Quoteಮಧ್ಯಪ್ರದೇಶದಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯು ಶ್ಲಾಘನೀಯ ಉಪಕ್ರಮವಾಗಿದೆ; ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯದಲ್ಲಿ ರಾಜ್ಯದ ಅಪಾರ ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ: ಪ್ರಧಾನಮಂತ್ರಿ
Quoteಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ, ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತಿದೆ, ಮಧ್ಯಪ್ರದೇಶವು ವ್ಯಾಪಾರ ಮತ್ತು ಉದ್ಯಮಶೀಲತೆಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವುದನ್ನು ನೋಡಲು ಸಂತೋಷವಾಗುತ್ತಿದೆ: ಪ್ರಧಾನಮಂತ್ರಿ
Quoteವಿಶ್ವದ ಭವಿಷ್ಯ ಭಾರತದಲ್ಲಿದೆ! ಬನ್ನಿ, ನಮ್ಮ ದೇಶದಲ್ಲಿ ಅಭಿವೃದ್ಧಿಗೆ ಇರುವ ಅವಕಾಶಗಳನ್ನು ಅನ್ವೇಷಿಸಿ: ಪ್ರಧಾನಮಂತ್ರಿ
Quoteಎನ್‌ ಡಿ ಎ ಸರ್ಕಾರದ ಮೂಲಸೌಕರ್ಯ ಪ್ರಯತ್ನಗಳಿಂದ ಮಧ್ಯಪ್ರದೇಶ ಹೆಚ್ಚು ಪ್ರಯೋಜನ ಪಡೆಯಲಿದೆ: ಪ್ರಧಾನಮಂತ್ರಿ
Quoteಕೇಂದ್ರ ಮತ್ತು ಮಧ್ಯಪ್ರದೇಶದ ನಮ್ಮ ಸರ್ಕಾರಗಳು ನೀರಿನ ಭದ್ರತೆಗೆ ಒತ್ತು ನೀಡುತ್ತಿವೆ, ಇದು ಅಭಿವೃದ್ಧಿಗೆ ಅವಶ್ಯಕವಾಗಿದೆ: ಪ್ರಧಾನಮಂತ್ರಿ
Quote2025ರ ಮೊದಲ 50 ದಿನಗಳಲ್ಲಿ ಕ್ಷಿಪ್ರ ಅಭಿವೃದ್ಧಿಯಾಗಿದೆ: ಪ್ರಧಾನಮಂತ್ರಿ
Quoteಕಳೆದ ದಶಕವು ಭಾರತದ ಇಂಧನ ವಲಯದ ಅಭೂತಪೂರ್ವ ಬೆಳವಣಿಗೆಯ ಅವಧಿಯಾಗಿದೆ: ಪ್ರಧಾನಮಂತ್ರಿ
Quoteಈ ವರ್ಷದ ಬಜೆಟ್‌ ನಲ್ಲಿ ನಾವು ಭಾರತದ ಬೆಳವಣಿಗೆಯ ಪ್ರತಿಯೊಂದು ವೇಗವರ್ಧಕವನ್ನು ಶಕ್ತಿಯುತಗೊಳಿಸಿದ್ದೇವೆ: ಪ್ರಧಾನಮಂತ್ರಿ
Quoteರಾಷ್ಟ್ರೀಯ ಮಟ್ಟದ ನಂತರ, ಈಗ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಸುಧಾರಣೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ: ಪ್ರಧಾನಮಂತ್ರಿ
Quoteಜವಳಿ, ಪ್ರವಾಸೋದ್ಯಮ ಮತ್ತು ತಂತ್ರಜ್ಞಾನವು ಭಾರತದ ಅಭಿವೃದ್ಧಿ ಹೊಂದಿದ ಭವಿಷ್ಯದ ಪ್ರಮುಖ ಚಾಲಕರಾಗಿರುತ್ತವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್‌ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್) 2025 ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಇದ್ದುದರಿಂದ ಮತ್ತು ಕಾರ್ಯಕ್ರಮಕ್ಕೆ ಬರುವ ದಾರಿಯಲ್ಲಿ ತಮ್ಮ ಭದ್ರತಾ ಕ್ರಮಗಳು ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡಬಹುದಾಗಿದ್ದರಿಂದ ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಗಿದ್ದಕ್ಕಾಗಿ ಕ್ಷಮೆಯಾಚಿಸಿದರು. ರಾಜ ಭೋಜ ಭೂಮಿಗೆ ಹೂಡಿಕೆದಾರರು ಮತ್ತು ವ್ಯಾಪಾರ ನಾಯಕರನ್ನು ಸ್ವಾಗತಿಸುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ದು ಹೇಳಿದರು. ವಿಕಸಿತ ಮಧ್ಯಪ್ರದೇಶ ಅಥವಾ ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶವು ವಿಕಸಿತ ಭಾರತದತ್ತ ಪ್ರಯಾಣದಲ್ಲಿ ಅಗತ್ಯವಾಗಿರುವುದರಿಂದ ಇಂದಿನ ಕಾರ್ಯಕ್ರಮವು ಮುಖ್ಯವಾಗಿದೆ ಎಂದು ಅವರು ಹೇಳಿದರು. ಶೃಂಗಸಭೆಯ ಅದ್ಭುತ ಸಂಘಟನೆಗಾಗಿ ಅವರು ಮಧ್ಯಪ್ರದೇಶ ಸರ್ಕಾರವನ್ನು ಅಭಿನಂದಿಸಿದರು.

