Quoteಮತ್ತೊಮ್ಮೆ ದೇವಭೂಮಿ ಉತ್ತರಾಖಂಡದಲ್ಲಿರಲು ಆಶೀರ್ವಾದ: ಪ್ರಧಾನಮಂತ್ರಿ
Quoteಈ ದಶಕ ಉತ್ತರಾಖಂಡದ ದಶಕವಾಗುತ್ತಿದೆ: ಪ್ರಧಾನಮಂತ್ರಿ
Quoteನಮ್ಮ ಪ್ರವಾಸೋದ್ಯಮ ಕ್ಷೇತ್ರವನ್ನು ವೈವಿಧ್ಯಗೊಳಿಸುವುದು, ಅದನ್ನು ಬಹುವಾರ್ಷಿಕವನ್ನಾಗಿ ಮಾಡುವುದು ಉತ್ತರಾಖಂಡಕ್ಕೆ ಬಹಳ ಮುಖ್ಯ: ಪ್ರಧಾನಮಂತ್ರಿ
Quoteಉತ್ತರಾಖಂಡದಲ್ಲಿ ಯಾವುದೇ ಆಫ್ ಸೀಸನ್ ಇರಬಾರದು, ಪ್ರವಾಸೋದ್ಯಮವು ಪ್ರತಿ ಋತುವಿನಲ್ಲೂ ಇರಬೇಕು: ಪ್ರಧಾನಮಂತ್ರಿ
Quoteಉತ್ತರಾಖಂಡವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯದಲ್ಲಿರುವ ನಮ್ಮ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ: ಪ್ರಧಾನಮಂತ್ರಿ

ಗಂಗಾ ಮಾತೆಗೆ ನಮಸ್ಕಾರ, (ಗಂಗಾ ಮೈಯಾ ಕಿ ಜೈ)

ಗಂಗಾ ಮಾತೆಗೆ ನಮಸ್ಕಾರ,

ಗಂಗಾ ಮಾತೆಗೆ ನಮಸ್ಕಾರ,

ಭಾರತ ಮಾತೆಗೆ ನಮಸ್ಕಾರ, (ಭಾರತ್ ಮಾತಾ ಕಿ ಜೈ)

ಭಾರತ ಮಾತೆಗೆ ನಮಸ್ಕಾರ,

ಭಾರತ ಮಾತೆಗೆ ನಮಸ್ಕಾರ,

ಭಾರತ ಮಾತೆಗೆ ನಮಸ್ಕಾರ!

ಉತ್ತರಾಖಂಡದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು, ನಮಸ್ಕಾರಗಳು!

ಇಲ್ಲಿನ ಚೈತನ್ಯಶೀಲ ಮುಖ್ಯಮಂತ್ರಿ ಮತ್ತು ನನ್ನ ಕಿರಿಯ ಸಹೋದರ ಪುಷ್ಕರ್ ಸಿಂಗ್ ಧಾಮಿ ಜಿ, ಕೇಂದ್ರ ಸಚಿವ ಶ್ರೀ ಅಜಯ್ ತಮ್ತಾ ಜಿ, ರಾಜ್ಯ ಸಚಿವ ಸತ್ಪಾಲ್ ಮಹಾರಾಜ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿ ಮತ್ತು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿ ಮಾಲಾ ರಾಜ್ಯ ಲಕ್ಷ್ಮಿ ಜಿ, ಶಾಸಕ ಸುರೇಶ್ ಚೌಹಾಣ್ ಜಿ, ಇಲ್ಲಿ ನೆರೆದಿರುವ ಎಲ್ಲಾ ಗಣ್ಯರು ಮತ್ತು ಸಹೋದರ ಸಹೋದರಿಯರೆ.

ಮೊದಲನೆಯದಾಗಿ, ಕೆಲವು ದಿನಗಳ ಹಿಂದೆ ಮಾನಾ ಗ್ರಾಮದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ನಾನು ನನ್ನ ತೀವ್ರ ದುಃಖ ವ್ಯಕ್ತಪಡಿಸುತ್ತೇನೆ. ಅಪಘಾತದಲ್ಲಿ ಮಡಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ನಾನು ಸಂತಾಪ ಸೂಚಿಸುತ್ತೇನೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಜನರು ತೋರಿಸಿದ ಒಗ್ಗಟ್ಟು ಸಂತ್ರಸ್ತ ಕುಟುಂಬಗಳಿಗೆ ಅಪಾರ ಧೈರ್ಯ ನೀಡಿದೆ.

 

