Quoteರಾಜಸ್ಥಾನದಲ್ಲಿ 46,300 ಕೋಟಿ ರೂಪಾಯಿ ಮೌಲ್ಯದ ಇಂಧನ, ರಸ್ತೆ, ರೈಲ್ವೆ ಮತ್ತು ನೀರಿಗೆ ಸಂಬಂಧಿಸಿದ 24 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನೆರವೇರಿಸಿದರು
Quoteಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು ಉತ್ತಮ ಆಡಳಿತದ ಸಂಕೇತವಾಗುತ್ತಿವೆ: ಪ್ರಧಾನಮಂತ್ರಿ
Quoteಈ 10 ವರ್ಷಗಳಲ್ಲಿ ನಾವು ದೇಶದ ಜನರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ, ಅವರ ಜೀವನದ ತೊಂದರೆಗಳನ್ನು ಕಡಿಮೆ ಮಾಡಲು ಸಾಕಷ್ಟು ಒತ್ತು ನೀಡಿದ್ದೇವೆ: ಪ್ರಧಾನಮಂತ್ರಿ
Quoteಪರಿಹಾರಗಳನ್ನು ಒದಗಿಸುವಲ್ಲಿ ನಾವು ಸಹಕಾರವನ್ನು ನಂಬುತ್ತೇವೆಯೇ ಹೊರತು ವಿರೋಧವನ್ನಲ್ಲ: ಪ್ರಧಾನಮಂತ್ರಿ
Quoteರಾಜಸ್ಥಾನದಲ್ಲಿ ನೀರಿಗೆ ಕೊರತೆ ಉಂಟಾಗದ ದಿನವನ್ನು ನಾನು ನೋಡುತ್ತಿದ್ದೇನೆ, ರಾಜಸ್ಥಾನದಲ್ಲಿ ಅಭಿವೃದ್ಧಿಗೆ ಸಾಕಷ್ಟು ನೀರು ಲಭ್ಯವಾಗಲಿದೆ: ಪ್ರಧಾನಮಂತ್ರಿ
Quoteಜಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಪ್ರತಿ ಹನಿ ನೀರನ್ನು ಬಳಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಇದು ಇಡೀ ಸಮಾಜದ ಜವಾಬ್ದಾರಿ: ಪ್ರಧಾನಮಂತ್ರಿ
Quoteರಾಜಸ್ಥಾನದಲ್ಲಿ ಅಪಾರ ಸೌರಶಕ್ತಿ ಸಾಮರ್ಥ್ಯವಿದೆ, ಇದು ಈ ವಲಯದಲ್ಲಿ ದೇಶದ ಪ್ರಮುಖ ರಾಜ್ಯವಾಗಬಹುದು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಜೈಪುರದಲ್ಲಿ ನಡೆದ ʻಒಂದು ವರ್ಷ-ಪರಿಣಾಮ ಶ್ರೇಷ್ಠʼ(ಏಕ್ ವರ್ಷ್-ಪರಿನಾಮ್ ಉತ್ಕರ್ಷ್) ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ರಾಜ್ಯ ಸರ್ಕಾರದ ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ರಾಜಸ್ಥಾನ ಸರ್ಕಾರ ಮತ್ತು ರಾಜಸ್ಥಾನದ ಜನರನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಜನರ ಆಶೀರ್ವಾದ ಪಡೆಯುವ ಅದೃಷ್ಟ ತಮ್ಮದಾಗಿದೆ ಎಂದು ಅವರು ಹೇಳಿದರು. ರಾಜಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಹೊಸ ದಿಕ್ಕು ಮತ್ತು ವೇಗವನ್ನು ನೀಡಲು ಕೈಗೊಂಡ ಪ್ರಯತ್ನಗಳಿಗಾಗಿ ಶ್ರೀ ಮೋದಿ ಅವರು ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಶ್ಲಾಘಿಸಿದರು. ಮೊದಲ ವರ್ಷವು ಮುಂಬರುವ ಹಲವು ವರ್ಷಗಳ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮವು ಸರ್ಕಾರ ಒಂದು ವರ್ಷ  ಪೂರ್ಣಗೊಳಿಸಿದ್ದನ್ನು ಮಾತ್ರವಲ್ಲ, ರಾಜಸ್ಥಾನದ ಉಜ್ವಲತೆ ಮತ್ತು ರಾಜಸ್ಥಾನದ ಅಭಿವೃದ್ಧಿಯ ಹಬ್ಬವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ಇತ್ತೀಚೆಗೆ ನಡೆದ ʻರೈಸಿಂಗ್ ರಾಜಸ್ಥಾನ ಶೃಂಗಸಭೆ-2024ʼ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿದ್ದನ್ನು ಸ್ಮರಿಸಿದ ಶ್ರೀ ಮೋದಿ, ವಿಶ್ವದ ವಿವಿಧ ಭಾಗಗಳ ಅನೇಕ ಹೂಡಿಕೆದಾರರು ಅಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದರು ಮತ್ತು ಇಂದು 45,000 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳನ್ನು ರಾಜ್ಯದಲ್ಲಿ ಉದ್ಘಾಟಿಸಲಾಗಿದೆ ಎಂದರು. ಈ ಯೋಜನೆಗಳು ರಾಜಸ್ಥಾನದಲ್ಲಿ ನೀರಿಗೆ ಸಂಬಂಧಿಸಿದಂತೆ ಅಡೆತಡೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುತ್ತವೆ ಮತ್ತು ರಾಜಸ್ಥಾನವನ್ನು ಭಾರತದ ಉತ್ತಮ ಸಂಪರ್ಕ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿ ಮಾಡುತ್ತವೆ ಎಂದು ಅವರು ಹೇಳಿದರು. ಈ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ಹೂಡಿಕೆದಾರರನ್ನು ಆಹ್ವಾನಿಸುತ್ತವೆ, ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುತ್ತವೆ ಮತ್ತು ರಾಜಸ್ಥಾನದ ರೈತರು, ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ಪ್ರಧಾನಿ ಹೇಳಿದರು.