"ಇಡೀ ಜಗತ್ತು ಭಾರತದ ಬಗ್ಗೆ ಆಶಾವಾದಿಯಾಗಿದೆ" ಎಂದು ಹೇಳಿದ ಮೋದಿ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಅವಕಾಶ ಬಂದಿದೆ ಎಂದು ಹೇಳಿದರು. ಸಾಮಾನ್ಯ ನಾಗರಿಕರಾಗಲಿ ಅಥವಾ ನೀತಿ ತಜ್ಞರಾಗಲಿ ಅಥವಾ ಸಂಸ್ಥೆಗಳು ಅಥವಾ ವಿಶ್ವದ ದೇಶಗಳಾಗಲಿ, ಪ್ರತಿಯೊಬ್ಬರೂ ಭಾರತದಿಂದ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಕಳೆದ ಕೆಲವು ವಾರಗಳಲ್ಲಿ ಭಾರತದ ಬಗ್ಗೆ ಬಂದಿರುವ ಅಭಿಪ್ರಾಯಗಳು ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯುತ್ತದೆ ಎಂಬ ವಿಶ್ವಬ್ಯಾಂಕಿನ ಇತ್ತೀಚಿನ ಹೇಳಿಕೆಯನ್ನು ನೆನಪಿಸಿಕೊಂಡ ಪ್ರಧಾನಿ, "ವಿಶ್ವದ ಭವಿಷ್ಯ ಭಾರತದಲ್ಲಿದೆ" ಎಂದು ಒಇಸಿಡಿ ಪ್ರತಿನಿಧಿಯೊಬ್ಬರು ಹೇಳಿದ್ದಾರೆ ಎಂದು ಎತ್ತಿ ತೋರಿಸಿದರು. ಇತ್ತೀಚೆಗೆ, ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಸಂಘಟನೆಯು ಭಾರತವನ್ನು ಸೌರಶಕ್ತಿ ಸೂಪರ್ ಪವರ್ ಎಂದು ಘೋಷಿಸಿದೆ ಎಂದು ಅವರು ಹೇಳಿದರು. ಅನೇಕ ದೇಶಗಳು ಕೇವಲ ಮಾತನಾಡುತ್ತಿವೆ, ಭಾರತವು ಫಲಿತಾಂಶಗಳನ್ನು ನೀಡುತ್ತಿದೆ ಎಂದು ಈ ಸಂಸ್ಥೆ ಉಲ್ಲೇಖಿಸಿದೆ.  ಜಾಗತಿಕ ಏರೋಸ್ಪೇಸ್ ಸಂಸ್ಥೆಗಳಿಗೆ ಭಾರತವು ಅತ್ಯುತ್ತಮ ಪೂರೈಕೆ ಸರಪಳಿಯಾಗಿ ಹೇಗೆ ಹೊರಹೊಮ್ಮುತ್ತಿದೆ ಎಂಬುದನ್ನು ಹೊಸ ವರದಿಯು ಬಹಿರಂಗಪಡಿಸಿದೆ ಎಂದು ಶ್ರೀ ಮೋದಿ  ಹೇಳಿದರು. ಈ ಸಂಸ್ಥೆಗಳು ಭಾರತವನ್ನು ಜಾಗತಿಕ ಪೂರೈಕೆ ಸರಪಳಿ ಸವಾಲುಗಳಿಗೆ ಪರಿಹಾರವಾಗಿ ನೋಡುತ್ತವೆ. ಭಾರತದ ಮೇಲಿನ ವಿಶ್ವದ ವಿಶ್ವಾಸವನ್ನು ಪ್ರದರ್ಶಿಸುವ ವಿವಿಧ  ಉದಾಹರಣೆಗಳನ್ನು ಪ್ರಧಾನಿ ಉಲ್ಲೇಖಿಸಿದರು, ಇದು ಭಾರತದ ಪ್ರತಿಯೊಂದು ರಾಜ್ಯದ ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಮಧ್ಯಪ್ರದೇಶದಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ಈ ವಿಶ್ವಾಸವು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

