Quoteಕೊರೊನಾಗೆ ಭಾರತದ ಪ್ರತಿಕ್ರಿಯೆ ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆ
Quoteಇಷ್ಟು ಪ್ರಮಾಣದ ಲಸಿಕಾ ಅಭಿಯಾನವನ್ನು ಜಗತ್ತು ಹಿಂದೆಂದೂ ನೋಡಿಲ್ಲ
Quoteಕೊರೊನಾಗೆ ಭಾರತದ ಪ್ರತಿಕ್ರಿಯೆ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ: ಪ್ರಧಾನಿ
Quoteಮುಂಚೂಣಿಯ ಕೊರೊನಾ ಯೋಧರಿಗೆ ಪ್ರಧಾನಿ ಗೌರವ ನಮನ

ನನ್ನ ಪ್ರೀತಿಯ ದೇಶವಾಸಿಗಳೇ,

ನಮಸ್ಕಾರ!

ಇಡೀ ದೇಶವು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿತ್ತು. ತಿಂಗಳುಗಳಿಂದ ದೇಶದ ಪ್ರತೀ ಮನೆಗಳ ಮಕ್ಕಳು, ಹಿರಿಯರು ಮತ್ತು ಯುವಜನತೆ ಕೊರೊನಾ ಲಸಿಕೆ ಯಾವಾಗ ಬರುತ್ತದೆ ಎಂಬ ಒಂದೇ ಪ್ರಶ್ನೆಯನ್ನು ಹೊಂದಿದ್ದರು. ಈಗ ಕೊರೊನಾ ಲಸಿಕೆ ಬಂದಿದೆ, ಮತ್ತು ಅದೂ ಬಹಳ ಕಡಿಮೆ ಅವಧಿಯಲ್ಲಿ. ಇನ್ನು ಕೆಲವೇ ನಿಮಿಷಗಳಲ್ಲಿ ಜಗತ್ತಿನ ಅತ್ಯಂತ ದೊಡ್ಡ ಲಸಿಕಾ ಕಾರ್ಯಕ್ರಮ ಭಾರತದಲ್ಲಿ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ ನಾನು ನನ್ನೆಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಲಸಿಕಾ ಸಂಶೋಧನಾ ಕಾರ್ಯಕ್ರಮದಲ್ಲಿ ತೊಡಗಿರುವವರು ಮತ್ತು ಹಲವಾರು ವಿಜ್ಞಾನಿಗಳು ಇಂದು ಶ್ಲಾಘನೆಗೆ ಅರ್ಹರಾಗಿದ್ದಾರೆ. ಕಳೆದ ಹಲವಾರು ತಿಂಗಳಿನಿಂದ ಅವರು ಕೊರೊನಾ ವಿರುದ್ಧ ಲಸಿಕೆ ಅಭಿವೃದ್ಧಿ ಮಾಡುವಲ್ಲಿ ಹಗಲು ರಾತ್ರಿ ತೊಡಗಿಸಿಕೊಂಡಿದ್ದರು. ಅವರು ಯಾವುದೇ ಹಬ್ಬಗಳ ಬಗ್ಗೆ ಗಮನ ಕೊಡಲಿಲ್ಲ. ಹಗಲು-ರಾತ್ರಿಗಳನ್ನು ಲೆಕ್ಕಿಸಲಿಲ್ಲ. ಲಸಿಕೆಯನ್ನು ಅಭಿವೃದ್ಧಿ ಮಾಡುವುದಕ್ಕೆ ವರ್ಷಗಳು ತಗಲುತ್ತವೆ. ಆದರೆ ಇಷ್ಟೊಂದು ಅಲ್ಪ ಕಾಲದಲ್ಲಿ ಒಂದಲ್ಲ, ಎರಡು “ಭಾರತೀಯ ನಿರ್ಮಿತ” ಲಸಿಕೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅಷ್ಟು ಮಾತ್ರವಲ್ಲ, ಇನ್ನೂ ಹಲವು ಲಸಿಕೆಗಳು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಇದು ಭಾರತದ ಶಕ್ತಿಯ ಹೊಳಪಿಗೆ ಸಾಕ್ಷಿ. ಭಾರತದ ವೈಜ್ಞಾನಿಕ ನೈಪುಣ್ಯ ಮತ್ತು ಭಾರತದ ಪ್ರತಿಭೆಗೆ ಇದು ಸಾಕ್ಷಿ. ಇಂತಹ ಸಾಧನೆಗಳಿಗೆ ರಾಷ್ಟ್ರೀಯ ಕವಿ ರಾಮಧಾರಿ ಸಿಂಗ್ ದಿನಕರ್ ಅವರು ಹೇಳಿದ್ದುಂಟು, “ಯಾವಾಗ ಮನುಷ್ಯರು ದೃಢ ನಿರ್ಧಾರದಿಂದ ತೊಡಗಿಕೊಳ್ಳುತ್ತಾರೋ, ಆಗ ಕಲ್ಲು ಕೂಡಾ ಕರಗಿ ನೀರಾಗುತ್ತದೆ!” ಎಂಬುದಾಗಿ.

ಸಹೋದರರೇ ಮತ್ತು ಸಹೋದರಿಯರೇ,

ಭಾರತದ ಲಸಿಕಾ ಕಾರ್ಯಕ್ರಮ ಅತ್ಯಂತ ಮಾನವೀಯ ಮತ್ತು ಪ್ರಮುಖ ತತ್ವಗಳ ಆಧಾರವನ್ನು ಅವಲಂಬಿಸಿದೆ. ಅತ್ಯಂತ ಅವಶ್ಯವಾಗಿರುವವರಿಗೆ ಮೊದಲಿಗೆ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ಅಪಾಯ ಅತ್ಯಂತ ಹೆಚ್ಚು ಇರುವವರಿಗೆ ಮೊದಲು ಲಸಿಕೆ ನೀಡಲಾಗುತ್ತಿದೆ. ನಮ್ಮ ವೈದ್ಯರು, ದಾದಿಯರು, ಆಸ್ಪತ್ರೆಗಳಲ್ಲಿರುವ ಸಫಾಯಿ ಕರ್ಮಚಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಮೊದಲು ಲಸಿಕೆ ಹಾಕಲಾಗುತ್ತದೆ. ಅವರು ಸರಕಾರಿ ಆಸ್ಪತ್ರೆಯಲ್ಲಿರಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿರಲಿ ಅವರಿಗೆ ಆದ್ಯತೆಯಾಧಾರದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಆ ಬಳಿಕ ಅವಶ್ಯಕ ಸೇವೆಗಳನ್ನು ಒದಗಿಸುವವರಿಗೆ, ದೇಶ ರಕ್ಷಣೆ ಮಾಡುವವರಿಗೆ ಅಥವಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವವರಿಗೆ ಲಸಿಕೆ ಹಾಕಲಾಗುತ್ತದೆ. ಉದಾಹರಣೆಗೆ ನಮ್ಮ ಭದ್ರತಾ ಪಡೆಗಳು, ಪೊಲೀಸ್ ಸಿಬ್ಬಂದಿಗಳು, ಅಗ್ನಿ ಶಾಮಕ ಸಿಬ್ಬಂದಿಗಳು, ಸಫಾಯಿ ಕರ್ಮಚಾರಿಗಳು ಇತ್ಯಾದಿ. ವರ್ಗದವರಿಗೆ ಆದ್ಯತೆಯಾಧಾರದಲ್ಲಿ ಲಸಿಕೆ ಹಾಕಲಾಗುತ್ತದೆ. ಮತ್ತು ನಾನು ಈ ಮೊದಲು ಹೇಳಿದಂತೆ ಅವರ ಸಂಖ್ಯೆ ಸುಮಾರು ಮೂರು ಕೋಟಿ. ಈ ಎಲ್ಲಾ ಜನರ ಲಸಿಕಾ ಕಾರ್ಯಕ್ರಮದ ವೆಚ್ಚವನ್ನು ಭಾರತ ಸರಕಾರ ಭರಿಸುತ್ತದೆ.

