ಬಿಹಾರ ರಾಜ್ಯಪಾಲ ಶ್ರೀ ಫಗು ಚೌಹಾಣ್ ಜೀ, ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಜೀ, ಶ್ರೀ ರವಿ ಶಂಕರ ಪ್ರಸಾದ್ ಜೀ, ಶ್ರೀ ಗಿರಿರಾಜ್ ಸಿಂಗ್ ಜೀ, ಶ್ರೀ ನಿತ್ಯಾನಂದ ರೈ ಜೀ, ಶ್ರೀಮತಿ ದೇವಶ್ರೀ ಚೌಧರೀ ಜೀ, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ ಕುಮಾರ್ ಮೋದಿ ಜೀ, ಇತರ ಸಚಿವರೇ, ಸಂಸತ್ ಸದಸ್ಯರೇ ಮತ್ತು ಶಾಸಕರೇ ಹಾಗು ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮಕ್ಕೆ ಸೇರಿರುವ ಬಿಹಾರದ ನನ್ನೆಲ್ಲಾ ಸಹೋದರ ಮತ್ತು ಸಹೋದರಿಯರೇ,

ಸ್ನೇಹಿತರೇ, ಬಿಹಾರದ ರೈಲ್ವೇ ಸಂಪರ್ಕದ ಕ್ಷೇತ್ರದಲ್ಲಿ ಹೊಸ ಚರಿತ್ರೆಯನ್ನು ಬರೆಯಲಾಗಿದೆ. ಕೋಸಿ ಮಹಾಸೇತು ಮತ್ತು ಕಿಯುಲ್ ಸೇತುವೆ ಸಹಿತ ಒಂದು ಡಜನ್ನಿನಷ್ಟು ಯೋಜನೆಗಳನ್ನು ಇಂದು ಆರಂಭಿಸಲಾಗಿದ್ದು, ಅವು ಬಿಹಾರದ ರೈಲ್ವೇ ಜಾಲವನ್ನು ಸುಧಾರಿಸಲಿವೆ ಮತ್ತು ರೈಲ್ವೇಯ ವಿದ್ಯುದ್ದೀಕರಣವನ್ನು ಸುಧಾರಣೆ ಮಾಡಲಿವೆ ಹಾಗು  ರೈಲ್ವೇಯಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡಲಿವೆ. ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. 3,000 ಕೋ.ರೂ. ಗಳ ಮೊತ್ತದ ಈ ಯೋಜನೆಗಳು ಬಿಹಾರದ ರೈಲ್ವೇ ಜಾಲವನ್ನು ಬಲಪಡಿಸುವುದರ ಜೊತೆಗೆ ಪಶ್ಚಿಮ ಬಂಗಾಳ ಮತ್ತು ಪೂರ್ವ ಭಾರತದ ರೈಲ್ವೇ ಸಂಪರ್ಕವನ್ನೂ ಬಲಪಡಿಸಲಿವೆ. ನಾನು ಬಿಹಾರ ಸಹಿತ ಪೂರ್ವ ಭಾರತದ ಕೋಟ್ಯಾಂತರ ರೈಲ್ವೇ ಪ್ರಯಾಣಿಕರನ್ನು ಈ ಹೊಸ ಮತ್ತು ಆಧುನಿಕ ಸೌಲಭ್ಯಗಳಿಗಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ, ಬಿಹಾರದ ಹಲವು ಭಾಗಗಳು ಗಂಗಾ, ಕೋಸಿ ಮತ್ತು ಸನ್ ಗಳಂತಹ ನದಿಗಳಿಂದಾಗಿ ಸಂಪರ್ಕರಹಿತವಾಗಿವೆ. ಬಿಹಾರದ ಪ್ರತಿಯೊಂದು ಭಾಗದ ಜನರೂ ನದಿಗಳಿಂದಾಗಿ ಧೀರ್ಘ ಪ್ರಯಾಣ ಕೈಗೊಳ್ಳಬೇಕಾದ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಿದೆ. ನಿತೀಶ್ ಜೀ ಮತ್ತು ಪಾಸ್ವಾನ್ ಜೀ ಅವರು ರೈಲ್ವೇ ಸಚಿವರಾಗಿದ್ದಾಗ  ಈ ಸಮಸ್ಯೆಯನ್ನು ಬಗೆಹರಿಸಲು ಅವರು ಹಲವು ಪ್ರಯತ್ನಗಳನ್ನು ಮಾಡಿದ್ದರು. ಬಳಿಕ ಬಹಳ ಧೀರ್ಘ ಕಾಲ ಈ ನಿಟ್ಟಿನಲ್ಲಿ ಬಹಳ ಕೆಲಸಗಳು ನಡೆಯಲಿಲ್ಲ. ಆದರೆ ನಾವು ಬಿಹಾರದ ಕೋಟ್ಯಾಂತರ ಜನರಿಗೆ ಸಂಬಂಧಿಸಿದ ಈ ದೊಡ್ಡ ಸಮಸ್ಯೆಯನ್ನು ಬಗೆಹರಿಸಲು ವಚನ ಕೈಗೊಂಡು ಮುಂದುವರಿಯುತ್ತಿದ್ದೇವೆ. ಕಳೆದ ಐದಾರು ವರ್ಷಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಹಲವಾರು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ನೇಹಿತರೇ, ಉತ್ತರ ಮತ್ತು ದಕ್ಷಿಣ ಬಿಹಾರಗಳನ್ನು ಜೋಡಿಸಲು ಪಟನಾ ಮತ್ತು ಮುಂಗಾರ್ ಗಳಲ್ಲಿ ಎರಡು ಮಹಾ ಸೇತುಗಳ ನಿರ್ಮಾಣ ಕಾರ್ಯವನ್ನು ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾಯಿತು. ಈ ಎರಡು ರೈಲ್ವೇ ಸೇತುವೆಗಳ ಕಾರ್ಯಾರಂಭದಿಂದಾಗಿ ಉತ್ತರ ಮತ್ತು ದಕ್ಷಿಣ ಬಿಹಾರದ ನಡುವೆ ಜನರಿಗೆ ಪ್ರಯಾಣಿಸುವುದು ಜನರಿಗೆ ಸುಲಭ ಸಾಧ್ಯವಾಗಲಿದೆ. ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿ ಉಳಿದಿದ್ದ ಉತ್ತರ ಬಿಹಾರದ ಪ್ರದೇಶಗಳ ಅಭಿವೃದ್ಧಿಗೆ ವೇಗ ದೊರೆಯಲಿದೆ. ಮಿಥಿಲಾ ಮತ್ತು ಕೋಸಿ ವಲಯಗಳನ್ನು ಸಂಪರ್ಕಿಸುವ ಮಹಾಸೇತು ಮತ್ತು ಸುಪೌಲಾ–ಅಸಾನ್ಪುರ–ಕುಫಾ ರೈಲು ಮಾರ್ಗವನ್ನು ಇಂದು ಬಿಹಾರದ ಜನತೆಗೆ ಅರ್ಪಣೆ ಮಾಡಲಾಗಿದೆ.