|

ಸ್ನೇಹಿತರೆ,

ಉತ್ತರಾಖಂಡದ ಈ ಭೂಮಿ, ನಮ್ಮ ದೇವಭೂಮಿ, ಆಧ್ಯಾತ್ಮಿಕ ಶಕ್ತಿಯಿಂದ ಸಮೃದ್ಧವಾಗಿದೆ. 4 ಧಾಮಗಳು ಮತ್ತು ಅನಂತ ತೀರ್ಥಯಾತ್ರೆಗಳಿಂದ ಆಶೀರ್ವದಿಸಲ್ಪಟ್ಟ, ಜೀವದಾತೆ ತಾಯಿ ಗಂಗೆಯ ಈ ಚಳಿಗಾಲದ ತಾಣಕ್ಕೆ ಇಂದು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಮತ್ತು ನಿಮ್ಮ ಕುಟುಂಬಗಳನ್ನೂ ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಗಂಗಾ ಮಾತೆಯ ಕೃಪೆಯಿಂದಾಗಿಯೇ ದಶಕಗಳಿಂದ ಉತ್ತರಾಖಂಡಕ್ಕೆ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ನಾನು ಕಾಶಿಯನ್ನು ತಲುಪಿದ್ದು ಆಕೆಯ ಆಶೀರ್ವಾದದಿಂದಲೇ ಎಂದು ನಾನು ನಂಬುತ್ತೇನೆ, ಈಗ ನಾನು ಸಂಸದನಾಗಿ ಕಾಶಿಗೆ ಸೇವೆ ಸಲ್ಲಿಸುತ್ತಿದ್ದೇನೆ. ಅದಕ್ಕಾಗಿಯೇ ನಾನು ಕಾಶಿಯಲ್ಲಿ ಹೇಳಿದ್ದೆ - ಮಾತೆ ಗಂಗಾ ನನ್ನನ್ನು ಕರೆದಿದ್ದಾಳೆ. ಕೆಲವು ತಿಂಗಳ ಹಿಂದೆ, ಮಾತೆ ಗಂಗೆ ನನ್ನನ್ನು ಈಗ ದತ್ತು ತೆಗೆದುಕೊಂಡಿದ್ದಾಳೆ ಎಂದು ನನಗೂ ಅನಿಸಿತು. ಇದು ಗಂಗಾ ಮಾತೆಯ ಪ್ರೀತಿ. ಅವಳಿಗೆ ತನ್ನ ಮಗನ ಮೇಲಿನ ಅವರ ಪ್ರೀತಿಯಿಂದಾಗಿ ಇಂದು ನಾನು ಆಕೆಯ ಮನೆ ಇರುವ ಮುಖ್ವಾ ಗ್ರಾಮಕ್ಕೆ ಬಂದಿದ್ದೇನೆ. ಇಲ್ಲಿ ನನಗೆ ಮುಖಿಮಠ-ಮುಖ್ವಾದಲ್ಲಿ ದರ್ಶನ ಮತ್ತು ಪೂಜೆಯ ಭಾಗ್ಯವೂ ಸಿಕ್ಕಿದೆ.

ಸ್ನೇಹಿತರೆ,

ಇಂದು ನಾನು ಈ ಹರ್ಸಿಲ್ ಭೂಮಿಗೆ ಬಂದಾಗ, ನನ್ನ ದೀದಿ-ಭುಲಿಯನ್ ಅವರ ವಾತ್ಸಲ್ಯವನ್ನು ಸಹ ನಾನು ನೆನಪಿಸಿಕೊಳ್ಳುತ್ತೇನೆ. ಅವರು ನನಗೆ ಹರ್ಸಿಲ್ ರಾಜ್ಮಾ ಮತ್ತು ಇತರ ಸ್ಥಳೀಯ ಉತ್ಪನ್ನಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಈ ವಾತ್ಸಲ್ಯ ಮತ್ತು ಉಡುಗೊರೆಗಾಗಿ ನಾನು ನಿಮಗೆ ಸದಾ ಕೃತಜ್ಞನಾಗಿದ್ದೇನೆ.

ಸ್ನೇಹಿತರೆ,

ಕೆಲವು ವರ್ಷಗಳ ಹಿಂದೆ ನಾನು ಬಾಬಾ ಕೇದಾರನಾಥನ ದರ್ಶನಕ್ಕಾಗಿ, ಬಾಬಾ ಅವರ ಪಾದಗಳಿಗೆ ಎರಗಿ ಬಾಬಾ ಅವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ  ಹೋದಾಗ, ಇದ್ದಕ್ಕಿದ್ದಂತೆ ನನ್ನ ಬಾಯಿಂದ ಕೆಲವು ಭಾವನೆಗಳು ಹೊರಬಂದವು. ಅದನ್ನು ನಾನು ಹೇಳಿದೆ - ಈ ದಶಕವು ಉತ್ತರಾಖಂಡದ ದಶಕವಾಗಿರುತ್ತದೆ. ಆ ಮಾತುಗಳು ನನ್ನದಾಗಿದ್ದವು, ಆ ಭಾವನೆಗಳು ನನ್ನದಾಗಿದ್ದವು, ಆದರೆ ಅವುಗಳ ಹಿಂದೆ ಬಲ ನೀಡುವ ಶಕ್ತಿಯನ್ನು ಬಾಬಾ ಕೇದಾರನಾಥರು ಸ್ವತಃ ನೀಡಿದ್ದಾರೆ. ಬಾಬಾ ಕೇದಾರರ ಆಶೀರ್ವಾದದಿಂದ, ಆ ಮಾತುಗಳು, ಆ ಭಾವನೆಗಳು ನಿಧಾನವಾಗಿ ಸತ್ಯವಾಗಿ, ವಾಸ್ತವಕ್ಕೆ ಬದಲಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಈ ದಶಕವು ಉತ್ತರಾಖಂಡದ ದಶಕವಾಗುತ್ತಿದೆ. ಉತ್ತರಾಖಂಡದ ಪ್ರಗತಿಗೆ ಹೊಸ ಹಾದಿಗಳು ತೆರೆದುಕೊಳ್ಳುತ್ತಿವೆ. ಉತ್ತರಾಖಂಡ ಹುಟ್ಟಿದ ಆಕಾಂಕ್ಷೆಗಳು, ಉತ್ತರಾಖಂಡದ ಅಭಿವೃದ್ಧಿಗಾಗಿ ನಾವು ತೆಗೆದುಕೊಂಡ ನಿರ್ಣಯಗಳು, ಪ್ರತಿದಿನ ಹೊಸ ಯಶಸ್ಸುಗಳು ಮತ್ತು ಹೊಸ ಗುರಿಗಳತ್ತ ಸಾಗುತ್ತಿವೆ, ಆ ನಿರ್ಣಯಗಳು ಇಂದು ಈಡೇರುತ್ತಿವೆ. ಈ ದಿಕ್ಕಿನಲ್ಲಿ ಚಳಿಗಾಲದ ಪ್ರವಾಸೋದ್ಯಮವು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಇದರ ಮೂಲಕ ಉತ್ತರಾಖಂಡದ ಆರ್ಥಿಕ ಸಾಮರ್ಥ್ಯವನ್ನು ಅರಿತುಕೊಳ್ಳುವಲ್ಲಿ ದೊಡ್ಡ ಸಹಾಯ ದೊರೆಯಲಿದೆ. ಈ ನವೀನ ಪ್ರಯತ್ನಕ್ಕಾಗಿ ಧಾಮಿ ಜಿ ಮತ್ತು ಉತ್ತರಾಖಂಡ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ ಮತ್ತು ಉತ್ತರಾಖಂಡದ ಪ್ರಗತಿಗೆ ಹಾರೈಸುತ್ತೇನೆ.