 

|

"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು ಉತ್ತಮ ಆಡಳಿತದ ಸಂಕೇತವಾಗುತ್ತಿವೆ" ಎಂದು ಶ್ರೀ ಮೋದಿ ಉದ್ಗರಿಸಿದರು. ಅವರು ಕೈಗೊಂಡ ನಿರ್ಣಯಗಳ ಸಾಧನೆಯನ್ನು ತಮ್ಮ ಸರ್ಕಾರ ಖಾತರಿಪಡಿಸಲಿದೆ ಎಂದು ಅವರು ಆಶ್ವಾಸನೆ ನೀಡಿದರು. ಇಂದು, ತಮ್ಮ ಪಕ್ಷವು ಉತ್ತಮ ಆಡಳಿತವನ್ನು ಒದಗಿಸುವ ಖಾತರಿಯ ಸಂಕೇತವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಅನೇಕ ರಾಜ್ಯಗಳಲ್ಲಿ ಜನಸಾಮಾನ್ಯರ ಬೆಂಬಲವನ್ನು ಪಡೆಯಲು ಇದೇ ಮುಖ್ಯ ಕಾರಣವಾಗಿದೆ ಎಂದು ಅವರು ಹೇಳಿದರು. ಸತತ ಮೂರನೇ ಬಾರಿಗೆ ತಮ್ಮ ಸೇವೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಭಾರತದ ಜನರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, ಕಳೆದ 60 ವರ್ಷಗಳಲ್ಲಿ ಒಂದೇ ಪಕ್ಷವು ಸತತ ಮೂರು ಬಾರಿ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದ ಇತಿಹಾಸವಿಲ್ಲ ಎಂದು ಹೇಳಿದರು. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸತತವಾಗಿ ಎರಡು ಬಾರಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಮತ್ತು ಬೆಂಬಲಿಸಿದ್ದಕ್ಕಾಗಿ ಶ್ರೀ ಮೋದಿ ಅವರು ಜನರಿಗೆ ಧನ್ಯವಾದ ಅರ್ಪಿಸಿದರು. ಇದು ತಮ್ಮ ಮೇಲೆ ಜನರಿಗಿರುವ ನಂಬಿಕೆಯನ್ನು ತೋರಿಸುತ್ತದೆ ಎಂದರು.

ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದ್ದಕ್ಕಾಗಿ ಶ್ರೀ ಭೈರೋನ್ ಸಿಂಗ್ ಶೇಖಾವತ್ ನೇತೃತ್ವದ ಹಿಂದಿನ ರಾಜಸ್ಥಾನದ ಸರ್ಕಾರ ಮತ್ತು ಉತ್ತಮ ಆಡಳಿತದ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಅನುವು ಮಾಡಿದ ಶ್ರೀಮತಿ ವಸುಂಧರಾ ರಾಜೇ ಸಿಂಧಿಯಾ ಅವರಿಗೆ ಶ್ರೀ ಮೋದಿ ಅವರು ಧನ್ಯವಾದ ಅರ್ಪಿಸಿದರು. ಶ್ರೀ ಭಜನ್ ಲಾಲ್ ಶರ್ಮಾ ಅವರ ಹಾಲಿ ಸರ್ಕಾರವು ಉತ್ತಮ ಆಡಳಿತದ ಪರಂಪರೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳನ್ನು ಮಾಡಲಿದೆ ಎಂದರು. ಕಳೆದ ಒಂದು ವರ್ಷದಲ್ಲಿ ಕೈಗೊಂಡ ಕಾಮಗಾರಿಗಳು ಈ ಭಾವನೆಯನ್ನು ಮೂಡಿಸುತ್ತವೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ ಕೈಗೊಂಡ ಯೋಜನೆಗಳು ಮತ್ತು ಕಾರ್ಯಗಳ ಬಗ್ಗೆ ವಿವರವಾಗಿ ಚರ್ಚಿಸಿ ಅವುಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಡ ಕುಟುಂಬಗಳು, ಮಹಿಳೆಯರು, ಕಾರ್ಮಿಕರು, ವಿಶ್ವಕರ್ಮರು ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಪ್ರಶ್ನೆ ಪತ್ರಿಕೆ ಸೋರಿಕೆ, ಉದ್ಯೋಗ ಹಗರಣಗಳಂತಹ ಪಿಡುಗುಗಳು ಹಿಂದಿನ ಸರ್ಕಾರಗಳ ಹೆಗ್ಗುರುತಾಗಿದ್ದವು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಯುವಕರು ಇದರಿಂದಾಗಿ ತೀವ್ರ ತೊಂದರೆಗೆ ಒಳಗಾಗಿದ್ದರು. ಪ್ರಸ್ತುತ ಸರ್ಕಾರವು ಈ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು. ಪ್ರಸ್ತುತ ರಾಜಸ್ಥಾನ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ನೇಮಕಾತಿ ಪರೀಕ್ಷೆಗಳನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ನಡೆಸಲಾಗುತ್ತಿದೆ ಮತ್ತು ನೇಮಕಾತಿಗಳನ್ನು ಸಹ ಅದೇ ರೀತಿ ಮಾಡಲಾಗುತ್ತಿದೆ ಎಂದು ಅವರು ಗಮನ ಸೆಳೆದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜಸ್ಥಾನದ ಜನರು ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚು ಹಣ ಪಾವತಿಸಬೇಕಾಗಿತ್ತು. ಪ್ರಸ್ತುತ ಸರ್ಕಾರದ ಅಡಿಯಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿಷಯದಲ್ಲಿ ಜನರಿಗೆ ಪರಿಹಾರ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆ ಮೂಲಕ ಕೇಂದ್ರ ಸರ್ಕಾರವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತದೆ ಮತ್ತು ರಾಜಸ್ಥಾನ ರಾಜ್ಯ ಸರ್ಕಾರವು ರೈತರನ್ನು ಬೆಂಬಲಿಸಲು ಹೆಚ್ಚುವರಿ ಹಣವನ್ನು ಸೇರಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಭರವಸೆಗಳನ್ನು ತ್ವರಿತವಾಗಿ ಈಡೇರಿಸುವ ಮೂಲಕ ತಳಮಟ್ಟದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕ್ಷಿಪ್ರವಾಗಿ ಅನುಷ್ಠಾನಗೊಳಿಸುತ್ತಿವೆ ಮತ್ತು ಇಂದಿನ ಕಾರ್ಯಕ್ರಮವು ಈ ಬದ್ಧತೆಯ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು.