 

|

ಜನಸಂಖ್ಯೆಯ ದೃಷ್ಟಿಯಿಂದ ಮಧ್ಯಪ್ರದೇಶ ಭಾರತದ ಐದನೇ ಅತಿದೊಡ್ಡ ರಾಜ್ಯ ಎಂಬುದನ್ನು ಉಲ್ಲೇಖಿಸಿದ ಶ್ರೀ ಮೋದಿ, "ಕೃಷಿ ಮತ್ತು ಖನಿಜಗಳಲ್ಲಿ ಮಧ್ಯಪ್ರದೇಶವು ಭಾರತದ ಅಗ್ರ ರಾಜ್ಯಗಳಲ್ಲಿ ಒಂದಾಗಿದೆ" ಎಂದು ಹೇಳಿದರು. ಮಧ್ಯಪ್ರದೇಶವು ಜೀವ ನೀಡುವ ನರ್ಮದಾ ನದಿಯಿಂದ ಆಶೀರ್ವದಿಸಲ್ಪಟ್ಟಿದೆ ಎಂದು ಒತ್ತಿ ಹೇಳಿದ ಅವರು, ಮಧ್ಯಪ್ರದೇಶವು ಜಿಡಿಪಿಯಲ್ಲಿ ಭಾರತದ ಐದು ಅಗ್ರ ರಾಜ್ಯಗಳಲ್ಲಿ ಒಂದಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ಮಧ್ಯಪ್ರದೇಶದ ಪರಿವರ್ತನಾತ್ಮಕ ಪ್ರಯಾಣವನ್ನು ಎತ್ತಿ ತೋರಿಸಿದ ಪ್ರಧಾನಿ, ಒಂದು ಕಾಲದಲ್ಲಿ ರಾಜ್ಯವು ವಿದ್ಯುತ್ ಮತ್ತು ನೀರಿನ ವಿಷಯದಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸಿತ್ತು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಇನ್ನೂ ಕೆಟ್ಟದಾಗಿತ್ತು ಎಂದು ಹೇಳಿದರು. ಈ ಪರಿಸ್ಥಿತಿಗಳು ಕೈಗಾರಿಕಾ ಅಭಿವೃದ್ಧಿಯನ್ನು ಕಷ್ಟಕರವಾಗಿಸಿದವು. ಜನರ ಬೆಂಬಲದೊಂದಿಗೆ, ಮಧ್ಯಪ್ರದೇಶದಲ್ಲಿನ ತಮ್ಮ ಸರ್ಕಾರವು ಕಳೆದ ಎರಡು ದಶಕಗಳಲ್ಲಿ ಆಡಳಿತದ ಮೇಲೆ ಕೇಂದ್ರೀಕರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಎರಡು ದಶಕಗಳ ಹಿಂದೆ, ಜನರು ಮಧ್ಯಪ್ರದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು, ಆದರೆ ಇಂದು, ಮಧ್ಯಪ್ರದೇಶವು ಹೂಡಿಕೆಗಾಗಿ ದೇಶದ ಅಗ್ರ ರಾಜ್ಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಕಳಪೆ ರಸ್ತೆಗಳಲ್ಲಿ ಹೆಣಗಾಡುತ್ತಿದ್ದ ರಾಜ್ಯವು ಈಗ ಭಾರತದ ವಿದ್ಯುತ್ ಚಾಲಿತ ವಾಹನಗಳ ಕ್ರಾಂತಿಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ ಎಂದು ಅವರು ಎತ್ತಿ ತೋರಿಸಿದರು. ಜನವರಿ 2025ರ ವೇಳೆಗೆ, ಮಧ್ಯಪ್ರದೇಶದಲ್ಲಿ ಸುಮಾರು 2 ಲಕ್ಷ ವಿದ್ಯುತ್ ವಾಹನಗಳು ನೋಂದಾಯಿಸಲ್ಪಟ್ಟಿವೆ, ಇದು ಸರಿಸುಮಾರು ಶೇಕಡಾ 90 ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ, ಇದು ಮಧ್ಯಪ್ರದೇಶವು ಹೊಸ ಉತ್ಪಾದನಾ ವಲಯಗಳಿಗೆ ಅತ್ಯುತ್ತಮ ತಾಣವಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

