QuoteThis year India completed 75 years of her independence and this very year Amritkaal commenced: PM Modi
QuoteThe various successes of India in 2022 have created a special place for our country all over the world: PM Modi
QuoteIn 2022 India attained the status of the world's fifth largest economy, crossed the magical exports figure of 400 billion dollars: PM Modi
QuoteAtal Ji was a great statesman who gave exceptional leadership to the country: PM Modi
QuoteAs more and more Indian medical methods become evidence-based, its acceptance will increase across the world: PM Modi
QuoteIndia will soon completely eradicate Kala Azar: PM Modi
QuoteMaa Ganga is integral to our culture and tradition, it is our collective responsibility to keep the River clean: PM Modi
QuoteThe United Nations has included 'Namami Gange' mission in the world's top 10 initiatives aimed at reviving the (natural) ecosystem: PM Modi
Quote'Swachh Bharat Mission' has become firmly rooted in the mind of every Indian today: PM Modi
QuoteCorona is increasing in many countries of the world, so we have to take more care of precautions like mask and hand washing: PM Modi

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇಂದು ನಾವು ಮನದ ಮಾತಿನ 96 ನೇ ಕಂತಿನಲ್ಲಿ ಭೇಟಿಯಾಗುತ್ತಿದ್ದೇವೆ. ಮನದ ಮಾತಿನ ಮುಂದಿನ ಕಂತು 2023 ರ ಮೊದಲ ಕಂತಾಗಲಿದೆ. ನೀವು ಕಳುಹಿಸಿದ ಸಂದೇಶಗಳಲ್ಲಿ ಕಳೆದುಹೋಗುತ್ತಿರುವ 2022 ನೇ ಸಾಲಿನ ಬಗ್ಗೆ ಮಾತನಾಡುವಂತೆ ಆಗ್ರಹಿಸಲಾಗಿದೆ. ಮುಗಿದ ಅಧ್ಯಾಯದ ಅವಲೋಕನ ನಮಗೆ ಸದಾ ವರ್ತಮಾನ ಮತ್ತು ಭವಿಷ್ಯದ ತಯಾರಿಗೆ ಪ್ರೇರಣೆಯನ್ನು ನೀಡುತ್ತದೆ. 2022 ರಲ್ಲಿ ದೇಶದ ಜನತೆಯ ಸಾಮರ್ಥ್ಯ, ಅವರ ಸಹಯೋಗ, ಅವರ ಸಂಕಲ್ಪ, ಅವರ ಸಫಲತೆಯ ವಿಸ್ತಾರ ಎಷ್ಟು ವಿಶಾಲವಾಗಿತ್ತು ಎಂದರೆ ಮನದ ಮಾತಿನಲ್ಲಿ ಅದನ್ನು ಒಗ್ಗೂಡಿಸುವುದು ಕಷ್ಟಸಾಧ್ಯ. 2022 ಬಹಳಷ್ಟು ವಿಧಗಳಲ್ಲಿ ಪ್ರೇರಣಾದಾಯಕವಾಗಿತ್ತು, ಅದ್ಭುತವಾಗಿತ್ತು. ಈ ವರ್ಷ ಭಾರತ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದೆ. ಇದೇ ವರ್ಷ ಅಮೃತ ಕಾಲವೂ ಪ್ರಾರಂಭವಾಯಿತು. ಈ ವರ್ಷ ದೇಶ ಹೊಸ ವೇಗವನ್ನು ಪಡೆದುಕೊಂಡಿದೆ. ಪ್ರತಿಯೊಬ್ಬ ಭಾರತೀಯನೂ ಒಂದಕ್ಕಿಂತ ಒಂದು ಉತ್ತಮ ಕೆಲಸವನ್ನು ಮಾಡಿದ್ದಾನೆ. 2022 ರ ವಿಭಿನ್ನ ರೀತಿಯ ಸಫಲತೆ ಇಂದು ಸಂಪೂರ್ಣ ವಿಶ್ವದಲ್ಲಿ ಭಾರತಕ್ಕೆ ಒಂದು ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿದೆ. 2022 ಅಂದರೆ ಭಾರತದ ಮುಖಾಂತರ ವಿಶ್ವದ 5 ನೇ ಅತಿ ದೊಡ್ಡ ಅರ್ಥವ್ಯವಸ್ಥೆಯ ಗುರಿ ತಲುಪಿದ್ದಾಗಿದೆ. 2022 ಅಂದರೆ ಭಾರತ ಊಹಿಸಲಸಾಧ್ಯವಾದ 220 ಕೋಟಿಗೂ ಹೆಚ್ಚು ಲಸಿಕೆಗಳನ್ನು ಪೂರೈಸಿರುವ  ದಾಖಲೆ. 2022 ಎಂದರೆ ಭಾರತವು 400 ಬಿಲಿಯನ್ ಡಾಲರ್ ರಫ್ತುಗಳ ಮಾಂತ್ರಿಕ ಸಂಖ್ಯೆಯನ್ನು ಮೀರಿದ ಸಾಧನೆ, 2022 ಎಂದರೆ ದೇಶದ ಜನರು 'ಸ್ವಾವಲಂಬಿ ಭಾರತ' ಎಂಬ ಸಂಕಲ್ಪವನ್ನು ಅಳವಡಿಸಿಕೊಳ್ಳುವುದು ಮತ್ತು ಅದನ್ನು ಅನುಸರಿಸಿ ತೋರಿಸುವುದಾಗಿದೆ. 2022 ಎಂದರೆ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ್ ಗೆ ಸ್ವಾಗತ ಕೋರಿದ ವರ್ಷ, 2022 ಎಂದರೆ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ವಲಯದಲ್ಲಿ ಭಾರತದ ವೈಭವ, 2022 ಎಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತನ್ನ ಶಕ್ತಿಯನ್ನು ಮೆರೆದ ವರ್ಷ. ಕಾಮನ್‌ವೆಲ್ತ್ ಕ್ರೀಡಾಕೂಟವಾಗಲಿ ಅಥವಾ ನಮ್ಮ ಮಹಿಳಾ ಹಾಕಿ ತಂಡದ ವಿಜಯವಾಗಲಿ ಕ್ರೀಡಾ ಕ್ಷೇತ್ರದಲ್ಲಿಯೂ ಸಹ, ನಮ್ಮ ಯುವಕರು ಅದ್ಭುತ ಸಾಮರ್ಥ್ಯವನ್ನು ತೋರಿದ್ದಾರೆ.      

ಸ್ನೇಹಿತರೇ, ಇದೆಲ್ಲದರ ಜೊತೆಗೆ, 2022 ರ ವರ್ಷವು ಇನ್ನೂ ಒಂದು ಕಾರಣಕ್ಕಾಗಿ ಎಂದಿಗೂ ಸ್ಮರಣೆಯಲ್ಲಿ ಉಳಿಯುತ್ತದೆ. ಇದು ‘ಏಕ್ ಭಾರತ್-ಶ್ರೇಷ್ಠ ಭಾರತ’ ದ ಚೈತನ್ಯದ ವಿಸ್ತರಣೆಯಾಗಿದೆ. ದೇಶದ ಜನರು ಏಕತೆ ಮತ್ತು ಒಗ್ಗಟ್ಟನ್ನು ಆಚರಿಸಲು ಕೂಡ ಹಲವಾರು ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದರು. ರುಕ್ಮಿಣಿಯ ವಿವಾಹ ಮತ್ತು ಶ್ರೀಕೃಷ್ಣನ ಪೂರ್ವ ಸಂಬಂಧವನ್ನು ಆಚರಿಸುವ ಗುಜರಾತ್ ನ ಮಾಧವಪುರ ಮೇಳವಾಗಲಿ ಇಲ್ಲವೆ ಕಾಶಿ-ತಮಿಳು ಸಂಗಮವಾಗಲಿ, ಈ ಹಬ್ಬಗಳಲ್ಲಿ ಏಕತೆಯ ಹಲವು ಬಣ್ಣಗಳು ಗೋಚರಿಸಿದವು. 2022ರಲ್ಲಿ ದೇಶವಾಸಿಗಳು ಮತ್ತೊಂದು ಅಮರ ಇತಿಹಾಸ ಬರೆದಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿದ 'ಹರ್ ಘರ್ ತಿರಂಗಾ' ಅಭಿಯಾನವನ್ನು ಯಾರು ಮರೆಯಲು ಸಾಧ್ಯ. ದೇಶದ ಪ್ರತಿ ಪ್ರಜೆಯ ಮೈನವಿರೇಳುವಂತಹ ಕ್ಷಣಗಳವು. ಸ್ವಾತಂತ್ರ್ಯದ 75 ವರ್ಷಗಳ ಈ ಅಭಿಯಾನದಲ್ಲಿ ಇಡೀ ದೇಶವೇ ತ್ರಿವರ್ಣ ಧ್ವಜಮಯವಾಯಿತು. 6 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕೂಡ ಕಳುಹಿಸಿದ್ದಾರೆ. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮುಂದಿನ ವರ್ಷವೂ ಇದೇ ರೀತಿ ಮುಂದುವರಿಯುತ್ತದೆ - ಇದು ಅಮೃತ ಕಾಲದ ಅಡಿಪಾಯವನ್ನು ಮತ್ತಷ್ಟು ಸಬಲಗೊಳಿಸಲಿದೆ.

 ಸ್ನೇಹಿತರೇ, ಈ ವರ್ಷ ಭಾರತಕ್ಕೆ ಜಿ-20 ರಾಷ್ಟ್ರಗಳ ಸಮೂಹದ ಅಧ್ಯಕ್ಷತೆಯ ಜವಾಬ್ದಾರಿ ದೊರೆತಿದೆ. ಕಳೆದ ಬಾರಿ ನಾನು ಈ ಬಗ್ಗೆ ವಿವರವಾಗಿ ಚರ್ಚಿಸಿದ್ದೆ. 2023 ರಲ್ಲಿ, ನಾವು G-20 ಯ ಉತ್ಸಾಹವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ, ಈ ಕಾರ್ಯಕ್ರಮವನ್ನು ಜನಾಂದೋಲನವನ್ನಾಗಿ ಮಾಡಬೇಕಿದೆ.

ನನ್ನ ಪ್ರಿಯ ದೇಶವಾಸಿಗಳೇ, ಇಂದು ಕ್ರಿಸ್‌ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದು ಯೇಸುಕ್ರಿಸ್ತನ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ನಿಮ್ಮೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಅನಂತ ಶುಭಾಶಯಗಳನ್ನು ಕೋರುತ್ತೇನೆ

ಸ್ನೇಹಿತರೇ, ಇಂದು ನಮ್ಮ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು. ಅವರು ದೇಶಕ್ಕೆ ಅಸಾಧಾರಣ ನಾಯಕತ್ವವನ್ನು ನೀಡಿದ ಮಹಾನ್ ರಾಜಕಾರಿಣಿ ಆಗಿದ್ದರು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ನನಗೆ ಕೋಲ್ಕತ್ತಾದಿಂದ ಆಸ್ತಾಜಿಯವರ ಪತ್ರ ಬಂದಿದೆ. ಈ ಪತ್ರದಲ್ಲಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಅವರು ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದೆ ಎಂದು ಅವರು ಬರೆದಿದ್ದಾರೆ. ಈ ಸಂಗ್ರಹಾಲಯದಲ್ಲಿರುವ ಅಟಲ್ ಜಿ ಅವರ ಗ್ಯಾಲರಿ ಅವರಿಗೆ ತುಂಬಾ ಇಷ್ಟವಾಗಿತ್ತು. ಅಟಲ್ ಜೀ ಅವರೊಂದಿಗೆ ಕ್ಲಿಕ್ಕಿಸಿದ ಚಿತ್ರವು ಅವರಿಗೆ ಸ್ಮರಣೀಯವಾಗಿದೆ. ಅಟಲ್ ಜಿ ಅವರ ಗ್ಯಾಲರಿಯಲ್ಲಿ, ದೇಶಕ್ಕೆ ಅವರ ಅಮೂಲ್ಯ ಕೊಡುಗೆಯ ಪ್ರಮುಖ ಅಂಶಗಳನ್ನು ನಾವಿಲ್ಲಿ ಕಾಣಬಹುದು. ಮೂಲಸೌಕರ್ಯ, ಶಿಕ್ಷಣ ಅಥವಾ ವಿದೇಶಾಂಗ ನೀತಿಯಾಗಿರಲಿ, ಅವರು ಪ್ರತಿ ಕ್ಷೇತ್ರದಲ್ಲೂ ಭಾರತವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಿದ್ದರು. ನಾನು ಮತ್ತೊಮ್ಮೆ ನನ್ನ ಹೃದಯಪೂರ್ವಕವಾಗಿ ಅಟಲ್ ಜೀ ಅವರಿಗೆ ನಮಸ್ಕರಿಸುತ್ತೇನೆ.

ಸ್ನೇಹಿತರೇ, ನಾಳೆ ಡಿಸೆಂಬರ್ 26 ರಂದು 'ವೀರ್ ಬಾಲ್ ದಿವಸ್' ಆಚರಿಸಲಾಗುತ್ತದೆ. ಮತ್ತು ಈ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಹಿಬ್ ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ ಜಾದಾ ಫತೇ ಸಿಂಗ್ ಜಿ ಯಂತಹ ಹುತಾತ್ಮರಿಗೆ ಮೀಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ದೊರೆಯಲಿದೆ. ಸಾಹಿಬ್ ಜಾದಾ ಮತ್ತು ಮಾತಾ ಗುಜರಿ ಅವರ ತ್ಯಾಗವನ್ನು ದೇಶವು ಯಾವಾಗಲೂ ಸ್ಮರಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ ಹೀಗೆ ಹೇಳುತ್ತಾರೆ -

      ಸತ್ಯಂ ಕಿಂ ಪ್ರಮಾಣಮ್, ಪ್ರತ್ಯಕ್ಷಂ ಕಿಂ ಪ್ರಮಾಣಮ್ ।

ಅಂದರೆ, ಸತ್ಯಕ್ಕೆ ಪುರಾವೆ ಅಗತ್ಯವಿಲ್ಲ, ಪ್ರತ್ಯಕ್ಷವಾಗಿ ಕಾಣುವುದಕ್ಕೂ  ಪುರಾವೆ ಬೇಕಾಗಿಲ್ಲ. ಆದರೆ ಆಧುನಿಕ ವೈದ್ಯಕೀಯ ವಿಜ್ಞಾನದ ಮಾತನಾಡುವುದಾದರೆ, ಪುರಾವೆ- ಸಾಕ್ಷ್ಯ ಅತ್ಯಂತ ಹೆಚ್ಚಿನ ಮಹತ್ವ ಪಡೆಯುತ್ತದೆ. ಶತಮಾನಗಳಿಂದ ಭಾರತೀಯರ ಜೀವನದ ಅಂಗವಾಗಿದ್ದ ಯೋಗ ಮತ್ತು ಆಯುರ್ವೇದದಂತಹ ನಮ್ಮ ಧರ್ಮಗ್ರಂಥಗಳಿಗೆ ಹೋಲಿಸಿದಾಗ ಸಾಕ್ಷ್ಯಾಧಾರಿತ ಸಂಶೋಧನೆಯ ಕೊರತೆಯು ಇಂದಿಗೂ ಒಂದು ಸವಾಲಾಗಿಯೇ ಉಳಿದಿದೆ - ಫಲಿತಾಂಶಗಳು ಗೋಚರಿಸುತ್ತವೆ, ಆದರೆ ಪುರಾವೆ ಇರುವುದಿಲ್ಲ. ಆದರೆ, ಸಾಕ್ಷ್ಯಾಧಾರಿತ ಔಷಧದ ಯುಗದಲ್ಲಿ, ಯೋಗ ಮತ್ತು ಆಯುರ್ವೇದವು ಆಧುನಿಕ ಯುಗದ ಪರಿಶೀಲನೆ ಮತ್ತು ಪರೀಕ್ಷೆಗಳಲ್ಲಿ ಅಪ್ಪಟವೆಂದು ಸಾಬೀತಾಗಿದೆ ಎಂಬುದು ನನಗೆ ಸಂತೋಷವೆನಿಸಿದೆ. ಮುಂಬೈನಲ್ಲಿರುವ ಟಾಟಾ ಸ್ಮಾರಕ ಕೇಂದ್ರದ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಈ ಸಂಸ್ಥೆ ಸಂಶೋಧನೆ, ನಾವೀನ್ಯತೆ ಮತ್ತು ಕ್ಯಾನ್ಸರ್ ಆರೈಕೆಯಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗವು ತುಂಬಾ ಪರಿಣಾಮಕಾರಿ ಎಂದು ಈ ಕೇಂದ್ರ ನಡೆಸಿದ ತೀವ್ರ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಟಾಟಾ ಮೆಮೋರಿಯಲ್ ಸೆಂಟರ್ ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ಸ್ತನ ಕ್ಯಾನ್ಸರ್ ಸಮ್ಮೇಳನದಲ್ಲಿ ತನ್ನ ಸಂಶೋಧನೆಯ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆ. ಈ ಫಲಿತಾಂಶಗಳು ವಿಶ್ವದ ಅತಿದೊಡ್ಡ ತಜ್ಞರ ಗಮನವನ್ನು ಸೆಳೆದಿವೆ. ಏಕೆಂದರೆ, ಯೋಗದಿಂದ ರೋಗಿಗಳು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಟಾಟಾ ಸ್ಮಾರಕ ಕೇಂದ್ರವು ಸಾಕ್ಷಿ ಸಮೇತ ಪ್ರಸ್ತುತಪಡಿಸಿದೆ. ಈ ಕೇಂದ್ರದ ಸಂಶೋಧನೆಯ ಪ್ರಕಾರ, ಯೋಗದ ನಿಯಮಿತ ಅಭ್ಯಾಸ ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ರೋಗದ ಮರುಕಳಿಸುವಿಕೆ ಮತ್ತು ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡುತ್ತದೆ. ಪಾಶ್ಚಿಮಾತ್ಯ ವಿಧಾನಗಳ ಕಟ್ಟುನಿಟ್ಟಾದ ಮಾನದಂಡಗಳ ಪ್ರಕಾರ  ಭಾರತೀಯ ಸಾಂಪ್ರದಾಯಿಕ ಔಷಧವನ್ನು ಪರೀಕ್ಷಿಸಿದ ಮೊದಲ ಉದಾಹರಣೆ ಇದಾಗಿದೆ. ಅಲ್ಲದೆ, ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಯೋಗವು ಜೀವನದ ಗುಣಮಟ್ಟವನ್ನು ಸುಧಾರಿಸಿದೆ ಎಂದು ಸಾಬೀತುಪಡಿಸಿರುವ ಮೊದಲ ಅಧ್ಯಯನವೂ ಇದಾಗಿದೆ. ಇದರ ದೀರ್ಘಾವಧಿಯ ಪ್ರಯೋಜನಗಳೂ ಬೆಳಕಿಗೆ ಬಂದಿವೆ. ಪ್ಯಾರಿಸ್‌ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಆಂಕೊಲಾಜಿ  ಸಮ್ಮೇಳನದಲ್ಲಿ ಟಾಟಾ ಮೆಮೋರಿಯಲ್ ಸೆಂಟರ್ ತನ್ನ ಅಧ್ಯಯನದ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆ.

ಸ್ನೇಹಿತರೇ, ಇಂದಿನ ಯುಗದಲ್ಲಿ, ಭಾರತೀಯ ವೈದ್ಯಕೀಯ ವ್ಯವಸ್ಥೆಗಳು ಹೆಚ್ಚು ಸಾಕ್ಷ್ಯಾಧಾರಿತವಾಗಿವೆ, ಇಡೀ ಪ್ರಪಂಚದಲ್ಲಿ ಅವುಗಳ ಸ್ವೀಕಾರಾರ್ಹತೆ  ಹೆಚ್ಚಾಗುತ್ತದೆ. ಇದೇ ನಿಟ್ಟಿನಲ್ಲಿ ದೆಹಲಿಯ ಏಮ್ಸ್ ನಲ್ಲೂ ಪ್ರಯತ್ನ ನಡೆಯುತ್ತಿದೆ. ಇಲ್ಲಿ, ಆರು ವರ್ಷಗಳ ಹಿಂದೆ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಮೌಲ್ಯೀಕರಿಸಲು ಸೆಂಟರ್ ಫಾರ್ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ ಅನ್ನು ಸ್ಥಾಪಿಸಲಾಯಿತು. ಇದರಲ್ಲಿ ಆಧುನಿಕ ತಂತ್ರಗಳು ಮತ್ತು ಸಂಶೋಧನಾ ವಿಧಾನಗಳನ್ನು ಬಳಸಲಾಗುತ್ತದೆ. ಕೇಂದ್ರವು ಈಗಾಗಲೇ 20 ಪ್ರಬಂಧಗಳನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಮೂರ್ಛೆಯಿಂದ ಬಳಲುತ್ತಿರುವ ರೋಗಿಗಳಿಗೆ ಯೋಗದ ಪ್ರಯೋಜನಗಳನ್ನು ವಿವರಿಸಲಾಗಿದೆ. ಅದೇ ರೀತಿ, ನ್ಯೂರಾಲಜಿ ಜರ್ನಲ್‌ ಪತ್ರಿಕೆಯಲ್ಲಿ, ಅರೆ ತಲೆಶೂಲೆಯಲ್ಲಿ ಯೋಗದ ಪ್ರಯೋಜನಗಳನ್ನು ವಿವರಿಸಲಾಗಿದೆ. ಇಷ್ಟೇ ಅಲ್ಲದೆ, ಹೃದ್ರೋಗ, ಖಿನ್ನತೆ, ನಿದ್ರಾಹೀನತೆ ಮತ್ತು ಗರ್ಭಾವಸ್ಥೆಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳಂತಹ ಇನ್ನೂ ಅನೇಕ ರೋಗಗಳಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಾನು ವಿಶ್ವ ಆಯುರ್ವೇದ ಕಾಂಗ್ರೆಸ್‌ ನಲ್ಲಿ ಪಾಲ್ಗೊಳ್ಳಲು ಗೋವಾದಲ್ಲಿದ್ದೆ. 40ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಮತ್ತು 550ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಇಲ್ಲಿ ಮಂಡಿಸಲಾಯಿತು. ಇಲ್ಲಿ ನಡೆದ ಪ್ರದರ್ಶನದಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತದ ಸುಮಾರು 215 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದವು. ನಾಲ್ಕು ದಿನಗಳ ಕಾಲ ನಡೆದ ಈ ಎಕ್ಸಪೋದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಆಯುರ್ವೇದಕ್ಕೆ ಸಂಬಂಧಿಸಿದ ತಮ್ಮ ಅನುಭವವನ್ನು ಆನಂದಿಸಿದರು. ಆಯುರ್ವೇದ ಕಾಂಗ್ರೆಸ್‌ನಲ್ಲಿ, ಪ್ರಪಂಚದಾದ್ಯಂತದ ಆಯುರ್ವೇದ ತಜ್ಞರಲ್ಲಿ ನಾನು ಸಾಕ್ಷಾಧಾರಿತ ಸಂಶೋಧನೆಗಾಗಿ ಮತ್ತೊಮ್ಮೆ ಆಗ್ರಹಿಸಿದೆ. ಜಾಗತಿಕ ಮಹಾಮಾರಿಯಾದ ಕೊರೊನಾ ಸಮಯದಲ್ಲಿ ಯೋಗ ಮತ್ತು ಆಯುರ್ವೇದದ ಶಕ್ತಿಯನ್ನು ನಾವೆಲ್ಲರೂ ನೋಡುತ್ತಿದ್ದೇವೆ, ಇವುಗಳಿಗೆ ಸಂಬಂಧಿಸಿದ ಪುರಾವೆ ಆಧಾರಿತ ಸಂಶೋಧನೆ ಬಹಳ ಮಹತ್ವಪೂರ್ಣ ಎಂದು ಸಾಬೀತಾಗುತ್ತದೆ. ಯೋಗ, ಆಯುರ್ವೇದ ಮತ್ತು ನಮ್ಮ ಸಾಂಪ್ರದಾಯಿಕ ವೈದ್ಯಕೀಯ ವಿಧಾನಗಳಿಗೆ ಸಂಬಂಧಿಸಿದ ಪ್ರಯತ್ನಗಳ ಬಗ್ಗೆ ನಿಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿತ ಹಂಚಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ.

ನನ್ನ ಪ್ರಿಯ ದೇಶಬಾಂಧವರೆ, ಕಳೆದ ಕೆಲವು ವರ್ಷಗಳಲ್ಲಿ ನಾವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಸವಾಲುಗಳನ್ನು ಜಯಿಸಿದ್ದೇವೆ. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ವೈದ್ಯಕೀಯ ತಜ್ಞರು, ವಿಜ್ಞಾನಿಗಳು ಮತ್ತು ದೇಶವಾಸಿಗಳ ಇಚ್ಛಾಶಕ್ತಿಗೆ ಸಲ್ಲುತ್ತದೆ. ನಾವು ಭಾರತದಿಂದ ಸಿಡುಬು, ಪೋಲಿಯೊ ಮತ್ತು 'ಗಿನಿ ವರ್ಮ್' ಅಂತಹ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ.

ಇಂದು, ನಾನು 'ಮನದ ಮಾತು' ಶ್ರೋತೃಳಿಗೆ ಮತ್ತೊಂದು ಸವಾಲಿನ ಬಗ್ಗೆ ಹೇಳಬಯಸುತ್ತೇನೆ, ಈಗ ಅದು ನಿರ್ಮೂಲನೆಯ ಹಂತದಲ್ಲಿದೆ. ಅದೇನೆಂದರೆ– 'ಕಾಲಾ-ಅಜಾರ್' ಎಂಬ ಪರಾವಲಂಬಿ ಮರಳು ನೊಣದ ಕಡಿತದಿಂದ ಹರಡುವ ಜ್ವರ. ‘ಕಾಲಾ-ಅಜಾರ್’ ಪೀಡಿತರಿಗೆ ತಿಂಗಳಾನುಗಟ್ಟಲೆ ಜ್ವರ, ರಕ್ತಹೀನತೆ, ದೇಹ ಬಲಹೀನವಾಗುವುದು ಮತ್ತು ತೂಕ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತವೆ. ಈ ರೋಗವು ಮಕ್ಕಳಿಂದ ಹಿರಿಯರವರೆಗೆ ಯಾರಿಗಾದರೂ ಬರಬಹುದು. ಆದರೆ ಎಲ್ಲರ ಪ್ರಯತ್ನದಿಂದ ಪ್ರಸ್ತುತ ‘ಕಾಲಾ-ಅಜಾರ್’ ಹೆಸರಿನ ಈ ರೋಗ ವೇಗವಾಗಿ ನಿರ್ಮೂಲನೆಯಾಗುತ್ತಿದೆ. ಇತ್ತೀಚೆಗೆ ಕಾಲಾ-ಅಜಾರ್ ತೀವ್ರತೆ ಏಕಾಏಕಿ 4 ರಾಜ್ಯಗಳ 50 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹರಡಿತ್ತು. ಆದರೆ ಈಗ ಈ ರೋಗವು ಬಿಹಾರ ಮತ್ತು ಜಾರ್ಖಂಡ್‌ನ 4 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಬಿಹಾರ-ಜಾರ್ಖಂಡ್‌ನ ಜನತೆಯ ಸಾಮರ್ಥ್ಯ ಮತ್ತು ಅರಿವು ಈ ನಾಲ್ಕು ಜಿಲ್ಲೆಗಳಿಂದಲೂ ‘ಕಾಲಾ-ಅಜಾರ್’ ಅನ್ನು ತೊಡೆದುಹಾಕುವ ಸರ್ಕಾರದ ಪ್ರಯತ್ನಗಳಿಗೆ ನೆರವಾಗಲಿದೆ ಎಂದು ನನಗೆ ವಿಶ್ವಾಸವಿದೆ. ‘ಕಾಲಾ-ಅಜಾರ್’ ಪೀಡಿತ ಪ್ರದೇಶಗಳ ಜನರು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಒಂದು - ಮರಳು ನೊಣ ನಿಯಂತ್ರಣ, ಮತ್ತು ಎರಡನೆಯದಾಗಿ, ತ್ವರಿತಗತಿಯಲ್ಲಿ ಈ ರೋಗವನ್ನು ಗುರುತಿಸುವುದು ಮತ್ತು ಸಂಪೂರ್ಣ ಚಿಕಿತ್ಸೆ. ‘ಕಾಲಾ-ಅಜಾರ್’ ಚಿಕಿತ್ಸೆ ಸುಲಭ, ಇದಕ್ಕೆ ಬಳಸುವ ಔಷಧಿಗಳೂ ತುಂಬಾ ಪರಿಣಾಮಕಾರಿ. ನೀವು ಜಾಗೃತವಾಗಿರಬೇಕು. ಜ್ವರ ಬಂದರೆ ನಿರ್ಲಕ್ಷಿಸಬೇಡಿ ಮತ್ತು ಮರಳು ನೊಣವನ್ನು ನಾಶಪಡಿಸುವ ಔಷಧಗಳನ್ನು ಸಿಂಪಡಿಸುತ್ತಿರಿ. ನಮ್ಮ ದೇಶ ‘ಕಾಲಾ-ಅಜಾರ್’ ದಿಂದ ಮುಕ್ತವಾದಲ್ಲಿ ನಮಗೆಲ್ಲರಿಗೂ ಎಷ್ಟು ಸಂತಸ ತರಲಿದೆ ಎಂದು ಒಮ್ಮೆ ಯೋಚಿಸಿ. ಸಬ್ಕಾ ಪ್ರಾಯಸ್ ನ ಇದೇ ಹುಮ್ಮಸ್ಸಿನೊಂದಿಗೆ,  2025 ರ ವೇಳೆಗೆ ನಾವು, ಭಾರತವನ್ನು ಕ್ಷಯದಿಂದಲೂ ಮುಕ್ತಗೊಳಿಸುವ ಪ್ರಯತ್ನದಲ್ಲಿದ್ದೇವೆ. ಈ ಹಿಂದೆ, ಕ್ಷಯರೋಗ ಮುಕ್ತ ಭಾರತ ಅಭಿಯಾನ ಆರಂಭ ಮಾಡಿದಾಗ ಕ್ಷಯರೋಗ ಪೀಡಿತರ ಸಹಾಯಕ್ಕೆ ಸಾವಿರಾರು ಜನರು ಮುಂದೆ ಬಂದಿರುವುದನ್ನು ನೀವು ನೋಡಿರಬಹುದು. ಈ ಜನರು, ನಿಕ್ಷಯ್ ಮಿತ್ರರ ರೂಪದಲ್ಲಿ, ಕ್ಷಯ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಅವರಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಿದ್ದಾರೆ. ಜನ ಸೇವೆ ಮತ್ತು ಸಾರ್ವಜನಿಕರು ಭಾಗವಹಿಸುವಿಕೆಯ ಈ ಶಕ್ತಿ ಪ್ರತಿ ಕಷ್ಟಕರ ಗುರಿಯನ್ನು ಸಾಧಿಸಿಯೇ ತೋರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯು ಗಂಗಾ ಮಾತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಗಂಗಾ ಜಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಪುರಾಣ, ಧರ್ಮಗ್ರಂಥಗಳಲ್ಲಿ ಹೀಗೆಂದು ಹೇಳಲಾಗಿದೆ :-

ನಮಾಮಿ ಗಂಗೆ ತವ ಪಾದ ಪಂಕಜಂ,

ಸುರ ಅಸುರೈಃ ವಂದಿತ ದಿವ್ಯ ರೂಪಂ

ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ

ಭಾವ ಅನುಸಾರೇಣ ಸದಾ ನರಾಣಾಂ.

ಅಂದರೆ, ಹೇ ಗಂಗಾ ಮಾತೆ, ನೀವು ನಿಮ್ಮ ಭಕ್ತರಿಗೆ ಅವರವರ ಇಚ್ಛೆಗೆ ಅನುಗುಣವಾಗಿ – ಲೌಕಿಕ ಸುಖ, ಆನಂದ, ಮತ್ತು ಮೋಕ್ಷವನ್ನು ಪ್ರಸಾದಿಸುತ್ತೀಯೆ. ಎಲ್ಲರೂ ನಿಮ್ಮ ಪವಿತ್ರ ಚರಣಗಳಿಗೆ ವಂದಿಸುತ್ತಾರೆ. ನಾನು ಕೂಡಾ ನಿಮ್ಮ ಪವಿತ್ರ ಚರಣಗಳಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ ಎಂದರ್ಥ.

ಹೀಗಿರುವಾಗ ಶತಮಾನಗಳಿಂದ ಕಲ ಕಲ ಧ್ವನಿಯಿಂದ ಪ್ರವಹಿಸುತ್ತಿರುವ ಗಂಗಾ ಮಾತೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಅತಿ ದೊಡ್ಡ ಜವಾಬ್ದಾರಿಯಾಗಿದೆ. ಇದೇ ಉದ್ದೇಶದಿಂದ, ಎಂಟು ವರ್ಷಗಳ ಹಿಂದೆ, ನಾವು ‘ನಮಾಮಿ ಗಂಗೆ ಅಭಿಯಾನ’ ಆರಂಭಿಸಿದೆವು. ಭಾರತದ ಈ ಉಪಕ್ರಮಕ್ಕೆ ಇಂದು ವಿಶ್ವಾದ್ಯಾಂತ ಪ್ರಶಂಸೆ ದೊರೆಯುತ್ತಿದೆ ಎನ್ನುವುದು ನಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ವಿಶ್ವಸಂಸ್ಥೆಯು ‘ನಮಾಮಿ ಗಂಗೆ’ ಅಭಿಯಾನವನ್ನು ಪರಿಸರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ವಿಶ್ವದ ಹತ್ತು ಅಗ್ರ ಉಪಕ್ರಮಗಳಲ್ಲಿ ಸೇರಿಸಿದೆ. ಇಡೀ ವಿಶ್ವದ ಇಂತಹ 160 ಉಪಕ್ರಮಗಳ ಪೈಕಿ ‘ನಮಾಮಿ ಗಂಗೆ’ ಉಪಕ್ರಮಕ್ಕೆ ಈ ಗೌರವ ದೊರೆತಿರುವುದು ಮತ್ತಷ್ಟು ಸಂತೋಷದ ವಿಷಯವಾಗಿದೆ.

ಸ್ನೇಹಿತರೇ, ‘ನಮಾಮಿ ಗಂಗೆ’ ಅಭಿಯಾನದ ಅತಿ ದೊಡ್ಡ ಶಕ್ತಿಯೆಂದರೆ ಅದು ಜನರ ನಿರಂತರ ಸಹಭಾಗಿತ್ವ. ‘ನಮಾಮಿ ಗಂಗೆ’ ಅಭಿಯಾನದಲ್ಲಿ, ದೂತರು ಮತ್ತು ಪ್ರಹರಿಗಳ ಪಾತ್ರ ಬಹಳ ದೊಡ್ಡದಿದೆ. ಅವರು ಗಿಡ ನೆಡುವುದು, ಘಾಟ್ ಗಳ ಸ್ವಚ್ಛತೆ, ಗಂಗಾ ಆರತಿ, ಬೀದಿ ನಾಟಕಗಳು, ಪೈಂಟಿಂಗ್ ಮತ್ತು ಕವಿತೆಗಳ ಮೂಲಕ ಜನರಲ್ಲಿ ಜಾಗರೂಕತೆ ಮೂಡಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಅಭಿಯಾನದಿಂದಾಗಿ ಜೀವವೈವಿಧ್ಯತೆಯಲ್ಲಿ ಕೂಡಾ ಸಾಕಷ್ಟು ಸುಧಾರಣೆ ಕಂಡುಬರುತ್ತಿದೆ. ಹಿಲ್ಸಾ ಮೀನು, ಗಂಗಾ ಡಾಲ್ಫಿನ್ ಮತ್ತು ಆಮೆಗಳ ವಿವಿಧ ಜಾತಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಗಂಗೆಯ ಪರಿಸರ ವ್ಯವಸ್ಥೆ ಸ್ವಚ್ಛವಾಗುತ್ತಿರುವುದರಿಂದ, ಜೀವನೋಪಾಯದ ಅವಕಾಶಗಳು ಕೂಡಾ ಹೆಚ್ಚಾಗುತ್ತಿವೆ. ಇಲ್ಲಿ ನಾನು ‘ಜಲವಾಸಿ ಜೀವನೋಪಾಯ ಮಾದರಿ’ ಯ ಕುರಿತು ಮಾತನಾಡಲು ಬಯಸುತ್ತೇನೆ, ಇದನ್ನು ಜೀವವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಈ ಪ್ರವಾಸೋದ್ಯಮ-ಆಧರಿತ ಬೋಟ್ ಸಫಾರಿಗಳನ್ನು 26 ಸ್ಥಳಗಳಲ್ಲಿ ಆರಂಭಿಸಲಾಗಿದೆ. ನಿಸ್ಸಂಶಯವಾಗಿ, ‘ನಮಾಮಿ ಗಂಗೆ’ ಅಭಿಯಾನದ ವಿಸ್ತಾರ, ಅದರ ವ್ಯಾಪ್ತಿ, ನದಿಯನ್ನು ಸ್ವಚ್ಛಗೊಳಿಸುವುದನ್ನು ಮೀರಿ ದೊಡ್ಡದಾಗಿದೆ. ಇದು ಯಾವರೀತಿ ನಮ್ಮ ಇಚ್ಛಾಶಕ್ತಿ ಮತ್ತು ದಣಿವರಿಯದ ಪ್ರಯತ್ನಗಳ ಪ್ರತ್ಯಕ್ಷ ರುಜುವಾತಾಗಿದೆಯೋ ಅಂತೆಯೇ, ಪರಿಸರದ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಪಂಚಕ್ಕೆ ಒಂದು ಹೊಸ ಮಾರ್ಗ ತೋರಿಸುವಂತಹ ಪ್ರಯತ್ನವೂ ಆಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಕಲ್ಪಶಕ್ತಿ ಯಾವಾಗ ಬಲವಾಗಿರುತ್ತದೆಯೋ, ಆಗ ದೊಡ್ಡ ದೊಡ್ಡ ಸವಾಲುಗಳು ಕೂಡಾ ಬಹಳ ಸುಲಭವೆನಿಸಿಬಿಡುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಸಿಕ್ಕಿಂನ ಥೆಗೂ ಗ್ರಾಮದ ‘ಸಂಗೆ ಶೆರ್ಪಾ’ ಅವರು. ಇವರು ಕಳೆದ 14 ವರ್ಷಗಳಿಂದ 12,000 ಅಡಿಗಿಂತ ಹೆಚ್ಚು ಎತ್ತರದ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಂಗೆ ಅವರು ಸಾಂಸ್ಕೃತಿಕ ಮತ್ತು ಪೌರಾಣಿಕ ಪ್ರಾಮುಖ್ಯತೆಯಿರುವ Tsomgo (ಸೋಮಗೋ) ಸರೋವರವನ್ನು ಸ್ವಚ್ಛವಾಗಿರಿಸುವ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಅವಿರತ ಪರಿಶ್ರಮದಿಂದ ಅವರು ಈ ಗ್ಲೇಷಿಯರ್ ಸರೋವರದ ರೂಪರೇಷೆ ಬದಲಾಯಿಸಿದ್ದಾರೆ. 2008 ರಲ್ಲಿ ಸ್ವಚ್ಛತೆಯ ಈ ಅಭಿಯಾನ ಆರಂಭಿಸಿದಾಗ, ಸಂಗೆ ಶೆರ್ಪಾ ಅವರು, ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಕ್ರಮೇಣ ಕೆಲಸಮಯದಲ್ಲೇ ಅವರ ಈ ಉದಾತ್ತ ಕೆಲಸಕ್ಕೆ ಯುವಕರು ಮತ್ತು ಗ್ರಾಮೀಣ ಜನತೆಯೊಂದಿಗೆ ಪಂಚಾಯಿತ್ ನಿಂದ ಕೂಡಾ ಸಾಕಷ್ಟು ಸಹಕಾರ ದೊರೆಯಲಾರಂಭಿಸಿತು. ಒಂದುವೇಳೆ ನೀವು Tsomgo (ಸೋಮಗೋ) ಸರೋವರ ನೋಡಲು ಹೋದರೆ, ನಿಮಗೆ ಅಲ್ಲಿ ನಾಲ್ಕೂ ದಿಕ್ಕಿನಲ್ಲೂ ದೊಡ್ಡ ದೊಡ್ಡ ಕಸದ ಬುಟ್ಟಿಗಳು ಕಾಣಸಿಗುತ್ತವೆ. ಈಗ ಇಲ್ಲಿ ಸಂಗ್ರಹವಾಗುವ ಕಸ-ಕಡ್ಡಿಯನ್ನು ರೀಸೈಕ್ಲಿಂಗ್ ಗಾಗಿ ಕಳುಹಿಸಿಕೊಡಲಾಗುತ್ತದೆ. ಕಸ-ಕಡ್ಡಿಯನ್ನು ಇಲ್ಲಿಗೆ ಬರುವ ಪ್ರವಾಸಿಗರು ಅಲ್ಲಿ ಇಲ್ಲಿ ಎಸೆಯಬಾರದೆಂಬ ಉದ್ದೇಶದಿಂದ ಪ್ರವಾಸಿಗರಿಗೆ ಬಟ್ಟೆಯಿಂದ ತಯಾರಿಸಿದ ಗಾರ್ಬೇಜ್ ಚೀಲಗಳನ್ನು ಕೂಡಾ ನೀಡಲಾಗುತ್ತದೆ.  ಈಗ ಸಾಕಷ್ಟು ಸ್ವಚ್ಛವಾಗಿರುವ ಈ ಸರೋವರವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಸುಮಾರು 5 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. Tsomgo (ಸೋಮಗೊ) ಸರೋವರದ ಸಂರಕ್ಷಣೆಯ ಈ ಅನನ್ಯ ಪ್ರಯಾಸಕ್ಕಾಗಿ ಸಂಗೆ ಶೆರ್ಪಾ ಅವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.  ಇಂತಹ ಪ್ರಯತ್ನಗಳ ಕಾರಣದಿಂದಾಗಿ ಇಂದು ಸಿಕ್ಕಿಂ ಅನ್ನು ಭಾರತದ ಅತ್ಯಂತ ಸ್ವಚ್ಛ ಸುಂದರ ರಾಜ್ಯಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ. ನಾನು ಸಂಗೆ ಶೆರ್ಪಾ ಮತ್ತು ಅವರ ಸ್ನೇಹಿತರು ಮತ್ತು ದೇಶಾದ್ಯಂತ ಪರಿಸರ ಸಂರಕ್ಷಣೆಯ ಉದಾತ್ತ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನೂ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.

ಸ್ನೇಹಿತರೆ, ಇಂದು ಸ್ವಚ್ಛ ಭಾರತ ಅಭಿಯಾನ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ನೆಲೆಯೂರಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. 2014 ರಲ್ಲಿ ಈ ಅಭಿಯಾನದ ಆರಂಭದೊಂದಿಗೇ, ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ, ಜನರು ಅನೇಕ ವಿಶಿಷ್ಠ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಈ ಪ್ರಯತ್ನ ಕೇವಲ ಸಮಾಜದೊಳಗೆ ಮಾತ್ರವಲ್ಲದೇ ಸರ್ಕಾರದೊಳಗೂ ನಡೆಯುತ್ತಿದೆ. ಇಂತಹ ಸತತ ಪ್ರಯತ್ನಗಳ ಪರಿಣಾಮವಾಗಿ, ಕಸ ಕಡ್ಡಿ ತೊಲಗಿಸಿದ್ದರಿಂದ, ಅನಗತ್ಯ ವಸ್ತುಗಳನ್ನು ತೊಲಗಿಸಿದ್ದರಿಂದ, ಕಛೇರಿಗಳಲ್ಲಿ ಸಾಕಷ್ಟು ಸ್ಥಳಾವಕಾಶ ಉಂಟಾಗಿದೆ. ಈ ಹಿಂದೆ ಸ್ಥಳ ಅಭಾವದ ಕಾರಣದಿಂದಾಗಿ ದೂರ ದೂರದಲ್ಲಿ ಬಾಡಿಗೆಗೆ ಕಛೇರಿ ತೆರೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಈ ಸ್ವಚ್ಛತೆಯ ಕಾರಣದಿಂದಾಗಿ ಎಷ್ಟೊಂದು ಸ್ಥಳ ದೊರೆತಿದೆಯೆಂದರೆ, ಈಗ ಒಂದೇ ಸ್ಥಳದಲ್ಲಿ ಎಲ್ಲಾ ಕಛೇರಿಗಳೂ ನೆಲೆಗೊಂಡಿವೆ. ಕೆಲ ದಿನಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡಾ ಮುಂಬಯಿ, ಅಹಮದಾಬಾದ್, ಕೊಲ್ಕತ್ತಾ, ಶಿಲ್ಲಾಂಗ್, ಇತರ ಅನೇಕ ನಗರಗಳಲ್ಲಿ ತಮ್ಮ ಕಛೇರಿಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ ಮತ್ತು ಇದರಿಂದಾಗಿ ಸಚಿವಾಲಯಕ್ಕೆ ಸಂಪೂರ್ಣ ಹೊಸದರಂತೆ ಎರಡು, ಮೂರು ಮಹಡಿಗಳು, ಕಾರ್ಯ ನಿರ್ವಹಿಸುವುದಕ್ಕೆ ಲಭ್ಯವಾದಂತಾಗಿವೆ. ಈ ಸ್ವಚ್ಛತೆಯ ಕಾರಣದಿಂದಾಗಿ, ನಮ್ಮ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಅನುಭವ ನಮಗೆ ದೊರೆಯುತ್ತಿದೆ. ಸಮಾಜದಲ್ಲಿ, ಗ್ರಾಮಗಳಲ್ಲಿ, ನಗರಗಳಲ್ಲಿ ಕೂಡಾ, ಅಂತೆಯೇ ಕಛೇರಿಗಳಲ್ಲಿ ಕೂಡಾ ಈ ಅಭಿಯಾನವು ದೇಶಕ್ಕಾಗಿ ಪ್ರತಿಯೊಂದು ರೀತಿಯಲ್ಲಿಯೂ ಉಪಯುಕ್ತವೆಂದು ಸಾಬೀತಾಗುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಕಲೆ-ಸಂಸ್ಕೃತಿಯ ಕುರಿತು ಒಂದು ಹೊಸ ಅರಿವು ಮೂಡುತ್ತಿದೆ, ಒಂದು ಹೊಸ ಚೈತನ್ಯ ಜಾಗೃತವಾಗುತ್ತಿದೆ. ‘ಮನದ ಮಾತಿ’ ನಲ್ಲಿ, ನಾವು ಇಂತಹ ಉದಾಹರಣೆಗಳ ಬಗ್ಗೆ ಕೂಡಾ ಮಾತನಾಡುತ್ತಿರುತ್ತೇವೆ. ಯಾವರೀತಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಸಾಮೂಹಿಕ ಬಂಡವಾಳವಾಗಿದೆಯೋ ಅದೇ ರೀತಿ ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಕೂಡಾ ಸಮಾಜಕ್ಕೆ ಇರುತ್ತದೆ. ಇಂತಹ ಒಂದು ಯಶಸ್ವೀ ಪ್ರಯತ್ನ ಲಕ್ಷದ್ವೀಪದಲ್ಲಿ ನಡೆಯುತ್ತಿದೆ. ಇಲ್ಲಿ ‘ಕಲ್ಪೆನಿ’ ದ್ವೀಪದಲ್ಲಿ ಒಂದು ಕ್ಲಬ್ ಇದೆ – ಅದರ ಹೆಸರು ‘ಕೂಮೇಲ್ ಬ್ರದರ್ಸ್ ಛಾಲೆಂಜರ್ಸ್ ಕ್ಲಬ್’. ಸ್ಥಳೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸುವುದಕ್ಕೆ ಯುವಜನತೆಗೆ ಈ ಕ್ಲಬ್ ಪ್ರೇರೇಪಿಸುತ್ತದೆ. ಇಲ್ಲಿ ಸ್ಥಳೀಯ ಕಲೆ ‘ಕೊಲ್ ಕಲಿ’, ‘ಪರೀಚಾಕಲೀ’, ‘ಕಿಲಿಪ್ಪಾಟ್’ ಮತ್ತು ಸಾಂಪ್ರದಾಯಿಕ ಹಾಡುಗಳ ಬಗ್ಗೆ ಯುವಜನತೆಗೆ ತರಬೇತಿ ಕೂಡಾ ನೀಡಲಾಗುತ್ತದೆ. ಅಂದರೆ, ಪ್ರಾಚೀನ ಪರಂಪರೆ, ಹೊಸ ಪೀಳಿಗೆಯ ಕೈಯಲ್ಲಿ ಸುರಕ್ಷಿತವಾಗುತ್ತಿದೆ, ಮುಂದುವರಿಯುತ್ತಿದೆ ಮತ್ತು ಸ್ನೇಹಿತರೆ, ಇಂತಹ ಪ್ರಯತ್ನಗಳು ಕೇವಲ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡಾ ನಡೆಯುತ್ತಿರುವುದು ನನಗೆ ಬಹಳ ಸಂತೋಷದ ವಿಷಯವೆನಿಸಿದೆ. ಇತ್ತೀಚೆಗೆ ದುಬೈನ ‘ಕಲಾರಿ’ ಕ್ಲಬ್, ‘ಗಿನ್ನೀಸ್ ವಿಶ್ವ ದಾಖಲೆಯ ಪುಸ್ತಕ’ದಲ್ಲಿ ಹೆಸರು ನೋಂದಾಯಿಸಿದೆ ಎಂದು ಅಲ್ಲಿಂದ ಸುದ್ದಿ ಬಂದಿದೆ.  ದುಬೈನ ಕ್ಲಬ್ ದಾಖಲೆ ಸಾಧಿಸಿದರೆ ಅದರಲ್ಲಿ ಭಾರತಕ್ಕೆ ಏನು ಸಂಬಂಧ? ಎಂದು ಯಾರಿಗಾದರೂ ಅನಿಸಬಹುದು. ವಾಸ್ತವದಲ್ಲಿ ಈ ದಾಖಲೆ, ಭಾರತದ ಪ್ರಾಚೀನ ಸಮರ ಕಲೆ ‘ಕಲರೀಪಯಟ್’ ನೊಂದಿಗೆ ಸಂಬಂಧ ಹೊಂದಿದೆ. ಒಟ್ಟಿಗೆ ಅನೇಕ ಮಂದಿ ಸೇರಿ ಮಾಡಿದ ಕಲರಿ ಪ್ರದರ್ಶನದ ದಾಖಲೆ ಇದಾಗಿದೆ. ‘ದುಬೈ ಕಲಾರಿ ಕ್ಲಬ್’, ದುಬೈ ಪೊಲೀಸರೊಡಗೂಡಿ ಈ ಯೋಜನೆ ಸಿದ್ಧಪಡಿಸಿತ್ತು ಮತ್ತು ಯುಎಇ ನ ರಾಷ್ಟ್ರೀಯ ದಿನದಂದು ಪ್ರದರ್ಶಿಸಲಾಯಿತು. ಈ ಆಯೋಜನೆಯಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 60 ವರ್ಷ ವಯೋಮಾನದವರೆಗಿನವರು ‘ಕಲಾರಿ’ ಕಲೆಯಲ್ಲಿ ತಮ್ಮ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಬೇರೆ ಬೇರೆ ಪೀಳಿಗೆಗಳು ಯಾವ ರೀತಿ ಒಂದು ಪ್ರಾಚೀನ ಪರಂಪರೆಯನ್ನು ಮುಂದುರಿಸಿಕೊಂಡು ಹೋಗುತ್ತಿವೆ, ಸಂಪೂರ್ಣ ಉತ್ಸಾಹದಿಂದ ಮುನ್ನಡೆಸಿಕೊಂಡು ಹೋಗುತ್ತಿವೆ ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆಯಾಗಿದೆ.

ಸ್ನೇಹಿತರೇ, ‘ಮನದ ಮಾತಿ’ ನ ಶ್ರೋತೃಗಳಿಗೆ ನಾನು ಕರ್ನಾಟಕದ ಗದಗ ಜಿಲ್ಲೆಯ ನಿವಾಸಿ ಕ್ವೇಮ್ ಶ್ರೀ ಅವರ ಬಗ್ಗೆ ಹೇಳಲು ಬಯಸುತ್ತೇನೆ. ಕ್ವೇಮ್ ಶ್ರೀ ಅವರು ದಕ್ಷಿಣ ಭಾರತದಲ್ಲಿ ಕರ್ನಾಟಕದ ಕಲಾ-ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಅಭಿಯಾನದಲ್ಲಿ ಕಳೆದ 25 ವರ್ಷಗಳಿಂದ ಸತತವಾಗಿ ತೊಡಗಿಕೊಂಡಿದ್ದಾರೆ. ಅವರ ಈ ತಪಸ್ಸು ಎಷ್ಟೊಂದು ದೊಡ್ಡದೆಂದು ನೀವು ಊಹಿಸಬಹುದು. ಮೊದಲು ಅವರು ಹೊಟೇಲ್ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಆದರೆ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅವರಿಗೆ ಆಳವಾದ ಬಾಂಧವ್ಯ ಎಷ್ಟಿತ್ತೆಂದರೆ, ಅವರು ಇದನ್ನು ತಮ್ಮ ಧ್ಯೇಯವಾಗಿಸಿಕೊಂಡರು. ಅವರು ‘ಕಲಾ ಚೇತನ’ ಎಂಬ ಹೆಸರಿನ ಒಂದು ವೇದಿಕೆ ಸಿದ್ಧಪಡಿಸಿದರು. ಈ ವೇದಿಕೆ ಇಂದು, ಕರ್ನಾಟಕದ, ಮತ್ತು ದೇಶ-ವಿದೇಶದ ಕಲಾವಿದರ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದರಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕಾಗಿ ಅನೇಕ ನವೀನ ಆವಿಷ್ಕಾರಕ ಕೆಲಸ ಕಾರ್ಯಗಳು ಕೂಡಾ ಒಳಗೊಂಡಿರುತ್ತವೆ.

ಸ್ನೇಹಿತರೇ, ನಮ್ಮ ಕಲೆ-ಸಂಸ್ಕೃತಿಯ ಬಗ್ಗೆ ದೇಶವಾಸಿಗಳ ಈ ಉತ್ಸಾಹವು, ‘ನಮ್ಮ ಪರಂಪರೆಯ ಕುರಿತು ಹೆಮ್ಮೆಯ’ ಭಾವನೆಯ ದ್ಯೋತಕವೇ ಆಗಿದೆ. ನಮ್ಮ ದೇಶದಲ್ಲಂತೂ, ಪ್ರತಿಯೊಂದು ಮೂಲೆಯಲ್ಲೂ ಇಂತಹ ಅದೆಷ್ಟೊಂದು ಬಣ್ಣಗಳು ಹರಡಿವೆ. ಇವುಗಳನ್ನು ಅಲಂಕರಿಸಲು, ಸಂರಕ್ಷಿಸಲು ನಾವೆಲ್ಲರೂ ಸತತವಾಗಿ ಕೆಲಸ ಮಾಡಬೇಕಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಅನೇಕ ಪ್ರದೇಶಗಳಲ್ಲಿ ಬಿದಿರಿನಿಂದ ಅನೇಕ ಸುಂದರ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸಲಾಗುತ್ತದೆ. ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಬಿದಿರಿನ ವಸ್ತುಗಳನ್ನು ತಯಾರಿಸುವ ಕುಶಲಕರ್ಮಿಗಳು, ನುರಿತ ಕಲೆಗಾರರಿದ್ದಾರೆ. ಬಿದಿರಿಗೆ ಸಂಬಂಧಿಸಿದ, ಬ್ರಿಟಿಷರ ಕಾಲದ ಕಾನೂನನ್ನು ದೇಶ ಬದಲಾವಣೆ ಮಾಡಿದ ನಂತರ, ಬಿದಿರಿನ ದೊಡ್ಡ ಮಾರುಕಟ್ಟೆಯೇ ಸಿದ್ಧವಾಗಿಬಿಟ್ಟಿತು. ಮಹಾರಾಷ್ಟ್ರದ ಪಾಲ್ಘರ್ ನಂತಹ ಪ್ರದೇಶದಲ್ಲಿ ಕೂಡಾ ಬುಡಕಟ್ಟು ಸಮಾಜದ ಜನರು ಬಿದಿರಿನಿಂದ ಅನೇಕ ಸುಂದರ, ಆಕರ್ಷಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಿದಿರಿನಿಂದ ತಯಾರಿಸಲಾಗುವ ಪೆಟ್ಟಿಗೆಗಳು, ಕುರ್ಚಿ, ಚಹಾದಾನಿ, ಬುಟ್ಟಿಗಳು ಮತ್ತು ಟ್ರೇ ಇತ್ಯಾದಿ ವಸ್ತುಗಳು ಬಹಳ ಜನಪ್ರಿಯವಾಗುತ್ತಿವೆ. ಅಷ್ಟೇ ಅಲ್ಲ, ಈ ಜನರು, ಬಿದಿರಿನ ಹುಲ್ಲಿನಿಂದ ಸುಂದರ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳನ್ನು ಕೂಡಾ ತಯಾರಿಸುತ್ತಾರೆ. ಇದರಿಂದಾಗಿ ಬುಡಕಟ್ಟು ಮಹಿಳೆಯರಿಗೆ ಜೀವನೋಪಾಯವೂ ದೊರೆಯುತ್ತಿದೆ, ಹಾಗೆಯೇ ಅವರ ಕೌಶಲ್ಯಕ್ಕೆ ಮನ್ನಣೆಯೂ ದೊರೆಯುತ್ತಿದೆ.