 

|

ರಾಜಸ್ಥಾನದ ಜನತೆಯ ಆಶೀರ್ವಾದದಿಂದ ತಮ್ಮ ಸರ್ಕಾರ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಎಂದು ಶ್ರೀ ಮೋದಿ ಹೇಳಿದರು. ಈ 10 ವರ್ಷಗಳಲ್ಲಿ, ಜನರಿಗೆ ಸೌಲಭ್ಯಗಳನ್ನು ಒದಗಿಸಲು ಮತ್ತು ಅವರ ತೊಂದರೆಗಳನ್ನು ಕಡಿಮೆ ಮಾಡಲು ತಾವು ಗಮನ ಹರಿಸಿರುವುದಾಗಿ ಪ್ರಧಾನಿ ಒತ್ತಿ ಹೇಳಿದರು. ಸ್ವಾತಂತ್ರ್ಯದ ನಂತರದ 5-6 ದಶಕಗಳಲ್ಲಿ ಹಿಂದಿನ ಸರ್ಕಾರಗಳು ಸಾಧಿಸಿದ್ದಕ್ಕಿಂತ ಹೆಚ್ಚಿನದನ್ನು ತಾವು 10 ವರ್ಷಗಳಲ್ಲಿ ಸಾಧಿಸಿರುವುದಾಗಿ ಪ್ರಧಾನಿ ಹೇಳಿದರು. ರಾಜಸ್ಥಾನದಲ್ಲಿ ನೀರಿನ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಜ್ಯದ ಅನೇಕ ಪ್ರದೇಶಗಳು ತೀವ್ರ ಬರಗಾಲಕ್ಕೆ ಸಾಕ್ಷಿಯಾದರೆ, ಇತರ ಪ್ರದೇಶಗಳಲ್ಲಿ ನದಿ ನೀರು ಬಳಕೆಯಾಗದೆ ಸಮುದ್ರಕ್ಕೆ ಹರಿಯುತ್ತದೆ ಎಂದು ಒತ್ತಿ ಹೇಳಿದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಈ ಸಮಸ್ಯೆಯನ್ನು ಪರಿಹರಿಸಲು ನದಿಗಳನ್ನು ಜೋಡಿಸುವ ಕನಸು ಕಂಡಿದ್ದರು ಮತ್ತು ಅದಕ್ಕಾಗಿ ವಿಶೇಷ ಸಮಿತಿಯನ್ನು ಸಹ ರಚಿಸಿದ್ದರು ಎಂದು ಒತ್ತಿ ಹೇಳಿದರು. ನದಿಗಳಿಂದ ಹೆಚ್ಚುವರಿ ನೀರನ್ನು ಬರಪೀಡಿತ ಪ್ರದೇಶಗಳಿಗೆ ವರ್ಗಾಯಿಸುವುದು, ಪ್ರವಾಹ ಮತ್ತು ಬರ ಸಮಸ್ಯೆಗಳನ್ನು ಪರಿಹರಿಸುವುದು ಇದರ ಗುರಿಯಾಗಿದೆ ಎಂದರು. ಸುಪ್ರೀಂ ಕೋರ್ಟ್ ಕೂಡ ಈ ದೃಷ್ಟಿಕೋನವನ್ನು ಬೆಂಬಲಿಸಿದೆ, ಆದರೆ ಹಿಂದಿನ ಸರ್ಕಾರಗಳು ನೀರಿನ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿರಲಿಲ್ಲ ಮತ್ತು ಬದಲಿಗೆ ರಾಜ್ಯಗಳ ನಡುವಿನ ಜಲ ವಿವಾದಗಳನ್ನು ಉತ್ತೇಜಿಸಿದವು ಎಂದು ಅವರು ಟೀಕಿಸಿದರು. ಮಹಿಳೆಯರು ಮತ್ತು ರೈತರ ಮೇಲೆ ಪರಿಣಾಮ ಬೀರುವ ಈ ನೀತಿಯಿಂದಾಗಿ ರಾಜಸ್ಥಾನವು ಬಹಳ ತೊಂದರೆ ಅನುಭವಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ನರ್ಮದಾ ನೀರನ್ನು ಗುಜರಾತ್ ಮತ್ತು ರಾಜಸ್ಥಾನದ ವಿವಿಧ ಭಾಗಗಳಿಗೆ ತರಲು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಾವು ಮಾಡಿದ ಪ್ರಯತ್ನಗಳನ್ನು ಪ್ರಧಾನಿ ಸ್ಮರಿಸಿದರು. ತಮ್ಮ ನಿರಂತರ ಪ್ರಯತ್ನಗಳು ರಾಜಸ್ಥಾನಕ್ಕೆ ಪ್ರಯೋಜನಕಾರಿಯಾಗಿವೆ ಮತ್ತು ಹಿರಿಯ ನಾಯಕರಾದ ಶ್ರೀ ಭೈರೋನ್ ಸಿಂಗ್ ಶೇಖಾವತ್ ಮತ್ತು ಶ್ರೀ ಜಸ್ವಂತ್ ಸಿಂಗ್ ಅವರು ಈ ಪ್ರಯತ್ನಗಳನ್ನು ಶ್ಲಾಘಿಸಿದರು ಎಂದು ಪ್ರಧಾನಿ ಒತ್ತಿ ಹೇಳಿದರು. ಜಲೋರ್, ಬಾರ್ಮರ್, ಚುರು, ಜುಂಜುನು, ಜೋಧಪುರ, ನಾಗೌರ್ ಮತ್ತು ಹನುಮಾನ್‌ಗಢ್‌ನಂತಹ ಜಿಲ್ಲೆಗಳು ಈಗ ನರ್ಮದಾ ನೀರನ್ನು ಪಡೆಯುತ್ತಿರುವುದಕ್ಕೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು.