|

ಸ್ನೇಹಿತರೇ,

ಈ ಲಸಿಕಾ ಕಾರ್ಯಕ್ರಮದ ವ್ಯಾಪಕ ಸಿದ್ಧತೆಗಾಗಿ ಟ್ರಯಲ್ ಗಳು, ಡ್ರೈರನ್ ಗಳನ್ನು ದೇಶದ ಪ್ರತಿಯೊಂದು ಮೂಲೆಯಲ್ಲೂ ನಡೆಸಲಾಗಿದೆ. ಇದಕ್ಕೆ ರಾಜ್ಯ ಸರಕಾರಗಳ ನೆರವು ಪಡೆಯಲಾಗಿದೆ. ವಿಶೇಷವಾಗಿ ರಚಿಸಲಾದ ಕೋವಿನ್ ಡಿಜಿಟಲ್ ವೇದಿಕೆ ಲಸಿಕಾ ಕಾರ್ಯಕ್ರಮದ ನೊಂದಾವಣೆಯ ಮೇಲೆ ನಿಗಾ ಇರಿಸುತ್ತದೆ. ಮೊದಲ ಲಸಿಕೆ ಪಡೆದ ಬಳಿಕ ಎರಡನೇ ಡೋಸಿನ ಲಸಿಕೆಗಾಗಿ ನಿಮಗೆ ನಿಮ್ಮ ಫೋನ್ ನಲ್ಲಿ ಸಂದೇಶ ಬರುತ್ತದೆ. ಮತ್ತು ನಾನು ಎಲ್ಲಾ ದೇಶವಾಸಿಗಳಿಗೆ ಮತ್ತೊಮ್ಮೆ ನೆನಪು ಮಾಡಲಿಚ್ಛಿಸುತ್ತೇನೆ- ಏನೆಂದರೆ ಕೊರೊನಾ ಲಸಿಕೆಯ ಎರಡು ಡೋಸ್ ಪಡೆದುಕೊಳ್ಳುವುದು ಬಹಳ ಮುಖ್ಯ. ಮೊದಲ ಡೋಸ್ ಪಡೆದ ಬಳಿಕ ಎರಡನೆಯ ಡೋಸ್ ಪಡೆದುಕೊಳ್ಳಲು ಮರೆಯುವ ತಪ್ಪನ್ನು ಮಾಡಬೇಡಿ. ಮತ್ತು ತಜ್ಞರು ಹೇಳಿದಂತೆ ಮೊದಲ ಮತ್ತು ಎರಡನೇ ಡೋಸಿನ ನಡುವೆ ಒಂದು ತಿಂಗಳ ಅಂತರ ಪಾಲನೆಯಾಗಬೇಕು. ನಿಮ್ಮ ದೇಹ ಎರಡನೇ ಡೋಸಿನ ಬಳಿಕದ ಎರಡು ವಾರಗಳ ನಂತರ ಅವಶ್ಯ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಆದುದರಿಂದ ದಯವಿಟ್ಟು ನಿರ್ಲಕ್ಷ ಮಾಡಬೇಡಿ. ನಿಮ್ಮ ಮುಖಗವಸುಗಳನ್ನು ತೆಗೆದುಹಾಕಬೇಡಿ ಮತ್ತು ಲಸಿಕೆ ಪಡೆದಾಕ್ಷಣಕ್ಕೆ ಎರಡು ಯಾರ್ಡ್ ದೂರ ಕಾಪಾಡುವುದನ್ನು ಮರೆಯಬೇಡಿ. ಈ ಕೆಲಸಗಳನ್ನು ಮಾಡಬೇಡಿ ಎಂದು ನಾನು ಕೋರಿಕೊಳ್ಳುತ್ತೇನೆ. ಇನ್ನೊಂದು ಸಂಗತಿ, ನೀವು ಕೊರೊನಾ ವಿರುದ್ಧ ಹೋರಾಟ ಮಾಡುವಾಗ ತೋರಿದ ಅದೇ ತಾಳ್ಮೆಯನ್ನು ನೀವು ಈಗಲೂ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿಯೂ ಪ್ರದರ್ಶಿಸಬೇಕು ಎಂದು ನಾನು ಆಶಿಸುತ್ತೇನೆ.