"ಕಳೆದ ದಶಕದಲ್ಲಿ ಭಾರತವು ಮೂಲಸೌಕರ್ಯದಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಕಂಡಿದೆ" ಎಂದು ಪ್ರಧಾನಿ ಒತ್ತಿ ಹೇಳಿದರು ಮತ್ತು ಮಧ್ಯಪ್ರದೇಶವು ಈ ಅಭಿವೃದ್ಧಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆದಿದೆ ಎಂದು ಹೇಳಿದರು. ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮಧ್ಯಪ್ರದೇಶದ ಮೂಲಕ ಹಾದುಹೋಗುತ್ತದೆ, ಇದು ಮುಂಬೈನ ಬಂದರುಗಳು ಮತ್ತು ಉತ್ತರ ಭಾರತದ ಮಾರುಕಟ್ಟೆಗಳಿಗೆ ತ್ವರಿತ ಸಂಪರ್ಕವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಮಧ್ಯಪ್ರದೇಶವು ಈಗ ಐದು ಲಕ್ಷ ಕಿಲೋಮೀಟರ್‌ ಗಳಿಗೂ ಹೆಚ್ಚು ರಸ್ತೆ ಜಾಲವನ್ನು ಹೊಂದಿದೆ ಎಂದು ಅವರು ಹೇಳಿದರು. ಮಧ್ಯಪ್ರದೇಶದ ಕೈಗಾರಿಕಾ ಕಾರಿಡಾರ್‌ ಗಳು ಆಧುನಿಕ ಎಕ್ಸ್‌ಪ್ರೆಸ್‌ವೇಗಳಿಗೆ ಸಂಪರ್ಕ ಹೊಂದಿದ್ದು, ಲಾಜಿಸ್ಟಿಕ್ಸ್ ವಲಯದಲ್ಲಿ ತ್ವರಿತ ಬೆಳವಣಿಗೆಯನ್ನು ಖಚಿತಪಡಿಸುತ್ತವೆ ಎಂದು ಅವರು ಹೇಳಿದರು.

 

|

ವೈಮಾನಿಕ ಸಂಪರ್ಕದ ಕುರಿತು ಮಾತನಾಡಿದ ಶ್ರೀ ಮೋದಿ, ವಿಮಾನ ಸಂಪರ್ಕವನ್ನು ಸುಧಾರಿಸಲು ಗ್ವಾಲಿಯರ್ ಮತ್ತು ಜಬಲ್‌ಪುರ ವಿಮಾನ ನಿಲ್ದಾಣಗಳ ಟರ್ಮಿನಲ್‌ ಗಳನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು. ಮಧ್ಯಪ್ರದೇಶದ ವ್ಯಾಪಕ ರೈಲು ಜಾಲದ ಆಧುನೀಕರಣವೂ ನಡೆಯುತ್ತಿದೆ ಎಂದು ಅವರು ಹೇಳಿದರು. ಮಧ್ಯಪ್ರದೇಶದಲ್ಲಿ ರೈಲು ಜಾಲವು ಶೇಕಡಾ 100 ರಷ್ಟು ವಿದ್ಯುದ್ದೀಕರಣವನ್ನು ಸಾಧಿಸಿದೆ ಎಂದು ಅವರು ಹೇಳಿದರು. ಭೋಪಾಲ್ ನ ರಾಣಿ ಕಮಲಪತಿ ರೈಲು ನಿಲ್ದಾಣದ ಚಿತ್ರಗಳು ಎಲ್ಲರನ್ನೂ ಆಕರ್ಷಿಸುತ್ತಿವೆ ಎಂದರು. ಈ ಮಾದರಿಯನ್ನು ಅನುಸರಿಸಿ, ಮಧ್ಯಪ್ರದೇಶದ 80 ರೈಲು ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ಆಧುನೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು.

