ಬಾಬಾಸಾಹೇಬ್ ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಅವರಿಗೆ ನಮನ ಸಲ್ಲಿಕೆ
ಬಾಪು ಸೇರಿದಂತೆ ಸ್ವಾತಂತ್ರ್ಯ ಚಳವಳಿಯಲ್ಲಿ ಬಲಿದಾನಗೈಯ್ದ ಇತರೆ ಎಲ್ಲರಿಗೂ ಗೌರವ ನಮನ ಸಲ್ಲಿಸಿದ ಪ್ರಧಾನಿ
26/11ರಲ್ಲಿ ಹುತಾತ್ಮರಾದರಿಗೆ ಶ್ರದ್ಧಾಂಜಲಿ ಸಲ್ಲಿಕೆ
“ನಮ್ಮ ಹಾದಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ನಾವು ಸಂವಿಧಾನ ದಿನವನ್ನು ಆಚರಿಸಬೇಕು”
“ಕುಟುಂಬ ಆಧಾರಿತ ಪಕ್ಷಗಳ ರೂಪದಲ್ಲಿ ಭಾರತ ಒಂದು ಬಗೆಯ ಬಿಕ್ಕಟ್ಟಿನತ್ತ ಸಾಗುತ್ತಿದ್ದು, ಇದು ಸಂವಿಧಾನಕ್ಕೆ ಬದ್ಧವಾದ ಜನರಿಗೆ ಕಾಳಜಿಯ ವಿಚಾರವಾಗಿದೆ”
“ತಮ್ಮ ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಂಡಿರುವ ಪಕ್ಷಗಳಿಂದ ಹೇಗೆ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ?”
“ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಕರ್ತವ್ಯಗಳಿಗೆ ಒತ್ತು ನೀಡಿದರೆ ಚೆನ್ನಾಗಿತ್ತು, ಆಜಾದಿ ಕಾ ಅಮೃತ ಮಹೋತ್ಸವದ ಈ ಸಮಯದಲ್ಲಿ ನಮ್ಮ ಹಕ್ಕುಗಳನ್ನು ರಕ್ಷಿಸಲು ನಾವು ಕರ್ತವ್ಯದ ಹಾದಿಯಲ್ಲಿ ಮುನ್ನಡೆಯುವುದು ಅತ್ಯವಶ್ಯಕ”

ಗೌರವಾನ್ವಿತ ರಾಷ್ಟ್ರಪತಿಗಳೇ, ಉಪ ರಾಷ್ಟ್ರಪತಿಗಳೇ, ಸ್ಪೀಕರ್ ಅವರೇ ಮತ್ತು ವೇದಿಕೆಯಲ್ಲಿರುವ ಎಲ್ಲಾ ಹಿರಿಯ ಗಣ್ಯರೇ ಮತ್ತು ಸದನದಲ್ಲಿ ಹಾಜರಿರುವ ಸಂವಿಧಾನಕ್ಕೆ ಬದ್ದರಾಗಿರುವ ಎಲ್ಲಾ ಸಹೋದರರೇ ಮತ್ತು ಸಹೋದರಿಯರೇ,

ದೂರದೃಷ್ಟಿ ಹೊಂದಿದ ಬಹಳ ಶ್ರೇಷ್ಟ ವ್ಯಕ್ತಿತ್ವಗಳಾದಂತಹ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಗೌರವ ಸಲ್ಲಿಸಬೇಕಾದ ದಿನ ಇಂದಿನದ್ದು . ಈ ಸದನಕ್ಕೆ ನಮನಗಳನ್ನು ಸಲ್ಲಿಸಬೇಕಾದ ದಿನವಿದು, ಯಾಕೆಂದರೆ ಭಾರತದ ವಿದ್ವಾಂಸರು ಮತ್ತು ಕಾರ್ಯಕರ್ತರು ದೇಶದ ಭವ್ಯ ಭವಿತವ್ಯಕ್ಕಾಗಿ ತಳಹದಿ ನಿರ್ಮಾಣ ಮಾಡಲು ಈ ಪವಿತ್ರ ಸ್ಥಳದಲ್ಲಿ ತಿಂಗಳುಗಳ ಕಾಲ ಬಹಳ ಗಹನವಾದ ಸಮಾಲೋಚನೆಗಳನ್ನು ನಡೆಸಿದ್ದರು. ಸ್ವಾತಂತ್ರ್ಯದ ನಂತರ ಬಹಳ ಕಾಲಾವಧಿಯ ಬಳಿಕ ಸಂವಿಧಾನದ ರೂಪದಲ್ಲಿ ನಮಗೆ ಜೇನು  ಲಭಿಸಿತು. ಇಂದು ನಾವು ಪೂಜ್ಯ ಬಾಪು ಅವರಿಗೂ ನಮ್ಮ ಗೌರವಗಳನ್ನು ಸಲ್ಲಿಸಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದವರಿಗೂ ಇಂದು ನಮ್ಮ ಗೌರವಗಳನ್ನು  ಸಲ್ಲಿಸುವ ಸಂದರ್ಭವಿದು. ಇಂದು 26/11, ನಮ್ಮ ದೇಶದ ಶತ್ರುಗಳು ಮುಂಬಯಿಯ ಮೆಲೆ ಅತ್ಯಂತ ಹೀನವಾದ ಭಯೋತ್ಪಾದಕ ದಾಳಿಯನ್ನು ಮಾಡಿದ ದುಃಖದ ದಿನ. ಭಾರತದ ಸಂವಿಧಾನದಲ್ಲಿ ವ್ಯಾಖ್ಯಾನಿಸಿದಂತೆ ದೇಶದ ಜನಸಾಮಾನ್ಯರನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ನಮ್ಮ ಅನೇಕ ವೀರ ಸೈನಿಕರು ಆ ಭಯೋತ್ಪಾದಕರ ಜೊತೆ ಹೋರಾಡುತ್ತ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅತ್ಯುನ್ನತ ತ್ಯಾಗ ಮಾಡಿದ ಅವರೆಲ್ಲರಿಗೂ ನಾನು ಗೌರವದಿಂದ  ಶಿರಬಾಗಿ ನಮಿಸುತ್ತೇನೆ.