ಸ್ನೇಹಿತರೇ, ಎಂಟೂವರೆ ದಶಕಗಳ ಹಿಂದೆ ಸಂಭವಿಸಿದ ತೀವ್ರತೆರನಾದ ಭೂಕಂಪ ಮಿಥಿಲಾ ಮತ್ತು ಕೋಸಿ ವಲಯಗಳನ್ನು ಪ್ರತ್ಯೇಕಿಸಿತು. ಇಂದು ಕೊರೊನಾ ಜಾಗತಿಕ ಸಾಂಕ್ರಾಮಿಕದ ನಡುವೆ ಈ ಎರಡು ವಲಯಗಳನ್ನು ಪರಸ್ಪರ ಜೋಡಿಸಿರುವುದು ಕಾಕತಾಳೀಯವಾಗಿದೆ. ಕೊನೆಯ ಕ್ಷಣದ ನಿರ್ಮಾಣ ಕಾರ್ಯದಲ್ಲಿ ಇತರ ರಾಜ್ಯಗಳ ವಲಸೆ ಕಾರ್ಮಿಕರು ಭಾಗವಹಿಸಿ ಗಣನೀಯ ಕಾಣಿಕೆ ನೀಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಈ ಮಹಾಸೇತು ಮತ್ತು ಈ ಯೋಜನೆ ಗೌರವಾನ್ವಿತ ಅಟಲ್ ಜೀ ಮತ್ತು ನಿತೀಶ್ ಬಾಬು ಅವರ ಕನಸಿನ ಯೋಜನೆಗಳಾಗಿದ್ದವು. ಹೊಸ ಕೋಸಿ ರೈಲ್ವೇ ಮಾರ್ಗದ ಯೋಜನೆಯನ್ನು 2003 ರಲ್ಲಿ ನಿತೀಶ್ ಜೀ ಅವರು ರೈಲ್ವೇ ಸಚಿವರಾಗಿದ್ದಾಗ ಮತ್ತು ಗೌರವಾನ್ವಿತ ಅಟಲ್ ಜೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ರೂಪಿಸಲಾಯಿತು. ಮಿಥಿಲಾ ಮತ್ತು ಕೋಸಿ ವಲಯದ ಜನರ ಸಂಕಷ್ಟಗಳನ್ನು ನಿವಾರಿಸುವುದು ಇದರ ಉದ್ದೇಶವಾಗಿತ್ತು. ಈ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು, 2003 ರಲ್ಲಿ ಅಟಲ್ ಜೀ ಅವರು ಯೋಜನೆಗೆ ಶಿಲಾನ್ಯಾಸ ಮಾಡಿದ್ದರು. ಆದರೆ ಮರು ವರ್ಷ ಅಟಲ್ ಜೀ ಅವರ ಸರಕಾರ ಅಧಿಕಾರ ಕಳೆದುಕೊಂಡಿತು ಮತ್ತು ಆ ಬಳಿಕ ಕೋಸಿ ರೈಲ್ವೇ ಮಾರ್ಗ ಯೋಜನೆ ಕೆಲಸ ನಿಧಾನಗತಿಗೆ ಇಳಿಯಿತು. 

ಮಿಥಿಲಾಂಚಲ ಮತ್ತು ಬಿಹಾರದ ಜನತೆಯ ಸಮಸ್ಯೆ, ಸಂಕಷ್ಟಗಳ ಬಗ್ಗೆ ಕಾಳಜಿ ಇದ್ದಿದ್ದರೆ ಕೋಸಿ ರೈಲ್ವೇ ಮಾರ್ಗದ ಕಾಮಗಾರಿ ತ್ವರಿತ ಗತಿಯಿಂದ ಸಾಗುತ್ತಿತ್ತು. ಆಗ ರೈಲ್ವೇ ಸಚಿವಾಲಯ ಯಾರ ಕೈಯಲ್ಲಿತ್ತು ?ಅಲ್ಲಿ ಯಾರ ಸರಕಾರವಿತ್ತು ?. ನಾನು ಇದರ ಬಗ್ಗೆ ವಿವರವಾಗಿ ಹೇಳಲು ಇಚ್ಚಿಸುವುದಿಲ್ಲ. ಆದರೆ ವಸ್ತು ಸ್ಥಿತಿ ಏನೆಂದರೆ,  2004 ರ ಬಳಿಕ ನಡೆಯುತ್ತಿದ್ದ  ವೇಗದಲ್ಲಿ ಕೆಲಸ ಸಾಗಿದ್ದರೆ , ಈ ದಿನ ಬರುತ್ತಿರಲಿಲ್ಲ.ಅದು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತಿತ್ತು. ದಶಕಗಳಾಗುತ್ತಿತ್ತು ಬಹುಷಃ ತಲೆಮಾರುಗಳೇ ಬೇಕಾಗುತ್ತಿದ್ದವು. ಆದರೆ ಅಲ್ಲಿ ದೃಢ ಸಂಕಲ್ಪ ಇದ್ದರೆ ಮತ್ತು ನಿತೀಶ್ ಜೀ ಯವರಂತಹ ಸಹೋದ್ಯೋಗಿಗಳು ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆಧುನಿಕ ತಂತ್ರಜ್ಞಾನವನ್ನು ಸುಪೌಲ್–ಅಸಾನ್ಪುರ–ಕುಫಾ ಮಾರ್ಗದಲ್ಲಿ ಮಣ್ಣಿನ ಸವಕಳಿ ತಡೆದು, ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಬಳಸಲಾಗಿದೆ. 2017 ರಲ್ಲಿ ಗಂಭೀರ ಪ್ರಮಾಣದ ನೆರೆ ಹಾವಳಿಯಿಂದ ಆಗಿರುವ ಹಾನಿಯನ್ನು ಈ ಬಾರಿ ಪರಿಹರಿಸಲಾಗಿದೆ. ಅಂತಿಮವಾಗಿ ಕೋಸಿ ಮಹಾಸೇತು ಮತ್ತು ಸುಪೌಲ್  – ಅಸಾನ್ಪುರ ಕುಫಾ ಮಾರ್ಗ ಬಿಹಾರದ ಜನತೆಗೆ ಸೇವೆ ನೀಡಲು ಸಿದ್ದವಾಗಿದೆ.

|

ಸ್ನೇಹಿತರೇ, ಸುಪೌಲ್  – ಅಸಾನ್ಪುರ ಕುಫಾ ನಡುವೆ ಕೋಸಿ ಮಹಾಸೇತು ಮೂಲಕ ಹೊಸ ರೈಲು ಸೇವೆ ಆರಂಭದಿಂದ  ಸುಪೌಲ, ಅರಾರಿಯಾ ಮತ್ತು ಸಹಾರ್ಸಾ ಜಿಲ್ಲೆಗಳ ಜನರಿಗೆ ಬಹಳ ದೊಡ್ಡ ಪ್ರಯೋಜನ ಲಭಿಸಲಿದೆ. ಈಶಾನ್ಯದ ಜನತೆಗೆ ಇದು ಪರ್ಯಾಯ ರೈಲು ಮಾರ್ಗವಾಗಲಿದೆ. ಈ ಮಹಾಸೇತು ಕೋಸಿ ಮತ್ತು ಮಿಥಿಲಾ ವಲಯಕ್ಕೆ ಒಂದು ಅನುಕೂಲತೆಗಳನ್ನು ನೀಡುವ ಸಾಧನ , ಇದು ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡಲಿದೆ  ಮತ್ತು ಈ ಇಡೀ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಉತ್ತೇಜಿಸಲಿದೆ.

