ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಮ್.ಎಸ್.ಎಮ್.ಇ) ಕೇಂದ್ರ ಸರಕಾರದ ಬೆಂಬಲ ಮತ್ತು ಜನಸಂಪರ್ಕ ಉಪಕ್ರಮಗಳನ್ನು ನವೆಂಬರ್ 02, 2018 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ದೆಹಲಿಯಲ್ಲದೆ, ದೇಶದಾದ್ಯಂತ 100ಕ್ಕೂ ಅಧಿಕ ಸ್ಥಳಗಳಲ್ಲಿ ಇದೇ ರೀತಿಯ ಉದ್ಘಾಟನಾ ಕಾರ್ಯಕ್ರಮಗಳು ಜರುಗಲಿವೆ. ಕೇಂದ್ರ ಸಚಿವರು ಮತ್ತು ರಾಜ್ಯ ಸರಕಾರಗಳ ಸಚಿವರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದೆಲ್ಲೆಡೆಯ ವಿವಿಧ ಸ್ಥಳೀಯ ಕಾರ್ಯಕ್ರಮಗಳಿಗೆ ನವದೆಹಲಿಯ ಮುಖ್ಯ ಕಾರ್ಯಕ್ರಮದೊಂದಿಗೆ ಸಂಪರ್ಕ ಕಲ್ಪಿಸಲಿದ್ದು, ಪ್ರಧಾನಮಂತ್ರಿ ಅವರು ವಿಶೇಷ ಭಾಷಣ ನೀಡಲಿದ್ದಾರೆ .ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಎಮ್.ಎಸ್.ಎಮ್.ಇ ಕ್ಷೇತ್ರದ ಪ್ರಮುಖ ಆಸಕ್ತಿಯ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಇತ್ತೀಚಿಗಿನ ವರುಷಗಳಲ್ಲಿ ಕೇಂದ್ರ ಸರಕಾರ ಎಮ್.ಎಸ್.ಎಮ್.ಇ ವಲಯಕ್ಕೆ ಅತ್ಯುನ್ನತ ಆದ್ಯತೆಯನ್ನು ನೀಡಿದೆ. ಜನಸಂಪರ್ಕ ಮತ್ತು ಬೆಂಬಲ ಕಾರ್ಯಕ್ರಮಗಳು ಮುಂದಿನ 100 ದಿನಗಳ ಕಾಲ ದೇಶದಾದ್ಯಂತ ಎಲ್ಲೆಡೆ ನಡೆಯಲಿದ್ದು, ಈ ಕ್ಷೇತ್ರಕ್ಕಾಗಿ ಕೈಗೊಂಡಿರುವ ಪ್ರಯತ್ನಗಳಿಗೆ ಅಧಿಕ ಸಹಭಾಗಿತ್ವ ನೀಡುವ ನಿರೀಕ್ಷೆ ಇದೆ. ಈ ಯೋಜನೆಯ ಪ್ರಗತಿಯನ್ನು ಮಿಷನ್ ರೀತಿಯಲ್ಲಿ ಅನುಷ್ಠಾನಗೊಳಿಸಲಿದ್ದು, ಅದು ಸಾಕಾರಗೊಳ್ಳಲು ಕೇಂದ್ರದ ಮತ್ತು ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳು ನಿರಂತರವಾಗಿ ಪರಿವೀಕ್ಷಣೆ ನಡೆಸಲಿದ್ದಾರೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀ ಅರುಣ್ ಜೇಟ್ಲಿ ಮತ್ತು ಕೇಂದ್ರ ಎಮ್.ಎಸ್.ಎಮ್.ಇ ಖಾತೆಯ ಸಹಾಯಕ (ಸ್ವ/ನಿ) ಸಚಿವ ಶ್ರೀ ಗಿರಿರಾಜ್ ಸಿಂಗ್ ಇವರೂ ಇತರ ಗಣ್ಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.