ಗೌರವಾನ್ವಿತರೇ, ಇಂದು ಸಂವಿಧಾನ ಬರೆಯುವ ಕೆಲಸವನ್ನು ನಮಗೆ ಒಪ್ಪಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ.  ಸ್ವಾತಂತ್ರ್ಯ ಚಳವಳಿಯ ನೆರಳಿನಲ್ಲಿಯೇ, ವಿಭಜನೆಯ ಜ್ವಾಲೆ ಮತ್ತು ಭಾರತ ವಿಭಜನೆಯ ಭಯಾನಕತೆಯ ಹೊರತಾಗಿಯೂ ಆಗ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗಿತ್ತು ಮತ್ತು ಅದು ಪ್ರತಿಯೊಬ್ಬರ ಹೃದಯದಲ್ಲೂ ಅನುರಣಿಸುತ್ತಿದ್ದ ಮಂತ್ರವಾಗಿತ್ತು. ಇಂದಿನ ಸಂದರ್ಭದಲ್ಲಿ ವೈವಿಧ್ಯತೆಯ, ಹಲವು ಭಾಷೆಗಳ, ಭಾಷಾವೈವಿಧ್ಯಗಳ, ಪಂಥಗಳ, ಮತ್ತು ರಾಜವಂಶಗಳ ಆಡಳಿತವಿದ್ದ ರಾಜ್ಯಗಳನ್ನು ಏಕ ಸೂತ್ರದಲ್ಲಿ ಹಿಡಿದಿಡಲು ಕಾರಣವಾದದ್ದು ಸಂವಿಧಾನ ಮತ್ತು ಅದರಿಂದಾಗಿ ಮುನ್ನಡೆ ಸಾಧಿಸುವ ವ್ಯೂಹ ರಚನೆಯಾಯಿತು. ನನಗನಿಸುತ್ತದೆ ನಾವು ಸಂವಿಧಾನದ ಒಂದು ಪುಟವನ್ನಾದರೂ ಬರೆಯಲು ಶಕ್ತರಾಗುತ್ತಿದ್ದೆವೋ ಇಲ್ಲವೋ ಎಂಬುದಾಗಿ. ಕಾಲಾನುಕ್ರಮದಲ್ಲಿ ರಾಜಕೀಯ ಎಂತಹ ಪರಿಣಾಮ ಬೀರುತ್ತಿದೆ ಎಂದರೆ ರಾಷ್ಟ್ರೀಯ ಹಿತಾಸಕ್ತಿ ಕೂಡಾ ಹಿಂದಕ್ಕೆ ತಳ್ಳಲ್ಪಡುತ್ತಿದೆ. ಆ ಶ್ರೇಷ್ಟ ವ್ಯಕ್ತಿಗಳು ವಿವಿಧ ಚಿಂತನಾ ಕ್ರಮಗಳಿಗೆ ಸೇರಿದವರಾಗಿದ್ದರೂ ಒಟ್ಟಾಗಿ ಕುಳಿತು ರಾಷ್ಟ್ರೀಯ ಹಿತಾಸಕ್ತಿಯನ್ನು ಅತ್ಯುಚ್ಛ ಸ್ಥಾನದಲ್ಲಿಟ್ಟು ಸಂವಿಧಾನವನ್ನು ರೂಪಿಸಿದುದಕ್ಕಾಗಿ ನಾನು ಅವರಿಗೆ ನಮಿಸಲು ಬಯಸುತ್ತೇನೆ.