ಸ್ನೇಹಿತರೇ, ನಿರ್ಮಾಲಿಯಿಂದ ಸರೈಘರ್ ನಡುವಿನ ಪ್ರಯಾಣ ಸುಮಾರು 300 ಕಿಲೋಮೀಟರಿನಷ್ಟು ಎಂಬುದು ಬಿಹಾರದ ಜನತೆಗೆ ಗೊತ್ತಿದೆ. ದರ್ಭಾಂಗ, ಸಮಷ್ಟಿಪುರ, ಖಗಾರಿಯಾ, ಮಾನ್ಸಿ ಮತ್ತು ಸಹರ್ಸಾ ಮೂಲಕ ಹಾದುಹೋಗಬೇಕು. ಬಿಹಾರದ ಜನತೆ 300 ಕಿಲೋ ಮೀಟರ್ ಪ್ರಯಾಣವನ್ನು ಕೈಗೊಳ್ಳುವ ಅವಶ್ಯಕತೆ ಕೊನೆಗೊಳ್ಳುವ  ದಿನ ಬಹಳ ದೂರವಿಲ್ಲ. 300 ಕಿಲೋ ಮೀಟರ್ ದೂರದ ಪ್ರಯಾಣ 22 ಕಿಲೋ ಮೀಟರಿಗೆ ಇಳಿಯಲಿದೆ ಮತ್ತು ಎಂಟು ಗಂಟೆಗಳ ಪ್ರಯಾಣ ಅರ್ಧ ಗಂಟೆಯಲ್ಲಿ ಪೂರ್ಣಗೊಳ್ಳಲಿದೆ. ಅಂದರೆ ಬಿಹಾರದ ಜನತೆ ಪ್ರಯಾಣಕ್ಕಾಗಿ ಬಹಳ ಸಮಯವನ್ನು ವಿನಿಯೋಗಿಸಬೇಕಿಲ್ಲ ಮತ್ತು ಅವರು ಸಮಯವನ್ನು ಹಾಗು ಹಣವನ್ನು ಉಳಿಸಲು ಸಮರ್ಥರಾಗುತ್ತಾರೆ.

ಸ್ನೇಹಿತರೇ, ಕೋಸಿ ಮಹಾಸೇತುವಿನಂತೆ ಕಿಯುಲ್ ನದಿಯ ಮೇಲೆ ಹೊಸ ರೈಲ್ವೇ ಇಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಸೌಲಭ್ಯ ಆರಂಭಗೊಳ್ಳುವುದರೊಂದಿಗೆ  ಈ ಇಡೀ ಮಾರ್ಗದಲ್ಲಿ ವೇಗದ ಪ್ರಯಾಣ  ಮತ್ತು ಅನೇಕ ಸವಲತ್ತುಗಳು ಒದಗಲಿವೆ. ಈ ಹೊಸ ರೈಲೇ ಸೇತುವೆಯ ನಿರ್ಮಾಣದಿಂದಾಗಿ ರೈಲುಗಳು ಈಗ ಜಾಝಾದಿಂದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜಂಕ್ಷನ್ ವರೆಗಿನ ಮುಖ್ಯ ಮಾರ್ಗದಲ್ಲಿ ಗಂಟೆಗೆ 100-125 ಕಿಲೋ ಮೀಟರ್ ವೇಗದಲ್ಲಿ ಓಡಲಿವೆ. ಇಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯು ಹೌರಾ–ದಿಲ್ಲಿ ಮುಖ್ಯ ಮಾರ್ಗದಲ್ಲಿ ರೈಲುಗಳ ಚಲನೆಯನ್ನು ಸುಲಭಗೊಳಿಸಲಿದೆ. ಮತ್ತು ಅನಗತ್ಯ ವಿಳಂಭಕ್ಕೆ ಪರಿಹಾರ ಒದಗಿಸಲಿದೆ ಹಾಗು ಪ್ರಯಾಣ ಸುರಕ್ಷಿತವಾಗಲಿದೆ.

ಸ್ನೇಹಿತರೇ, ಕಳೆದ 6 ವರ್ಷಗಳಲ್ಲಿ ನವಭಾರತದ ಆಶೋತ್ತರಗಳನ್ನು ಮತ್ತು ಸ್ವಾವಲಂಬಿ ಪುನಶ್ಚೇತನಗೊಂಡ ಭಾರತದ ನಿರೀಕ್ಷೆಗಳನ್ನು ಈಡೇರಿಸಲು ಅನುಕೂಲವಾಗುವಂತೆ ಭಾರತೀಯ ರೈಲ್ವೇಯನ್ನು ರೂಪಿಸಲಾಗುತ್ತಿದೆ. ಇಂದು ಭಾರತೀಯ ರೈಲ್ವೇಯು ಹಿಂದೆಂದಿಗಿಂತಲೂ ಸ್ವಚ್ಚವಾಗಿದೆ. ಬ್ರಾಡ್ ಗೇಜ್ ರೈಲು ಮಾರ್ಗಗಳಲ್ಲಿಯ ಮಾನವ ರಹಿತ ರೈಲ್ವೇ ಕ್ರಾಸಿಂಗ್ ಗಳನ್ನು ತೆಗೆದು ಹಾಕುವ ಮೂಲಕ  ಭಾರತೀಯ ರೈಲ್ವೇಯನ್ನು  ಹಿಂದೆಂದಿಗಿಂತಲೂ ಸುರಕ್ಷಿತವನ್ನಾಗಿಸಲಾಗಿದೆ. ಭಾರತೀಯ ರೈಲ್ವೇಯ ವೇಗ ವರ್ಧನೆಗೊಂಡಿದೆ. ವಂದೇ ಭಾರತ್ ನಂತಹ ಭಾರತೀಯ ನಿರ್ಮಿತ ರೈಲುಗಳು ಸ್ವಾವಲಂಬನೆ ಮತ್ತು ಆಧುನಿಕತೆಯ ಸಂಕೇತವಾಗಿವೆ ಹಾಗು ಅವು ರೈಲ್ವೇ ಜಾಲದ ಭಾಗವಾಗಿವೆ. ಇಂದು ದೇಶದ ಸಂಪರ್ಕರಹಿತ ಭಾಗಗಳನ್ನು ರೈಲ್ವೇ ಜಾಲದ ಮೂಲಕ  ತಲುಪುವ, ರೈಲ್ವೇ ಮಾರ್ಗವನ್ನು ಅಗಲಗೊಳಿಸುವ ಮತ್ತು ವಿದ್ಯುದ್ದೀಕರಿಸುವ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿವೆ. 

