

ಈಶಾನ್ಯ ಭಾರತದ ಸಾಂಸ್ಕೃತಿಕ ಚೈತನ್ಯವನ್ನು ಪ್ರದರ್ಶಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಿಸೆಂಬರ್ 6ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಅಷ್ಟಲಕ್ಷ್ಮಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಇದೇ ಪ್ರಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಮೂರು ದಿನಗಳ ಈ ಸಾಂಸ್ಕೃತಿಕ ಉತ್ಸವವು ಡಿಸೆಂಬರ್ 6 ರಿಂದ 8ರವರೆಗೆ ನಡೆಯಲಿದೆ. ಇದು ಈಶಾನ್ಯ ಭಾರತದ ವಿಶಾಲವಾದ ಸಾಂಸ್ಕೃತಿಕ ಚಿತ್ರಣವನ್ನು ಎತ್ತಿ ತೋರಿಸುವುದಲ್ಲದೆ, ಸಾಂಪ್ರದಾಯಿಕ ಕಲೆಗಳು, ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಅಭ್ಯಾಸಗಳ ಆಚರಣೆಗಳನ್ನು ಪರಿಚಯಿಸುತ್ತದೆ.
ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕೈಮಗ್ಗ, ಕೃಷಿ ಉತ್ಪನ್ನಗಳು ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಆರ್ಥಿಕ ಅವಕಾಶಗಳನ್ನು ಉತ್ತೇಜಿಸಲು, ಈ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಉತ್ಸವದಲ್ಲಿ ಕುಶಲಕರ್ಮಿಗಳ ಪ್ರದರ್ಶನಗಳು, ಗ್ರಾಮೀಣ ಕರಕುಶಲ ವಸ್ತುಗಳು, ರಾಜ್ಯ ನಿರ್ದಿಷ್ಟ ಪೆವಿಲಿಯನ್ ಗಳು ಮತ್ತು ಈಶಾನ್ಯ ಭಾರತದ ಅಭಿವೃದ್ಧಿಗೆ ನಿರ್ಣಾಯಕವಾದ ಪ್ರಮುಖ ಕ್ಷೇತ್ರಗಳ ತಾಂತ್ರಿಕ ಅಧಿವೇಶನಗಳು ಕೂಡಾ ನಡೆಯಲಿವೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಹೂಡಿಕೆದಾರರ ಅಧಿವೇಶನಗಳು, ಸಭೆ ಮತ್ತು ಖರೀದಿದಾರ-ಮಾರಾಟಗಾರರ ಸಭೆಗಳು ಕೂಡಾ ನಡೆಯಲಿವೆ, ಈ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಪಾಲುದಾರಿಕೆಗಳು ಮತ್ತು ಜಂಟಿ ಉಪಕ್ರಮಗಳನ್ನು ನಿರ್ಮಿಸಿ, ಬಲಪಡಿಸಲು ಅನನ್ಯ ಅವಕಾಶವಾಗಿ ಈ ಸಾಂಸ್ಕೃತಿಕ ಉತ್ಸವವನ್ನು ವಿನ್ಯಾಸಗೊಳಿಸಲಾಗಿದೆ.
ಈ ಮಹೋತ್ಸವದಲ್ಲಿ ಈಶಾನ್ಯ ಭಾರತದ ಶ್ರೀಮಂತ ಕೈಮಗ್ಗ ಮತ್ತು ಕರಕುಶಲ ಸಂಪ್ರದಾಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ವಿನ್ಯಾಸ ಸಮಾವೇಶ ಮತ್ತು ಫ್ಯಾಷನ್ ಪ್ರದರ್ಶನಗಳು ನಡೆಯಲಿವೆ. ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವ ಈ ಉತ್ಸವವು ರೋಮಾಂಚಕ ಸಂಗೀತ ಪ್ರದರ್ಶನಗಳು ಮತ್ತು ಈಶಾನ್ಯ ಭಾರತದ ಸ್ಥಳೀಯ ಪಾಕಪದ್ಧತಿಗಳನ್ನು ಸಹ ಪ್ರದರ್ಶಿಸುತ್ತದೆ.