ಸ್ನೇಹಿತರೇ,

ನಮ್ಮ ಸಂವಿಧಾನ ಬರೇ  ಹಲವು ವಿಧಿಗಳ/ಪರಿಚ್ಛೇದಗಳ ಸಂಕಲನ ಅಲ್ಲ. ಶತಮಾನಗಳ ಶ್ರೇಷ್ಟ ಪರಂಪರೆಯ ಅನಿರ್ಬಂಧಿತ ಜ್ಞಾನಧಾರೆಯ ಆಧುನಿಕ ಅಭಿವ್ಯಕ್ತಿಯೇ ನಮ್ಮ ಸಂವಿಧಾನ. ಆದುದರಿಂದ ನಾವು ಅಕ್ಷರಶಃ ಸಂವಿಧಾನಕ್ಕೆ ಬದ್ದರಾಗಿರಬೇಕು. ಈ ಸಾಂಸ್ಥಿಕ ವ್ಯವಸ್ಥೆಯನ್ನು  ಗ್ರಾಮ ಪಂಚಾಯತ್ ನಿಂದ ಸಂಸತ್ತಿನವರೆಗೆ ಜನರ ಪ್ರತಿನಿಧಿಗಳನ್ನು ಒಳಗೊಂಡಂತೆ ರೂಪಿಸಿದರೆ ಆಗ ನಮ್ಮನ್ನು ನಾವು  ಅಕ್ಷರಶಃ ಸದಾ ಸಂವಿಧಾನಕ್ಕೆ ಬದ್ದರಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವಾಗ ನಾವು ಸಂವಿಧಾನಕ್ಕೆ ಹಾನಿಯನ್ನು ಉಂಟು ಮಾಡುವ ಯಾವುದೇ ಚಿಂತನೆಯನ್ನು ನಿರ್ಲಕ್ಷಿಸಬಾರದು. ಆದುದರಿಂದ ನಾವು ಪ್ರತೀ ವರ್ಷ ಸಂವಿಧಾನ ದಿನವನ್ನು ಆಚರಿಸಬೇಕು, ಯಾಕೆಂದರೆ ನಾವು ನಮ್ಮ ಕ್ರಮಗಳು, ಕ್ರಿಯೆಗಳು ಸಂವಿಧಾನದ ಬೆಳಕಿನಲ್ಲಿ ಸರಿಯಾಗಿವೆಯೇ, ತಪ್ಪಾಗಿವೆಯೇ ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕು. ಸ್ವಾತಂತ್ರ್ಯದ ಬಳಿಕ ಮತ್ತು ಭಾರತದ ಸಂವಿಧಾನ ಜಾರಿಗೆ ಬಂದ ಜನವರಿ 26 (1950) ಬಳಿಕ  ನವೆಂಬರ್ 26 ನ್ನು ದೇಶದಲ್ಲಿ ಸಂವಿಧಾನ ದಿನವಾಗಿ ಆಚರಿಸುವ ಪರಂಪರೆಯನ್ನು ಆರಂಭ ಮಾಡಿದ್ದರೆ ಉತ್ತಮವಿತ್ತು, ಇದರಿಂದ ನಮ್ಮ ತಲೆಮಾರುಗಳು ನಮ್ಮ ಸಂವಿಧಾನವನ್ನು ಹೇಗೆ ರೂಪಿಸಲಾಯಿತು, ಅದರ ಹಿಂದೆ ಇದ್ದ ವ್ಯಕ್ತಿಗಳು ಯಾರು, ಯಾವ ಸಂದರ್ಭಗಳಲ್ಲಿ ಇದನ್ನು ರೂಪಿಸಲಾಯಿತು, ಇದನ್ನು ಯಾಕಾಗಿ,  ಎಲ್ಲಿ ಮತ್ತು ಹೇಗೆ ಮತ್ತು ಯಾರಿಗಾಗಿ  ರೂಪಿಸಲಾಯಿತು ಎಂಬೆಲ್ಲಾ ಮಾಹಿತಿಗಳನ್ನು ಅರಿಯಲು ಸಾಧ್ಯವಿತ್ತು. ಈ ಎಲ್ಲಾ ಸಂಗತಿಗಳೂ ಪ್ರತೀ ವರ್ಷ ಚರ್ಚೆಯಾಗುತ್ತಿದ್ದರೆ, ಆಗ ವಿಶ್ವದಲ್ಲಿ ಜೀವಂತ ಘಟಕ ಮತ್ತು ಸಾಮಾಜಿಕ ದಾಖಲೆ ಎಂದು ಪರಿಗಣಿಸಲಾಗುವ ಸಂವಿಧಾನ  ಈ ವೈವಿಧ್ಯಮಯ ದೇಶದ ತಲೆಮಾರುಗಳಿಗೆ ಬಹಳ ದೊಡ್ಡ ಶಕ್ತಿಯಾಗುತ್ತಿತ್ತು. ಆದರೆ ಕೆಲವು ಜನರು ಅವಕಾಶ ಕಳೆದುಕೊಂಡರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 150 ನೇ ಜನ್ಮ ವರ್ಷಾಚರಣೆಗಿಂತ ದೊಡ್ಡ ಪವಿತ್ರ ದಿನ (ಸಂವಿಧಾನ ದಿನ ಆಚರಣೆಗೆ)  ಯಾವುದಿದ್ದೀತು. ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ದೊಡ್ಡ ಕೊಡುಗೆ ಕೊಟ್ಟರು ಮತ್ತು ನಾವು ಅವರನ್ನು ಈ ಗ್ರಂಥದ ರೂಪದಲ್ಲಿ ಸದಾ ನೆನಪಿಡಬೇಕು. ಇದರ (ಈ ದಿನದ) ವಿರುದ್ಧ ಪ್ರತಿಭಟನೆ ಇಂದು ಮಾತ್ರ ನಡೆಯುತ್ತಿರುವುದಲ್ಲ, 2015ರಲ್ಲಿ ನಾನು ಬಾಬಾಸಾಹೇಬ್ ಅಂಬೇಡ್ಕರ್ ಅವರ 125 ನೇ ವರ್ಷಾಚರಣೆಯಂದು ಸದನವನ್ನು ಉದ್ದೇಶಿಸಿ  ಮಾತನಾಡುತ್ತಿದ್ದಾಗ ಮತ್ತು ಈ ಘೋಷಣೆಯನ್ನು ಮಾಡುತ್ತಿದ್ದಾಗ ಆಗಲೂ ಅಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ನವೆಂಬರ್ 26 ನ್ನು ನೀವು ಎಲ್ಲಿಂದ ತಂದಿರಿ? ನೀವಿದನ್ನು ಯಾಕೆ ಮಾಡುತ್ತಿರುವಿರಿ? ಅದರ ಅಗತ್ಯವೇನು? ಎಂಬ ಪ್ರಶ್ನೆಗಳೆದ್ದವು.  ಇಂತಹ ಭಾವನೆ ನಿಮ್ಮಲ್ಲಿರುವಾಗ ಅಂಬೇಡ್ಕರ್ ಅವರ ಹೆಸರು ಹೊಂದಿರುವ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಅಚರಣೆ ಮಾಡುವ ಅಗತ್ಯವನ್ನು ಪ್ರಶ್ನಿಸುವವರನ್ನು ಆಲಿಸುವುದಕ್ಕೆ ಈ ದೇಶ ತಯಾರಿಲ್ಲ. ದೇಶಕ್ಕೆ ಬಹಳಷ್ಟನ್ನು ಕೊಟ್ಟ ಬಾಬಾ ಸಾಹೇಬ್  ಅಂಬೇಡ್ಕರ್ ಅವರಂತಹವರನ್ನು  ನೆನಪಿಸಿಕೊಳ್ಳಬಾರದು ಎಂಬುದೇ ಆತಂಕದ ಸಂಗತಿ.