ಬಿಹಾರ ಮತ್ತು ಇಡೀಯ ಪೂರ್ವ ಭಾರತಗಳು ಈ ರೈಲ್ವೇ ಆಧುನೀಕರಣ ಪ್ರಯತ್ನಗಳ ಲಾಭ ಪಡೆಯಲಿವೆ. ಕಳೆದ ಕೆಲವು ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡಲು ಮಾಧೇಪುರದಲ್ಲಿ ಇಲೆಕ್ಟ್ರಿಕ್ ಲೋಕೋ ಕಾರ್ಖಾನೆಯನ್ನು ಮತ್ತು ಮರ್ಹುರಾದಲ್ಲಿ ಡೀಸಿಲ್ ಲೋಕೋ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ. ಈ ಎರಡೂ ಯೋಜನೆಗಳಲ್ಲಿ ಸುಮಾರು 44,000 ಕೋ.ರೂ.ಗಳ ಹೂಡಿಕೆ ಮಾಡಲಾಗಿದೆ. ಭಾರತದ ಅತ್ಯಂತ ಶಕ್ತಿ ಶಾಲಿ ಇಲೆಕ್ಟ್ರಿಕ್ ಲೊಕೋಮೋಟಿವ್ -12,000 ಅಶ್ವಶಕ್ತಿಯ ಲೊಕೋಮೋಟಿವ್ ಬಿಹಾರದಲ್ಲಿ ತಯಾರಾಗುತ್ತಿದೆ ಎಂಬುದು  ಬಿಹಾರದ ಜನತೆಗೆ ಹೆಮ್ಮೆಪಡುವ ವಿಷಯ. ಬಿಹಾರದ ಮೊದಲ ಲೊಕೊ ಶೆಡ್ ಬರೌನಿಯಲ್ಲಿ ಕಾರ್ಯಾರಂಭ ಮಾಡಿದ್ದು, ಅದು ಇಲೆಕ್ಟ್ರಿಕ್ ಲೊಕೋಮೋಟಿವ್ ಗಳನ್ನು ನಿರ್ವಹಣೆ ಮಾಡಲಿದೆ. ಇನ್ನೊಂದು ದೊಡ್ಡ ಸಂಗತಿ ಎಂದರೆ ಇಂದು ಬಿಹಾರದ 90 ಶೇಖಡಾದಷ್ಟು ರೈಲ್ವೇ ಜಾಲವನ್ನು ವಿದ್ಯುದ್ದೀಕರಿಸಲಾಗಿದೆ. ಕಳೆದ ಆರು ವರ್ಷಗಳಲ್ಲಿ 3,000 ಕಿಲೋ ಮೀಟರಿಗೂ ಅಧಿಕ ರೈಲ್ವೇಯನ್ನು ವಿದ್ಯುದ್ದೀಕರಿಸಲಾಗಿದೆ. ಇಂದು ಮತ್ತೆ ಐದು ಯೋಜನೆಗಳನ್ನು ಸೇರಿಸಲಾಗಿದೆ.

|

ಸ್ನೇಹಿತರೇ, ಬಿಹಾರದಲ್ಲಿರುವ ಪರಿಸ್ಥಿತಿಯಲ್ಲಿ ಜನರಿಗೆ ಪ್ರಯಾಣಕ್ಕೆ  ಬಹಳ ಅನುಕೂಲಕರ ಸಾಧನ ಎಂದರೆ ರೈಲ್ವೇ. ಬಿಹಾರದಲ್ಲಿ ರೈಲ್ವೇ ಪರಿಸ್ಥಿತಿಯ ಸುಧಾರಣೆ ಕೇಂದ್ರ ಸರಕಾರದ ಅತ್ಯಂತ ಆದ್ಯತೆಯಲ್ಲೊಂದಾಗಿದೆ. ನಾನಿಂದು ನಿಮ್ಮೊಂದಿಗೆ ಒಂದು ವಸ್ತುಸ್ಥಿತಿಯನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ, ಅದೆಂದರೆ ಬಿಹಾರದಲ್ಲಿ ತ್ವರಿತಗತಿಯಿಂದ ನಡೆಯುತ್ತಿರುವ ರೈಲ್ವೇ ಜಾಲದ ಕಾಮಗಾರಿಗೆ ಸಂಬಂಧಿಸಿದುದಾಗಿದೆ. 2014 ಕ್ಕೆ ಮೊದಲು 5 ವರ್ಷದಲ್ಲಿ  ಬಿಹಾರದಲ್ಲಿ ಕಾರ್ಯಾರಂಭ ಮಾಡಿದ ಹೊಸ ರೈಲು ಮಾರ್ಗದ ಉದ್ದ ಬರೇ 325 ಕಿಲೋ ಮೀಟರ್ ಮಾತ್ರ. ಸರಳವಾಗಿ ಹೇಳಬೇಕೆಂದರೆ 2014 ಕ್ಕೆ ಪೂರ್ವದ  5 ವರ್ಷಗಳಲ್ಲಿ ಬಿಹಾರದಲ್ಲಿ ಕಾರ್ಯಾರಂಭ ಮಾಡಲಾದ ಹೊಸ ರೈಲು ಮಾರ್ಗ 325 ಕಿಲೋ ಮೀಟರ್ ಮಾತ್ರ. ಆದರೆ 2014 ಕ್ಕೆ ನಂತರದ ಐದು ವರ್ಷದಲ್ಲಿ  ಬಿಹಾರದಲ್ಲಿ ಕಾರ್ಯಾರಂಭ ಮಾಡಿದ ಹೊಸ ರೈಲು ಮಾರ್ಗದ ಉದ್ದ 700 ಕಿಲೋ ಮೀಟರ್. ಅಂದರೆ ಹೊಸ ರೈಲು ಮಾರ್ಗದ ಕಾರ್ಯಾರಂಭದ ಪ್ರಮಾಣ ದುಪ್ಪಟ್ಟಾಗಿದೆ. ಇನ್ನೂ 1000 ಕಿಲೋ ಮೀಟರ್ ಉದ್ದದ ಹೊಸ ರೈಲು ಮಾರ್ಗದ ನಿರ್ಮಾಣ ಕಾರ್ಯವೀಗ ಪ್ರಗತಿಯಲ್ಲಿದೆ. ಹಾಜಿಪುರ–ಘ್ಹೋಶ್ವಾರ್–ವೈಶಾಲಿ ರೈಲ್ವೇ ಮಾರ್ಗದ ಆರಂಭದೊಂದಿಗೆ ವೈಶಾಲಿಯು ದಿಲ್ಲಿ ಮತ್ತು ಪಟನಾದ ರೈಲ್ವೇ ಸೇವೆಗಳ ಜೊತೆ ನೇರವಾಗಿ ಸಂಪರ್ಕಿಸಲ್ಪಡಲಿದೆ. ಈ ಸೇವೆ ವೈಶಾಲಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಲಿದೆ ಮತ್ತು ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ. ಅದೇ ರೀತಿ ಇಸ್ಲಾಂಪುರ–ನಟೇಸರ್ ಹೊಸ ರೈಲು ಮಾರ್ಗದಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಹೊಸ ಸವಲತ್ತಿನಿಂದ ನಿರ್ದಿಷ್ಟವಾಗಿ ಬುದ್ಧ ಧರ್ಮಾನುಯಾಯಿಗಳಿಗೆ ಭಾರೀ ಪ್ರಯೋಜನವಾಗಲಿದೆ.