"ಕಳೆದ ದಶಕದಲ್ಲಿ ಭಾರತದ ಇಂಧನ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಬಂದಿದೆ" ಎಂದು ಶ್ರೀ ಮೋದಿ ಶ್ಲಾಘಿಸಿದರು ಮತ್ತು ಭಾರತವು ಒಂದು ಕಾಲದಲ್ಲಿ ಊಹಿಸಲೂ ಸಾಧ್ಯವಾಗದ ಹಸಿರು ಇಂಧನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ, ನವೀಕರಿಸಬಹುದಾದ ಇಂಧನ ವಲಯದಲ್ಲಿ 70 ಶತಕೋಟಿ ಡಾಲರ್‌ ಗೂ ಹೆಚ್ಚು (₹5 ಟ್ರಿಲಿಯನ್‌ ಗಿಂತಲೂ ಹೆಚ್ಚು) ಹೂಡಿಕೆ ಮಾಡಲಾಗಿದೆ ಮತ್ತು ಈ ಹೂಡಿಕೆಯು ಕಳೆದ ವರ್ಷವೊಂದರಲ್ಲೇ ಶುದ್ಧ ಇಂಧನ ಕ್ಷೇತ್ರದಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಇಂಧನ ವಲಯದಲ್ಲಿನ ಈ ಉತ್ಕರ್ಷದಿಂದ ಮಧ್ಯಪ್ರದೇಶವು ಹೆಚ್ಚಿನ ಪ್ರಯೋಜನವನ್ನು ಪಡೆದಿದೆ ಎಂದು ಪ್ರಧಾನಿ ಹೇಳಿದರು. ಇಂದು, ಮಧ್ಯಪ್ರದೇಶವು ಸುಮಾರು 31,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದೊಂದಿಗೆ ಹೆಚ್ಚುವರಿ ವಿದ್ಯುತ್ ಹೊಂದಿದೆ, ಅದರಲ್ಲಿ ಶೇಕಡಾ 30 ರಷ್ಟು ಶುದ್ಧ ಇಂಧನವಾಗಿದೆ ಎಂದು ಅವರು ಹೇಳಿದರು. ರೇವಾ ಸೋಲಾರ್ ಪಾರ್ಕ್ ದೇಶದ ಅತಿದೊಡ್ಡ‌ ಪಾರ್ಕ್‌ ಗಳಲ್ಲಿ ಒಂದಾಗಿದೆ ಮತ್ತು ಇತ್ತೀಚೆಗೆ ಓಂಕಾರೇಶ್ವರದಲ್ಲಿ ತೇಲುವ ಸೌರ ಸ್ಥಾವರವನ್ನು ಉದ್ಘಾಟಿಸಲಾಯಿತು ಎಂದು ಅವರು ಎತ್ತಿ ತೋರಿಸಿದರು. ಬಿನಾ ರಿಫೈನರಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ ನಲ್ಲಿ ಸರ್ಕಾರ ಸುಮಾರು ₹50,000 ಕೋಟಿ ಹೂಡಿಕೆ ಮಾಡಿದೆ. ಇದು ಮಧ್ಯಪ್ರದೇಶವನ್ನು ಪೆಟ್ರೋಕೆಮಿಕಲ್‌ ಗಳ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಮಧ್ಯಪ್ರದೇಶ ಸರ್ಕಾರವು ಆಧುನಿಕ ನೀತಿಗಳು ಮತ್ತು ವಿಶೇಷ ಕೈಗಾರಿಕಾ ಮೂಲಸೌಕರ್ಯದೊಂದಿಗೆ ಈ ಮೂಲಸೌಕರ್ಯವನ್ನು ಬೆಂಬಲಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಮಧ್ಯಪ್ರದೇಶವು 300 ಕ್ಕೂ ಹೆಚ್ಚು ಕೈಗಾರಿಕಾ ವಲಯಗಳನ್ನು ಹೊಂದಿದೆ ಮತ್ತು ಪಿತಾಂಪುರ್, ರತ್ಲಂ ಮತ್ತು ದೇವಾಸ್‌ ಗಳಲ್ಲಿ ಸಾವಿರಾರು ಎಕರೆಗಳಷ್ಟು ಹೂಡಿಕೆ ವಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ ಅವರು, ಮಧ್ಯಪ್ರದೇಶದಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯಕ್ಕಾಗಿ ಅಪಾರ ಸಾಮರ್ಥ್ಯವಿದೆ ಎಂದು ಅವರು ಹೇಳಿದರು.