ಸ್ನೇಹಿತರೇ,

ಭಾರತವು ಸಾಂವಿಧಾನಿಕ ಪ್ರಜಾಸತ್ತಾತ್ಮಕ ಸಂಪ್ರದಾಯವನ್ನು ಅನುಸರಿಸುತ್ತದೆ. ರಾಜಕೀಯ ಪಕ್ಷಗಳಿಗೆ ಅವುಗಳದೇ ಮಹತ್ವವಿದೆ. ಮತ್ತು ಜನತೆಗೆ ನಮ್ಮ ಸಂವಿಧಾನದ ಭಾವನೆಗಳನ್ನು ತಿಳಿಸಲು ರಾಜಕೀಯ ಪಕ್ಷಗಳೂ  ಪ್ರಮುಖ ಮಾಧ್ಯಮವಾಗಿವೆ. ಆದರೆ, ಸಂವಿಧಾನದ ಭಾವನೆಗಳಿಗೆ ಘಾಸಿ ಮಾಡಲಾಗುತ್ತಿದೆ. ಸಂವಿಧಾನದ ಪ್ರತೀ ಪರಿಚ್ಛೇದ/ವಿಧಿಗಳಿಗೂ  ಹಾನಿ ಮಾಡಲಾಗಿದೆ. ತಮ್ಮ ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಂಡಿರುವ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ಹೇಗೆ ರಕ್ಷಿಸಬಲ್ಲವು? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವು ಬಿಕ್ಕಟ್ಟಿಗೆ ಸಿಲುಕುತ್ತಿದೆ, ಇದು ಸಂವಿಧಾನಕ್ಕೆ ಬದ್ಧರಾಗಿರುವವರಿಗೆ, ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರಿಗೆ ಇದು ಕಳವಳದ ಸಂಗತಿ. ಹಾಗು ಪರಿವಾರಿಕ್ (ವಂಶಾಡಳಿತದ) ಪಕ್ಷಗಳು, ರಾಜಕೀಯ ಪಕ್ಷ, ಕುಟುಂಬಕ್ಕಾಗಿರುವ ಪಕ್ಷ, ಕುಟುಂಬದಿಂದಾಗಿರುವ ಪಕ್ಷ, .....ನಾನಿನ್ನು ಹೆಚ್ಚು ಹೇಳುವ ಅಗತ್ಯವಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲಾ ರಾಜಕೀಯ ಪಕ್ಷಗಳತ್ತ ನೋಡಿ, ಇದು ಪ್ರಜಾಪ್ರಭುತ್ವದ ಸ್ಪೂರ್ತಿಗೆ ವಿರುದ್ಧವಾದುದು ಮತ್ತು ಸಂವಿಧಾನ ವಿರೋಧಿಯಾದುದು. ಮತ್ತು ನಾನು ವಂಶಾಡಳಿತದ ಬಗ್ಗೆ ಮಾತನಾಡುವಾಗ ಕುಟುಂಬದ ಹಲವು ಸದಸ್ಯರು ರಾಜಕೀಯ ಮಾಡಬಾರದು ಎಂದು ಹೇಳುವುದಲ್ಲ. ಅರ್ಹತೆಯಾಧಾರದಲ್ಲಿ ಮತ್ತು ಜನರ ಆಶೀರ್ವಾದದ ಬಲದಲ್ಲಿ ಕುಟುಂಬದ ಅನೇಕ ಸದಸ್ಯರು ರಾಜಕೀಯಕ್ಕೆ ಬರಬಹುದು. ಇದು ಪಕ್ಷವನ್ನು ವಂಶಾಡಳಿತಕ್ಕೆ ಒಪ್ಪಿಸುವುದಿಲ್ಲ. ಆದರೆ ಒಂದು ಪಕ್ಷ ಹಲವಾರು ತಲೆಮಾರುಗಳಿಂದ ಒಂದೇ ಕುಟುಂಬದ ನಿಯಂತ್ರಣಕ್ಕೆ ಒಳಪಟ್ಟಿದ್ದರೆ  ಮತ್ತು ಅದು ಪಕ್ಷದ ಪ್ರತೀ ಸಂಗತಿಗಳನ್ನೂ ನಿಯಂತ್ರಿಸುತ್ತಿದ್ದರೆ, ಆಗ ಅದು ಆರೋಗ್ಯಪೂರ್ಣ ಪ್ರಜಾಪ್ರಭುತ್ವಕ್ಕೆ ಬಹಳ ದೊಡ್ಡ ಬೆದರಿಕೆ. ಇಂದು ಸಂವಿಧಾನದ ದಿನದಂದು, ನಾನು ಪ್ರತಿಯೊಬ್ಬ ನಾಗರಿಕನಿಗೂ ಮನವಿ ಮಾಡುವುದೇನೆಂದರೆ ಸಂವಿಧಾನದಲ್ಲಿ ನಂಬಿಕೆ ಇರುವವರು ಮತ್ತು ಸಂವಿಧಾನಕ್ಕೆ ಬದ್ಧರಾಗಿರುವವರು ಈ ಬಗ್ಗೆ ದೇಶದಲ್ಲಿ ಜಾಗೃತಿ, ಅರಿವು ಮೂಡಿಸುವಂತಾಗಬೇಕು.