ಸ್ನೇಹಿತರೇ, ಇಂದು ದೇಶದಲ್ಲಿ ಸರಕು ಸಾಗಾಣಿಕೆ  ಕಾರಿಡಾರುಗಳಿಗೆ ಸಂಬಂಧಿಸಿದ ಕಾಮಗಾರಿ ವೇಗದಿಂದ ಸಾಗುತ್ತಿದೆ. ಇದು ಸರಕು ಮತ್ತು ಪ್ರಯಾಣಿಕ ರೈಲುಗಳಿಗೆ ಪ್ರತ್ಯೇಕ ಹಳಿಗಳ ಸಮಗ್ರ ವ್ಯವಸ್ಥೆಯನ್ನು ಒದಗಿಸಲಿದೆ. ಇದರಲ್ಲಿ ಸುಮಾರು 250 ಕಿಲೋ ಮೀಟರ್ ಉದ್ದದ ಸರಕು ಸಾಗಾಣಿಕೆಗಾಗಿಯೇ ಇರುವ ಕಾರಿಡಾರ್ ಬಿಹಾರದಲ್ಲಿ ನಿರ್ಮಾಣವಾಗುತ್ತಿದೆ. ಅದು ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಇದು ಪ್ರಯಾಣಿಕ ಮತ್ತು ಸರಕು ಸಾಗಾಣಿಕೆ ರೈಲುಗಳ ವಿಳಂಬ ಸಮಸ್ಯೆಯನ್ನು  ಕಡಿಮೆ ಮಾಡಲಿದೆ.

ಸ್ನೇಹಿತರೇ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ರೈಲ್ವೇಯು ಕೆಲಸ ಮಾಡಿದ ರೀತಿಗಾಗಿ ಭಾರತೀಯ ರೈಲ್ವೇಯ ಲಕ್ಷಾಂತರ ಸಿಬ್ಬಂದಿಗಳು, ಅವರ ಸಹೋದ್ಯೋಗಿಗಳಿಗೆ ನನ್ನ ವಿಶೇಷ ಶ್ಲಾಘನೆಗಳು ಸಲ್ಲುತ್ತವೆ. ದೇಶದ ಲಕ್ಷಾಂತರ ಕಾರ್ಮಿಕರನ್ನು ಶ್ರಮಿಕ ವಿಶೇಷ ರೈಲುಗಳ ಮೂಲಕ ಅವರ ಮನೆಗಳಿಗೆ ಕರೆತರುವಲ್ಲಿ ರೈಲ್ವೇಯು ರಾತ್ರಿ ಹಗಲು ಕೆಲಸ ಮಾಡಿದೆ. ವಲಸೆ ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶ ಒದಗಿಸುವಲ್ಲಿ ರೈಲ್ವೇಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಭಾರತೀಯ ರೈಲ್ವೇಯ ಪ್ರಯಾಣಿಕ ಸೇವೆಗಳನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.  ಆದರೆ ಸುರಕ್ಷೆಯ ಕೆಲಸ ಮತ್ತು ರೈಲುಗಳ ಆಧುನೀಕರಣ ತ್ವರಿತಗತಿಯಲ್ಲಿಯೇ ಮುಂದುವರೆದಿತ್ತು. ದೇಶದ ಮೊದಲ ಕಿಸಾನ್ ರೈಲು ಅಂದರೆ ಗಾಲಿಗಳ ಮೇಲೆ ಶೀತಲೀಕೃತ ದಾಸ್ತಾನುಗಾರವನ್ನು ಬಿಹಾರ ಮತ್ತು ಮಹಾರಾಷ್ಟ್ರ ನಡುವೆ ಕೊರೊನಾ ಅವಧಿಯಲ್ಲಿ ಆರಂಭಿಸಲಾಯಿತು.

ಸ್ನೇಹಿತರೇ, ಈ ಕಾರ್ಯಕ್ರಮವನ್ನು ರೈಲ್ವೇ ಆಯೋಜಿಸಿರಬಹುದು, ಆದರೆ ರೈಲ್ವೇಯ ಜೊತೆ ಇದು ಜನರ ಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿಯ ಪ್ರಯತ್ನ. ಆದುದರಿಂದ ನಾನಿಂದು ನಿಮ್ಮ ಜೊತೆ ಇನ್ನೊಂದು ವಿಷಯದ ಬಗ್ಗೆ ಮಾತನಾಡುವವನಿದ್ದೇನೆ. ಅದು ಬಿಹಾರದ ಜನತೆಯ ಆರೋಗ್ಯಕ್ಕೆ ಸಂಬಂಧಿಸಿದ್ದು. ನಿತೀಶ್ ಜೀ ಅವರ ಸರಕಾರ ರಚನೆಗೆ ಮೊದಲು ಬಿಹಾರದಲ್ಲಿ ವೈದ್ಯಕೀಯ ಕಾಲೇಜುಗಳು ಇರಲಿಲ್ಲ. ಇದರಿಂದ ಬಿಹಾರದ ರೋಗಿಗಳಿಗೆ ಬಹಳಷ್ಟು ಅನಾನುಕೂಲಗಳಾಗಿವೆ ಮಾತ್ರವಲ್ಲ ಬಿಹಾರದ ಬುದ್ದಿವಂತ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿತ್ತು. ಇಂದು ಬಿಹಾರದಲ್ಲಿ 15 ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳಿವೆ. ಮತ್ತು ಅವುಗಳಲ್ಲಿ ಹಲವನ್ನು ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾಗಿದೆ. ಕೆಲವು ದಿನಗಳ ಹಿಂದೆ ಬಿಹಾರಕ್ಕೆ ಹೊಸ ಎ.ಐ.ಐ.ಎಂ.ಎಸ್. ಮಂಜೂರು ಮಾಡಲಾಗಿದೆ. ಈ ಹೊಸ ಎ.ಐ.ಐ.ಎಂ.ಎಸ್. ದರ್ಭಾಂಗದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅದು 750 ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಿರುತ್ತದೆ ಮತ್ತು ಅಲ್ಲಿ 100 ಎಂ.ಬಿ.ಬಿ.ಎಸ್. ಸೀಟುಗಳು ಹಾಗು 60 ನರ್ಸಿಂಗ್ ಸೀಟುಗಳು ಲಭ್ಯ ಇರುತ್ತವೆ. ದರ್ಭಾಂಗದಲ್ಲಿಯ ಹೊಸ ಎ.ಐ.ಐ.ಎಂ.ಎಸ್. ನಿಂದಾಗಿ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