ಕೈಗಾರಿಕಾ ಅಭಿವೃದ್ಧಿಯಲ್ಲಿ ನೀರಿನ ಭದ್ರತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಒಂದೆಡೆ ನೀರಿನ ಸಂರಕ್ಷಣೆಯತ್ತ ಪ್ರಯತ್ನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ನದಿಗಳ ಜೋಡಣೆಗಾಗಿ ಬೃಹತ್ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಮಧ್ಯಪ್ರದೇಶದ ಕೃಷಿ ಮತ್ತು ಕೈಗಾರಿಕಾ ವಲಯಗಳು ಈ ಉಪಕ್ರಮಗಳಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು. ₹45,000 ಕೋಟಿ ವೆಚ್ಚದ ಕೆನ್-ಬೆಟ್ವಾ ನದಿಗಳ ಜೋಡಣೆ ಯೋಜನೆ ಇತ್ತೀಚೆಗೆ ಪ್ರಾರಂಭವಾಗಿದೆ ಎಂದು ಶ್ರೀ ಮೋದಿ ಹೇಳಿದರು, ಇದು ಮಧ್ಯಪ್ರದೇಶದಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ನೀರಿನ ನಿರ್ವಹಣೆಯನ್ನು ಬಲಪಡಿಸುತ್ತದೆ. ಈ ಸೌಲಭ್ಯಗಳು ಆಹಾರ ಸಂಸ್ಕರಣೆ, ಕೃಷಿ-ಉದ್ಯಮ ಮತ್ತು ಜವಳಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಮರ್ಥ್ಯವನ್ನು ತೆರೆಯುತ್ತವೆ ಎಂದು ಅವರು ಹೇಳಿದರು.

 

|

ಮಧ್ಯಪ್ರದೇಶದಲ್ಲಿ ತಮ್ಮ ಸರ್ಕಾರ ರಚನೆಯಾದ ನಂತರ, ಅಭಿವೃದ್ಧಿಯ ವೇಗ ದ್ವಿಗುಣಗೊಂಡಿದೆ ಎಂದು ಹೇಳಿದ ಶ್ರೀ ಮೋದಿ, ರಾಜ್ಯ ಮತ್ತು ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮಧ್ಯಪ್ರದೇಶ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ತಮ್ಮ ಮೂರನೇ ಅವಧಿಯಲ್ಲಿ ಮೂರು ಪಟ್ಟು ವೇಗವಾಗಿ ಕೆಲಸ ಮಾಡುವುದಾಗಿ ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಯನ್ನು ಅವರು ನೆನಪಿಸಿಕೊಂಡರು ಮತ್ತು "ಈ ವೇಗವು 2025ರ ಮೊದಲ 50 ದಿನಗಳಲ್ಲಿ ಸ್ಪಷ್ಟವಾಗಿದೆ" ಎಂದು ಹೇಳಿದರು. ಭಾರತದ ಬೆಳವಣಿಗೆಗೆ ಪ್ರತಿಯೊಂದು ವೇಗವರ್ಧಕವನ್ನು ಪ್ರೇರೇಪಿಸಿದ ಇತ್ತೀಚಿನ ಬಜೆಟ್ ಅನ್ನು ಶ್ರೀ ಮೋದಿ ಎತ್ತಿ ತೋರಿಸಿದರು. ಮಧ್ಯಮ ವರ್ಗವು ಅತಿದೊಡ್ಡ ತೆರಿಗೆದಾರರಾಗಿರುವುದರಿಂದ ಸೇವೆಗಳು ಮತ್ತು ಉತ್ಪಾದನೆಗೆ ಬೇಡಿಕೆಯನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಬಜೆಟ್‌ ನಲ್ಲಿ ಮಧ್ಯಮ ವರ್ಗವನ್ನು ಸಬಲೀಕರಣಗೊಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಇದರಲ್ಲಿ ₹12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸುವುದು ಮತ್ತು ತೆರಿಗೆ ಸ್ಲ್ಯಾಬ್‌ ಗಳನ್ನು ಪುನರ್ರಚಿಸುವುದು ಸೇರಿವೆ. ಬಜೆಟ್ ನಂತರ ಆರ್‌ ಬಿ ಐ ಬಡ್ಡಿದರಗಳನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು.

ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲು ಸ್ಥಳೀಯ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದಕ್ಕೆ ಬಜೆಟ್ ಒತ್ತು ನೀಡಿದೆ ಎಂದು ತಿಳಿಸಿದ ಶ್ರೀ ಮೋದಿ, ಹಿಂದಿನ ಸರ್ಕಾರಗಳು ಎಂ ಎಸ್‌ ಎಂ ಇ ಗಳ ಸಾಮರ್ಥ್ಯವನ್ನು ಸೀಮಿತಗೊಳಿಸಿದ್ದವು, ಇದು ಅಪೇಕ್ಷಿತ ಮಟ್ಟದಲ್ಲಿ ಸ್ಥಳೀಯ ಪೂರೈಕೆ ಸರಪಳಿಗಳು ಅಪೇಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಎಂ ಎಸ್‌ ಎಂ ಇ ನೇತೃತ್ವದ ಸ್ಥಳೀಯ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು ಪ್ರಸ್ತುತ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಎಂ ಎಸ್‌ ಎಂ ಇ ಗಳ ವ್ಯಾಖ್ಯಾನವನ್ನು ಸುಧಾರಿಸಲಾಗಿದೆ ಮತ್ತು ಸಾಲ-ಸಂಬಂಧಿತ ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತಿದೆ, ಸಾಲದ ಲಭ್ಯತೆಯನ್ನು ಸುಲಭಗೊಳಿಸಲಾಗುತ್ತಿದೆ ಮತ್ತು ಮೌಲ್ಯವರ್ಧನೆ ಮತ್ತು ರಫ್ತಿಗೆ ಬೆಂಬಲವನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಬಜೆಟ್‌ ನಲ್ಲಿ ಉಲ್ಲೇಖಿಸಲಾದ ರಾಜ್ಯ ನಿಯಂತ್ರಣ ಮುಕ್ತ ಆಯೋಗದ ಕುರಿತು ಚರ್ಚಿಸಿದ ಪ್ರಧಾನಿ, “ಕಳೆದ ದಶಕದಲ್ಲಿ ರಾಷ್ಟ್ರಮಟ್ಟದಲ್ಲಿ ಮಹತ್ವದ ಸುಧಾರಣೆಗಳನ್ನು ವೇಗಗೊಳಿಸಲಾಗಿತ್ತು, ಈಗ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿಯೂ ಸುಧಾರಣೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ,” ಎಂದು ಹೇಳಿದರು. ರಾಜ್ಯಗಳೊಂದಿಗೆ ನಿರಂತರ ಸಂವಹನ ನಡೆಸಲಾಗುತ್ತಿದ್ದು, ರಾಜ್ಯಗಳ ಸಹಕಾರದಿಂದ ಇತ್ತೀಚಿನ ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ ಎಂದರು. ಹೆಚ್ಚುವರಿಯಾಗಿ, 1,500 ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ವ್ಯವಹಾರವನ್ನು ಸುಲಭಗೊಳಿಸಲು ಅಡ್ಡಿಪಡಿಸುವ ನಿಯಮಗಳನ್ನು ಗುರುತಿಸುವ ಗುರಿಯನ್ನು ಇದು ಹೊಂದಿದೆ ಮತ್ತು ರಾಜ್ಯಗಳಲ್ಲಿ ಹೂಡಿಕೆ ಸ್ನೇಹಿ ನಿಯಂತ್ರಣ ಪರಿಸರ ವ್ಯವಸ್ಥೆಯನ್ನು ರಚಿಸಲು ನಿಯಂತ್ರಣ ಮುಕ್ತ ಆಯೋಗವು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಬಜೆಟ್ ಸೀಮಾ ಸುಂಕ ರಚನೆಯನ್ನು ಸರಳೀಕರಿಸಿದೆ ಮತ್ತು ಉದ್ಯಮಕ್ಕೆ ಅಗತ್ಯವಾದ ಹಲವಾರು ವಸ್ತುಗಳ ಮೇಲಿನ ದರಗಳನ್ನು ಕಡಿಮೆ ಮಾಡಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಕಸ್ಟಮ್ಸ್ ಪ್ರಕರಣಗಳ ಮೌಲ್ಯಮಾಪನಕ್ಕೆ ಸಮಯ ಮಿತಿಯನ್ನು ನಿಗದಿಪಡಿಸಲಾಗುತ್ತಿದೆ ಎಂದು ಹೇಳಿದರು. ಖಾಸಗಿ ಉದ್ಯಮಶೀಲತೆ ಮತ್ತು ಹೂಡಿಕೆಗಾಗಿ ಹೊಸ ವಲಯಗಳನ್ನು ತೆರೆಯಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ಈ ವರ್ಷ, ಪರಮಾಣು ಇಂಧನ, ಜೈವಿಕ ಉತ್ಪಾದನೆ, ನಿರ್ಣಾಯಕ ಖನಿಜ ಸಂಸ್ಕರಣೆ ಮತ್ತು ಲಿಥಿಯಂ ಬ್ಯಾಟರಿ ಉತ್ಪಾದನೆಯಂತಹ ಮಾರ್ಗಗಳನ್ನು ಹೂಡಿಕೆಗಾಗಿ ತೆರೆಯಲಾಗಿದೆ. ಈ ಕ್ರಮಗಳು ಸರ್ಕಾರದ ಉದ್ದೇಶ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತವೆ ಎಂದು ಅವರು ಹೇಳಿದರು.