ʻಪೂರ್ವ ರಾಜಸ್ಥಾನ ಕಾಲುವೆ ಯೋಜನೆʼಯ(ಇಆರ್‌ಸಿಪಿ) ವಿಳಂಬವನ್ನು ಎತ್ತಿ ತೋರಿದ ಶ್ರೀ ಮೋದಿ, ತಮ್ಮ ಸರ್ಕಾರವು ಪ್ರತಿರೋಧ ಮತ್ತು ಅಡೆತಡೆಗಳ ಬದಲಿಗೆ ಸಹಕಾರ ಮತ್ತು ಪರಿಹಾರಗಳಲ್ಲಿ ನಂಬಿಕೆ ಇಟ್ಟಿದೆ ಎಂದರು. ತಮ್ಮ ಸರ್ಕಾರವು ʻಇಆರ್‌ಸಿಪಿʼ ಯೋಜನೆಯನ್ನು ಅನುಮೋದಿಸಿದೆ ಮತ್ತು ವಿಸ್ತರಿಸಿದೆ ಎಂದು ಅವರು ಹೇಳಿದರು. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಮ್ಮ ಸರ್ಕಾರಗಳು ರಚನೆಯಾದ ಕೂಡಲೇ, ಚಂಬಲ್ ನದಿ ಮತ್ತು ಅದರ ಉಪನದಿಗಳಾದ ಪಾರ್ವತಿ, ಕಾಳಿಸಿಂಧ್, ಕುನೊ, ಬನಾಸ್, ಬನಾಸ್, ರುಪಾರೆಲ್, ಗಂಭೀರಿ ಮತ್ತು ಮೇಜ್ ನದಿಗಳನ್ನು ಪರಸ್ಪರ ಸಂಪರ್ಕಿಸುವ ʻಪಾರ್ವತಿ-ಕಾಳಿಸಿಂಧ್-ಚಂಬಲ್ ಸಂಪರ್ಕ ಯೋಜನೆʼಯ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ರಾಜಸ್ಥಾನವು ಇನ್ನು ಮುಂದೆ ನೀರಿನ ಕೊರತೆಯನ್ನು ಎದುರಿಸದ ಮತ್ತು ಅಭಿವೃದ್ಧಿಗೆ ಸಾಕಷ್ಟು ನೀರನ್ನು ಹೊಂದುವ ದಿನವನ್ನು ತಾವು ಕಲ್ಪಿಸಿಕೊಳ್ಳುವುದಾಗಿ ಪ್ರಧಾನಿ ಹೇಳಿದರು. ʻಪಾರ್ವತಿ-ಕಾಳಿಸಿಂಧ್-ಚಂಬಲ್ʼ ಯೋಜನೆಯ ಪ್ರಯೋಜನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಇದು ರಾಜಸ್ಥಾನದ 21 ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರನ್ನು ಒದಗಿಸುತ್ತದೆ. ಜೊತೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶ ಎರಡೂ ರಾಜ್ಯಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದರು.

 