ಸ್ನೇಹಿತರೇ,

ಇತಿಹಾಸದಲ್ಲೆಂದೂ ಇಷ್ಟೊಂದು ಬೃಹತ್ ಪ್ರಮಾಣದ ಲಸಿಕಾ ಕಾರ್ಯಕ್ರಮವನ್ನು ನಡೆಸಿದ್ದಿಲ್ಲ. ಮೊದಲ ಹಂತದಿಂದಲೇ ಈ ಕಾರ್ಯಕ್ರಮದ ತೀವ್ರತೆಯನ್ನು ನೀವು ಮಾಪನ ಮಾಡಬಹುದು. ಮೂರು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಹಲವಾರು ದೇಶಗಳು ಈ ಜಗತ್ತಿನಲ್ಲಿವೆ. ಮತ್ತು ಭಾರತವು ತನ್ನ ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ಹಾಕುತ್ತಿದೆ. ಎರಡನೇ ಹಂತದಲ್ಲಿ ನಾವಿದನ್ನು 30 ಕೋಟಿಗೆ ಕೊಂಡೊಯ್ಯಬೇಕಾಗಿದೆ. ಹಿರಿಯರಿಗೆ, ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಮುಂದಿನ ಹಂತದಲ್ಲಿ ಲಸಿಕೆ ಹಾಕಲಾಗುವುದು. 30 ಕೋಟಿಗಿಂತ ಅಧಿಕ ಜನಸಂಖ್ಯೆ ಇರುವ ಮೂರು ದೇಶಗಳು ಈ ಜಗತ್ತಿನಲ್ಲಿವೆ, ಅವುಗಳಲ್ಲಿ ಒಂದು ಭಾರತ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್. ಈ ದೇಶಗಳಿಗಿಂತ ಹೆಚ್ಚು ಜನಸಂಖ್ಯೆ ಇರುವ ಯಾವ ದೇಶವೂ ಇಲ್ಲ. ಆದುದರಿಂದ ಭಾರತದ ಲಸಿಕಾ ಕಾರ್ಯಕ್ರಮ ಬಹಳ ಬೃಹತ್ ಪ್ರಮಾಣದ್ದು ಮತ್ತು ಅದು ಭಾರತದ ಶಕ್ತಿಯನ್ನು ತೋರಿಸುವಂತಹದ್ದು. ಮತ್ತು ದೇಶವಾಸಿಗಳಿಗೆ ನಾನು ಇಲ್ಲಿ ಮತ್ತೊಂದು ಅಂಶವನ್ನು ಹೇಳಲು ಇಚ್ಛಿಸುತ್ತೇನೆ ಏನೆಂದರೆ, ನಮ್ಮ ವಿಜ್ಞಾನಿಗಳು ಮತ್ತು ತಜ್ಞರು ಭಾರತದಲ್ಲಿ ತಯಾರಾದ ಲಸಿಕೆಗಳ ಸುರಕ್ಷೆ ಮತ್ತು ಪರಿಣಾಮದ ಬಗ್ಗೆ ವಿಶ್ವಾಸ ಮೂಡಿದ ಬಳಿಕವಷ್ಟೇ ಅವುಗಳ ತುರ್ತು ಬಳಕೆಗೆ ಅನುವು ಮಾಡಿಕೊಟ್ಟಿದ್ದಾರೆ. ಆದುದರಿಂದ ದೇಶವಾಸಿಗಳು ಯಾವುದೇ ತಪ್ಪು ಮಾಹಿತಿ ಪ್ರಸಾರ, ಗಾಳಿಸುದ್ದಿಗಳ ಹರಡುವಿಕೆ ಹಾಗು ದುಷ್ಪ್ರಚಾರವನ್ನು ಮಾಡಬಾರದು.

|

ಸ್ನೇಹಿತರೇ,

ಲಸಿಕೆಗಳ ಅಭಿವೃದ್ಧಿಗೆ ಭಾರತದ ವಿಜ್ಞಾನಿಗಳ ಮೇಲೆ ಈಗಾಗಲೇ ಭಾರೀ ವಿಶ್ವಾಸ ವ್ಯಕ್ತವಾಗಿದೆ. ನಮ್ಮ ವೈದ್ಯಕೀಯ ವ್ಯವಸ್ಥೆ ಮತ್ತು ಭಾರತೀಯ ಪ್ರಕ್ರಿಯೆಯ ಬಗ್ಗೆಯೂ ವಿಶ್ವಾಸವಿದೆ. ನಾವು ನಮ್ಮ ಹಿಂದಿನ ಸಾಧನಾ ದಾಖಲೆಗಳಿಂದಾಗಿ ಈ ವಿಶ್ವಾಸವನ್ನು ಗಳಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡಬೇಕಾದ ಸಂಗತಿ ಇದೆ. ವಿಶ್ವದಲ್ಲಿ 60 ಶೇಖಡಾದಷ್ಟು ಮಕ್ಕಳಿಗೆ ನೀಡಲಾಗುವ ಜೀವ ರಕ್ಷಕ ಲಸಿಕೆಗಳನ್ನು ಅಭಿವೃದ್ಧಿಪಡಿಸಿರುವುದು ಭಾರತ. ಮತ್ತು ಅವುಗಳು ಭಾರತದ ಕಠಿಣ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಹಾದುಹೋಗುತ್ತವೆ. ಭಾರತದ ವಿಜ್ಞಾನಿಗಳ ವಿಷಯದಲ್ಲಿ ಮತ್ತು ಲಸಿಕಾ ತಜ್ಞತೆಯ ವಿಷಯದಲ್ಲಿ ಜಗತ್ತಿನ ವಿಶ್ವಾಸವು ಭಾರತೀಯ ತಯಾರಿಕೆಯ ಕೊರೊನಾ ಲಸಿಕೆ ಅಭಿವೃದ್ಧಿಯ ಬಳಿಕ ಇನ್ನಷ್ಟು ಹೆಚ್ಚಲಿದೆ. ನಾನು ಇಂದು ದೇಶವಾಸಿಗಳಿಗೆ ಹೇಳಬೇಕಾದ ಇತರ ಮಹತ್ವದ ಸಂಗತಿಗಳಿವೆ. ಈ ಭಾರತೀಯ ಲಸಿಕೆಗಳು ವಿದೇಶೀ ಲಸಿಕೆಗಳಿಗಿಂತ ಬಹಳ ಅಗ್ಗ ಮತ್ತು ಅವುಗಳ ಬಳಕೆ ಕೂಡಾ ಅಷ್ಟೇ ಸುಲಭ-ಸರಳ. ವಿದೇಶಗಳಲ್ಲಿರುವ ಕೆಲವು ಲಸಿಕೆಗಳ ಒಂದು ಡೋಸಿಗೆ 5000 ರೂಪಾಯಿ ದರವಿದೆ. ಮತ್ತು ಅವುಗಳನ್ನು ಮೈನಸ್ 70 ಡಿಗ್ರಿ ಶೀತಲದಾಸ್ತಾನಿನಲ್ಲಿಡಬೇಕಾಗುತ್ತದೆ. ಭಾರತದ ಲಸಿಕೆಗಳನ್ನು ಭಾರತದಲ್ಲಿ ವರ್ಷಗಳಿಂದ ಪರೀಕ್ಷೆಗೆ ಒಳಗು ಮಾಡಿ ಪ್ರಯೋಗಿಸುತ್ತಿರುವ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಈ ಲಸಿಕೆಗಳು ದಾಸ್ತಾನಿನಿಂದ ಹಿಡಿದು ಸಾಗಾಣಿಕೆವರೆಗೆ ಭಾರತೀಯ ವಾತಾವರಣಗಳಿಗೆ ಅನುಕೂಲಕರವಾಗಿ ಹೊಂದಿಕೊಳ್ಳುತ್ತವೆ. ಅಂತಹದೇ ಲಸಿಕೆಗಳು ಈಗ ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ನಿರ್ಣಾಯಕ ಗೆಲುವನ್ನು ಖಾತ್ರಿಪಡಿಸುತ್ತಿವೆ.