|

ಸ್ನೇಹಿತರೇ, ನಿನ್ನೆ ದೇಶಕ್ಕೆ ಬಹಳ ಮಹತ್ವದ ದಿನ, ರೈತರ ಕಲ್ಯಾಣಕ್ಕಾಗಿ ಮತ್ತು ಕೃಷಿ ಸುಧಾರಣೆಗಳಿಗೆ ಸಂಬಂಧಿಸಿ ಮಹತ್ವದ ದಿನ. ನಿನ್ನೆ ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಚಾರಿತ್ರಿಕ ಕೃಷಿ ಸುಧಾರಣಾ ವಿಧೇಯಕಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ವಿಧೇಯಕಗಳು ನಮ್ಮ ರೈತರನ್ನು ಅನೇಕ ನಿರ್ಬಂಧಗಳಿಂದ ಬಿಡುಗಡೆ ಮಾಡಿವೆ.  ಮತ್ತು ಸ್ವಾತಂತ್ರ್ಯಾನಂತರ ರೈತರಿಗೆ ಕೃಷಿಯಲ್ಲಿ ಹೊಸ ಸ್ವಾತಂತ್ರ್ಯ ನೀಡಿವೆ . ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ಒದಗಿಸಲಾಗಿದೆ. ಈ ವಿಧೇಯಕಗಳು ಅಂಗೀಕಾರಗೊಂಡುದಕ್ಕಾಗಿ ನಾನು ದೇಶದ ರೈತರನ್ನು ಅಭಿನಂದಿಸುತ್ತೇನೆ. ರೈತರು ಮತ್ತು ಗ್ರಾಹಕರ ನಡುವಿನ ಮಧ್ಯವರ್ತಿಗಳು ರೈತರ ಆದಾಯದ ದೊಡ್ಡ ಭಾಗವನ್ನು ಕಬಳಿಸುತ್ತಿದ್ದರು. ರೈತರನ್ನು ರಕ್ಷಿಸುವುದಕ್ಕೆ ಈ ವಿಧೇಯಕಗಳು ಅವಶ್ಯವಾಗಿದ್ದವು. ಇವು ರೈತರಿಗೆ ರಕ್ಷಣಾ ಕವಚಗಳು. ಆದರೆ ಅಲ್ಲಿ ಹಲವು ಜನರಿದ್ದಾರೆ, ದಶಕಗಳ ಕಾಲ ದೇಶವನ್ನಾಳಿದವರು, ಅವರು ರೈತರಲ್ಲಿ ಈ ವಿಷಯದ ಬಗ್ಗೆ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಮತ್ತು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ.

ಸ್ನೇಹಿತರೇ, ಈ ಜನರು ಎಂ.ಎಸ್.ಪಿ. ಬಗ್ಗೆ ದೊಡ್ದ ದೊಡ್ಡ ಮಾತುಗಳನ್ನಾಡುತ್ತಾರೆ, ಆದರೆ ಎಂದೂ ತಮ್ಮ  ಭರವಸೆಗಳನ್ನು ಈಡೇರಿಸಿದವರಲ್ಲ.ಈಗಿನ ಎನ್.ಡಿ.ಎ. ಸರಕಾರ ಮಾತ್ರ ರೈತರಿಗೆ ತಾನು ನೀಡಿದ ಭರವಸೆಗಳನ್ನು ಈಡೇರಿಸಿದೆ. ಈಗ ಅವರು ರೈತರಿಗೆ ಎಂ.ಎಸ್.ಪಿ. ಲಾಭ ನೀಡಲಾಗುವುದಿಲ್ಲ ಎಂಬ ತಪ್ಪು ಮಾಹಿತಿಯನ್ನು ಹರಡಲು ತೊಡಗಿದ್ದಾರೆ. ಸರಕಾರ ರೈತರಿಂದ ಅಕ್ಕಿ ಖರೀದಿಸುವುದಿಲ್ಲ, ಭತ್ತ ಖರೀದಿಸುವುದಿಲ್ಲ, ಗೋಧಿ ಖರೀದಿಸುವುದಿಲ್ಲ ಎಂಬುದೆಲ್ಲಾ  ಶುದ್ದಾಂಗ ಸುಳ್ಳುಗಳು. ಇದು ಪೂರಾ ಸುಳ್ಳು, ತಪ್ಪು ಮಾಹಿತಿ ಮತ್ತು ರೈತರಿಗೆ ಮಾಡುತ್ತಿರುವ ಮೋಸ. ನಮ್ಮ ಸರಕಾರ ಹಿಂದೆಯೂ, ಈಗಲೂ , ಮುಂದೆಯೂ ರೈತರಿಗೆ ಎಂ.ಎಸ್. ಪಿ. ಮೂಲಕ ನ್ಯಾಯೋಚಿತ ದರ ನೀಡಲು ಬದ್ದವಾಗಿದೆ. ಹಿಂದಿದ್ದಂತೆ ಸರಕಾರಿ ಖರೀದಿ ಮುಂದುವರೆಯುತ್ತದೆ. ಯಾವುದೇ ವ್ಯಕ್ತಿಗೆ ತನ್ನ ಉತ್ಪನ್ನವನ್ನು ಎಲ್ಲಾದರೂ ಮಾರಾಟ ಮಾಡಬಹುದು. ಆತ ಬಟ್ಟೆ ತಯಾರಿಸಿದ್ದರೆ, ಪಾತ್ರೆಗಳನ್ನು ತಯಾರಿಸುತ್ತಿದ್ದರೆ ಅಥವಾ ಶೂಗಳನ್ನು ತಯಾರಿಸುತ್ತಿದ್ದರೆ ಅವುಗಳನ್ನು ಅವರು ಅವರಿಗೆ ಇಷ್ಟ ಬಂದಲ್ಲಿ,  ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆದರೆ ನನ್ನ ರೈತ ಸಹೋದರರು ಮತ್ತು ಸಹೋದರಿಯರಿಗೆ ಆ ಹಕ್ಕನ್ನು ನಿರಾಕರಿಸಲಾಗಿದೆ. ಹೊಸ ಪ್ರಸ್ತಾವನೆಗಳ ಮೂಲಕ ರೈತರು ತಮ್ಮ ಉತ್ಪಾದನೆಯನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ತಾವು ನಿರೀಕ್ಷಿಸಿದ ದರದಲ್ಲಿ ಮಾರಾಟ ಮಾಡಬಹುದು. ನಮ್ಮ ಸಹಕಾರಿಗಳಿಗೆ, ಕೃಷ್ಯುತ್ಪನ್ನ ಸಂಘಟನೆಗಳಿಗೆ (ಎಫ್.ಪಿ.ಒ.)  , ಮತ್ತು ಬಿಹಾರದ ಸ್ವಸಹಾಯ ಗುಂಪುಗಳಿಗೆ  ಇದೊಂದು ಸುವರ್ಣಾವಕಾಶ.