|

ʻಇಸರ್ದಾ ಲಿಂಕ್ ಯೋಜನೆʼಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, ತಾಜೇವಾಲಾದಿಂದ ಶೇಖಾವತಿಗೆ ನೀರು ತರುವ ಒಪ್ಪಂದಕ್ಕೂ ಬರಲಾಗಿದೆ, ಇದರಿಂದ ಹರಿಯಾಣ ಮತ್ತು ರಾಜಸ್ಥಾನ ಎರಡಕ್ಕೂ ಪ್ರಯೋಜನವಾಗಲಿದೆ ಎಂದರು. ಶೀಘ್ರದಲ್ಲೇ ರಾಜಸ್ಥಾನದ ಶೇ.100ರಷ್ಟು ಮನೆಗಳಿಗೆ ನಲ್ಲಿ ನೀರು ಲಭ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "21ನೇ ಶತಮಾನದ ಭಾರತಕ್ಕೆ ಮಹಿಳಾ ಸಬಲೀಕರಣವು ಅತ್ಯಂತ ನಿರ್ಣಾಯಕವಾಗಿದೆ" ಎಂದು ಉದ್ಗರಿಸಿದ ಪ್ರಧಾನಮಂತ್ರಿಯವರು, ಸ್ವಸಹಾಯ ಗುಂಪುಗಳ ಆಂದೋಲನದಲ್ಲಿ ಮಹಿಳೆಯರ ಶಕ್ತಿ ಸ್ಪಷ್ಟವಾಗಿದೆ. ಕಳೆದ ದಶಕದಲ್ಲಿ ರಾಜಸ್ಥಾನದ ಲಕ್ಷಾಂತರ ಮಹಿಳೆಯರು ಸೇರಿದಂತೆ ದೇಶಾದ್ಯಂತ 10 ಕೋಟಿ ಮಹಿಳೆಯರು ಈ ಗುಂಪುಗಳಿಗೆ ಸೇರಿದ್ದಾರೆ ಎಂದು ಹೇಳಿದರು. ಈ ಗುಂಪುಗಳನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸುವ ಮೂಲಕ, ಆರ್ಥಿಕ ನೆರವನ್ನು 10 ಲಕ್ಷದಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸುವ ಮೂಲಕ ಮತ್ತು ಸುಮಾರು 8 ಲಕ್ಷ ಕೋಟಿ ರೂ.ಗಳ ಸಹಾಯವನ್ನು ಒದಗಿಸುವ ಮೂಲಕ ಈ ಗುಂಪುಗಳನ್ನು ಬಲಪಡಿಸಲು ತಮ್ಮ ಸರ್ಕಾರ ದಣಿವರಿಯದೆ ಕೆಲಸ ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ಮತ್ತು ಅವುಗಳು ತಯಾರಿಸುವ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ, ಇದರೊಂದಿಗೆ ಈ ಸ್ವಸಹಾಯ ಗುಂಪುಗಳು ಗ್ರಾಮೀಣ ಆರ್ಥಿಕತೆಯಲ್ಲಿ ಗಮನಾರ್ಹ ಶಕ್ತಿಯಾಗಿ ಬೆಳೆದಿವೆ ಎಂದು ಪ್ರಧಾನಿ ಹೇಳಿದರು. ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಮೂರು ಕೋಟಿ ಮಹಿಳೆಯರನ್ನು "ಲಕ್ಷಾಧಿಪತಿ ದೀದಿ"ಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಈಗ ಕೆಲಸ ಮಾಡುತ್ತಿದೆ, 1.25 ಕೋಟಿಗೂ ಹೆಚ್ಚು ಮಹಿಳೆಯರು ಈಗಾಗಲೇ ಈ ಸ್ಥಾನಮಾನವನ್ನು ಸಾಧಿಸಿದ್ದಾರೆ, ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, "ನಮೋ ಡ್ರೋನ್ ದೀದಿ" ಯೋಜನೆಯನ್ನು ಉದಾಹರಿಸಿದರು, ಇದರ ಅಡಿಯಲ್ಲಿ ಸಾವಿರಾರು ಮಹಿಳೆಯರಿಗೆ ʻಡ್ರೋನ್ ಪೈಲಟ್ʼಗಳಾಗಿ ತರಬೇತಿ ನೀಡಲಾಗುತ್ತಿದೆ ಎಂದರು. ಸಾವಿರಾರು ಗುಂಪುಗಳು ಈಗಾಗಲೇ ಡ್ರೋನ್‌ಗಳನ್ನು ಸ್ವೀಕರಿಸಿವೆ ಮತ್ತು ಮಹಿಳೆಯರು ಅವುಗಳನ್ನು ಕೃಷಿ ಮತ್ತು ಆದಾಯ ಗಳಿಸುವ ಇತರೆ ಕೆಲಸಗಳಿಗೆ ಬಳಸುತ್ತಿದ್ದಾರೆ ಎಂದು ಪ್ರಧಾನಿ ಗಮನ ಸೆಳೆದರು. ಈ ಯೋಜನೆಯನ್ನು ಮುಂದುವರಿಸಲು ರಾಜಸ್ಥಾನ ಸರ್ಕಾರವೂ ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಮಹಿಳೆಯರಿಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ ಮತ್ತೊಂದು ಮಹತ್ವದ ಯೋಜನೆಯಾದ ʻಬಿಮಾ ಸಖಿʼ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿ, ಈ ಯೋಜನೆಯಡಿ ಹಳ್ಳಿಗಳಲ್ಲಿನ ಮಹಿಳೆಯರು ಮತ್ತು ಹೆಣ್ಣುಮಕ್ಕಳು ವಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ತರಬೇತಿ ಪಡೆಯುತ್ತಾರೆ ಎಂದು ಒತ್ತಿ ಹೇಳಿದರು. ಈ ಯೋಜನೆಯು ಅವರಿಗೆ ಆದಾಯವನ್ನು ಒದಗಿಸುತ್ತದೆ ಮತ್ತು ರಾಷ್ಟ್ರದ ಸೇವೆ ಮಾಡಲು ಮತ್ತೊಂದು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಬ್ಯಾಂಕಿಂಗ್ ಸೇವೆಗಳನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸಿದ, ಖಾತೆಗಳನ್ನು ತೆರೆದ ಮತ್ತು ಸಾಲ ಸೌಲಭ್ಯಗಳೊಂದಿಗೆ ಜನರನ್ನು ಸಂಪರ್ಕಿಸಿರುವ ʻಬ್ಯಾಂಕ್ ಸಖಿʼಗಳ ಗಮನಾರ್ಹ ಸಾಧನೆಗಳನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ʻಬಿಮಾ ಸಖಿʼಗಳು ಈಗ ಭಾರತದ ಪ್ರತಿಯೊಂದು ಕುಟುಂಬವನ್ನು ವಿಮಾ ಸೇವೆಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತಿದ್ದಾರೆ ಎಂದರು.

 

 

|

"ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಗ್ರಾಮಗಳ ಆರ್ಥಿಕ ಸ್ಥಿತಿಗತಿ  ಸುಧಾರಣೆ ನಿರ್ಣಾಯಕವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ" ಎಂದು ಪ್ರಧಾನಿ ಹೇಳಿದರು. ತಾವು ಹಳ್ಳಿಗಳಲ್ಲಿ ಆದಾಯ ಮತ್ತು ಉದ್ಯೋಗದ ಪ್ರತಿಯೊಂದು ವಿಧಾನದ ಬಗ್ಗೆಯೂ ಗಮನ ಹರಿಸುತ್ತಿರುವುದಾಗಿ ಒತ್ತಿ ಹೇಳಿದರು. ರಾಜಸ್ಥಾನದ ತಮ್ಮ ಸರ್ಕಾರವು ವಿದ್ಯುತ್ ಕ್ಷೇತ್ರದಲ್ಲಿ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಿಂದ ರೈತರಿಗೆ ಹೆಚ್ಚು ಪ್ರಯೋಜನವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಕೃಷಿಗೆ ಹಗಲಿನಲ್ಲಿ ವಿದ್ಯುತ್ ಒದಗಿಸುವ ಯೋಜನೆಯ ಮೂಲಕ ರಾಜಸ್ಥಾನ ಸರ್ಕಾರವು ರೈತರನ್ನು ರಾತ್ರಿ ಹೊತ್ತಿನಲ್ಲಿ ಅನಿವಾರ್ಯವಾಗಿ ನೀರಾವರಿ ಕೆಲಸಗಳಲ್ಲಿ ತೊಡಗುವ ಕಷ್ಟದಿಂದ ಮುಕ್ತಗೊಳಿಸಿದೆ. ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಒತ್ತಿ ಹೇಳಿದರು.