ಸ್ನೇಹಿತರೇ,

ಕೊರೊನಾ ವಿರುದ್ಧ ನಮ್ಮ ಹೋರಾಟವು ವಿಶ್ವಾಸದ ಮತ್ತು ಸ್ವಾವಲಂಬನೆಯದಾಗಿತ್ತು. ಈ ತ್ರಾಸದಾಯಕ ಹೋರಾಟದಲ್ಲಿ ನಮ್ಮ ವಿಶ್ವಾಸ ದುರ್ಬಲಗೊಳ್ಳಲು ನಾವು ಅವಕಾಶ ನೀಡಬಾರದು ಎಂಬ ನಮ್ಮ ನಿರ್ಧಾರ ಪ್ರತಿಯೊಬ್ಬ ಭಾರತೀಯರಲ್ಲೂ ಕಾಣಬಹುದಾಗಿತ್ತು. ಬಿಕ್ಕಟ್ಟು ಎಷ್ಟೇ ದೊಡ್ಡದಾಗಿದ್ದರೂ, ದೇಶವಾಸಿಗಳು ಎಂದೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ.ಕೊರೊನಾ ಭಾರತವನ್ನು ಅಪ್ಪಳಿಸಿದಾಗ, ದೇಶದಲ್ಲಿ ಕೊರೊನಾ ಪರೀಕ್ಷೆಗೆ ಒಂದೇ ಒಂದು ಪ್ರಯೋಗಾಲಯವಿತ್ತು. ನಾವು ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟೆವು. ಮತ್ತು ಇಂದು ನಾವು 2300 ಕ್ಕೂ ಅಧಿಕ ಪ್ರಯೋಗಾಲಯಗಳ ಜಾಲವನ್ನು ಹೊಂದಿದ್ದೇವೆ. ಆರಂಭದಲ್ಲಿ ನಾವು ಅವಶ್ಯಕ ಸಾಮಗ್ರಿಗಳಾದ ಮುಖಗವಸುಗಳು, ಪಿ.ಪಿ.ಇ. ಕಿಟ್ ಗಳು, ಪರೀಕ್ಷಾ ಕಿಟ್ ಗಳು, ವೆಂಟಿಲೇಟರುಗಳು ಇತ್ಯಾದಿಗಳಿಗೆ ವಿದೇಶಗಳನ್ನು ಅವಲಂಬಿಸಿದ್ದೆವು. ಇಂದು, ಈ ಎಲ್ಲಾ ಸರಕುಗಳ ತಯಾರಿಕೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ ಮತ್ತು ಅವುಗಳನ್ನು ರಫ್ತು ಮಾಡುತ್ತಿದ್ದೇವೆ. ನಾವು ಲಸಿಕಾ ಆಂದೋಲನದ ಸಂದರ್ಭದಲ್ಲಿ ಈ ವಿಶ್ವಾಸದ ಶಕ್ತಿಯನ್ನು ಮತ್ತು ಸ್ವಾವಲಂಬನೆಯನ್ನು ಬಲಪಡಿಸಬೇಕು.

|

ಸ್ನೇಹಿತರೇ,

ತೆಲುಗಿನ ಶ್ರೇಷ್ಟ ಕವಿ ಶ್ರೀ ಗುರಾಜಡ ಅಪ್ಪಾರಾವ್ ಹೇಳುತ್ತಾರೆ, “सौन्त लाभं कौन्त मानुकु, पौरुगुवाडिकि तोडु पडवोय् देशमन्टे मट्टि कादोयि, देशमन्टे मनुषुलोय” ಎಂಬುದಾಗಿ. ಇದರರ್ಥ ನಾವು ಇತರರಿಗೆ ಸಹಾಯ ಮಾಡಬೇಕು, ಈ ನಿಸ್ವಾರ್ಥ ಮನೋಭಾವ ನಮ್ಮೊಳಗೆ ಇರಬೇಕು. ದೇಶವು ಬರೇ ಮಣ್ಣು, ನೀರು, ಬೆಣಚುಕಲ್ಲುಗಳು ಮತ್ತು ಕಲ್ಲುಗಳಿಂದಾಗಿರುವುದಲ್ಲ. ದೇಶವೆಂದರೆ ನಮ್ಮ ಜನರು. ಕೊರೊನಾ ವಿರುದ್ಧ ನಮ್ಮ ಹೋರಾಟವನ್ನು ಇಡೀ ದೇಶ ಈ ಸ್ಪೂರ್ತಿಯೊಂದಿಗೆ ಮಾಡಿತು. ಇಂದು ನಾವು ಹಿಂತಿರುಗಿ ನೋಡಿದಾಗ, ಓರ್ವ ವ್ಯಕ್ತಿಯಾಗಿ, ಕುಟುಂಬವಾಗಿ ಮತ್ತು ರಾಷ್ಟ್ರವಾಗಿ ನಾವು ಬಹಳಷ್ಟನ್ನು ಕಲಿತಿದ್ದೇವೆ. ಬಹಳಷ್ಟನ್ನು ನೋಡಿದ್ದೇವೆ, ಬಹಳಷ್ಟನ್ನು ತಿಳಿದಿದ್ದೇವೆ.