 

|

ಸ್ನೇಹಿತರೆ,

ಉತ್ತರಾಖಂಡವು ತನ್ನ ಪ್ರವಾಸೋದ್ಯಮ ವಲಯವನ್ನು ವರ್ಷಪೂರ್ತಿ 365 ದಿನಗಳು ವೈವಿಧ್ಯಮಯವಾಗಿಸುವುದು ಬಹಳ ಮುಖ್ಯ. ಋತುಮಾನ ಏನೇ ಇರಲಿ, ಪ್ರವಾಸೋದ್ಯಮವು ಉತ್ತರಾಖಂಡದಲ್ಲಿ ಇರಬೇಕೆಂದು ನಾನು ಬಯಸುತ್ತೇನೆ. ಪ್ರಸ್ತುತ, ಪರ್ವತಗಳಲ್ಲಿ ಪ್ರವಾಸೋದ್ಯಮವು ಋತುಮಾನದ್ದಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ, ಆದರೆ ನಂತರ ಅವರ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಖಾಲಿಯಾಗಿರುತ್ತವೆ. ಈ ಅಸಮತೋಲನವು ವರ್ಷದ ಬಹುಪಾಲು ಉತ್ತರಾಖಂಡದಲ್ಲಿ ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತದೆ, ಇದು ಪರಿಸರಕ್ಕೂ ಸವಾಲು ಒಡ್ಡುತ್ತದೆ.

 

ಸ್ನೇಹಿತರೆ,

ಸತ್ಯವೆಂದರೆ ಭಾರತ ಮತ್ತು ವಿದೇಶಗಳಿಂದ ಜನರು ಚಳಿಗಾಲದಲ್ಲಿ ಇಲ್ಲಿಗೆ ಬಂದರೆ, ಅವರಿಗೆ ದೇವಭೂಮಿಯ ಪ್ರಭಾವಲಯದ ನಿಜವಾದ ಪರಿಚಯವಾಗುತ್ತದೆ. ಚಳಿಗಾಲದ ಪ್ರವಾಸೋದ್ಯಮದಲ್ಲಿ ಚಾರಣ, ಸ್ಕೀಯಿಂಗ್ ಮುಂತಾದ ಚಟುವಟಿಕೆಗಳ ರೋಮಾಂಚನವು ಇಲ್ಲಿನ ಜನರನ್ನು ನಿಜವಾಗಿಯೂ ರೋಮಾಂಚನಗೊಳಿಸುತ್ತದೆ. ಉತ್ತರಾಖಂಡದಲ್ಲಿ ಧಾರ್ಮಿಕ ತೀರ್ಥಯಾತ್ರೆಗೆ ಚಳಿಗಾಲವು ತುಂಬಾ ವಿಶೇಷವಾಗಿದೆ. ಈ ಸಮಯದಲ್ಲಿ ಅನೇಕ ತೀರ್ಥಯಾತ್ರೆಯ ಸ್ಥಳಗಳಲ್ಲಿ ವಿಶೇಷ ಆಚರಣೆಗಳನ್ನು ಸಹ ನಡೆಸಲಾಗುತ್ತದೆ. ಮುಖ್ವಾ ಗ್ರಾಮವನ್ನು ನೋಡಿ, ಇಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ನಮ್ಮ ಪ್ರಾಚೀನ ಮತ್ತು ಅದ್ಭುತ ಸಂಪ್ರದಾಯದ ಒಂದು ಭಾಗವಾಗಿದೆ. ಆದ್ದರಿಂದ, ಉತ್ತರಾಖಂಡ ಸರ್ಕಾರದ ವರ್ಷಪೂರ್ತಿ ಪ್ರವಾಸೋದ್ಯಮದ ದೃಷ್ಟಿಕೋನ, 365 ದಿನಗಳ ಪ್ರವಾಸೋದ್ಯಮದ ದೃಷ್ಟಿಕೋನವು ಜನರಿಗೆ ದೈವಿಕ ಅನುಭವಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಇದು ವರ್ಷವಿಡೀ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಅಭಿವೃದ್ಧಿಪಡಿಸುತ್ತದೆ, ಇದು ಉತ್ತರಾಖಂಡದ ಸ್ಥಳೀಯ ಜನರಿಗೆ, ಇಲ್ಲಿನ ಯುವಕರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ನಮ್ಮ ಡಬಲ್ ಎಂಜಿನ್ ಸರ್ಕಾರವು ಉತ್ತರಾಖಂಡವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿದೆ. ಚಾರ್‌ಧಾಮ್-ಎಲ್ಲಾ ಋತುಮಾನಕ್ಕೂ ಅನ್ವಯವಾಗುವ ರಸ್ತೆ, ಆಧುನಿಕ ಎಕ್ಸ್‌ಪ್ರೆಸ್‌ವೇ, ರಾಜ್ಯದಲ್ಲಿ ರೈಲ್ವೆ ವಿಸ್ತರಣೆ, ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಳು ಸೇರಿದಂತೆ ಉತ್ತರಾಖಂಡವು ಕಳೆದ 10 ವರ್ಷಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರವು ಉತ್ತರಾಖಂಡಕ್ಕಾಗಿ ಬಹುದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಿನ್ನೆ ಕೇಂದ್ರ ಸಚಿವ ಸಂಪುಟವು ಕೇದಾರನಾಥ ರೋಪ್‌ವೇ ಯೋಜನೆ ಮತ್ತು ಹೇಮಕುಂಡ್ ರೋಪ್‌ವೇ ಯೋಜನೆಗೆ ಅನುಮೋದನೆ ನೀಡಿತು. ಕೇದಾರನಾಥ ರೋಪ್‌ವೇ ನಿರ್ಮಾಣದ ನಂತರ, 8- 9 ತಾಸು ಹಿಡಿಯುತ್ತಿದ್ದ ಪ್ರಯಾಣವು ಈಗ ಸುಮಾರು 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಇದು ವೃದ್ಧರು, ಮಕ್ಕಳು ಮತ್ತು ಮಹಿಳೆಯರಿಗೆ ಕೇದಾರನಾಥ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಈ ರೋಪ್‌ವೇ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಈ ಯೋಜನೆಗಳಿಗಾಗಿ ಉತ್ತರಾಖಂಡ ಸೇರಿದಂತೆ ಇಡೀ ದೇಶವನ್ನು ನಾನು ಅಭಿನಂದಿಸುತ್ತೇನೆ.