ಜಪಾನಿನಲ್ಲಿ ಒಂದು ಪ್ರಯೋಗ ನಡೆಯಿತು. ಜಪಾನಿನ ವ್ಯವಸ್ಥೆಯಲ್ಲಿ  ಬಹಳಷ್ಟು ರಾಜಕೀಯ ಕುಟುಂಬಗಳು ಮೇಲುಗೈ ಸಾಧಿಸಿದ್ದವು.  ಯಾರೋ ಒಬ್ಬರು ನಾಗರಿಕರನ್ನು ಉತ್ತೇಜಿಸುವ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು ರಾಜಕೀಯ ಕುಟುಂಬಕ್ಕೆ ಸೇರಿಲ್ಲದ ಹೊರಗಿನ ವ್ಯಕ್ತಿಗಳನ್ನು ವ್ಯವಸ್ಥೆಯೊಳಗೆ ತರಲು ಯತ್ನಿಸಿದರು. ಇದು ಯಶಸ್ವಿಯಾಯಿತು. ಇದಕ್ಕೆ 30-40 ವರ್ಷಗಳ ಕಾಲಾವಧಿ ಹಿಡಿಯಿತಾದರೂ ಅದು ಸಾಧಿತವಾಯಿತು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಬೆಳೆಯಬೇಕಾದರೆ, ನಾವೂ ಬಹಳ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದೆ. ಚಿಂತಿಸಬೇಕಾಗಿದೆ ಮತ್ತು ದೇಶವಾಸಿಗಳನ್ನು ಎಚ್ಚರಿಸಬೇಕಾಗಿದೆ.  ಅದೇ ರೀತಿ ನಮ್ಮ ಸಂವಿಧಾನ ಭ್ರಷ್ಟಾಚಾರಕ್ಕೆ ಅವಕಾಶ ಕೊಡುತ್ತದೆಯೇ ?. ಅಲ್ಲಿ ನಿಯಮಗಳು ಮತ್ತು ಕಾನೂನುಗಳಿವೆ, ಆದರೆ ಯಾರಾದರೊಬ್ಬರು ಭ್ರಷ್ಟಾಚಾರಿ ಎಂದು ಘೋಷಿಸಲ್ಪಟ್ಟವರು ಮತ್ತು ನ್ಯಾಯಾಂಗದಿಂದ ಶಿಕ್ಷೆಗೆ ಒಳಗಾದವರು ರಾಜಕೀಯ ಕಾರಣಕ್ಕಾಗಿ ವೈಭವೀಕರಿಸಲ್ಪಡುತ್ತಿರುವುದು ಬಹಳ ಆತಂಕದ ಸಂಗತಿಯಾಗಿದೆ. ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಜನತೆ ನಿರ್ಲಕ್ಷ್ಯ ತಾಳಿದಾಗ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಅವರ ಜೊತೆ ಕೈಜೋಡಿಸಲು ತೊಡಗಿದಾಗ   ಇದೂ ದೇಶದ ಯುವ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟರನ್ನು ವೈಭವೀಕರಿಸುವುದನ್ನು ನೋಡಿದಾಗ ಅವರ ಮೇಲೆ ಪರಿಣಾಮವುಂಟಾಗುತ್ತದೆ. ಆಗ ಅವರೂ ಭ್ರಷ್ಟಾಚಾರ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಭಾವಿಸಲು ಆರಂಭ ಮಾಡುತ್ತಾರೆ ಮತ್ತು ಜನರು ಕೂಡಾ ಎರಡು -ನಾಲ್ಕು ವರ್ಷಗಳಲ್ಲಿ  ಅವರನ್ನು ಒಪ್ಪಿಕೊಳ್ಳಲು ಆರಂಭ ಮಾಡುತ್ತಾರೆ. ಇಂತಹ ಸಾಮಾಜಿಕ ವ್ಯವಸ್ಥೆಯೊಂದನ್ನು ನಾವು ನಿರ್ಮಾಣ ಮಾಡಬೇಕೇ?. ಹೌದು, ಭ್ರಷ್ಟಾಚಾರ ಪ್ರಕರಣ ದಾಖಲಾಗಿ ಅದು ಸಿದ್ದವಾದರೆ ಆಗ ಆ ವ್ಯಕ್ತಿಗೆ ಸುಧಾರಣೆಯಾಗಲು ಒಂದು ಅವಕಾಶ ನೀಡಬೇಕು. ಆದರೆ ಇಂತಹ ವ್ಯಕ್ತಿಗಳನ್ನು ಸಾರ್ವಜನಿಕ ಜೀವನದಲ್ಲಿ ಕೊಂಡಾಡುವ/ಸ್ತುತಿಸುವ ಕ್ರಮ ಕೆಲವರನ್ನು ಭ್ರಷ್ಟಾಚಾರದ ಹಾದಿ ಹಿಡಿಯುವಂತೆ ಮಾಡುತ್ತದೆ. ಮತ್ತು ಇದು ಕಳವಳಕಾರಿ ಸಂಗತಿ. ಇದು ಸ್ವಾತಂತ್ರ್ಯದ 75 ವರ್ಷಗಳ ಪುಣ್ಯಕರ ಕಾಲ. ಬ್ರಿಟಿಷರು ಭಾರತದ ನಾಗರಿಕರ ಹಕ್ಕುಗಳನ್ನು ದಮನಿಸುವಲ್ಲಿ ನಿರತರಾಗಿದ್ದರು. ಮತ್ತು ಭಾರತದ ನಾಗರಿಕರ ಹಕ್ಕುಗಳಿಗಾಗಿ ಹೋರಾಡುವುದು ಸಹಜ ಮತ್ತು ಅವಶ್ಯವಾಗಿತ್ತು.