ಇಂದು, ದೇಶವು ತನ್ನ ಲಸಿಕಾ ಕಾರ್ಯಕ್ರಮವನ್ನು ಆರಂಭಿಸುವಾಗ, ನನಗೆ ಅಂದಿನ ದಿನಗಳ ನೆನಪಾಗುತ್ತದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಏನಾದರೂ ಒಂದನ್ನು ಮಾಡಲು ಇಚ್ಛಿಸುತ್ತಿದ್ದರು. ಆದರೆ ಅವರಿಗೆ ದಾರಿಗಳು ಗೋಚರಿಸುತ್ತಿರಲಿಲ್ಲ. ಸಾಮಾನ್ಯ ಸಂದರ್ಭಗಳಲ್ಲಾದರೆ ಇಡೀ ಕುಟುಂಬ ಅನಾರೋಗ್ಯ ಪೀಡಿತ ವ್ಯಕ್ತಿಯ ಆರೈಕೆಯ ಹೊಣೆ ಹೊತ್ತುಕೊಳ್ಳುತ್ತಿತ್ತು. ಆದರೆ ಈ ಖಾಯಿಲೆ ರೋಗಿಯನ್ನು ಪ್ರತ್ಯೇಕ ಮಾಡಿಟ್ಟಿತು. ಹಲವು ಕಡೆಗಳಲ್ಲಿ ರೋಗದಿಂದ ಬಳಲುತ್ತಿದ್ದ ಸಣ್ಣ ಮಕ್ಕಳು ಅವರ ತಾಯಂದಿರಿಂದ ಪ್ರತ್ಯೇಕವಾಗುಳಿಯಬೇಕಾಯಿತು. ತಾಯಂದಿರು ಸ್ಥಿಮಿತ ಕಳೆದುಕೊಳ್ಳುವಂತಹ ಪರಿಸ್ಥಿತಿಗಳೂ ಬಂದವು. ಅವರು ಅತ್ತು ಕರೆದರೂ ಏನೂ ಮಾಡಲಾಗದ ಸ್ಥಿತಿ ಅದು. ಮಗುವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಸಂತೈಸಲಾಗದ ಸ್ಥಿತಿ ಅದು. ಇನ್ನು ಕೆಲವೆಡೆ ಹಿರಿಯ ವಯಸ್ಸಿನ ತಂದೆ ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ರೋಗದೊಂದಿಗೆ ಹೋರಾಡುತ್ತಿದ್ದರು. ಮಕ್ಕಳು ಅವರನ್ನು ಭೇಟಿಯಾಗುವುದಕ್ಕೂ ಸಾಧ್ಯವಿರಲಿಲ್ಲ. ನಮ್ಮನ್ನು ಬಿಟ್ಟು ಹೋದವರಿಗೆ ಸಂಪ್ರದಾಯದ ಪ್ರಕಾರ ಅವಶ್ಯ ವಿದಾಯ ನೀಡುವುದಕ್ಕೂ ಸಾಧ್ಯವಾಗಲಿಲ್ಲ. ನಾವು ಆ ಸಮಯದ ಬಗ್ಗೆ ಯೋಚಿಸಿದಷ್ಟೂ ನಮ್ಮ ಬೆನ್ನು ಹುರಿಯಲ್ಲಿ ನಡುಕಗಳೇಳುತ್ತವೆ. ಮತ್ತು ನಾವು ಖಿನ್ನತೆಗೆ ಒಳಗಾಗುತೇವೆ.

ಆದರೆ ಸ್ನೇಹಿತರೇ,

ಆ ಬಿಕ್ಕಟ್ಟಿನ ಸಮಯದಲ್ಲಿ, ನಿರಾಸೆಯ ಹೊತ್ತಿನಲ್ಲಿ ಇತರರು ನಮ್ಮ ಭರವಸೆಗಳನ್ನು ಪೋಷಿಸುತಿದ್ದರು ಮತ್ತು ನಮ್ಮನ್ನು ರಕ್ಷಿಸಲು ಅವರು ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿದ್ದರು. ನಮ್ಮ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗಳು, ಅಂಬುಲೆನ್ಸ್ ಚಾಲಕರು, ಆಶಾ ಕಾರ್ಯಕರ್ತೆಯರು, ಸಫಾಯಿ ಕರ್ಮಚಾರಿಗಳು, ಪೊಲೀಸ್ ಸಿಬ್ಬಂದಿಗಳು, ಮತ್ತು ಇತರ ಮುಂಚೂಣಿ ಕಾರ್ಯಕರ್ತರು ಮಾನವ ಕುಲಕ್ಕೆ/ ಮಾನವತೆಗೆ ಸಂಬಂಧಿಸಿ ತಮ್ಮ ಜವಾಬ್ದಾರಿಗೆ ಆದ್ಯತೆಯನ್ನು ನೀಡಿದರು. ಅವರಲ್ಲಿ ಬಹುತೇಕರು ತಮ್ಮ ಮಕ್ಕಳಿಂದ, ಕುಟುಂಬದಿಂದ ದೂರ ಉಳಿದಿದ್ದರು ಮತ್ತು ಹಲವಾರು ದಿನಗಳ ಕಾಲ ಮನೆಗೆ ಹೋಗಿರಲಿಲ್ಲ. ತಮ್ಮ ಮನೆಗಳಿಗೆ ಹೋಗಲಾಗದೆ ಖಾಯಂ ದೂರವಾದ ನೂರಾರು ಸ್ನೇಹಿತರಿದ್ದಾರೆ. ಅವರು ಪ್ರತಿಯೊಂದು ಜೀವವನ್ನು ಉಳಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದರು. ಆದುದರಿಂದ ಸಮಾಜವು ಈ ಸಾಲವನ್ನು ಕೊರೊನಾದ ಮೊದಲ ಲಸಿಕೆಯನ್ನು ಆರೋಗ್ಯ ರಕ್ಷಣಾ ಕ್ಷೇತ್ರದ ಜನತೆಗೆ ನೀಡುವ ಮೂಲಕ ಮರುಪಾವತಿ ಮಾಡುತ್ತಿದೆ. ಈ ಲಸಿಕಾ ಕಾರ್ಯಕ್ರಮ ದೇಶವು ಕೃತಜ್ಞತಾಪೂರ್ವಕವಾಗಿ ಈ ಎಲ್ಲಾ ಸಹೋದ್ಯೋಗಿಗಳಿಂದ ಸಲ್ಲಿಸುತ್ತಿರುವ ಗೌರವ.

ಸಹೋದರರೇ ಮತ್ತು ಸಹೋದರಿಯರೇ,

ಮಾನವ ಚರಿತ್ರೆಯಲ್ಲಿ ಹಲವಾರು ಪ್ರಾಕೃತಿಕ ವಿಕೋಪಗಳು, ಸಾಂಕ್ರಾಮಿಕಗಳು, ಭೀಕರ ಯುದ್ದಗಳು ಜರಗಿ ಹೋಗಿವೆ, ಆದರೆ ಯಾರೊಬ್ಬರೂ ಕೊರೊನಾದಂತಹ ಸವಾಲನ್ನು ಕಲ್ಪಿಸಿಕೊಂಡಿರಲಿಲ್ಲ. ವಿಜ್ಞಾನಕ್ಕಾಗಲೀ, ಸಮಾಜಕ್ಕಾಗಲೀ ಅನುಭವಿಸಿ ಗೊತ್ತಿಲ್ಲದ ಸಾಂಕ್ರಾಮಿಕವಾಗಿತ್ತದು. ಎಲ್ಲಾ ದೇಶಗಳಿಂದ ಬರುತ್ತಿದ್ದ ಚಿತ್ರಗಳು ಮತ್ತು ಸುದ್ದಿಗಳು ಇಡೀ ವಿಶ್ವವನ್ನು ಮತ್ತು ಪ್ರತಿಯೊಬ್ಬ ಭಾರತೀಯರನ್ನು ಅಸ್ಥಿರಗೊಳಿಸುತ್ತಿದ್ದವು.ಇಂತಹ ಪರಿಸ್ಥಿತಿಯಲ್ಲಿ, ವಿಶ್ವದ ಪ್ರಮುಖ ತಜ್ಞರು ಭಾರತದ ಬಗ್ಗೆ ವಿವಿಧ ರೀತಿಯ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದರು.