 

|

ಸ್ನೇಹಿತರೆ,

ಇಂದು  ಪರ್ವತ ಭಾಗಗಳಲ್ಲಿ ಪರಿಸರಸ್ನೇಹಿ ಜೋಪಡಿ, ಸಮಾವೇಶ ಕೇಂದ್ರಗಳು, ಹೆಲಿಪ್ಯಾಡ್ ಮೂಲಸೌಕರ್ಯಗಳ ಮೇಲೆಯೂ ಗಮನ ಹರಿಸಲಾಗುತ್ತಿದೆ. ಉತ್ತರಾಖಂಡದ ಮಾನಾ ಗ್ರಾಮ, ಟಿಮ್ಮರ್-ಸೈನ್ ಮಹಾದೇವ್‌ನಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. 1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ನಮ್ಮ ಜಾದುಂಗ್ ಗ್ರಾಮವನ್ನು ಸ್ಥಳಾಂತರಿಸಲಾಯಿತು, ನಮ್ಮ ಈ ಎರಡು ಗ್ರಾಮಗಳನ್ನು ಸ್ಥಳಾಂತರಿಸಲಾಯಿತು ಎಂದು ದೇಶವಾಸಿಗಳು ತಿಳಿದಿರಬಹುದು ಅಥವಾ ತಿಳಿದಿಲ್ಲದಿರಬಹುದು. ಇದಾಗಿ 60-70 ವರ್ಷಗಳು ಕಳೆದಿವೆ, ಜನರು ಮರೆತಿದ್ದಾರೆ, ನಾವು ಮರೆಯಲು ಸಾಧ್ಯವಿಲ್ಲ, ಆ 2 ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವ ಅಭಿಯಾನವನ್ನು ನಾವು ಪ್ರಾರಂಭಿಸಿದ್ದೇವೆ, ಅವುಗಳನ್ನು ಬಹುದೊಡ್ಡ ಪ್ರವಾಸಿ ತಾಣವನ್ನಾಗಿ ಮಾಡುವ ದಿಕ್ಕಿನಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಇದರ ಪರಿಣಾಮವಾಗಿ ಈ ದಶಕದಲ್ಲಿ ಉತ್ತರಾಖಂಡದಲ್ಲಿ ಪ್ರವಾಸಿಗರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. 2014ಕ್ಕಿಂತ ಮೊದಲು, ಚಾರ್‌ಧಾಮ್ ಯಾತ್ರೆಗೆ ಪ್ರತಿ ವರ್ಷ ಸರಾಸರಿ 18 ಲಕ್ಷ ಯಾತ್ರಿಕರು ಬರುತ್ತಿದ್ದರು. ಈಗ ಪ್ರತಿ ವರ್ಷ ಸುಮಾರು 50 ಲಕ್ಷ ಯಾತ್ರಿಕರು ಬರಲು ಪ್ರಾರಂಭಿಸಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ತಾಣಗಳಲ್ಲಿನ ಹೋಟೆಲ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಲಾಗುವುದು. ಇದು ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.

