿಸಬೇಕು. ಕಲೆ, ಸಾಹಿತ್ಯ, ನಾಟಕ, ಚಲನಚಿತ್ರ ಮತ್ತು ಡಿಜಿಟಲ್ ಮನೋರಂಜನೆಯ ಜೊತೆಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ನಮ್ಮ ಹಿಂದಿನ ವಿಶಿಷ್ಟ ಕಥೆಗಳನ್ನು ಹುಡುಕಿ ತೆಗೆದು ಭವಿಷ್ಯದ ಜನಾಂಗಗಳಿಗಾಗಿ ಅವುಗಳಿಗೆ ಜೀವ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಬೇಕು ಎಂದು ನಾನು ಮನವಿ ಮಾಡುತ್ತೇನೆ. ಹಿಂದಿನದನ್ನು ಕಲಿಯುವ ಮೂಲಕ ಭವಿಷ್ಯವನ್ನು ಕಟ್ಟುವ ಜವಾಬ್ದಾರಿಯನ್ನು ನಮ್ಮ ಯುವಕರು ತೆಗೆದುಕೊಳ್ಳಬೇಕು. ನೀವು ಯಾವುದೇ ಕ್ಷೇತ್ರದಲ್ಲಿರಿ, ಅದು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ರಾಜಕೀಯ, ಕಲೆ ಅಥವಾ ಸಂಸ್ಕೃತಿ ಆಗಿರಲಿ ಅದರಲ್ಲಿ ಭವಿಷ್ಯವನ್ನು ಉತ್ತಮವಾಗಿಸುವುದು ಹೇಗೆ ಎಂಬ ಬಗ್ಗೆ ನಿರಂತರ ಪ್ರಯತ್ನಗಳು ನಡೆಯುತ್ತಿರಲಿ.

|

ಸ್ವಾತಂತ್ರ್ಯದ ಈ ಅಮೃತ ಉತ್ಸವದಲ್ಲಿ ಪಾಲ್ಗೊಂಡಾಗ 130 ಕೋಟಿ ಭಾರತೀಯರು ಮಿಲಿಯಾಂತರ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಣೆ ಪಡೆಯುತ್ತಾರೆ ಎಂಬ ಬಗೆಗೆ ನನಗೆ ಖಾತ್ರಿ ಇದೆ. ಭಾರತವು ಬೃಹತ್ತಾದ ಗುರಿಗಳನ್ನು ಸಾಧಿಸಲಿದೆ. ಪ್ರತಿಯೊಬ್ಬ ಭಾರತೀಯರೂ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಹೆಜ್ಜೆಗಳನ್ನು ಹಾಕಿದಾಗ ದೇಶವು 130 ಕೋಟಿ ಹೆಜ್ಜೆಗಳಷ್ಟು ಮುನ್ನಡೆಯುತ್ತದೆ. ಭಾರತವು ಮತ್ತೊಮ್ಮೆ ಸ್ವಾವಲಂಬಿಯಾಗುತ್ತದೆ ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ತೋರಿಸುತ್ತದೆ. ಈ ದಂಡಿ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ನಾನು ಶುಭವನ್ನು ಹಾರೈಸುತ್ತೇನೆ. ಇದು ಇಂದು ಯಾವುದೇ ವೈಭವ ಇಲ್ಲದೆ ಸಣ್ಣ ಪ್ರಮಾಣದಲ್ಲಿ ಆರಂಭಗೊಳ್ಳುತ್ತಿದೆ. ಆದರೆ ದಿನ ಕಳೆದಂತೆ, ನಾವು ಆಗಸ್ಟ್ 15 ಕ್ಕೆ ಹತ್ತಿರವಾಗುತ್ತಿದ್ದಂತೆ, ಅದು ಇಡೀ ಭಾರತವನ್ನು ಆವರಿಸಲಿದೆ. ಇದೊಂದು ದೊಡ್ಡ ಉತ್ಸವವಾಗುತ್ತದೆ ಎಂಬ ಬಗ್ಗೆ ನನಗೆ ಖಚಿತ ಭರವಸೆ ಇದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವುದು ಪ್ರತಿಯೊಬ್ಬ ನಾಗರಿಕನ ನಿರ್ಧಾರ, ಸಂಸ್ಥೆಗಳ ಮತ್ತು ಸಂಘಟನೆಗಳ ನಿರ್ಧಾರ. ಸ್ವಾತಂತ್ರ್ಯದ ಹೋರಾಟಗಾರರಿಗೆ ಗೌರವ ಸಲ್ಲಿಸಲು ಇದೊಂದು ಅತ್ಯುತ್ತಮ ವಿಧಾನ.

ಶುಭ ಹಾರೈಕೆಗಳೊಂದಿಗೆ , ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ. ಎಲ್ಲರೂ ನನ್ನೊಂದಿಗೆ ಹೇಳಿ

ಭಾರತ್ ಮಾತಾಕೀ ಜೈ! ಭಾರತ್ ಮಾತಾಕೀ ಜೈ! ಭಾರತ್ ಮಾತಾಕೀ ಜೈ!

ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ!

ಜೈ ಹಿಂದ್-ಜೈ ಹಿಂದ್! ಜೈ ಹಿಂದ್-ಜೈ ಹಿಂದ್! ಜೈ ಹಿಂದ್-ಜೈ ಹಿಂದ್!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'2,500 Political Parties In India, I Repeat...': PM Modi’s Remark Stuns Ghana Lawmakers

Media Coverage

'2,500 Political Parties In India, I Repeat...': PM Modi’s Remark Stuns Ghana Lawmakers
NM on the go

Nm on the go

Always be the first to hear from the PM. Get the App Now!
...
List of Outcomes: Prime Minister's State Visit to Trinidad & Tobago
July 04, 2025

A) MoUs / Agreement signed:

i. MoU on Indian Pharmacopoeia
ii. Agreement on Indian Grant Assistance for Implementation of Quick Impact Projects (QIPs)
iii. Programme of Cultural Exchanges for the period 2025-2028
iv. MoU on Cooperation in Sports
v. MoU on Co-operation in Diplomatic Training
vi. MoU on the re-establishment of two ICCR Chairs of Hindi and Indian Studies at the University of West Indies (UWI), Trinidad and Tobago.

B) Announcements made by Hon’ble PM:

i. Extension of OCI card facility upto 6th generation of Indian Diaspora members in Trinidad and Tobago (T&T): Earlier, this facility was available upto 4th generation of Indian Diaspora members in T&T
ii. Gifting of 2000 laptops to school students in T&T
iii. Formal handing over of agro-processing machinery (USD 1 million) to NAMDEVCO
iv. Holding of Artificial Limb Fitment Camp (poster-launch) in T&T for 50 days for 800 people
v. Under ‘Heal in India’ program specialized medical treatment will be offered in India
vi. Gift of twenty (20) Hemodialysis Units and two (02) Sea ambulances to T&T to assist in the provision of healthcare
vii. Solarisation of the headquarters of T&T’s Ministry of Foreign and Caricom Affairs by providing rooftop photovoltaic solar panels
viii. Celebration of Geeta Mahotsav at Mahatma Gandhi Institute for Cultural Cooperation in Port of Spain, coinciding with the Geeta Mahotsav celebrations in India
ix. Training of Pandits of T&T and Caribbean region in India

C) Other Outcomes:

T&T announced that it is joining India’s global initiatives: the Coalition of Disaster Resilient Infrastructure (CDRI) and Global Biofuel Alliance (GBA).