ಸ್ನೇಹಿತರೇ, ನಿತೀಶ್ ಜೀ ಅವರೂ ಈ ಕಾರ್ಯಕ್ರಮದಲ್ಲಿ ಹಾಜರಿದ್ದಾರೆ. ಎ.ಪಿ.ಎಂ.ಸಿ. ಕಾಯ್ದೆಯು ರೈತರಿಗೆ ಮಾಡುತ್ತಿರುವ ಹಾನಿಯ ಬಗ್ಗೆ ಅವರಿಗೆ ಅರಿವಿದೆ. ಇದರಿಂದಾಗಿಯೇ ನಿತೀಶ್ ಜೀ ಅವರು ಬಿಹಾರದ ಮುಖ್ಯಮಂತ್ರಿಯಾಗುತ್ತಲೇ ಆವರ ಆರಂಭಿಕ ವರ್ಷದಲ್ಲಿ ಇದನ್ನು ತೆಗೆದು ಹಾಕಿದರು. ದೇಶವೀಗ ಬಿಹಾರ ತೋರಿಸಿದ ಹಾದಿಯಲ್ಲಿ ಸಾಗುತ್ತಿದೆ.

ಎನ್.ಡಿ.ಎ. ಸರಕಾರ ಕಳೆದ ಆರು ವರ್ಷಗಳಲ್ಲಿ ರೈತರಿಗೆ ಮಾಡಿದಷ್ಟನ್ನು ಹಿಂದೆಂದೂ ಮಾಡಿರಲಿಲ್ಲ. ನಾವು ರೈತರ ಪ್ರತಿಯೊಂದು ಸಮಸ್ಯೆಯನ್ನು ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಕಾಳಜಿಯುಕ್ತ ಪರಿಹಾರಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡಿದೆವು. ಪ್ರಧಾನ ಮಂತ್ರಿ ಕಿಸಾನ್ ಕಲ್ಯಾಣ ಯೋಜನಾವನ್ನು ರೈತರು ಬೀಜಗಳನ್ನು ಕೊಳ್ಳಲು , ರಸಗೊಬ್ಬರಗಳನ್ನು ಖರೀದಿಸಲು ಅನುಕೂಲಗಳನ್ನು ಒದಗಿಸುವುದಕ್ಕಾಗಿ ಆರಂಭಿಸಲಾಯಿತು. ಇದರಿಂದ ಅವರು ತಮ್ಮ ಸಣ್ಣ ಸಣ್ಣ ಆವಶ್ಯಕತೆಗಳಿಗಾಗಿ ಸಾಲ ಪಡೆಯುವ ಅವಶ್ಯಕತೆ ಇಲ್ಲದಂತಾಯಿತು. ಈ ಯೋಜನೆ ಅಡಿಯಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಗಳನ್ನು ನೇರವಾಗಿ ದೇಶದ 10 ಕೋಟಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅಲ್ಲಿ ಮಧ್ಯವರ್ತಿಗಳು ಇಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಿಂಚಯ್ ಯೋಜನಾ ಅಡಿಯಲ್ಲಿ ಒಂದು ಲಕ್ಷ ಕೋ.ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳ ಅನುಷ್ಟಾನವನ್ನು ಇದರಡಿ ಕೈಗೊಳ್ಳಲಾಗಿದೆ. . ಇದರಿಂದಾಗಿ ರೈತರು ನೀರಿನ ಸಮಸ್ಯೆ ಎದುರಿಸುವುದು ನಿವಾರಣೆಯಾಗಲಿದೆ. ಯೂರಿಯಾ, ಇದಕ್ಕಾಗಿ ಹಿಂದೆ ದೊಡ್ಡ ಸರತಿ ಸಾಲುಗಳಲ್ಲಿ ನಿಲ್ಲಬೇಕಾಗಿತ್ತು, ಮತ್ತು ಅದು ರೈತರಿಗೆ ದೊರಕುವುದಕ್ಕಿಂತ ಹೆಚ್ಚು  ಸುಲಭವಾಗಿ ಕೈಗಾರಿಕೆಗಳಿಗೆ ದೊರಕುತ್ತಿತ್ತು.ಅದಕ್ಕೀಗ ಶೇಖಡಾ ನೂರರಷ್ಟು ಬೇವಿನ ಲೇಪನ ಮಾಡಲಾಗಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಶೀತಲೀಕೃತ ದಾಸ್ತಾನುಗಾರಗಳ ಜಾಲವನ್ನು ನಿರ್ಮಾಣ ಮಾಡಲಾಗುತ್ತಿದೆ. ಆಹಾರ ಸಂಸ್ಕರಣಾ ಸಂಬಂಧಿ ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಒಂದು ಲಕ್ಷ ಕೋ.ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ. ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಲು ರಾಷ್ಟ್ರವ್ಯಾಪೀ ಪ್ರಚಾರಾಂದೋಲನ ಜಾರಿಯಲ್ಲಿದೆ. ಮತ್ಸ್ಯ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರಕಾರ ನಿರಂತರ ಕಾರ್ಯೋನ್ಮುಖವಾಗಿದೆ. ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡುತ್ತಿದೆ. ಜೇನು ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ಕೊಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಿಸುತ್ತಿದೆ.  ರೈತರಿಗೆ ಅವರ ಆದಾಯ ಹೆಚ್ಚಿಸಲು ವಿವಿಧ ಆಯ್ಕೆಗಳನ್ನು ಒದಗಿಸುತ್ತಿದೆ.