ಸ್ನೇಹಿತರೆ,

ಉತ್ತರಾಖಂಡದ ಗಡಿ ಪ್ರದೇಶಗಳಿಗೆ ಪ್ರವಾಸೋದ್ಯಮದ ವಿಶೇಷ ಪ್ರಯೋಜನಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ಈ ಹಿಂದೆ, ಗಡಿ ಗ್ರಾಮಗಳನ್ನು ಕೊನೆಯ ಗ್ರಾಮಗಳು ಎಂದು ಕರೆಯಲಾಗುತ್ತಿತ್ತು. ನಾವು ಈ ದೃಷ್ಟಿಕೋನವನ್ನು ಬದಲಾಯಿಸಿದ್ದೇವೆ, ಇವು ನಮ್ಮ ಕೊನೆಯ ಗ್ರಾಮಗಳಲ್ಲ, ಇವು ನಮ್ಮ ಮೊದಲ ಗ್ರಾಮಗಳು ಎಂದು ನಾವು ಹೇಳಿದ್ದೇವೆ. ಅವುಗಳ ಅಭಿವೃದ್ಧಿಗಾಗಿ ನಾವು ರೋಮಾಂಚನಕಾರಿ ಗ್ರಾಮ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಪ್ರದೇಶದ 10 ಹಳ್ಳಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಲಾಗಿದೆ, ಆ ಗ್ರಾಮಗಳ ಕೆಲವು ಸ್ನೇಹಿತರು ಸಹ ಇಂದು ನಮ್ಮ ಮುಂದೆ ಇದ್ದಾರೆ ಎಂದು ನನಗೆ ತಿಳಿದಿದೆ. 1962ರಲ್ಲಿ ಏನಾಯಿತು ಎಂದು ನಾನು ವಿವರಿಸಿದ ನೆಲಾಂಗ್ ಮತ್ತು ಜಾದುಂಗ್ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಇಂದು ನಾನು ಇಲ್ಲಿಂದ ಜಾದುಂಗ್‌ ತನಕ ಬೈಕ್ ರಾಲಿಗೆ ಚಾಲನೆ ನೀಡಿದ್ದೇನೆ. ಹೋಂ ಸ್ಟೇಗಳನ್ನು ನಿರ್ಮಿಸುವವರಿಗೆ ಮುದ್ರಾ ಯೋಜನೆಯ ಪ್ರಯೋಜನವನ್ನು ಒದಗಿಸುವುದಾಗಿ ನಾವು ಘೋಷಿಸಿದ್ದೇವೆ. ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಹೋಂ ಸ್ಟೇಗಳನ್ನು ಉತ್ತೇಜಿಸುತ್ತಿದೆ. ಹಲವು ದಶಕಗಳಿಂದ ಮೂಲಸೌಕರ್ಯದಿಂದ ವಂಚಿತವಾಗಿರುವ ಹಳ್ಳಿಗಳಲ್ಲಿ, ಹೊಸ ಹೋಂ ಸ್ಟೇಗಳನ್ನು ತೆರೆಯುವುದರಿಂದ ಪ್ರವಾಸೋದ್ಯಮ ಹೆಚ್ಚುತ್ತಿದೆ, ಜತೆಗೆ ಜನರ ಆದಾಯ ಹೆಚ್ಚುತ್ತಿದೆ.

ಸ್ನೇಹಿತರೆ,

ಇಂದು ನಾನು ವಿಶೇಷವಾಗಿ ದೇವಭೂಮಿಯಿಂದ, ದೇಶದ ಪ್ರತಿಯೊಂದು ಮೂಲೆಯಿಂದ, ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಮತ್ತು ಮಧ್ಯಭಾಗದಿಂದ, ವಿಶೇಷವಾಗಿ ಯುವ ಪೀಳಿಗೆಯಿಂದ ಮತ್ತು ಗಂಗಾ ಮಾತೆಯ ತವರು ಈ ಪವಿತ್ರ ಭೂಮಿಯಿಂದ ದೇಶದ ಯುವ ಪೀಳಿಗೆಗೆ ಮನವಿ ಮಾಡುತ್ತಿದ್ದೇನೆ.

 