ಆದರೆ ಸ್ನೇಹಿತರೇ,

ನಾವು ಭಾರತದ ದೌರ್ಬಲ್ಯ ಎಂದು ಪರಿಗಣಿಸಲ್ಪಡುತ್ತಿದ್ದ ದೊಡ್ಡ ಜನಸಂಖ್ಯೆಯನ್ನು ನಮ್ಮ ಶಕ್ತಿಯನ್ನಾಗಿ ಪರಿವರ್ತಿಸಿದೆವು. ಭಾರತವು ಸೂಕ್ಷ್ಮತ್ವ ಮತ್ತು ಸಹಭಾಗಿತ್ವವನ್ನು ಯುದ್ದದ ತಳಹದಿಯನ್ನಾಗಿ ಮಾಡಿಕೊಂಡಿತು. ನಿರಂತರ ಜಾಗೃತವಾಗಿರುವುದಲ್ಲದೆ, ಪ್ರತಿಯೊಂದು ಬೆಳವಣಿಗೆಯ ಮೇಲೂ ನಿಗಾ ಇರಿಸಿತು. ಸಕಾಲದಲ್ಲಿ ಸರಿಯಾದ ನಿರ್ಧಾರಗಳನ್ನು ಭಾರತ ಕೈಗೊಂಡಿತು. ಜನವರಿ 30ರಂದು ಕೊರೊನಾದ ಮೊದಲ ಪ್ರಕರಣ ಪತ್ತೆಯಾದ ಎರಡೇ ವಾರಗಳಲ್ಲಿ ಭಾರತವು ಉನ್ನತಾಧಿಕಾರದ ಸಮಿತಿಯನ್ನು ರಚಿಸಿತು. ಕಳೆದ ವರ್ಷ ಇದೇ ದಿನ, ನಾವು ನಿಗಾ ವ್ಯವಸ್ಥೆಯನ್ನು ಆರಂಭಿಸಿದೆವು. 2020ರ ಜನವರಿ 17 ರಂದು ಭಾರತವು ತನ್ನ ಮೊದಲ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿತು. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡಲು ಆರಂಭಿಸಿದ ವಿಶ್ವದ ಮೊದಲ ದೇಶಗಳಲ್ಲಿ ಭಾರತವೂ ಒಂದು.

ಸ್ನೇಹಿತರೇ,

ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತ ತೋರಿದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿ, ಧೈರ್ಯ, ಸಾಮೂಹಿಕ ಶಕ್ತಿ ಬರಲಿರುವ ಅನೇಕ ತಲೆಮಾರುಗಳಿಗೆ ಪ್ರೇರೇಪಣೆಯಾಗಬಲ್ಲದು. ಜನತಾ ಕರ್ಫ್ಯೂವನ್ನು ಸ್ಮರಿಸಿಕೊಳ್ಳಿ, ಇದು ಕೊರೊನಾ ವಿರುದ್ಧ ನಮ್ಮ ಸಮಾಜದ ಪ್ರತಿಬಂಧಕ ಶಕ್ತಿ ಮತ್ತು ಶಿಸ್ತಿನ ಪರೀಕ್ಷೆಯಾಗಿತ್ತು. ಮತ್ತು ಇದರಲ್ಲಿ ಪ್ರತಿಯೊಬ್ಬ ದೇಶವಾಸಿಯೂ ಯಶಸ್ವಿಯಾದರು. ಜನತಾ ಕರ್ಫ್ಯೂ ದೇಶವನ್ನು ಲಾಕ್ ಡೌನ್ ಗೆ ಮಾನಸಿಕವಾಗಿ ಸಿದ್ದಗೊಳಿಸಿತು.ನಾವು ದೇಶದ ಭರವಸೆ, ಆತ್ಮ ವಿಶ್ವಾಸವನ್ನು ಚಪ್ಪಾಳೆ ತಟ್ಟುವ ಮೂಲಕ , ಜಾಗಟೆ ಬಾರಿಸುವ ಮೂಲಕ ಮತ್ತು ದೀಪಗಳನ್ನು ಹಚ್ಚುವ ಮೂಲಕ ಉದ್ದೀಪನಗೊಳಿಸಿದೆವು.