"ರಾಜಸ್ಥಾನವು ಸೌರಶಕ್ತಿ ವಿಚಾರದಲ್ಲಿ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದ್ದು, ಈ ವಲಯದಲ್ಲಿ ದೇಶದಲ್ಲೇ ಪ್ರಮುಖ ರಾಜ್ಯವಾಗಲ್ಲದು" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ಸೌರ ಶಕ್ತಿಯನ್ನು ಒಂದು ಸಾಧನವನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ಮೇಲ್ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು 78,000 ರೂ.ಗಳನ್ನು ಒದಗಿಸುವ ಕೇಂದ್ರ ಸರ್ಕಾರದ ʻಪಿಎಂ ಸೂರ್ಯಗರ್‌ʼ ಉಚಿತ ವಿದ್ಯುತ್ ಯೋಜನೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಇದರಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು ಕುಟುಂಬವು ಬಳಸಬಹುದು ಮತ್ತು ಯಾವುದೇ ಹೆಚ್ಚುವರಿ ವಿದ್ಯುತ್‌ ಅನ್ನು ಸರ್ಕಾರ ಖರೀದಿಸುತ್ತದೆ ಎಂದು ಒತ್ತಿ ಹೇಳಿದರು. ಈ ಯೋಜನೆಗೆ 1.4 ಕೋಟಿ ಕುಟುಂಬಗಳು ನೋಂದಾಯಿಸಿಕೊಂಡಿವೆ ಮತ್ತು ಸುಮಾರು 7 ಲಕ್ಷ ಮನೆಗಳು ಈಗಾಗಲೇ ಸೌರ ಫಲಕ ವ್ಯವಸ್ಥೆಗಳನ್ನು ಸ್ಥಾಪಿಸಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ರಾಜಸ್ಥಾನದ 20,000ಕ್ಕೂ ಹೆಚ್ಚು ಮನೆಗಳನ್ನು ಈ ಉಪಕ್ರಮದಲ್ಲಿ ಸೇರಿಸಲಾಗಿದೆ ಮತ್ತು ಈ ಕುಟುಂಬಗಳು ಸೌರ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿವೆ, ಇದು ಅವರ ವಿದ್ಯುತ್ ಬಿಲ್‌ಗಳಲ್ಲಿ ಉಳಿತಾಯಕ್ಕೆ ಕಾರಣವಾಗಿದೆ ಎಂದು ಅವರು ಒತ್ತಿ ಹೇಳಿದರು.

 

|

ಸೌರ ವಿದ್ಯುತ್ ಸ್ಥಾವರಗಳನ್ನು ಮೇಲ್ಛಾವಣಿಯ ಮೇಲೆ ಮಾತ್ರವಲ್ಲದೆ ಕೃಷಿ ಹೊಲಗಳಲ್ಲೂ ಸ್ಥಾಪಿಸಲು ಸರ್ಕಾರ ನೆರವು ನೀಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ʻಪಿಎಂ ಕುಸುಮ್ʼ ಯೋಜನೆಯಡಿ, ರಾಜಸ್ಥಾನ ಸರ್ಕಾರವು ಮುಂಬರುವ ದಿನಗಳಲ್ಲಿ ನೂರಾರು ಹೊಸ ಸೌರ ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿ ಕುಟುಂಬ ಮತ್ತು ರೈತರು ಇಂಧನ ಉತ್ಪಾದಕರಾದಾಗ, ವಿದ್ಯುತ್‌ನಿಂದ ಆದಾಯ ಸೃಷ್ಟಿ ಸಾಧ್ಯವಾಗಲಿದೆ ಮತ್ತು ಇದು ಪ್ರತಿ ಕುಟುಂಬದ ಆದಾಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

"ರಸ್ತೆ, ರೈಲು ಮತ್ತು ವಿಮಾನ ಪ್ರಯಾಣದ ವಿಷಯದಲ್ಲಿ ರಾಜಸ್ಥಾನವನ್ನು ಹೆಚ್ಚು ಸಂಪರ್ಕಿತ ರಾಜ್ಯವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ" ಎಂದು ಶ್ರೀ ಮೋದಿ ಉದ್ಗರಿಸಿದರು. ದೆಹಲಿ, ವಡೋದರಾ ಮತ್ತು ಮುಂಬೈನಂತಹ ಪ್ರಮುಖ ಕೈಗಾರಿಕಾ ಕೇಂದ್ರಗಳ ನಡುವೆ ಇರುವ ರಾಜಸ್ಥಾನವು ತನ್ನ ಜನರಿಗೆ ಮತ್ತು ಯುವಕರಿಗೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಮೂರು ನಗರಗಳನ್ನು ರಾಜಸ್ಥಾನದೊಂದಿಗೆ ಸಂಪರ್ಕಿಸುವ ಹೊಸ ʻಎಕ್ಸ್‌ಪ್ರೆಸ್ ವೇʼ ದೇಶದ ಅತ್ಯುತ್ತಮ ʻಎಕ್ಸ್‌ಪ್ರೆಸ್ ವೇʼಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಮೇಜ್ ನದಿಗೆ ಅಡ್ಡಲಾಗಿ ಪ್ರಮುಖ ಸೇತುವೆ ನಿರ್ಮಾಣದಿಂದ ಸವಾಯಿ ಮಾಧೋಪುರ, ಬುಂಡಿ, ಟೋಂಕ್ ಮತ್ತು ಕೋಟಾ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಈ ಜಿಲ್ಲೆಗಳ ರೈತರಿಗೆ ದೆಹಲಿ, ಮುಂಬೈ ಮತ್ತು ವಡೋದರಾದಲ್ಲಿನ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸುವುದು ಸುಲಭವಾಗಲಿದೆ ಎಂದರು. ಇದರಿಂದ ಜೈಪುರ ಮತ್ತು ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸುಲಭವಾಗಿ ಪ್ರವೇಶಿಸಲು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಜನರ ಸಮಯ ಉಳಿತಾಯ ಮತ್ತು ಜನರ  ಅನುಕೂಲತೆ ಹೆಚ್ಚಿಸುವುದು ಈ ಉಪಕ್ರಮಗಳ ಪ್ರಾಥಮಿಕ ಗುರಿಯಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