|

ಸ್ನೇಹಿತರೆ,

ಚಳಿಗಾಲದಲ್ಲಿ ದೇಶದ ಹೆಚ್ಚಿನ ಭಾಗದಲ್ಲಿ ಮಂಜು ಇರುವಾಗ ಮತ್ತು ಸೂರ್ಯ ಕಾಣಿಸದಿದ್ದಾಗ, ಪರ್ವತಗಳ ಮೇಲೆ ಸೂರ್ಯನ ಬೆಳಕನ್ನು ಆನಂದಿಸಲಾಗುತ್ತದೆ. ಇದು ವಿಶೇಷ ಕಾರ್ಯಕ್ರಮವಾಗಬಹುದು. ಗರ್ಹ್ವಾಲಿಯಲ್ಲಿ ನಾವು ಇದನ್ನು ಏನೆಂದು ಕರೆಯುತ್ತೇವೆ? 'ಘಮ್ ತಪೋ ಪರ್ಯತನ್', ಸರಿ ತಾನೆ? 'ಘಮ್ ತಪೋ ಪರ್ಯತನ್'. ಇದಕ್ಕಾಗಿ, ದೇಶದ ಮೂಲೆ ಮೂಲೆಯ ಜನರು ಉತ್ತರಾಖಂಡಕ್ಕೆ ಭೇಟಿ ನೀಡಬೇಕು. ವಿಶೇಷವಾಗಿ ಕಾರ್ಪೊರೇಟ್ ಜಗತ್ತಿನ ನಮ್ಮ ಸ್ನೇಹಿತರು ಚಳಿಗಾಲದ ಪ್ರವಾಸೋದ್ಯಮದ ಭಾಗವಾಗಬೇಕು. ಸಭೆಗಳು, ಸಮ್ಮೇಳನಗಳು, ಪ್ರದರ್ಶನಗಳು ನಡೆಯಬೇಕಾದರೆ, ಚಳಿಗಾಲ ಮತ್ತು ದೇವಭೂಮಿಗಿಂತ ಹೆಚ್ಚು ಭರವಸೆಯ ಸ್ಥಳ ಇನ್ನೊಂದಿಲ್ಲ. ಕಾರ್ಪೊರೇಟ್ ಜಗತ್ತಿನ ದಿಗ್ಗಜರು  ತಮ್ಮ ಬೃಹತ್ ವಿಚಾರಸಂಕಿರಣಗಳಿಗಾಗಿ ಉತ್ತರಾಖಂಡಕ್ಕೆ ಬರಬೇಕೆಂದು, ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳ(MICE) ವಲಯ ಅನ್ವೇಷಿಸಬೇಕೆಂದು ನಾನು ವಿನಂತಿಸುತ್ತೇನೆ. ಜನರು ಯೋಗ ಮತ್ತು ಆಯುರ್ವೇದದ ಮೂಲಕ ಇಲ್ಲಿಗೆ ಬಂದು ಪುನಶ್ಚೇತನಗೊಳ್ಳಬಹುದು. ದೇಶದ ವಿಶ್ವವಿದ್ಯಾಲಯಗಳು, ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿರುವ ಎಲ್ಲಾ ಯುವ ಸ್ನೇಹಿತರು ವಿದ್ಯಾರ್ಥಿಗಳ ಚಳಿಗಾಲದ ಪ್ರವಾಸಗಳಿಗಾಗಿ ಉತ್ತರಾಖಂಡವನ್ನು ಆಯ್ಕೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ.

ನಮ್ಮಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಆರ್ಥಿಕತೆ ಇದೆ, ವೈವಾಹಿಕ ಆರ್ಥಿಕತೆ ಇದೆ, ಸಾವಿರಾರು ಕೋಟಿ ರೂಪಾಯಿಗಳನ್ನು ಮದುವೆಗಳಿಗೆ ಖರ್ಚು ಮಾಡಲಾಗುತ್ತದೆ, ಇದು ಬಹಳ ದೊಡ್ಡ ಆರ್ಥಿಕತೆಯಾಗಿದೆ. ನಿಮಗೆ ನೆನಪಿರಬಹುದು, ನಾನು ದೇಶದ ಜನರನ್ನು ಒತ್ತಾಯಿಸುತ್ತಿದ್ದೆ - ಭಾರತದಲ್ಲಿ ವಿವಾಹ, ಭಾರತದಲ್ಲಿ ಮದುವೆಯಾಗಿ ಎಂದು. ಇತ್ತೀಚಿನ ದಿನಗಳಲ್ಲಿ ಜನರು ಪ್ರಪಂಚದ ಇತರ ದೇಶಗಳಿಗೆ ಹೋಗುತ್ತಾರೆ, ಇಲ್ಲಿ ಏನು ಕೊರತೆಯಿದೆ? ಇಲ್ಲಿ ಹಣ ಖರ್ಚು ಮಾಡಿ, ಉತ್ತರಾಖಂಡಕ್ಕಿಂತ ಉತ್ತಮ ಸ್ಥಳ ಇನ್ನಾವುದು ಇದೆ? ಚಳಿಗಾಲದಲ್ಲಿ ನಡೆಯುವ ಡೆಸ್ಟಿನೇಶನ್ ವೆಡ್ಡಿಂಗ್‌ಗಳಿಗೆ ದೇಶದ ಜನರು ಉತ್ತರಾಖಂಡಕ್ಕೆ ಆದ್ಯತೆ ನೀಡಬೇಕೆಂದು ನಾನು ಬಯಸುತ್ತೇನೆ. ಅದೇ ರೀತಿ, ಭಾರತೀಯ ಚಲನಚಿತ್ರೋದ್ಯಮದಿಂದ ನನಗೆ ಹೆಚ್ಚಿನ ನಿರೀಕ್ಷೆಗಳಿವೆ. ಉತ್ತರಾಖಂಡವು ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ ಎಂಬ ಪ್ರಶಸ್ತಿ ಪಡೆದಿದೆ. ಇಲ್ಲಿ ಆಧುನಿಕ ಸೌಲಭ್ಯಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಆದ್ದರಿಂದ, ಚಳಿಗಾಲದಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಉತ್ತರಾಖಂಡವು ಇಡೀ ಭಾರತದ ನೆಚ್ಚಿನ ತಾಣವಾಗಬಹುದು.