ಮಹಾತ್ಮಾ ಗಾಂಧಿ ಸಹಿತ ಪ್ರತಿಯೊಬ್ಬರೂ ಭಾರತದ ನಾಗರಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ಆದರೆ ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗಲೂ  ಸತತವಾಗಿ ದೇಶವನ್ನು ಕರ್ತವ್ಯಗಳಿಗಾಗಿಯೂ ತಯಾರು ಮಾಡಿದರು ಎಂಬುದೂ ಅಷ್ಟೇ ಸತ್ಯ. ಅವರು ಸ್ವಚ್ಛತೆಯ ಬೀಜವನ್ನು ಬಿತ್ತಲು ಪ್ರಯತ್ನಿಸಿದರು. ವಯಸ್ಕ ಶಿಕ್ಷಣ, ಮಹಿಳೆಯರಿಗೆ ಘನತೆ, ಮಹಿಳಾ ಸಶಕ್ತೀಕರಣ, ಖಾದಿ ಬಳಕೆ ಮತ್ತು ಸ್ವದೇಶೀ ಚಿಂತನೆ ಹಾಗು ದೇಶದ ಜನತೆಯಲ್ಲಿ ಸ್ವಾವಲಂಬನೆಯನ್ನು ತರಲು ಪ್ರಯತ್ನಿಸಿದರು. ಮಹಾತ್ಮಾ ಗಾಂಧಿ ಅವರು ಬಿತ್ತಿದ ಕರ್ತವ್ಯದ ಬೀಜಗಳು ಸ್ವಾತಂತ್ರ್ಯ ಬಳಿಕ ಹೆಮ್ಮರವಾಗಬೇಕಾಗಿತ್ತು.  ಆದರೆ ದುರ್ದೈವವಶಾತ್  ಅವರು (ರಾಜಕೀಯ ಪಕ್ಷಗಳು) ಅಧಿಕಾರದಲ್ಲಿರುವಷ್ಟು ಕಾಲವೂ ಜನರಿಗೆ ಹಕ್ಕುಗಳ ಆಶ್ವಾಸನೆಯನ್ನು ನೀಡುವಂತಹ ಆಡಳಿತ ವ್ಯವಸ್ಥೆಯನ್ನು ಪೋಷಿಸುತ್ತ ಬಂದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕರ್ತವ್ಯಗಳಿಗೆ ಒತ್ತು ನೀಡಿದ್ದರೆ ಒಳಿತಾಗುತ್ತಿತ್ತು, ಆಗ ಹಕ್ಕುಗಳು ತನ್ನಿಂದ ತಾನೇ ಸಂರಕ್ಷಿಸಲ್ಪಡುತ್ತಿದ್ದವು. ಕರ್ತವ್ಯವು ಜವಾಬ್ದಾರಿಯ ಭಾವನೆಯನ್ನು ನೀಡುತ್ತದೆ ಮತ್ತು ಅದು ಸಮಾಜದ ನಿಟ್ಟಿನಲ್ಲಿ ಜವಾಬ್ದಾರಿಯ ಭಾವನೆಯನ್ನು ಉಂಟು ಮಾಡುತ್ತದೆ. ಹಕ್ಕುಗಳು ಕೆಲವೊಮ್ಮೆ “ನನಗೆ ನನ್ನ ಹಕ್ಕುಗಳು ದೊರೆಯಬೇಕು” ಎಂಬ ಧೋರಣೆಯನ್ನು ತರುತ್ತವೆ ಮತ್ತು ಅಲ್ಲಿ ಸಮಾಜವನ್ನು ನಿರಾಶೆಗೆ ದೂಡುವ ಪ್ರಯತ್ನಗಳು ಸಂಭವಿಸುತ್ತವೆ. ಕರ್ತವ್ಯದ ಭಾವನೆ ಇದ್ದರೆ ಆಗ ಜನಸಾಮಾನ್ಯರಲ್ಲಿ ಇದು ನನ್ನ ಜವಾಬ್ದಾರಿ, ಅದನ್ನು ನಾನು ಈಡೇರಿಸಬೇಕು ಎಂಬ ಭಾವನೆ ಮೂಡುತ್ತದೆ. ಮತ್ತು ನಾನು ಕರ್ತವ್ಯ ನಿಭಾಯಿಸಿದಾಗ ಬೇರೊಬ್ಬರ ಹಕ್ಕುಗಳು ತನ್ನಿಂದ ತಾನೇ ರಕ್ಷಿಸಲ್ಪಡುತ್ತವೆ ಮತ್ತು ಗೌರವಿಸಲ್ಪಡುತ್ತವೆ. ಕರ್ತವ್ಯ ಮತ್ತು ಹಕ್ಕುಗಳ ಪರಿಣಾಮವಾಗಿ  ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ.