ಸ್ನೇಹಿತರೇ,

ಕೊರೊನಾದಂತಹ ಅಗೋಚರ ವೈರಿಯ ಸೋಂಕನ್ನು ತಡೆಯಲು ಅತ್ಯಂತ ಸಮರ್ಪಕ ಹಾದಿ ಎಂದರೆ ಅದರ ಪರಿಣಾಮಗಳು ಹಲವಾರು ಮುಂದುವರಿದ ದೇಶಗಳಿಗೂ ಗ್ರಹಿಕೆಗೆ ಸಿಕ್ಕಿರದಂತಹ, ಅರಿವಿಲ್ಲದಂತಹ ಸ್ಥಿತಿಯಲ್ಲಿ ಜನರನ್ನು ಅವರೆಲ್ಲಿದ್ದಾರೋ ಅಲ್ಲಿಯೇ ನಿಲ್ಲಿಸಬೇಕಾಗಿತ್ತು. ಆದುದರಿಂದ ದೇಶದಲ್ಲಿ ಲಾಕ್ ಡೌನ್ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ನಿರ್ಧಾರ ಸುಲಭದ್ದಾಗಿರಲಿಲ್ಲ. ಇಂತಹ ಬೃಹತ್ ಜನಸಂಖ್ಯೆಯನ್ನು ಮನೆಯೊಳಗೆ ಉಳಿಸುವುದು ಅಸಾಧ್ಯ ಎಂಬುದು ನಮಗೆ ಗೊತ್ತಿತ್ತು. ಮತ್ತು ಈ ದೇಶದಲ್ಲಿ ಎಲ್ಲವನ್ನೂ ಬಂದ್ ಮಾಡಲಾಗುತಿತ್ತು, ಅದು ಲಾಕ್ ಡೌನ್ ಆಗಿತ್ತು. ನಾವು ಇದರ ಪರಿಣಾಮವನ್ನು ಅಂದಾಜಿಸಿದ್ದೆವು. ಜನತೆಯ ಜೀವನೋಪಾಯ ಮತ್ತು ಆರ್ಥಿಕತೆಯ ಮೇಲೆ ಆಗಬಹುದಾದ ಪರಿಣಾಮವನ್ನು ಮೌಲ್ಯಮಾಪನ ಮಾಡಿದ್ದೆವು. ಆದರೆ ದೇಶವು ’जान है तो जहान है’ ಎಂಬ ಮಂತ್ರವನ್ನು (ಅಂದರೆ ಜೀವ ಇದ್ದರೆ ಜಗತ್ತು ಇರುತ್ತದೆ) ಅನುಸರಿಸಿ ದೇಶದ ಪ್ರತಿಯೊಬ್ಬ ಭಾರತೀಯರ ಜೀವ ಉಳಿಸುವುದಕ್ಕೆ ಗರಿಷ್ಟ ಆದ್ಯತೆ ನೀಡಿತು. ಮತ್ತು ಎಷ್ಟು ತ್ವರಿತವಾಗಿ ಇಡೀ ದೇಶ, ಇಡೀ ಸಮಾಜ, ಈ ಸ್ಪೂರ್ತಿಯೊಂದಿಗೆ ಹೇಗೆ ಎದ್ದು ನಿಂತಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ನಾನು ಕೂಡಾ ಹಲವಾರು ಸಂದರ್ಭಗಳಲ್ಲಿ ಸಣ್ಣ ಆದರೆ ಪ್ರಮುಖ ಸಂಗತಿಗಳನ್ನು ತಿಳಿಸಲು ಹಲವು ಬಾರಿ ದೇಶವಾಸಿಗಳೊಂದಿಗೆ ನೇರ ಸಂವಾದ ನಡೆಸಿದೆ. ಒಂದೆಡೆ ಬಡವರಿಗೆ ಉಚಿತ ಆಹಾರ ಒದಗಿಸಲಾಗುತ್ತಿದ್ದರೆ ಇನ್ನೊಂದೆಡೆ ಹಾಲು, ತರಕಾರಿಗಳು, ಪಡಿತರ, ಅಡುಗೆ ಅನಿಲ, ಒಷಧಿಗಳು ಸಹಿತ ಅಂತಹ ಹಲವು ಅವಶ್ಯಕ ಸಾಮಗ್ರಿಗಳ ಸುಲಭ ಲಭ್ಯತೆಯನ್ನು ಖಾತ್ರಿಪಡಿಸಲಾಗಿತ್ತು. ದೇಶದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಗೃಹ ವ್ಯವಹಾರಗಳ ಸಚಿವಾಲಯ 24*7 ನಿಯಂತ್ರಣ ಕೊಠಡಿಯನ್ನು ತೆರೆಯಿತು ಮತ್ತು ಇದರಲ್ಲಿ ಸಾವಿರಾರು ಕರೆಗಳಿಗೆ ಉತ್ತರಿಸಲಾಯಿತು. ಜನತೆಗೆ ಪರಿಹಾರಗಳನ್ನು ಒದಗಿಸಲಾಯಿತು.

ಸ್ನೇಹಿತರೇ,

ಇಂದು ಇಡೀ ವಿಶ್ವವು ಈ ಜಾಗತಿಕ ಸಾಂಕ್ರಾಮಿಕದ ವಿರುದ್ದ ಭಾರತ ನಡೆಸಿದ ಹೋರಾಟವನ್ನು ಗಮನಿಸಿ ಶ್ಲಾಘಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಸರಕಾರದ ಪ್ರತೀ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು, ಒಗ್ಗೂಡಿ ಹೇಗೆ ಕೆಲಸ ಮಾಡಬಲ್ಲವು ಎಂಬುದಕ್ಕೆ ಭಾರತವು ಒಂದು ಉದಾಹರಣೆಯಾಗಿದೆ. ಇಸ್ರೋ, ಡಿ.ಆರ್.ಡಿ.ಒ., ಸೇನಾ ಸಿಬ್ಬಂದಿಗಳು, ರೈತರು ಮತ್ತು ಕಾರ್ಮಿಕರು ಎಲ್ಲರೂ ಒಗ್ಗೂಡಿ ಏಕ ಮನಸ್ಸಿನಿಂದ ಒಂದೇ ಧ್ಯೇಯದಡಿ ಹೇಗೆ ಕೆಲಸ ಮಾಡಬಹುದು ಎಂಬುದನ್ನೂ ಭಾರತ ತೋರಿಸಿಕೊಟ್ಟಿದೆ. “ಎರಡು ಯಾರ್ಡ್ ಗಳ ಅಂತರ ಮತ್ತು ಮುಖಗವಸು ಕಡ್ಡಾಯ” ಎಂಬುದಕ್ಕೆ ಆದ್ಯ ಗಮನ ನೀಡಿದ ಪ್ರಮುಖ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ಈ ಎಲ್ಲಾ ಪ್ರಯತ್ನಗಳ ಫಲವಾಗಿ ಕೊರೊನಾದಿಂದಾಗಿ ಭಾರತದಲ್ಲಿ ಸಾವಿನ ಪ್ರಕರಣಗಳ ದರ ಅತ್ಯಂತ ಕಡಿಮೆಯಾಗಿದೆ ಮತ್ತು ಗುಣಮುಖ ದರ ಅತ್ಯಂತ ಹೆಚ್ಚಾಗಿದೆ. ಕೊರೊನಾದಿಂದಾಗಿ ಒಂದೇ ಒಂದು ಸಾವು ಸಂಭವಿಸದ ಹಲವು ಜಿಲ್ಲೆಗಳು ದೇಶದಲ್ಲಿವೆ. ಈ ಜಿಲ್ಲೆಗಳಲ್ಲಿ ಪ್ರತಿಯೊಬ್ಬರೂ ಕೊರೊನಾದಿಂದ ಗುಣಮುಖರಾದ ಬಳಿಕ ತಮ್ಮ ಮನೆ ಸೇರಿದ್ದಾರೆ. ಕಳೆದ ಎರಡು ವಾರಗಳಲ್ಲಿ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ವರದಿಯಾಗದ ಹಲವು ಜಿಲ್ಲೆಗಳಿವೆ. ಭಾರತವು ಲಾಕ್ ಡೌನ್ ನಿಂದಾಗಿ ಆರ್ಥಿಕತೆಯ ಮೇಲಾದ ಹಾನಿಯಿಂದ ಚೇತರಿಸಿಕೊಳ್ಳುತ್ತಿದೆ ಮತ್ತು ಅದು ಮುಂಚೂಣಿಯಲ್ಲಿದೆ. ಹಲವಾರು ಸಂಕಷ್ಟಗಳ ನಡುವೆಯೂ ವಿಶ್ವದ 150ಕ್ಕೂ ಅಧಿಕ ರಾಷ್ಟ್ರಗಳಿಗೆ ಅವಶ್ಯಕ ಔಷಧಿ ಮತ್ತು ವೈದ್ಯಕೀಯ ಸಹಾಯ ಒದಗಿಸಿದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಅದು ಪ್ಯಾರಾಸಿಟಮೋಲ್ ಇರಲಿ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಪರೀಕ್ಷಾ ಸಾಮಗ್ರಿಗಳಿರಲಿ, ಭಾರತವು ಇತರ ದೇಶಗಳ ಜನತೆಯ ಜೀವವನ್ನು ಉಳಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಈಗ ನಾವು ನಮ್ಮ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ವಿಶ್ವವು ಭಾರತದತ್ತ ಭರವಸೆ ಮತ್ತು ನಿರೀಕ್ಷೆಗಳಿಂದ ನೋಡುತ್ತಿದೆ. ನಮ್ಮ ಲಸಿಕಾ ಕಾರ್ಯಕ್ರಮ ಪ್ರಗತಿ ಹೊಂದುತ್ತಿದ್ದಂತೆ, ಈ ಜಗತ್ತಿನ ಹಲವಾರು ದೇಶಗಳು ನಮ್ಮ ಅನುಭವದಿಂದ ಲಾಭ ಪಡೆಯಲಿವೆ. ಭಾರತದ ಲಸಿಕೆಗಳು, ನಮ್ಮ ಉತ್ಪಾದನಾ ಸಾಮರ್ಥ್ಯ ಇಡೀ ಮನುಕುಲದ ಹಿತಾಸಕ್ತಿಯನ್ನು ಕಾಪಾಡಲು ಸಹಾಯ ಮಾಡಲಿದೆ.