ಸ್ನೇಹಿತರೆ,

ಚಳಿಗಾಲದ ಪ್ರವಾಸೋದ್ಯಮವು ಪ್ರಪಂಚದ ಅನೇಕ ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಉತ್ತರಾಖಂಡದಲ್ಲಿ ಚಳಿಗಾಲ ಪ್ರವಾಸೋದ್ಯಮ ಉತ್ತೇಜಿಸಲು, ಮತ್ತು ಇದಕ್ಕಾಗಿ ನಾವು ಅಂತಹ ದೇಶಗಳಿಂದ ಬಹಳಷ್ಟು ಕಲಿಯಬಹುದು. ಉತ್ತರಾಖಂಡದ ಪ್ರವಾಸೋದ್ಯಮ ವಲಯಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಆ ದೇಶಗಳನ್ನು ಅಧ್ಯಯನ ಮಾಡಬೇಕು ಎಂದು ನಾನು ಬಯಸುತ್ತೇನೆ. ನಾನು ಈಗ ಇಲ್ಲಿದ್ದೇನೆ, ನಾನು ಒಂದು ಸಣ್ಣ ಪ್ರದರ್ಶನ ನೋಡಿದೆ, ಅದು ತುಂಬಾ ಪ್ರಭಾವಶಾಲಿಯಾಗಿದೆ ಎಂದು ನಾನು ಕಂಡುಕೊಂಡೆ, ಮಾಡಲಾದ ಕಲ್ಪನೆ, ನಿರ್ಧರಿಸಲಾದ ಸ್ಥಳಗಳು, ಮಾಡಲಾಗುತ್ತಿರುವ ಆಧುನಿಕ ಸೃಷ್ಟಿಗಳು, ಪ್ರತಿಯೊಂದು ಸ್ಥಳದ ಪ್ರತಿಯೊಂದು ಚಿತ್ರವು ತುಂಬಾ ಪ್ರಭಾವಶಾಲಿಯಾಗಿತ್ತು, ನಾನು ಮತ್ತೊಮ್ಮೆ ಇಲ್ಲಿಗೆ ಬಂದು ನನ್ನ 50 ವರ್ಷಗಳ ಜೀವನದ ಆ ದಿನಗಳನ್ನು ನಿಮ್ಮೊಂದಿಗೆ ಕಳೆಯಲು ಮತ್ತು ಪ್ರತಿ ತಾಣಕ್ಕೆ ಭೇಟಿ ನೀಡುವ ಅವಕಾಶ ಹುಡುಕಲು ಬಯಸಿದ್ದೆ, ಅವರು ಅದನ್ನು ತುಂಬಾ ಉತ್ತಮಗೊಳಿಸುತ್ತಿದ್ದಾರೆ. ವಿದೇಶಿ ಅಧ್ಯಯನಗಳಿಂದ ಹೊರಹೊಮ್ಮುವ ಕಾರ್ಯಸಾಧು ಅಂಶಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುವಂತೆ ನಾನು ಉತ್ತರಾಖಂಡ ಸರ್ಕಾರವನ್ನು ಕೇಳಲು ಬಯಸುತ್ತೇನೆ. ನಾವು ಸ್ಥಳೀಯ ಸಂಪ್ರದಾಯಗಳು, ಸಂಗೀತ, ನೃತ್ಯ ಮತ್ತು ಪಾಕಪದ್ಧತಿಯನ್ನು ಉತ್ತೇಜಿಸಬೇಕು. ಇಲ್ಲಿ ಅನೇಕ ಬಿಸಿನೀರಿನ ಬುಗ್ಗೆಗಳಿವೆ, ಇದು ಬದರಿನಾಥದಲ್ಲಿ ಮಾತ್ರವಲ್ಲ, ಇನ್ನೂ ಹಲವು ಕಡೆ ಇವೆ, ಆ ಪ್ರದೇಶಗಳನ್ನು ಯೋಗಕ್ಷೇಮ(ವೆಲ್ ನೆಸ್) ಸ್ಪಾಗಳಾಗಿಯೂ ಅಭಿವೃದ್ಧಿಪಡಿಸಬಹುದು. ಚಳಿಗಾಲದ ಯೋಗ ಪ್ರದರ್ಶನಗಳನ್ನು ಶಾಂತ ಮತ್ತು ಹಿಮಚ್ಛಾದಿತ ಪ್ರದೇಶಗಳಲ್ಲಿ ಆಯೋಜಿಸಬಹುದು. ಉತ್ತರಾಖಂಡದಲ್ಲಿ ವರ್ಷಕ್ಕೊಮ್ಮೆ ಚಳಿಗಾಲದಲ್ಲಿ ತಮ್ಮ ಶಿಷ್ಯರಿಗಾಗಿ ಯೋಗ ಶಿಬಿರ ಆಯೋಜಿಸುವಂತೆ ಎಲ್ಲಾ ಮಹಾನ್ ಋಷಿಮುನಿಗಳು, ಮಠಗಳು ಮತ್ತು ದೇವಾಲಯಗಳ ಮುಖ್ಯಸ್ಥರು ಮತ್ತು ಎಲ್ಲಾ ಯೋಗ ಶಿಕ್ಷಕರನ್ನು ನಾನು ವಿನಂತಿಸುತ್ತೇನೆ. ಚಳಿಗಾಲಕ್ಕಾಗಿ ವಿಶೇಷ ವನ್ಯಜೀವಿ ಸಫಾರಿಯ ಆಕರ್ಷಣೆಯು ಉತ್ತರಾಖಂಡದ ವಿಶೇಷ ಗುರುತಾಗಬಹುದು. ಅಂದರೆ ನಾವು ಪರಿಪೂರ್ಣ(360-ಡಿಗ್ರಿ) ವಿಧಾನದೊಂದಿಗೆ ಮುಂದುವರಿಯಬೇಕು ಮತ್ತು ಪ್ರತಿ ಹಂತದಲ್ಲೂ ಕೆಲಸ ಮಾಡಬೇಕಾಗುತ್ತದೆ.

 

|

ಸ್ನೇಹಿತರೆ,

ಸೌಲಭ್ಯಗಳ ಅಭಿವೃದ್ಧಿಯ ಜತೆಗೆ, ಜನರಿಗೆ ಮಾಹಿತಿ ಒದಗಿಸುವುದು ಅಷ್ಟೇ ಮುಖ್ಯ. ಇದಕ್ಕಾಗಿ, ದೇಶದ ಯುವ ವಸ್ತುವಿಷಯ ರಚನಾಕಾರರಿಗೆ ನಾನು ಹೇಳಲು ಬಯಸುತ್ತೇನೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಭಾವಿಗಳು, ವಿಷಯ ರಚನಾಕಾರರು ಇದ್ದಾರೆ, ಅವರು ನನ್ನ ಉತ್ತರಾಖಂಡ, ನನ್ನ ದೇವಭೂಮಿಗೆ ಸೇವೆ ಸಲ್ಲಿಸಬಹುದು, ಮನೆಯಲ್ಲೇ ಕುಳಿತು ಅವರು ಪುಣ್ಯ ಗಳಿಸಬಹುದು. ದೇಶದ ಪ್ರವಾಸೋದ್ಯಮ ವಲಯವನ್ನು ವೇಗಗೊಳಿಸುವಲ್ಲಿ ನೀವು ಬಹುದೊಡ್ಡ ಪಾತ್ರ ವಹಿಸಬಹುದು, ಜನರಿಗೆ ಮಾಹಿತಿ ಒದಗಿಸುವಲ್ಲಿ, ವಹಿಸಿರುವ ಪಾತ್ರವನ್ನು ಮತ್ತಷ್ಟು ವಿಸ್ತರಿಸಬೇಕಾಗಿದೆ. ಉತ್ತರಾಖಂಡದಲ್ಲಿ ಚಳಿಗಾಲ ಪ್ರವಾಸೋದ್ಯಮದ ಈ ಅಭಿಯಾನದಲ್ಲಿ ನೀವು ಸಹ ಭಾಗವಹಿಸಬೇಕು, ಉತ್ತರಾಖಂಡ ಸರ್ಕಾರವು ಒಂದು ದೊಡ್ಡ ಸ್ಪರ್ಧೆ ಆಯೋಜಿಸಬೇಕೆಂದು ನಾನು ಬಯಸುತ್ತೇನೆ, ಈ ವಿಷಯ ರಚನಾಕಾರರು, ಪ್ರಭಾವಿಗಳು, ಚಳಿಗಾಲದ ಪ್ರವಾಸೋದ್ಯಮ ಉತ್ತೇಜಿಸಲು 5 ನಿಮಿಷಗಳ ಚಲನಚಿತ್ರ ನಿರ್ಮಿಸಬೇಕು, ಅವರಿಗಾಗಿ ಸ್ಪರ್ಧೆ ಆಯೋಜಿಸಬೇಕು, ಅತ್ಯುತ್ತಮ ಚಲನಚಿತ್ರ ನಿರ್ಮಿಸುವವರಿಗೆ ಅತ್ಯುತ್ತಮ ಬಹುಮಾನ ನೀಡಬೇಕು, ದೇಶಾದ್ಯಂತದ ಜನರು ಮುಂದೆ ಬರಲು ಕೇಳಬೇಕು, ಆಗ ಸಾಕಷ್ಟು ಪ್ರಚಾರ ಪ್ರಾರಂಭವಾಗುತ್ತದೆ. ಅಂತಹ ಸ್ಪರ್ಧೆಗಳು ನಡೆದಾಗ, ಹೊಸ ಸ್ಥಳಗಳನ್ನು ಅನ್ವೇಷಿಸಲಾಗುತ್ತದೆ, ಹೊಸ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ, ಜನರಿಗೆ ಅದರ ಬಗ್ಗೆ ತಿಳಿಯುತ್ತದೆ ಎಂಬುದು ನನಗೆ ಖಚಿತವಾಗಿದೆ.

ಸ್ನೇಹಿತರೆ,

ಮುಂಬರುವ ವರ್ಷಗಳಲ್ಲಿ ಈ ವಲಯ ತ್ವರಿತ ಅಭಿವೃದ್ಧಿ ಕಾಣಲಿದೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, 365 ದಿನಗಳ, ವರ್ಷಪೂರ್ತಿ ಪ್ರವಾಸೋದ್ಯಮ ಅಭಿಯಾನಕ್ಕಾಗಿ, ನಾನು ಉತ್ತರಾಖಂಡದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ಹೀಗೆ ಹೇಳಿ -

ಗಂಗಾ ಮಾತೆಗೆ ನಮಸ್ಕಾರ.

ಗಂಗಾ ಮಾತೆಗೆ ನಮಸ್ಕಾರ.

ಗಂಗಾ ಮಾತೆಗೆ ನಮಸ್ಕಾರ.

ಗಂಗಾ ಮಾತೆಗೆ ನಮಸ್ಕಾರ.

ಹೃತ್ಪೂರ್ವಕ ಧನ್ಯವಾದಗಳು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Independence Day and Kashmir

Media Coverage

Independence Day and Kashmir
NM on the go

Nm on the go

Always be the first to hear from the PM. Get the App Now!
...
PM hails India’s 100 GW Solar PV manufacturing milestone & push for clean energy
August 13, 2025

The Prime Minister Shri Narendra Modi today hailed the milestone towards self-reliance in achieving 100 GW Solar PV Module Manufacturing Capacity and efforts towards popularising clean energy.

Responding to a post by Union Minister Shri Pralhad Joshi on X, the Prime Minister said:

“This is yet another milestone towards self-reliance! It depicts the success of India's manufacturing capabilities and our efforts towards popularising clean energy.”