ಸ್ನೇಹಿತರೇ , ಇಂದು ನಾನು ನನ್ನ ಧೋರಣೆಯ ಮುಖ್ಯಾಂಶಗಳನ್ನು ವಿನೀತನಾಗಿ ದೇಶದ ರೈತರಿಗೆ ತಿಳಿಯಪಡಿಸಲು ಇಚ್ಚಿಸುತ್ತೇನೆ. ಸ್ಪಷ್ಟ ಸಂದೇಶವನ್ನು ನೀಡಲು ಇಚ್ಚಿಸುತ್ತೇನೆ. ಯಾವುದೇ ಗೊಂದಲಕ್ಕೆ ಬೀಳಬೇಡಿ. ದೇಶದ ರೈತರು ಇಂತಹ ಜನರ ಬಗ್ಗೆ ಜಾಗೃತರಾಗಿರಬೇಕು. ದಶಕಗಳಿಂದ ದೇಶವನ್ನಾಳಿದವರ ಬಗ್ಗೆ ಜಾಗೃತೆಯಿಂದಿರಿ, ಅವರು ಇವತ್ತು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ರೈತರ ಭದ್ರತೆಯ ಬಗೆ ಅವರು ನಾಟಕೀಯ ಮಾತುಗಳನ್ನು ಆಡುತ್ತಿದ್ದಾರೆ. ನಿಜವಾಗಿಯೂ ಅವರು ರೈತರನ್ನು ಸಂಕೋಲೆಗಳಲ್ಲಿ ಬಂಧಿಸಿಡಲು ಬಯಸುತ್ತಿದ್ದಾರೆ. ಅವರು ರೈತರ ಆದಾಯವನ್ನು ಲೂಟಿ ಹೊಡೆಯುವ ಮಧ್ಯವರ್ತಿಗಳನ್ನು ಬೆಂಬಲಿಸುತ್ತಿದ್ದಾರೆ. ಇದು ರೈತರು ತಮ್ಮ ಉತ್ಪಾದನೆಯನ್ನು ದೇಶದ ಯಾವುದೇ ಭಾಗದಲ್ಲಾದರೂ ಸರಿ, ಯಾರಿಗಾದರೂ ಸರಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಒದಗಿಸುವ ಚಾರಿತ್ರಿಕ ಕ್ರಮವಾಗಿದೆ. 21 ನೇ ಶತಮಾನದಲ್ಲಿ, ಭಾರತದ ರೈತ ಜೀತದಾಳಾಗಿ ಇರಲಾರ, ಆತ ಮುಕ್ತವಾಗಿ ಬೆಳೆ ಬೆಳೆಯಬಲ್ಲ. ಮತ್ತು ತನ್ನ ಉತ್ಪನ್ನವನ್ನು ತನಗಿಷ್ಟ ಬಂದ ಕಡೆಗಳಲ್ಲಿ , ತನಗೆ ಉತ್ತಮ ಧಾರಣೆ ದೊರೆಯುವಲ್ಲಿ ಮಾರಾಟ ಮಾಡಬಲ್ಲ. ಆತ ಯಾವುದೇ ಮಧ್ಯವರ್ತಿಯನ್ನು ಆಶ್ರಯಿಸಿರಲಾರ ಮತು ತನ್ನ ಉತ್ಪಾದನೆಯನ್ನು ಹೆಚ್ಚಿಸಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಲ್ಲ. ಇದು ದೇಶದ ಅವಶ್ಯಕತೆ ಮತ್ತು ಈ ಹೊತ್ತಿನ ಅಗತ್ಯವೂ ಆಗಿದೆ.

ಸ್ನೇಹಿತರೇ , ದೇಶದ ಅಭಿವೃದ್ದಿಯಲ್ಲಿ ಅವರು ರೈತರಿರಲಿ,ಮಹಿಳೆಯರಿರಲಿ ಅಥವಾ ಯುವಕರಿರಲಿ, ಪ್ರತಿಯೊಬ್ಬರನ್ನೂ ಸಶಕ್ತರನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು ಲೋಕಾರ್ಪಣೆ ಮಾಡಲಾದ ಎಲ್ಲಾ ಯೋಜನೆಗಳೂ ಈ ಬದ್ಧತೆಗಳ ಭಾಗವಾಗಿವೆ. ಇಂದು ಆರಂಭಗೊಂಡ ಯೋಜನೆಗಳು ಬಿಹಾರದ ಜನತೆಗೆ , ಯುವಕರಿಗೆ ಮತ್ತು ಮಹಿಳೆಯರಿಗೆ ಬಹಳ ಪ್ರಯೋಜನಕಾರಿಯಾಗಲಿವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಸ್ನೇಹಿತರೇ, ಕೊರೋನಾದ ಈ ಸಂದರ್ಭದಲ್ಲಿ ನಾವೆಲ್ಲರೂ ಬಹಳ ಜಾಗ್ರತೆಯಿಂದಿರಬೇಕು. ಸಣ್ಣ ಮಟ್ಟಿನ ನಿರ್ಲಕ್ಷ್ಯವೂ ನಿಮಗೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ಬಹಳ ದೊಡ್ಡ ಹಾನಿಯನ್ನು ಉಂಟು ಮಾಡಬಲ್ಲದು. ಆದುದರಿಂದ, ನಾನು ಬಿಹಾರದ ಮತ್ತು ದೇಶದ ಜನರಲ್ಲಿ ನನ್ನ ಕೋರಿಕೆಯನ್ನು ಪುನರುಚ್ಚರಿಸುತ್ತೇನೆ. ದಯವಿಟ್ಟು ಮುಖಗವಸುಗಳನ್ನು ಸರಿಯಾಗಿ ಹಾಕಿ , ಎರಡು ಯಾರ್ಡ್ ಗಳ ದೂರವನ್ನು ಕಾಯ್ದುಕೊಳ್ಳಲು ಸದಾ ಗಮನ ಕೊಡಿ ಮತ್ತು ಅದನ್ನು ಅನುಸರಿಸಿ, ಜನ ಜಂಗುಳಿಯ ಪ್ರದೇಶಗಳಿಗೆ ಹೋಗಬೇಡಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಬಿಸಿ ನೀರನ್ನು ಕುಡಿಯಿರಿ ಮತ್ತು ನಿರಂತರ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಜಾಗ್ರತೆಯಿಂದಿರಿ, ಸುರಕ್ಷಿತವಾಗಿರಿ, ಆರೋಗ್ಯದಿಂದಿರಿ. !!

ನಿಮ್ಮ ಕುಟುಂಬ ಆರೋಗ್ಯದಿಂದಿರಲಿ, ಈ ಹಾರೈಕೆಯೊಂದಿಗೆ , ನಿಮಗೆಲ್ಲರಿಗೂ ಬಹಳ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi Distributes Over 51,000 Appointment Letters At 15th Rozgar Mela

Media Coverage

PM Modi Distributes Over 51,000 Appointment Letters At 15th Rozgar Mela
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in an accident in Mandsaur, Madhya Pradesh
April 27, 2025
QuotePM announces ex-gratia from PMNRF

Prime Minister, Shri Narendra Modi, today condoled the loss of lives in an accident in Mandsaur, Madhya Pradesh. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The Prime Minister's Office posted on X :

"Saddened by the loss of lives in an accident in Mandsaur, Madhya Pradesh. Condolences to those who have lost their loved ones. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi"