Quoteಇ-ರುಪಿ ವೋಚರ್ ಉದ್ದೇಶಿತ, ಪಾರದರ್ಶಕ ಮತ್ತು ಸೋರಿಕೆ ರಹಿತವಾಗಿ ಉಚಿತ ಸೇವೆ ಒದಗಿಸಲು ಪ್ರತಿಯೊಬ್ಬರಿಗೂ ಸಹಕಾರಿ : ಪ್ರಧಾನಮಂತ್ರಿ
Quoteಇ-ರುಪಿ ವೋಚರ್ ನೇರ ಸೌಲಭ್ಯ ವರ್ಗಾವಣೆ – ಡಿಬಿಟಿ ವಲಯದಲ್ಲಿ ಹೆಚ್ಚಿನ ಪಾತ್ರ ನಿರ್ವಹಣೆಗೆ ಪರಿಣಾಮಕಾರಿ ಮತ್ತು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮ ನೀಡಲಿದೆ – ಪ್ರಧಾನಮಂತ್ರಿ
Quoteಬಡವರಿಗೆ ಸಹಾಯ ಮಾಡಲು ತಂತ್ರಜ್ಞಾನ ಒಂದು ಸಾಧನ, ಬಡವರ ಪ್ರಗತಿಗೆ ಇದೊಂದು ಪ್ರಮುಖ ಪರಿಕರ – ಪ್ರಧಾನಮಂತ್ರಿ

ನಮಸ್ಕಾರ,

ಈ ಪ್ರಮುಖ ಮಹತ್ವದ ಕಾರ್ಯಕ್ರಮದಲ್ಲಿ ದೇಶದ ಎಲ್ಲೆಡೆಯಿಂದ ಉಪಸ್ಥಿತರಿರುವ ರಾಜ್ಯಪಾಲರು, ಉಪ ರಾಜ್ಯಪಾಲರು, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳು, ರಿಸರ್ವ ಬ್ಯಾಂಕಿನ ಗವರ್ನರ್, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ವಿವಿಧ ಕೈಗಾರಿಕೋದ್ಯಮ ಸಂಘಟನೆಗಳಿಗೆ ಸೇರಿದ ಸಹೋದ್ಯೋಗಿಗಳು, ನವೋದ್ಯಮ ಮತ್ತು ಫಿನ್ ಟೆಕ್ ವಲಯದ ನನ್ನ ಯುವ ಸಹೋದ್ಯೋಗಿಗಳು, ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ,

ಇಂದು ದೇಶವು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ. ಇ-ರುಪಿ ವೋಚರ್ (ಹಣ ಸಂದಾಯದ ರಸೀದಿ) ಡಿಜಿಟಲ್ ವರ್ಗಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಮತ್ತು ಡಿ.ಬಿ.ಟಿ.ಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ. ಇದು ಪ್ರತಿಯೊಬ್ಬರಿಗೂ ಗುರಿ ಕೇಂದ್ರಿತ, ಪಾರದರ್ಶಕ, ಸೋರಿಕೆ ರಹಿತ ಸರಬರಾಜನ್ನು ಒದಗಿಸಲಿದೆ. ಇ-ರುಪಿಯು 21 ನೇ ಶತಮಾನದಲ್ಲಿ ಭಾರತವು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೇಗೆ ಮುನ್ನಡೆಯುತ್ತಿದೆ ಮತ್ತು ತಂತ್ರಜ್ಞಾನದೊಂದಿಗೆ ಹೇಗೆ ಜನರ ಬದುಕನ್ನು ಬೆಸೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ದೇಶವು ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಈ ಆರಂಭ ಆಗುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಇಂತಹ ಸಮಯದಲ್ಲಿ ದೇಶವು ಭವಿಷ್ಯದ ಸುಧಾರಣೆಯಲ್ಲಿ ಒಂದು ಪ್ರಮುಖ ಹೆಜ್ಜೆಯನ್ನಿಟ್ಟಿದೆ.

ಸ್ನೇಹಿತರೇ,

ಸರಕಾರ ಮಾತ್ರವಲ್ಲ, ಯಾವುದೇ ಸಾಮಾನ್ಯ ಸಂಸ್ಥೆ ಅಥವಾ ಸಂಘಟನೆ ಯಾರಿಗಾದರೂ ಚಿಕಿತ್ಸೆಗೆ, ಶಿಕ್ಷಣಕ್ಕೆ ಅಥವಾ ಇತರ ಯಾವುದಾದರೂ ಕೆಲಸಕ್ಕೆ ಸಹಾಯ ಮಾಡಲು ಇಚ್ಛಿಸಿದರೆ, ಆಗ ಅದು ನಗದಿಗೆ ಬದಲಾಗಿ ಇ-ರುಪಿ ಮೂಲಕ ಪಾವತಿ ಮಾಡಲು ಸಾಧ್ಯವಾಗಲಿದೆ. ಇದು ನೀಡಿದ ಹಣ ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಕೆಯಾಗುವುದನ್ನು ಖಾತ್ರಿಪಡಿಸುತ್ತದೆ. ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ದೇಶದ ಆರೋಗ್ಯ ವಲಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ.

ಉದಾಹರಣೆಗೆ, ಒಂದು ಸಂಘಟನೆ ದಾನ ದತ್ತಿಯಲ್ಲಿ ತೊಡಗಿದ್ದು, ಅದು ಭಾರತ ಸರಕಾರದ ಉಚಿತ ಲಸಿಕಾ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಲು ಇಚ್ಛಿಸದೇ,  ಹಣ ಕೊಟ್ಟು ಲಸಿಕೆಗಳನ್ನು ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಕೊಡುಗೆ ನೀಡಲು ಇಚ್ಛಿಸುವುದಾದರೆ, ಅಥವಾ 100 ಬಡವರಿಗೆ ಲಸಿಕೆಗಳನ್ನು ನೀಡಲು ಇಚ್ಛಿಸಿದರೆ ಆಗ ಇ-ರುಪಿ ವೋಚರ್ ಗಳನ್ನು ಆ 100 ಬಡ ಮಂದಿಗೆ ನೀಡಬಹುದು. ಆ ಇ-ರುಪಿ ವೋಚರನ್ನು ಲಸಿಕಾ ಕಾರ್ಯಕ್ರಮಕ್ಕೆ ಮಾತ್ರವೇ ಬಳಸುವುದನ್ನು ಅದು ಖಾತ್ರಿಪಡಿಸುತ್ತದೆ. ಮತ್ತು ಅದನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಕಾಲಾನುಕ್ರಮದಲ್ಲಿ ಇದರಡಿ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಸೇರಿಸಲಾಗುವುದು. ಉದಾಹರಣೆಗೆ ಯಾರಾದರೂ ಯಾವುದೇ ವ್ಯಕ್ತಿಯ ಚಿಕಿತ್ಸಾ ಖರ್ಚನ್ನು ಭರಿಸಲು ಇಚ್ಛಿಸಿದರೆ ಅಥವಾ ಔಷಧಿಗಳಿಗೆ ಹಣಕಾಸು ಸಹಾಯವನ್ನು ಮಾಡಲು ಇಚ್ಛಿಸಿದರೆ, ಅಥವಾ ಕ್ಷಯ ರೋಗಿಗಳಿಗೆ ಆಹಾರ ನೀಡಲು ಇಚ್ಛಿಸಿದರೆ, ಇಲ್ಲವೇ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೋಷಕಾಂಶ ಸಂಬಂಧಿ ಸೌಲಭ್ಯಗಳನ್ನು ಒದಗಿಸಲು ಆಶಿಸಿದರೆ ಆಗ ಇ-ರುಪಿ ಈ ರೀತಿಯ ಸಹಾಯಕ್ಕೆ  ಬಹಳ ಉಪಯೋಗಿಯಾಗಿಯಾಗಿ ಒದಗಿ ಬರುತ್ತದೆ. ಅಂದರೆ ಇ-ರುಪಿ ಒಂದು ರೀತಿಯಲ್ಲಿ ಒಬ್ಬ ವ್ಯಕ್ತಿ ಇದ್ದಂತೆ ಮತ್ತು ಅದು ನಿರ್ದಿಷ್ಟ ಉದ್ದೇಶವನ್ನು ಒಳಗೊಂಡಿರುತ್ತದೆ.

ಇ-ರುಪಿಯು ಯಾವ ಉದ್ದೇಶಕ್ಕಾಗಿ ಸಹಾಯವನ್ನು ಅಥವಾ ಪ್ರಯೋಜನವನ್ನು ಒದಗಿಸಲಾಗಿದೆಯೋ, ಅದು ಆ ಉದ್ದೇಶಕ್ಕಾಗಿಯೇ ಬಳಕೆಯಾಗುವುದನ್ನು ಖಚಿತಪಡಿಸುತ್ತದೆ. ಯಾರಾದರೊಬ್ಬರು ವೃದ್ಧಾಶ್ರಮದಲ್ಲಿ 20 ಹೊಸ ಹಾಸಿಗೆಗಳನ್ನು ಸೇರಿಸಲು ಇಚ್ಛಿಸಿದರೆ, ಆಗ ಇ-ರುಪಿ ವೋಚರ್ ಬಹಳ ಉಪಯುಕ್ತ.

ಯಾರಾದರೂ ಯಾವುದೇ ಪ್ರದೇಶದಲ್ಲಿರುವ 50 ಬಡವರಿಗೆ ಆಹಾರದ ವ್ಯವಸ್ಥೆ ಮಾಡುವುದಾದರೆ ಆಗ ಇ-ರುಪಿ ನೆರವಿಗೆ ಬರುತ್ತದೆ. ಗೋಶಾಲೆಯಲ್ಲಿ ಮೇವಿನ ವ್ಯವಸ್ಥೆ ಮಾಡಲು ಯಾರಾದರೂ ಇಚ್ಛಿಸಿದರೆ ಆ ವ್ಯಕ್ತಿಗೆ ಇ-ರುಪಿ ವೋಚರ್ ನೆರವಿಗೆ ಬರುತ್ತದೆ.

ಈಗ ನಾವಿದನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಿದರೆ, ಸರಕಾರ ಪುಸ್ತಕಕ್ಕಾಗಿ ಹಣ ಕಳುಹಿಸಿದರೆ, ಆಗ ಇ-ರುಪಿಯು ಅದರಿಂದ ಪುಸ್ತಕ ಮಾತ್ರ ಖರಿದಿಸುವುದನ್ನು ಖಾತ್ರಿಪಡಿಸುತ್ತದೆ. ಸಮವಸ್ತ್ರಕ್ಕಾಗಿ ಹಣ ಕಳುಹಿಸಿದರೆ, ಆಗ ಸಮವಸ್ತ್ರವನ್ನು ಮಾತ್ರವೇ ಖರೀದಿಸಬಹುದಾಗಿರುತ್ತದೆ.

ಸಬ್ಸಿಡಿ ದರದಲ್ಲಿ ರಸಗೊಬ್ಬರಕ್ಕಾಗಿ ನೆರವು ನೀಡಿದರೆ, ಆಗ ಅದನ್ನು ರಸಗೊಬ್ಬರ ಖರೀದಿಗೆ ಮಾತ್ರವೇ ಬಳಸಬಹುದಾಗಿರುತ್ತದೆ. ನೀಡಲಾದ ನಗದಿನಿಂದ ಗರ್ಭಿಣಿ ಮಹಿಳೆಯರಿಗೆ ಪೋಷಕಾಂಶಯುಕ್ತ ಆಹಾರವನ್ನು ಮಾತ್ರವೇ ಖರೀದಿಸಲು ಸಾಧ್ಯವಾಗುತ್ತದೆ. ಅಂದರೆ ಇ-ರುಪಿ ವೋಚರ್ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಆ ಹಣ  ಬಳಕೆಯಾಗುವುದನ್ನು ಖಾತ್ರಿಪಡಿಸುತ್ತದೆ.

ಸ್ನೇಹಿತರೇ,

ಮೊದಲು ಕೆಲವರು ಹೇಳುತ್ತಿದ್ದರು, ತಂತ್ರಜ್ಞಾನ ಶ್ರೀಮಂತರಿಗೆ ಮಾತ್ರ ಎಂದು, ಆದುದರಿಂದ ಭಾರತದಂಥ ಬಡ ರಾಷ್ಟ್ರದಲ್ಲಿ ತಂತ್ರಜ್ಞಾನದಿಂದ ಪ್ರಯೋಜನ ಏನು ಎಂದು ಕೇಳಲಾಗುತ್ತಿತ್ತು. ನಮ್ಮ ಸರಕಾರ ತಂತ್ರಜ್ಞಾನವನ್ನು ಒಂದು ಆಂದೋಲನ ಮಾಡುವ ಬಗ್ಗೆ ಮಾತನಾಡಿದಾಗ ಹಲವು ರಾಜಕಾರಣಿಗಳು ಮತ್ತು ಕೆಲವು ನಿರ್ದಿಷ್ಟ ವರ್ಗದ ತಜ್ಞರು ಅದನ್ನು ಪ್ರಶ್ನಿಸಲಾರಂಭಿಸಿದರು. ಇಂದು ದೇಶವು ಆ ಜನರ ಚಿಂತನೆಯನ್ನು ತಿರಸ್ಕರಿಸಿದೆ. ಮತ್ತು ಅವರ ನಿಲುವು ತಪ್ಪು ಎಂಬುದನ್ನು ಸಾಬೀತು ಮಾಡಿದೆ.

ಇಂದು ದೇಶದ ದೃಷ್ಟಿಕೋನ, ಧೋರಣೆಗಳು ಬದಲಾಗಿವೆ, ಅವುಗಳು ಹೊಸವು. ಇಂದು ನಾವು ತಂತ್ರಜ್ಞಾನವನ್ನು ಬಡವರಿಗೆ ಸಹಾಯ ಮಾಡಲು ಮತ್ತು ಅವರ ಪ್ರಗತಿಗೆ ನೆರವಾಗಲು ಸಲಕರಣೆ ಎಂದು ಭಾವಿಸಿದ್ದೇವೆ. ಭಾರತದಲ್ಲಿ ತಂತ್ರಜ್ಞಾನವು ಪಾರದರ್ಶಕತೆಯನ್ನು ಮತ್ತು ಪ್ರಾಮಾಣಿಕತೆಯನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ತಂತ್ರಜ್ಞಾನ ಹೊಸ ಅವಕಾಶಗಳನ್ನು ಹೇಗೆ ಸೃಷ್ಟಿ ಮಾಡುತ್ತಿದೆ, ಅದು ಬಡವರಿಗೆ ಹೇಗೆ ಲಭ್ಯವಾಗುವಂತೆ ಮಾಡುತ್ತಿದೆ ಮತ್ತು ಸಾಮಾನ್ಯ ಜನರು ಸರಕಾರ ಮತ್ತು ಕೆಂಪು ಪಟ್ಟಿಯನ್ನು ಅವಲಂಬಿಸುವುದನ್ನು ತಂತ್ರಜ್ಞಾನ ಹೇಗೆ ಕಡಿಮೆ ಮಾಡಿದೆ ಎಂಬುದನ್ನು ಅದು ಗಮನಿಸುತ್ತಿದೆ.

ನೀವು ಇಂದಿನ ವಿಶಿಷ್ಟ ಉತ್ಪನ್ನದತ್ತ ನೋಡಿ. ದೇಶವು ಜನ ಧನ್ ಖಾತೆಗಳನ್ನು ತೆರೆಯುವ ನಿಟ್ಟಿನಲ್ಲಿ, ಅವುಗಳನ್ನು ಆಧಾರ್ ಜೊತೆ ಸಂಪರ್ಕಿಸುವಲ್ಲಿ ಮತ್ತು ಮೊಬೈಲ್ ಜಾಲಕ್ಕೆ ಸೇರಿಸುವಲ್ಲಿ (ಜಾಮ್)  ನಿರಂತರ ಶ್ರಮಪಟ್ಟಿರುವುದರಿಂದ ನಾವಿಂದು ಇಲ್ಲಿಗೆ ತಲುಪಿದ್ದೇವೆ. ಜಾಮ್ ಆರಂಭಿಸಿದಾಗ ಬಹಳಷ್ಟು  ಮಂದಿ ಅದರ ಮಹತ್ವವನ್ನು ತಿಳಿದುಕೊಳ್ಳಲು ಸಮರ್ಥರಾಗಿರಲಿಲ್ಲ. ಆದರೆ ಲಾಕ್ ಡೌನ್ ನಲ್ಲಿ ನಾವದರ ಮಹತ್ವವನ್ನು ಮನಗಂಡೆವು. ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಕೂಡಾ ಲಾಕ್ ಡೌನ್ ಅವಧಿಯಲ್ಲಿ ತಮ್ಮಲ್ಲಿಯ ಬಡವರಿಗೆ ಸಹಾಯ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾಗ, ಭಾರತವು ಸಮಗ್ರ ವ್ಯವಸ್ಥೆಯೊಂದಿಗೆ ಸಿದ್ದವಾಗಿತ್ತು. ಇತರ ದೇಶಗಳು ಬ್ಯಾಂಕ್ ಗಳನ್ನು ಮತ್ತು ಅಂಚೆ ಕಚೇರಿಗಳನ್ನು ತೆರೆಯುತ್ತಿರುವಾಗ ಭಾರತವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣಕಾಸು ಸಹಾಯವನ್ನು ಕಳುಹಿಸುತ್ತಿತ್ತು.

ಇದುವರೆಗೆ ಸುಮಾರು 17.5 ಲಕ್ಷ ಕೋ.ರೂ.ಗಳನ್ನು ಭಾರತದಲ್ಲಿ ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಇಂದು ಕೇಂದ್ರ ಸರಕಾರವು ಸುಮಾರು 300ಕ್ಕೂ ಅಧಿಕ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ಡಿ.ಬಿ.ಟಿ. ಮೂಲಕ ಒದಗಿಸುತ್ತಿದೆ. ಸುಮಾರು 90 ಕೋಟಿ ದೇಶವಾಸಿಗಳು ಇದರಿಂದ ಒಂದಲ್ಲ ಒಂದು ರೀತಿಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅದು ಪಡಿತರ ಇರಲಿ, ಎಲ್.ಪಿ.ಜಿ.ಅನಿಲ  ಇರಲಿ, ಚಿಕಿತ್ಸೆ, ವಿದ್ಯಾರ್ಥಿ ವೇತನ, ನಿವೃತ್ತಿ ವೇತನ, ಸಂಬಳ, ಮನೆ ನಿರ್ಮಾಣಕ್ಕೆ ಸಹಾಯ, ಇಂತಹ ಹಲವಾರು ನೆರವುಗಳನ್ನು ಡಿ.ಬಿ.ಟಿ. ಮೂಲಕ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 1.35 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಬಾರಿ ಸುಮಾರು 85,000 ಕೋಟಿ ರೂಪಾಯಿ ಮೌಲ್ಯದ ಗೋಧಿಯನ್ನು ರೈತರಿಂದ ಖರೀದಿ ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ಜಮಾ ಮಾಡಲಾಗಿದೆ. ಈ ಎಲ್ಲಾ ಪ್ರಯೋಗಗಳ ಬಹಳ ದೊಡ್ಡ ಪ್ರಯೋಜನ ಎಂದರೆ ದೇಶದ 1.75 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ಅರ್ಹರಲ್ಲದವರ  ಕೈ ಸೇರುವುದನ್ನು ತಪ್ಪಿಸಲಾಗಿದೆ ಮತ್ತು ದೇಶಕ್ಕೆ ಅದನ್ನು  ಉಳಿತಾಯ ಮಾಡಲಾಗಿದೆ.

ಸ್ನೇಹಿತರೇ,

ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಭಾರತವು ಯಾರಿಗೂ ಕಡಿಮೆ ಇಲ್ಲ, ಮತ್ತು ಅದನ್ನು ಬಳಸಿಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಅನ್ವೇಷಣೆಗಳಿರಲಿ, ಅಥವಾ ಸೇವಾ ಪೂರೈಕೆಯಲ್ಲಿ ತಂತ್ರಜ್ಞಾನದ ಬಳಕೆ ಇರಲಿ, ಭಾರತವು ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಜೊತೆಗೆ ಜಾಗತಿಕ ನಾಯಕತ್ವವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ ಭಾರತವು ದಾಖಲಿಸಿರುವ ಪ್ರಗತಿಯ ವೇಗದಲ್ಲಿ ತಂತ್ರಜ್ಞಾನದ  ಸಮರ್ಪಕ ಬಳಕೆಯ ಪಾತ್ರ ಬಹಳ ದೊಡ್ಡದು. 8-10 ವರ್ಷಗಳ ಹಿಂದೆ ಯಾರಾದರೂ ರಸ್ತೆ ಬಳಕೆ ಶುಲ್ಕ ವಸೂಲಾತಿ ಕೇಂದ್ರಗಳಲ್ಲಿ (ಟೋಲ್ ಬೂತ್ ಗಳಲ್ಲಿ ) ಯಾವುದೇ ಭೌತಿಕ ವರ್ಗಾವಣೆ ಇಲ್ಲದೆ ಕೋಟ್ಯಂತರ ವಾಹನಗಳು ಹಾದು ಹೋಗಬಲ್ಲವು ಎಂದು ಊಹಿಸಿದ್ದರೆ?. ಫಾಸ್ಟ್ಯಾಗ್ ಗಳಿಂದ ಇದು ಸಾಧ್ಯವಾಗಿದೆ.

8-10 ವರ್ಷಗಳ ಹಿಂದೆ ದೂರದ ಹಳ್ಳಿ ಪ್ರದೇಶಗಳಲ್ಲಿ ಕರಕುಶಲ ವಸ್ತುಗಳ ನಿರ್ಮಾಣದಲ್ಲಿ ತೊಡಗಿರುವ ವ್ಯಕ್ತಿ ತನ್ನ ಉತ್ಪನ್ನಗಳನ್ನು ದಿಲ್ಲಿಯಲ್ಲಿರುವ ಸರಕಾರದ ಕಚೇರಿಗಳಿಗೆ ಮಾರಾಟ ಮಾಡಲು ಸಮರ್ಥರಾಗುತ್ತಾರೆ ಎಂಬುದನ್ನು ಯಾರಾದರೂ ಕಲ್ಪಿಸಿಕೊಳ್ಳಲು ಸಾಧ್ಯವಿತ್ತೇ? ಇಂದು ಇದು ಜಿ.ಇ.ಎಂ. ಅಂದರೆ ಸರಕಾರಿ ಇ-ಮಾರುಕಟ್ಟೆ ಸ್ಥಳ ಪೋರ್ಟಲಿನಿಂದ ಸಾಧ್ಯವಾಗಿದೆ.

ನಮ್ಮ ಪ್ರಮಾಣ ಪತ್ರಗಳು, ದಾಖಲೆಗಳು ಡಿಜಿಟಲ್ ಆಗಿ ಸದಾ ಕಾಲ ನಮ್ಮ ಕಿಸೆಯಲ್ಲಿರಲಿವೆ ಮತ್ತು ಅವುಗಳನ್ನು ಒಂದು ಕ್ಲಿಕ್ಕಿನ ಮೂಲಕ ಎಲ್ಲಾ ಕಡೆಯೂ ಬಳಸಬಹುದು  ಎಂಬುದನ್ನು 8-10 ವರ್ಷಗಳ ಹಿಂದೆ ಯಾರಾದರೂ ಕಲ್ಪಿಸಿಕೊಂಡಿದ್ದರೆ? ಇಂದು ಅದು ಡಿಜಿಲಾಕರಿನಿಂದ ಸಾಧ್ಯವಾಗಿದೆ.

ಭಾರತದ ಎಂ.ಎಸ್.ಎಂ.ಇ. ವಲಯದ ಉದ್ಯಮಿಯೊಬ್ಬರು ಬರೇ 59 ನಿಮಿಷಗಳಲ್ಲಿ ಸಾಲ ಮಂಜೂರಾತಿ ಪಡೆಯಬಲ್ಲರು ಎಂದು 8-10 ವರ್ಷಗಳ ಹಿಂದೆ ಯಾರಾದರೂ ಕಲ್ಪಿಸಿಕೊಂಡಿದ್ದರೆ?.ಭಾರತದಲ್ಲಿ ಇಂದು ಇದೂ ಸಾಧ್ಯವಾಗಿದೆ. ಅದೇ ರೀತಿ ನೀವು ಯಾವುದಕ್ಕಾದರೂ ಡಿಜಿಟಲ್ ವೋಚರ್ ಕಳುಹಿಸಬಹುದು ಮತ್ತು ಅದರ ಮೂಲಕ ಕೆಲಸ ಆಗುತದೆ ಎಂದು 8-10 ವರ್ಷಗಳ ಹಿಂದೆ ಕಲ್ಪಿಸಿಕೊಳ್ಳಲು ಸಾಧ್ಯವಿತ್ತೇ?. ಇಂದು ಇದು ಕೂಡಾ ಇ-ರುಪಿ ಮೂಲಕ ಸಾಧ್ಯವಾಗಿದೆ.

ಇಂತಹ ಹಲವಾರು ಉದಾಹರಣೆಗಳನ್ನು ನಾನು ಉಲ್ಲೇಖಿಸಬಲ್ಲೆ. ದೇಶವು ಈ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ತಂತ್ರಜ್ಞಾನದ ಶಕ್ತಿಯನ್ನು ಮನವರಿಕೆ ಮಾಡಿಕೊಂಡಿದೆ. ಇದಕ್ಕೆ ಒಂದು ಉದಾಹರಣೆ ಆರೋಗ್ಯ ಸೇತು ಆಪ್ , ಅದು ನಮ್ಮ ಕಣ್ಣ ಮುಂದಿದೆ. ಇಂದು ಇದು ಅತಿ ಹೆಚ್ಚು ಡೌನ್ ಲೋಡ್ ಆದ ಆಪ್ ಆಗಿದೆ. ಅದೇ ರೀತಿ ಕೊವಿನ್ ಪೋರ್ಟಲ್ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕಾ ಕೇಂದ್ರ ಆಯ್ಕೆ, ನೋಂದಣಿ, ಮತ್ತು ಲಸಿಕಾ ಪ್ರಮಾಣಪತ್ರ ಪಡೆಯುವಲ್ಲಿ ಜನತೆಗೆ  ಹೆಚ್ಚು ಸಹಾಯ ಮಾಡುತ್ತಿದೆ.

ಹಳೆಯ ವ್ಯವಸ್ಥೆಯೇ ಇದ್ದರೆ, ಲಸಿಕೆ ಪಡೆದ ಬಳಿಕ ಪ್ರಮಾಣ ಪತ್ರಕ್ಕಾಗಿ ಪರದಾಡಬೇಕಾಗುತ್ತಿತ್ತು.. ಇಂದು ಕೂಡಾ, ಜಗತ್ತಿನ ಹಲವಾರು ದೇಶಗಳಲಿ ಕೈಬರಹದ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಆದರೆ ಭಾರತದ ಜನರು ಒಂದು ಕ್ಲಿಕ್ ನಲ್ಲಿ ಡಿಜಿಟಲ್ ಪ್ರಮಾಣ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದ ಭಾರತದ ಕೊವಿನ್ ವ್ಯವಸ್ಥೆ ಜಗತ್ತಿನ ಅನೇಕ ದೇಶಗಳನ್ನು ಆಕರ್ಷಿಸುತ್ತಿದೆ. ಭಾರತ ಕೂಡಾ ಅದನ್ನು ಜಗತ್ತಿನ ಜೊತೆ ಹಂಚಿಕೊಳ್ಳುತ್ತಿದೆ.

 

|

ಸ್ನೇಹಿತರೇ,

ನಾಲ್ಕು ವರ್ಷಗಳ ಹಿಂದೆ ಭೀಮ ಆಪ್ ನ್ನು ಕಾರ್ಯಾರಂಭ ಮಾಡಿದಾಗ, ಆ ದಿನದಂದು ನಾನು ಹೇಳಿದ್ದೆ. ಬಹುತೇಕ ವ್ಯಾಪಾರ ವ್ಯವಹಾರಗಳು ಕರೆನ್ಸಿ ನೋಟುಗಳು ಮತ್ತು ನಾಣ್ಯಗಳಿಗೆ ಬದಲು ಡಿಜಿಟಲ್ ಮೂಲಕ ಆಗುವ ದಿನಗಳು ದೂರವಿಲ್ಲ ಎಂದು ಹೇಳಿದ್ದನ್ನು ನಾನು ನೆನಪಿಸುತ್ತೇನೆ. ಆಗ ನಾನು ಹೇಳಿದ್ದೆ, ಈ ಬದಲಾವಣೆ ಬಡವರನ್ನು ಸಶಕ್ತೀಕರಣಗೊಳಿಸುತ್ತದೆ. ಅವಕಾಶ ವಂಚಿತರನ್ನು, ಸಣ್ಣ ವ್ಯಾಪಾರಿಗಳನ್ನು, ರೈತರನ್ನು, ಮತ್ತು ಬುಡಕಟ್ಟು ಸಮುದಾಯದವರನ್ನು ಹೆಚ್ಚು ಸಶಕ್ತಗೊಳಿಸುತ್ತದೆ ಎಂದೂ ಹೇಳಿದ್ದೆ. ಅದನ್ನು ನಾವಿಂದು ಕಾಣುತ್ತಿದ್ದೇವೆ. ಪ್ರತೀ ತಿಂಗಳೂ ಯು.ಪಿ.ಐ.ಯ ಹೊಸ ದಾಖಲೆಗಳು ರಚನೆಯಾಗುತ್ತಿವೆ. ಜುಲೈ ತಿಂಗಳಲ್ಲಿ ಯು.ಪಿ.ಐ. ಮೂಲಕ 300 ಕೋಟಿಗೂ ಅಧಿಕ ವರ್ಗಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಆರು ಲಕ್ಷ ಕೋ.ರೂ. ಮೊತ್ತದ ವ್ಯವಹಾರ ನಡೆದಿದೆ. ಇಂದು ಚಹಾ ಮಾರುವವರು, ಹಣ್ಣಿನ ರಸ ಮಾರುವವರು, ಹಣ್ಣು ಮಾರಾಟಗಾರರು ಮತ್ತು ತರಕಾರಿ ಮಾರಾಟಗಾರರು ಕೂಡಾ ಇದನ್ನು ಬಳಸುತ್ತಿದ್ದಾರೆ.

ಭಾರತದ ರುಪೇ ಕಾರ್ಡ್ ಕೂಡಾ ಇದೇ ಅವಧಿಯಲ್ಲಿ ದೇಶದ ಹೆಮ್ಮೆಯನ್ನು ಬಲಪಡಿಸುತ್ತಿದೆ. ಇದು ಸಿಂಗಾಪುರ ಮತು ಭೂತಾನ್ ಗಳಲ್ಲಿ ಕಾರ್ಯಾಚರಿಸುತ್ತಿದೆ. ಇಂದು 66 ಕೋಟಿ ರುಪೇ ಕಾರ್ಡ್ ಗಳು ದೇಶದಲ್ಲಿದ್ದು, ಸಾವಿರಾರು ಕೋಟಿ ರೂಪಾಯಿಗಳ ವರ್ಗಾವಣೆ ಈ ಕಾರ್ಡ್ ಗಳ ಮೂಲಕ ನಡೆಯುತ್ತಿದೆ. ಈ ಕಾರ್ಡ್ ಗಳು ಬಡವರನ್ನು ಸಶಕ್ತರನ್ನಾಗಿಸಿವೆ. ಬಡವರು ತಾವೂ ಡೆಬಿಟ್ ಕಾರ್ಡ್ ಹೊಂದಬಹುದು ಮತ್ತು ಹಣದ ವರ್ಗಾವಣೆ ಮಾಡಬಹುದು ಎಂಬ ಕಾರಣಕ್ಕೆ ಹೆಮ್ಮೆ ಅನುಭವಿಸುತ್ತಿದ್ದಾರೆ.

 

|

ಸ್ನೇಹಿತರೇ,

ತಂತ್ರಜ್ಞಾನ ಬಡವರನ್ನು ಸಶಕ್ತರನ್ನಾಗಿಸುವುದು ಹೇಗೆ ಎಂಬುದಕ್ಕೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನಾ ಒಂದು ಉದಾಹರಣೆ. ನಮ್ಮ ದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳ ಹಣಕಾಸು ಸೇರ್ಪಡೆಯ ಬಗ್ಗೆ ಹಿಂದೆಂದೂ ಯೋಚನೆಯನ್ನು ಕೂಡಾ ಮಾಡಲಾಗಿರಲಿಲ್ಲ. ತಮ್ಮ ವ್ಯವಹಾರ ವಿಸ್ತರಣೆಗೆ ಬ್ಯಾಂಕುಗಳಿಂದ ಅವರಿಗೆ ಹಣಕಾಸು ಸಹಾಯ ದೊರೆಯುವುದು ಅಸಾಧ್ಯವೇ ಆಗಿತ್ತು. ಡಿಜಿಟಲ್ ವರ್ಗಾವಣೆಗಳ ಇತಿಹಾಸ ಇಲ್ಲದೇ ಇರುವುದರಿಂದ ಮತ್ತು ದಾಖಲೆಗಳ ಕೊರತೆಯಿಂದ ನಮ್ಮ ಬೀದಿ ಬದಿ ವ್ಯಾಪಾರಿಗಳಿಗೆ  ಬ್ಯಾಂಕಿನಿಂದ ಸಾಲ ಪಡೆಯುವುದಕ್ಕೆ ಬೇಕಾದ ಮೊದಲ ಹಂತವನ್ನು ಪೂರೈಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿ, ನಮ್ಮ ಸರಕಾರ ಪಿ.ಎ.ಸ್ವನಿಧಿ ಯೋಜನೆಯನ್ನು ಆರಂಭ ಮಾಡಿತು. ಇಂದು ದೇಶದ ಸಣ್ಣ ಪಟ್ಟಣ ಮತ್ತು ನಗರಗಳಲ್ಲಿ ಹರಡಿರುವ 23 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಸಹಾಯ ದೊರೆತಿದೆ. ಈ ಕೊರೊನಾ ಅವಧಿಯಲ್ಲಿಯೂ ಸುಮಾರು 2,300 ಕೋ.ರೂ.ಗಳನ್ನು ಅವರಿಗೆ ಒದಗಿಸಲಾಗಿದೆ. ಈ ಬಡ ಜನರು ಈಗ ಡಿಜಿಟಲ್ ವರ್ಗಾವಣೆ ನಡೆಸುತ್ತಿದ್ದಾರೆ ಮತ್ತು ಅವರ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಅದರಿಂದಾಗಿ ಈಗ ಅವರ ವರ್ಗಾವಣೆಗಳ ಡಿಜಿಟಲ್ ಇತಿಹಾಸವನ್ನು ರೂಪಿಸಲಾಗುತ್ತಿದೆ.

ಪಿ.ಎಂ.ಸ್ವನಿಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವರ ಮೊದಲ ಸಾಲವಾದ 10 ಸಾವಿರ ರೂಪಾಯಿಗಳನ್ನು ಮರು ಪಾವತಿ ಮಾಡಿದ ಬಳಿಕ 20 ಸಾವಿರ ರೂಪಾಯಿಗಳ ಎರಡನೇ ಸಾಲವನ್ನು ಪಡೆಯುವ ಅವಕಾಶವಿದೆ. ಅದೇ ರೀತಿ ಎರಡನೇ ಸಾಲದ ಮರುಪಾವತಿಯ ಬಳಿಕ ಮೂರನೇ ಸಾಲದ ಮೊತ್ತವನ್ನು 50 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗುತ್ತದೆ. ನಿಮಗೆ ಸಂತೋಷವಾಗಬಹುದು, ಇಂದು ನೂರಾರು ಬೀದಿ ಬದಿ ವ್ಯಾಪಾರಿಗಳು ತಮ್ಮ ಮೂರನೇ ಸಾಲವನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ.

ಸ್ನೇಹಿತರೇ,

ಕಳೆದ 6-7 ವರ್ಷಗಳಲ್ಲಿ ಡಿಜಿಟಲ್ ಮೂಲಸೌಕರ್ಯಕ್ಕೆ ಮತ್ತು ಡಿಜಿಟಲ್ ವರ್ಗಾವಣೆಗೆ ದೇಶದಲ್ಲಿ ಮಾಡಲಾದ ಕೆಲಸ-ಕಾರ್ಯಗಳ ಬಗ್ಗೆ ಜಗತ್ತು ಇಂದು ಗಮನ ಹರಿಸಿದೆ. ಭಾರತದಲ್ಲಿ ವಿಶೇಷವಾಗಿ ಹಣಕಾಸು ತಂತ್ರಜ್ಞಾನಕ್ಕೆ ವಿಶಾಲವಾದ ತಳಹದಿಯನ್ನು ನಿರ್ಮಾಣ ಮಾಡಲಾಗಿದೆ. ಇಂತಹ ವ್ಯವಸ್ಥೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಇಲ್ಲ. ದೇಶವಾಸಿಗಳ ಧನಾತ್ಮಕ ಮನೋಭಾವ ಮತ್ತು ಹಣಕಾಸು ತಂತ್ರಜ್ಞಾನ ಪರಿಹಾರಗಳನ್ನು  ಅಳವಡಿಸಿಕೊಳ್ಳುವ  ಅವರ ಸಾಮರ್ಥ್ಯಕ್ಕೆ ಮೇರೆ ಇಲ್ಲ. ಇದು ಭಾರತದ ಯುವ ಜನಸಮುದಾಯಕ್ಕೆ ಬಹಳ ದೊಡ್ಡ ಅವಕಾಶ ಮತ್ತು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಗೂ ದೊಡ್ಡ ಅವಕಾಶ. ಭಾರತದ ನವೋದ್ಯಮಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಹಲವು ಸಾಧ್ಯತೆಗಳಿವೆ.

ಸ್ನೇಹಿತರೇ,

ಇ-ರುಪಿ ವೋಚರ್ ಯಶೋಗಾಥೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನಮ್ಮ ಬ್ಯಾಂಕ್ ಗಳು ಮತ್ತು ಇತರ ಪಾವತಿ ಗೇಟ್ ವೇಗಳು ಅದರಲ್ಲಿ ಬಹಳ ದೊಡ್ಡ ಪಾತ್ರವನ್ನು ಹೊಂದಿವೆ. ನಮ್ಮ ನೂರಾರು ಖಾಸಗಿ ಆಸ್ಪತ್ರೆಗಳು, ಕಾರ್ಪೋರೇಟ್ ಗಳು, ಕೈಗಾರಿಕೋದ್ಯಮಗಳು, ಎನ್.ಜಿ.ಒ.ಗಳು ಮತ್ತು ಇತರ ಸಂಸ್ಥೆಗಳು ಇದರಲ್ಲಿ ಬಹಳ ಆಸಕ್ತಿಯನ್ನು ತೋರಿಸಿವೆ. ನಾನು ಕೂಡಾ ಇ-ರುಪಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎಂದು ರಾಜ್ಯ ಸರಕಾರಗಳನ್ನು ಆಗ್ರಹಿಸುತ್ತೇನೆ. ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸಮಗ್ರ ಮತ್ತು ನಿಖರ ಪ್ರಯೋಜನಗಳನ್ನು ಖಾತ್ರಿಪಡಿಸಲು ಇದರಿಂದ ಸಾಧ್ಯವಾಗಲಿದೆ. ನಮ್ಮೆಲ್ಲರ ಇಂತಹ ಫಲಪ್ರದ ಸಹಭಾಗಿತ್ವದಿಂದ ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದಕ್ಕೆ ವೇಗ ದೊರಕಲಿದೆ ಎಂಬ ವಿಷಯದಲ್ಲಿ  ನನಗೆ ಖಾತ್ರಿ ಇದೆ.

ಮತ್ತೊಮ್ಮೆ, ನಾನು ಎಲ್ಲಾ ದೇಶವಾಸಿಗಳನ್ನು ಈ ಬೃಹತ್ ಸುಧಾರಣೆಗಾಗಿ ಅಭಿನಂದಿಸುತ್ತೇನೆ. ಬಹಳ ಬಹಳ ಅಭಿನಂದನೆಗಳು!

ಧನ್ಯವಾದಗಳು!

 

  • Virudthan May 28, 2025

    🔴🔴🔴🔴Jai Shri Ram🔴🔴🌺🔴 Jai Shri Ram🔴🍁🔴🔴🔴Jai Shri Ram🔴🔴Jai Shri Ram🔴🌺 🔴🔴🔴🔴🔴Jai Shri Ram🌺 Jai Shri Ram 🔴🔴🔴🔴Jai Shri Ram🔴🔴🔴
  • Ratnesh Pandey April 16, 2025

    भारतीय जनता पार्टी ज़िंदाबाद ।। जय हिन्द ।।
  • Jitendra Kumar April 14, 2025

    🙏🇮🇳
  • didi December 25, 2024

    bjp
  • Devendra Kunwar October 17, 2024

    BJP
  • Rahul Rukhad October 08, 2024

    BJP
  • Reena chaurasia August 27, 2024

    nbjp
  • Ram Raghuvanshi February 26, 2024

    jao shree Ram
  • Jayanta Kumar Bhadra February 17, 2024

    Jay Shree Ram
  • Jayanta Kumar Bhadra February 17, 2024

    Jay Hind
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s services sector maintains strong momentum in May; job creation hits record high

Media Coverage

India’s services sector maintains strong momentum in May; job creation hits record high
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಜೂನ್ 2025
June 05, 2025

Citizens Appreciate 11 years of PM Modi’s Effort for Sabka Saath Sabka Vikas Empowering the Poor

Appreciation by Citizens Towards PM Modi’s Effort in Building a Greener, Stronger India: Sustainability and Innovation Taking Center Stage