ಸ್ನೇಹಿತರೇ, ಕರ್ನಾಟಕದ ಓರ್ವ ದಂಪತಿ ಅಡಿಕೆ ನಾರು ಅಥವಾ ಹಾಳೆಯಿಂದ ತಯಾರಿಸಲಾದ ಅನೇಕ ವಿಶಿಷ್ಠ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ. ಈ ದಂಪತಿಯೆಂದರೆ ಕರ್ನಾಟಕದ ಶಿವಮೊಗ್ಗ ನಿವಾಸಿಗಳಾದ ಶ್ರೀ ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಮೈಥಿಲಿ ಜೋಡಿ.  ಇವರು ಅಡಿಕೆಯ ಹಾಳೆಯಿಂದ ಟ್ರೇ, ತಟ್ಟೆ ಮತ್ತು ಕೈ ಚೀಲದಿಂದ ಹಿಡಿದು, ಅನೇಕ ಅಲಂಕಾರಿಕ ವಸ್ತುಗಳನ್ನು ಕೂಡಾ ತಯಾರಿಸುತ್ತಾರೆ. ಇದೇ ಅಡಿಕೆ ಹಾಳೆಯಿಂದ ತಯಾರಿಸಲಾದ ಪಾದರಕ್ಷೆಗಳಿಗೆ ಕೂಡಾ ಈಗ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ತಯಾರಿಸುವ ಉತ್ಪನ್ನಗಳು ಈಗ ಲಂಡನ್ ಮತ್ತು ಯೂರೋಪ್ ನ ಇತರೆ ಮಾರುಕಟ್ಟೆಗಳಲ್ಲಿ ಕೂಡಾ ಮಾರಾಟವಾಗುತ್ತಿದೆ. ಇದೇ ನಮ್ಮ ಪ್ರಾಕೃತಿಕ ಸಂಪನ್ಮೂಲಗಳ ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ವೈಶಿಷ್ಟ್ಯವಾಗಿದ್ದು, ಎಲ್ಲರಿಗೂ ಮೆಚ್ಚುಗೆಯಾಗುತ್ತಿದೆ. ಭಾರತದ ಈ ಸಾಂಪ್ರದಾಯಿಕ ಅರಿವಿನಲ್ಲಿ ವಿಶ್ವ, ಸುಸ್ಥಿರ ಭವಿಷ್ಯದ ಹಾದಿಯನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾವು ಸ್ವಯಂ ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯವಿದೆ. ನಾವು ಸ್ವಯಂ ಇಂತಹ ದೇಶೀಯ ಮತ್ತು ಸ್ಥಳೀಯ ಉತ್ಪನ್ನವನ್ನು ಉಪಯೋಗಿಸಬೇಕು ಮತ್ತು ಇತರರಿಗೆ ಕೂಡಾ ಇದನ್ನು ಉಡುಗೊರೆಯ ರೂಪದಲ್ಲಿ ನೀಡಬೇಕು. ಇದರಿಂದ ನಮ್ಮ ಗುರುತು ಬಲಿಷ್ಠವಾಗುತ್ತದೆ, ಸ್ಥಳೀಯ ಆರ್ಥಿಕತೆ ಬಲಿಷ್ಠವಾಗುತ್ತದೆ, ಮತ್ತು ದೊಡ್ಡ ಪ್ರಮಾಣದಲ್ಲಿ, ಜನರ ಭವಿಷ್ಯ ಕೂಡಾ ಉಜ್ವಲವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಕ್ರಮೇಣ ಮನದ ಮಾತಿನ 100 ನೇ ಸಂಚಿಕೆಯ ಅಭೂತಪೂರ್ವ ಮೈಲುಗಲ್ಲಿನ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ. ನನಗೆ ದೇಶವಾಸಿಗಳಲ್ಲಿ ಅನೇಕರಿಂದ ಪತ್ರಗಳು ಬಂದಿವೆ, ಇದರಲ್ಲಿ ಅವರು 100 ನೇ ಸಂಚಿಕೆಯ ಕುರಿತು ಹೆಚ್ಚಿನ ಕುತೂಹಲ ವ್ಯಕ್ತಪಡಿಸಿದ್ದಾರೆ. 100 ನೇ ಸಂಚಿಕೆಯಲ್ಲಿ ನಾವು ಯಾವ ವಿಷಯ ಕುರಿತು ಮಾತನಾಡಬೇಕು, ಅದನ್ನು ಯಾವರೀತಿ ವಿಶೇಷವಾಗಿಸಬಹುದು, ಇವುಗಳ ಬಗ್ಗೆ ನೀವು ನನಗೆ ಸಲಹೆ, ಅಭಿಪ್ರಾಯ ಕಳುಹಿಸಿಕೊಟ್ಟಲ್ಲಿ, ನನಗೆ ಬಹಳ ಸಂತೋಷವಾಗುತ್ತದೆ. ಮುಂದಿನಬಾರಿ ನಾವು ಹೊಸ ವರ್ಷ 2023 ರಲ್ಲಿ ಭೇಟಿಯಾಗೋಣ. ನಿಮ್ಮೆಲ್ಲರಿಗೂ 2023 ರ ವರ್ಷಕ್ಕಾಗಿ ನಾನು ಶುಭಾಶಯ ಕೋರುತ್ತೇನೆ. ಈ ವರ್ಷ ಕೂಡಾ ದೇಶಕ್ಕೆ ವಿಶೇಷವೆನಿಸಲಿ, ದೇಶ ಮತ್ತಷ್ಟು ಎತ್ತರಗಳನ್ನು ಮುಟ್ಟಲಿ, ಇದಕ್ಕಾಗಿ ನಾವೆಲ್ಲರೂ ಸಂಕಲ್ಪವನ್ನೂ ಮಾಡಬೇಕು, ಸಾಕಾರಗೊಳಿಸಲೂ ಬೇಕು. ಈಗ ಬಹುತೇಕ ಜನರು ರಜಾದಿನಗಳ ಮೂಡ್ ನಲ್ಲಿದ್ದಾರೆ. ನೀವೆಲ್ಲರೂ ಈ ರಜಾ ದಿನಗಳ, ಹಬ್ಬದ ಸಂದರ್ಭವನ್ನು ಸಂಪೂರ್ಣವಾಗಿ ಆನಂದಿಸಿ, ಆದರೆ, ಸ್ವಲ್ಪ ಜಾಗರೂಕರಾಗಿ ಕೂಡಾ ಇರಿ. ವಿಶ್ವದ ಅನೇಕ ದೇಶಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ, ಆದ್ದರಿಂದ ನಾವು ಮುಖ ಗವುಸು ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವಂತಹ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ನಾವು ಎಚ್ಚರಿಕೆಯಿಂದ ಇದ್ದಲ್ಲಿ ಸುರಕ್ಷಿತವಾಗಿ ಇರಬಹುದು. ಆಗ ನಮ್ಮ ಸಂತೋಷಕ್ಕೆ ಯಾವುದೇ ಅಡಚಣೆ ಕೂಡಾ ಉಂಟಾಗುವುದಿಲ್ಲ. ಇದರೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಶುಭಹಾರೈಕೆಗಳು. ಅನೇಕಾನೇಕ ಧನ್ಯವಾದ, ನಮಸ್ಕಾರ.

  • Dheeraj Thakur February 13, 2025

    जय श्री राम।
  • Dheeraj Thakur February 13, 2025

    जय श्री राम
  • Priya Satheesh January 01, 2025

    🐯
  • Chhedilal Mishra November 26, 2024

    Jai shrikrishna
  • கார்த்திக் October 28, 2024

    🪷ஜெய் ஸ்ரீ ராம்🪷जय श्री राम🪷જય શ્રી રામ🪷 🪷ಜೈ ಶ್ರೀ ರಾಮ್🪷ଜୟ ଶ୍ରୀ ରାମ🪷Jai Shri Ram🪷🪷 🪷জয় শ্ৰী ৰাম 🪷ജയ് ശ്രീറാം 🪷జై శ్రీ రామ్ 🪷🪷
  • Vivek Kumar Gupta October 20, 2024

    नमो ..🙏🙏🙏🙏🙏
  • Vivek Kumar Gupta October 20, 2024

    नमो ...............🙏🙏🙏🙏🙏
  • கார்த்திக் October 18, 2024

    🪷ஜெய் ஸ்ரீ ராம்🌸जय श्री राम🌹જય શ્રી રામ🪷 🪷ಜೈ ಶ್ರೀ ರಾಮ್🌺జై శ్రీ రామ్🌺JaiShriRam🌺🙏🌸 🪷জয় শ্ৰী ৰাম🌺ജയ് ശ്രീറാം🌺ଜୟ ଶ୍ରୀ ରାମ🌺🌺
  • Devendra Kunwar September 29, 2024

    BJP
  • दिग्विजय सिंह राना September 20, 2024

    हर हर महादेव
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 28 lakh companies registered in India: Govt data

Media Coverage

Over 28 lakh companies registered in India: Govt data
NM on the go

Nm on the go

Always be the first to hear from the PM. Get the App Now!
...
Prime Minister pays homage to Chhatrapati Shivaji Maharaj on his Jayanti
February 19, 2025

The Prime Minister, Shri Narendra Modi has paid homage to Chhatrapati Shivaji Maharaj on his Jayanti.

Shri Modi wrote on X;

“I pay homage to Chhatrapati Shivaji Maharaj on his Jayanti.

His valour and visionary leadership laid the foundation for Swarajya, inspiring generations to uphold the values of courage and justice. He inspires us in building a strong, self-reliant and prosperous India.”

“छत्रपती शिवाजी महाराज यांच्या जयंतीनिमित्त मी त्यांना अभिवादन करतो.

त्यांच्या पराक्रमाने आणि दूरदर्शी नेतृत्वाने स्वराज्याची पायाभरणी केली, ज्यामुळे अनेक पिढ्यांना धैर्य आणि न्यायाची मूल्ये जपण्याची प्रेरणा मिळाली. ते आपल्याला एक बलशाली, आत्मनिर्भर आणि समृद्ध भारत घडवण्यासाठी प्रेरणा देत आहेत.”