 

|

ʻಜಾಮ್‌ನಗರ್-ಅಮೃತಸರ ಆರ್ಥಿಕ ಕಾರಿಡಾರ್ʼ ಅನ್ನು ʻದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ ವೇʼಗೆ ಸಂಪರ್ಕಿಸುವುದರಿಂದ ರಾಜಸ್ಥಾನವನ್ನು ವೈಷ್ಣೋದೇವಿ ದೇವಾಲಯಕ್ಕೆ ಸಂಪರ್ಕಿಸಬಹುದು ಎಂದು ಶ್ರೀ ಮೋದಿ ವಿವರಿಸಿದರು. ಇದು ಉತ್ತರ ಭಾರತದ ಕೈಗಾರಿಕೆಗಳಿಗೆ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ, ದೊಡ್ಡ ಗೋದಾಮುಗಳ ಸ್ಥಾಪನೆಯೊಂದಿಗೆ ರಾಜಸ್ಥಾನದ ಸಾರಿಗೆ ಕ್ಷೇತ್ರಕ್ಕೆ ಪ್ರಯೋಜನವನ್ನು ನೀಡುತ್ತದೆ, ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಒತ್ತಿ ಹೇಳಿದರು. ಜೋಧಪುರ ರಿಂಗ್ ರಸ್ತೆಯು ಜೈಪುರ, ಪಾಲಿ, ಬಾರ್ಮರ್, ಜೈಸಲ್ಮೇರ್, ನಾಗೌರ್ ಮತ್ತು ಅಂತಾರಾಷ್ಟ್ರೀಯ ಗಡಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದು ನಗರದಲ್ಲಿ ಅನಗತ್ಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಜೋಧಪುರಕ್ಕೆ ಭೇಟಿ ನೀಡುವ ಪ್ರವಾಸಿಗರು, ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಸುಲಭವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಜಲ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರತಿ ಹನಿ ನೀರನ್ನು ಪರಿಣಾಮಕಾರಿಯಾಗಿ ಬಳಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದರು. ಸೂಕ್ಷ್ಮ ನೀರಾವರಿ, ಹನಿ ನೀರಾವರಿ ಮತ್ತು ʻಅಮೃತ ಸರೋವರʼಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ನೀರಿನ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಜನರನ್ನು ಒತ್ತಾಯಿಸಿದರು. ರೈತರಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಅವರು ಪ್ರೋತ್ಸಾಹಿಸಿದರು. ಶ್ರೀ ಮೋದಿ ಅವರು ಮರಗಳನ್ನು ನೆಡುವ ಮಹತ್ವವನ್ನು ಒತ್ತಿ ಹೇಳಿದರು. ತಾಯಿ ಮತ್ತು ಭೂಮಿಯನ್ನು ಗೌರವಿಸಲು "ತಾಯಿಯ ಹೆಸರಲ್ಲಿ ಒಂದು ಮರ" ಅಭಿಯಾನವನ್ನು ಕೈಗೊಳ್ಳುವಂತೆ ಸೂಚಿಸಿದರು. ಸೌರಶಕ್ತಿಯ ಬಳಕೆ ಮತ್ತು ʻಪಿಎಂ ಸೂರ್ಯಗರ್‌ʼ ಅಭಿಯಾನದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ಜನರನ್ನು ಒತ್ತಾಯಿಸಿದರು. ಒಂದು ಅಭಿಯಾನದ ಹಿಂದೆ ಸರಿಯಾದ ಉದ್ದೇಶ ಮತ್ತು ನೀತಿಯನ್ನು ಜನರು ಕಂಡುಕೊಂಡಾಗ ಮಾತ್ರ ಅವರು ʻಸ್ವಚ್ಛ ಭಾರತ್ʼ ಮತ್ತು ʻಬೇಟಿ ಬಚಾವೋ, ಬೇಟಿ ಪಡಾವೋʼ ಅಭಿಯಾನಗಳ ಮಾದರಿಯಲ್ಲಿ ಅಂತಹ ಉಪಕ್ರಮಗಳ ಭಾಗಿಯಾಗುತ್ತಾರೆ. ಜನರೇ ಅವುಗಳನ್ನು ಮುನ್ನಡೆಸುತ್ತಾರೆ ಎಂದು ಪ್ರಧಾನಿ ಹೇಳಿದರು. ಪರಿಸರ ಸಂರಕ್ಷಣೆಯಲ್ಲೂ ಇದೇ ರೀತಿಯ ಯಶಸ್ಸನ್ನು ಸಾಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

 

|

ರಾಜಸ್ಥಾನದ ಅತ್ಯಾಧುನಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪ್ರಯೋಜನಕಾರಿಯಾಗಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಪ್ರಯತ್ನಗಳು ಅಭಿವೃದ್ಧಿ ಹೊಂದಿದ ರಾಜಸ್ಥಾನವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ, ಇದು ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು. ತಮ್ಮ ಭಾಷಣವನ್ನು ಮುಗಿಸುವ ಮುನ್ನ ಶ್ರೀ ಮೋದಿ ಅವರು, ಮುಂಬರುವ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ವೇಗದಲ್ಲಿ ಕೆಲಸ ಮಾಡುತ್ತವೆ. ರಾಜಸ್ಥಾನದ ಅಭಿವೃದ್ಧಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು ತನಗೆ ದೊರೆತ ಯಾವ ಅವಕಾಶವನ್ನು ತಪ್ಪಿಸುವುದಿಲ್ಲ ಎಂದು ಜನರಿಗೆ ಭರವಸೆ ನೀಡಿದರು.