 

 

 

 

 

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ ಕರ್ತವ್ಯಗಳ ಮೂಲಕ ಹಕ್ಕುಗಳನ್ನು ರಕ್ಷಿಸುವ ಹಾದಿಯಲ್ಲಿ ನಾವು ನಡೆಯುವುದು ಬಹಳ ಅಗತ್ಯ. ಕರ್ತವ್ಯದ ಹಾದಿಯಲ್ಲಿ ಹಕ್ಕುಗಳು ಖಚಿತವಾಗಿರುತ್ತವೆ, ಈ ಕರ್ತವ್ಯದ ಪಥವು ಇತರರ ಹಕ್ಕುಗಳನ್ನು ಗೌರವದೊಂದಿಗೆ ಅಂಗೀಕರಿಸುತ್ತದೆ ಮತ್ತು ಮತ್ತು ಅವರಿಗೆ ಕೊಡಬೇಕಾದುದನ್ನು ಕೊಡುತ್ತದೆ. ನಾವು ಸಂವಿಧಾನ ದಿನವನ್ನು ಆಚರಿಸುತ್ತಿರುವಾಗ, ನಮ್ಮಲ್ಲಿ  ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸುವ ಉತ್ಸಾಹ ಇರಬೇಕು. ನಾವು ಸದಾ ಕರ್ತವ್ಯದ ಹಾದಿಯಲ್ಲಿ ಅದೇ ಅರ್ಪಣಾಭಾವದಿಂದ ನಡೆದರೆ ಆಗ ಅದು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಯಾವ ಉದ್ದೇಶದಿಂದ ಭಾರತವನ್ನು ರೂಪಿಸಿದರೋ  ಆ ಕನಸುಗಳನ್ನು ಈಡೇರಿಸುವ ಅದೃಷ್ಟಶಾಲಿಗಳು ನಾವಾಗಿದ್ದೇವೆ. ಆ ಕನಸುಗಳನ್ನು ಈಡೇರಿಸಲು ಲಭಿಸುವ ಯಾವ ಅವಕಾಶಗಳನ್ನೂ ನಾವು ಬಿಡಬಾರದು. ಈ ಪ್ರಮುಖ ಕಾರ್ಯಕ್ರಮವನ್ನು ಸಂಘಟಿಸಿದುದಕ್ಕಾಗಿ ಸ್ಪೀಕರ್ ಸರ್ ಅವರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಈ ಕಾರ್ಯಕ್ರಮ ಯಾವುದೇ ಸರಕಾರಿ ಕಾರ್ಯಕ್ರಮದಂತಲ್ಲ. ಅಥವಾ ರಾಜಕೀಯ ಪಕ್ಷದ ಕಾರ್ಯಕ್ರಮ ಅಲ್ಲ. ಅಥವಾ ಯಾವುದೇ ಪ್ರಧಾನ ಮಂತ್ರಿ ಅವರ ಕಾರ್ಯಕ್ರಮವೂ ಅಲ್ಲ. ಸ್ಪೀಕರ್ ಅವರು ಸದನದ ಹೆಮ್ಮೆ.  ಇದು ಘನತೆಯ ಹುದ್ದೆ. ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಘನತೆ, ಸಂವಿಧಾನದ ಘನತೆ. ನಾವು ಸದಾ ಸ್ಪೀಕರ್ ಸ್ಥಾನದ ಘನತೆಯನ್ನು ಕಾಯ್ದುಕೊಳ್ಳುವ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಮ್ಮೆ ಮತ್ತು  ಸಂವಿಧಾನದ ಹೆಮ್ಮೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಎಲ್ಲಾ ಶ್ರೇಷ್ಟ ವ್ಯಕ್ತಿತ್ವಗಳು ನಮಗೆ ಅರಿವು ಮೂಡಿಸುತ್ತಿರಲಿ ಎಂದು ಪ್ರಾರ್ಥಿಸೋಣ. ಈ ನಿರೀಕ್ಷೆಯೊಂದಿಗೆ ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು!.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”