ಸಹೋದರರೇ ಮತ್ತು ಸಹೋದರಿಯರೇ

ಈ ಲಸಿಕಾ ಪ್ರಚಾರಾಂದೋಲನ ಬಹಳ ಧೀರ್ಘ ಕಾಲ ನಡೆಯಲಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ಕೊಡುಗೆ ನೀಡುವಂತಹ ಅವಕಾಶ ನಮಗೆ ದೊರಕಿದೆ. ಆದುದರಿಂದ ದೇಶದೊಳಗೆ ಈ ಆಂದೋಲನದ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸ್ವಯಂಸೇವಕರು ಮುಂದೆ ಬರುತ್ತಿದ್ದಾರೆ. ನಾನವರನ್ನು ಸ್ವಾಗತಿಸುತ್ತೇನೆ ಮತ್ತು ಇನ್ನಷ್ಟು ಮಂದಿ ಸ್ವಯಂಸೇವಕರು ಮುಂದೆ ಬಂದು ತಮ್ಮ ಸಮಯವನ್ನು ಈ ಉತ್ತಮ ಕಾರ್ಯಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡುತ್ತೇನೆ. ಹೌದು, ನಾನು ಈ ಮೊದಲು ಹೇಳಿದಂತೆ ಮುಖಗವಸುಗಳು, ಎರಡು ಯಾರ್ಡ್ ಅಂತರ ಮತ್ತು ಸ್ವಚ್ಛತೆ ಲಸಿಕಾ ಕಾರ್ಯಕ್ರಮದ ಅವಧಿಯಲ್ಲಿ ಮತ್ತು ಆ ಬಳಿಕವೂ ಅವಶ್ಯವಾಗಿ ಅನುಸರಿಸಬೇಕಾಗುತ್ತದೆ. ನೀವು ಲಸಿಕೆ ಪಡೆದುಕೊಂಡಿದ್ದರೆ, ಕೊರೊನಾದಿಂದ ರಕ್ಷಣೆ ಪಡೆಯುವ ಇತರ ಹಾದಿಗಳನ್ನು ಕೈಬಿಡಬೇಕು ಎಂಬುದಲ್ಲ. ನಾವೀಗ ಹೊಸ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ-ಔಷಧಿ ಮತ್ತು ಅದರ ಜೊತೆಗೆ ಶಿಸ್ತು. ಈ ಆಶಯದೊಂದಿಗೆ ನೀವೆಲ್ಲರೂ ಆರೋಗ್ಯದಿಂದಿರಿ, ನಾನು ಈ ಲಸಿಕಾ ಆಂದೋಲನಕ್ಕಾಗಿ ಇಡೀ ದೇಶಕ್ಕೆ ಶುಭವನ್ನು ಹಾರೈಸುತ್ತೇನೆ!. ನಿರ್ದಿಷ್ಟವಾಗಿ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಮತ್ತು ದೇಶಕ್ಕೆ ಮತ್ತು ಮನುಕುಲಕ್ಕೆ ಈ ಲಸಿಕೆಯನ್ನು ಒದಗಿಸಲು ತಮ್ಮ ಪ್ರಯೋಗಾಲಯಗಳಲ್ಲಿ ಋಷಿಗಳಂತೆ ತಮ್ಮ ಒಂದು ವರ್ಷವನ್ನು ವಿನಿಯೋಗಿಸಿದವರಿಗೆ, ಪ್ರಯೋಗಾಲಯ ಕೆಲಸದಲ್ಲಿ ತೊಡಗಿಕೊಂಡವರಿಗೆ ನಾನು ಅಭಿನಂದಿಸುತ್ತೇನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ನಿಮ್ಮೆಲ್ಲರಿಗೂ ತುಂಬಾ ತುಂಬಾ ಶುಭಹಾರೈಕೆಗಳು. ಇದರ ಪ್ರಯೋಜನವನ್ನು ಮೊದಲಾಗಿ ಪಡೆದುಕೊಳ್ಳಿ. ನೀವು ಮತ್ತು ನಿಮ್ಮ ಕುಟುಂಬ ಆರೋಗ್ಯವಂತವಾಗಿರಲಿ!. ಇಡೀ ಮನುಕುಲ ಈ ಬಿಕ್ಕಟ್ಟಿನಿಂದ ಹೊರಬರಲಿ ಮತ್ತು ನಾವೆಲ್ಲರೂ ಆರೋಗ್ಯವಂತರಾಗಿರೋಣ!. ಈ ಹಾರೈಕೆಗಳೊಂದಿಗೆ ನಿಮಗೆ ಬಹಳ ಬಹಳ ಧನ್ಯವಾದಗಳು!

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
BSNL turns profitable after 17 years: Rs 280 crore Q4 profit signals telecom giant’s historic revival

Media Coverage

BSNL turns profitable after 17 years: Rs 280 crore Q4 profit signals telecom giant’s historic revival
NM on the go

Nm on the go

Always be the first to hear from the PM. Get the App Now!
...
Prime Minister meets the young cricketing sensation Vaibhav Suryavanshi
May 30, 2025

Prime Minister, Shri Narendra Modi met the young cricketing sensation Vaibhav Suryavanshi and his family, today, at the Patna airport."His cricketing skills are being admired all over the nation! My best wishes to him for his future endeavours", Shri Modi stated.

|
|

The Prime Minister posted on X :

"At Patna airport, met the young cricketing sensation Vaibhav Suryavanshi and his family. His cricketing skills are being admired all over the nation! My best wishes to him for his future endeavours."