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸಾನ್ ರಾವ್ ಬಗಾಡೆ, ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್.ಪಾಟೀಲ್, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 7 ಕೇಂದ್ರ ಸರ್ಕಾರದ ಯೋಜನೆಗಳು ಮತ್ತು 2 ರಾಜ್ಯ ಸರ್ಕಾರಿ ಯೋಜನೆಗಳನ್ನು ಒಳಗೊಂಡ 11,000 ಕೋಟಿ ರೂ.ಗಳ 9 ಯೋಜನೆಗಳನ್ನು ಉದ್ಘಾಟಿಸಿದರು. 9 ಕೇಂದ್ರ ಸರ್ಕಾರದ ಯೋಜನೆಗಳು ಮತ್ತು 6 ರಾಜ್ಯ ಸರ್ಕಾರಿ ಯೋಜನೆಗಳನ್ನು ಒಳಗೊಂಡ 35,300 ಕೋಟಿ ರೂ.ಗಳ 15 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ನವನೇರಾ ಬ್ಯಾರೇಜ್, ಸ್ಮಾರ್ಟ್ ವಿದ್ಯುತ್ ಪ್ರಸರಣ ಜಾಲ ಮತ್ತು ಆಸ್ತಿ ನಿರ್ವಹಣಾ ವ್ಯವಸ್ಥೆ ಯೋಜನೆಗಳು, ಭಿಲ್ಡಿ-ಸಂದಾರಿ-ಲುನಿ-ಜೋಧಪುರ-ಮೆರ್ಟಾ ರಸ್ತೆ-ದೇಗಾನಾ-ರತನ್‌ಗಢ ವಿಭಾಗದ ರೈಲ್ವೆ ವಿದ್ಯುದ್ದೀಕರಣ ಮತ್ತು ʻದೆಹಲಿ-ವಡೋದರಾ ಗ್ರೀನ್ ಫೀಲ್ಡ್ ಅಲೈನ್ಮೆಂಟ್ʼನ (ಎನ್ಎಚ್ -148 ಎನ್) ಪ್ಯಾಕೇಜ್ 12 (ಎಸ್ಎಚ್ -37 ಎ ಜಂಕ್ಷನ್‌ನೊಂದಿಗೆ ಮೇಜ್ ನದಿಗೆ ಅಡ್ಡಲಾಗಿ ಪ್ರಮುಖ ಸೇತುವೆ) ಯೋಜನೆಗಳನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಈ ಯೋಜನೆಗಳು ಜನರ  ಸುಗಮ ಪ್ರಯಾಣಕ್ಕೆ ಅನುವು ಮಾಡುವುದರ ಜೊತೆಗೆ ಪ್ರಧಾನಮಂತ್ರಿಯವರ ಹಸಿರು ಇಂಧನದ ದೃಷ್ಟಿಕೋನಕ್ಕೆ ಅನುಗುಣವಾಗಿ ರಾಜ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತವೆ.

 

|

9,400 ಕೋಟಿ ರೂ.ಗಳ ವೆಚ್ಚದಲ್ಲಿ ʻರಾಮಗಢ ಬ್ಯಾರೇಜ್ʼ ಮತ್ತು ʻಮಹಲ್‌ಪುರ್ ಬ್ಯಾರೇಜ್ʼ ನಿರ್ಮಾಣ ಹಾಗೂ ʻನವನೇರಾ ಬ್ಯಾರೇಜ್‌ʼನಿಂದ ʻಬಿಸಾಲ್‌ಪುರ್ ಅಣೆಕಟ್ಟುʼ ಮತ್ತು ಚಂಬಲ್ ನದಿಗೆ ಅಕ್ವೆಡಕ್ಟ್ ಮೂಲಕ ನೀರನ್ನು ವರ್ಗಾಯಿಸುವ ವ್ಯವಸ್ಥೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

 

|

ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಮೇಲ್ಛಾವಣಿಯ ಸೌರ ಸ್ಥಾವರಗಳ ಸ್ಥಾಪನೆ, ಪೂಗಲ್‌ನಲ್ಲಿ (ಬಿಕಾನೇರ್) 2000 ಮೆಗಾವ್ಯಾಟ್ ಸೌರ ಪಾರ್ಕ್ ಮತ್ತು 1000 ಮೆಗಾವ್ಯಾಟ್ ಸೌರ ಉದ್ಯಾನಗಳ ಎರಡು ಹಂತಗಳ ಅಭಿವೃದ್ಧಿ ಹಾಗೂ ಸೈಪೌನಿಂದ (ಧೋಲ್ಪುರ) ಭರತ್‌ಪುರ-ಡೀಗ್-ಕುಮ್ಹೆರ್-ನಗರ-ಕಮಾನ್ ಮತ್ತು ಪಹರಿ ಮತ್ತು ಚಂಬಲ್-ಧೋಲ್ಪುರ್-ಭರತ್‌ಪುರಕ್ಕೆ ಕುಡಿಯುವ ನೀರು ಪ್ರಸರಣ ಮಾರ್ಗದ ಎರಡು ಹಂತಗಳ ಅಭಿವೃದ್ಧಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಲುನಿ-ಸಂದಾರಿ-ಭಿಲ್ಡಿ ಜೋಡಿ ಮಾರ್ಗ, ಅಜ್ಮೀರ್-ಚಂದೇರಿಯಾ ಜೋಡಿ ಮಾರ್ಗ ಮತ್ತು ಜೈಪುರ-ಸವಾಯಿ ಮಾಧೋಪುರ ಜೋಡಿ ಮಾರ್ಗ ರೈಲ್ವೆ ಯೋಜನೆ ಹಾಗೂ ಇತರ ಇಂಧನ ಪ್ರಸರಣ ಸಂಬಂಧಿತ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

 

Click here to read full text speech

  • रीना चौरसिया February 21, 2025

    https://nm-4.com/XJqFVR
  • Janardhan February 18, 2025

    मोदी ❤️❤️❤️❤️❤️❤️❤️❤️❤️❤️
  • Janardhan February 18, 2025

    मोदी ❤️❤️❤️❤️❤️❤️❤️
  • Janardhan February 18, 2025

    मोदी ❤️❤️❤️❤️❤️❤️
  • Janardhan February 18, 2025

    मोदी ❤️❤️❤️❤️❤️
  • Janardhan February 18, 2025

    मोदी ❤️❤️❤️❤️
  • Bhushan Vilasrao Dandade February 10, 2025

    जय हिंद
  • Dr Mukesh Ludanan February 08, 2025

    Jai ho
  • Vivek Kumar Gupta February 08, 2025

    नमो ..🙏🙏🙏🙏🙏
  • Vivek Kumar Gupta February 08, 2025

    नमो ............................🙏🙏🙏🙏🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Namo Drone Didi, Kisan Drones & More: How India Is Changing The Agri-Tech Game

Media Coverage

Namo Drone Didi, Kisan Drones & More: How India Is Changing The Agri-Tech Game
NM on the go

Nm on the go

Always be the first to hear from the PM. Get the App Now!
...
We remain committed to deepening the unique and historical partnership between India and Bhutan: Prime Minister
February 21, 2025

Appreciating the address of Prime Minister of Bhutan, H.E. Tshering Tobgay at SOUL Leadership Conclave in New Delhi, Shri Modi said that we remain committed to deepening the unique and historical partnership between India and Bhutan.

The Prime Minister posted on X;

“Pleasure to once again meet my friend PM Tshering Tobgay. Appreciate his address at the Leadership Conclave @LeadWithSOUL. We remain committed to deepening the unique and historical partnership between India and Bhutan.

@tsheringtobgay”