 

|

"ಜವಳಿ, ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಭಾರತದ ಅಭಿವೃದ್ಧಿ ಹೊಂದಿದ ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಕೋಟಿಗಟ್ಟಲೆ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ" ಎಂದು ಪ್ರಧಾನಿ ಹೇಳಿದರು. ಹತ್ತಿ, ರೇಷ್ಮೆ, ಪಾಲಿಯೆಸ್ಟರ್ ಮತ್ತು ವಿಸ್ಕೋಸ್ ಉತ್ಪಾದನೆಯಲ್ಲಿ ಭಾರತ ಎರಡನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಎಂದು ಅವರು ಎತ್ತಿ ತೋರಿಸಿದರು. ಜವಳಿ ಕ್ಷೇತ್ರವು ಕೋಟ್ಯಂತರ ಜನರಿಗೆ ಉದ್ಯೋಗ ನೀಡುತ್ತಿದ್ದು, ಭಾರತದಲ್ಲಿ ಜವಳಿ ಉದ್ಯಮವು ಶ್ರೀಮಂತ ಸಂಪ್ರದಾಯ, ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಹೊಂದಿದೆ ಎಂದು ಹೇಳಿದರು. ಮಧ್ಯಪ್ರದೇಶವು ಭಾರತದ ಹತ್ತಿ ರಾಜಧಾನಿಯಾಗಿದ್ದು, ದೇಶದ ಸಾವಯವ ಹತ್ತಿ ಪೂರೈಕೆಯಲ್ಲಿ ಸುಮಾರು 25 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಮತ್ತು ಮಲ್ಬರಿ ರೇಷ್ಮೆಯ ಅತಿದೊಡ್ಡ ಉತ್ಪಾದಕನಾಗಿದೆ, ಹಾಗೆಯೇ ರಾಜ್ಯದ ಚಂದೇರಿ ಮತ್ತು ಮಹೇಶ್ವರಿ ಸೀರೆಗಳು ಹೆಚ್ಚು ಮೆಚ್ಚುಗೆ ಪಡೆದಿವೆ ಮತ್ತು ಜಿಐ ಟ್ಯಾಗ್ ಅನ್ನು ಪಡೆದಿವೆ ಎಂದು ಅವರು ಹೇಳಿದರು. ಈ ವಲಯದಲ್ಲಿನ ಹೂಡಿಕೆಯು ಮಧ್ಯಪ್ರದೇಶದ ಜವಳಿಯು ಜಾಗತಿಕವಾಗಿ ಪ್ರಭಾವ ಬೀರಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಸಾಂಪ್ರದಾಯಿಕ ಜವಳಿಗಳನ್ನು ಮೀರಿ ಭಾರತವು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಕುರಿತು ಮಾತನಾಡಿದ ಪ್ರಧಾನಿ, ಕೃಷಿ ಜವಳಿ, ವೈದ್ಯಕೀಯ ಜವಳಿ ಮತ್ತು ಜಿಯೋ ಟೆಕ್ಸ್‌ಟೈಲ್‌ಗಳಂತಹ ತಾಂತ್ರಿಕ ಜವಳಿಗಳನ್ನು ಉತ್ತೇಜಿಸಲಾಗುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಲಾಗಿದೆ, ಇದನ್ನು ಬಜೆಟ್‌ ನಲ್ಲಿ ಉತ್ತೇಜಿಸಲಾಗಿದೆ ಎಂದು ಹೇಳಿದರು. ಸರ್ಕಾರದ ಪ್ರಧಾನ ಮಂತ್ರಿ ಮಿತ್ರ ಯೋಜನೆಯು ಚಿರಪರಿಚಿತವಾಗಿದೆ ಮತ್ತು ದೇಶದಾದ್ಯಂತ ಏಳು ದೊಡ್ಡ ಜವಳಿ ಪಾರ್ಕ್‌ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಅವುಗಳಲ್ಲಿ ಒಂದು ಮಧ್ಯಪ್ರದೇಶದಲ್ಲಿದೆ ಎಂದು ಶ್ರೀ ಮೋದಿ ಹೇಳಿದರು. ಈ ಉಪಕ್ರಮವು ಜವಳಿ ಕ್ಷೇತ್ರದ ಬೆಳವಣಿಗೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಜವಳಿ ಕ್ಷೇತ್ರಕ್ಕೆ ಘೋಷಿಸಿರುವ ಪಿ ಎಲ್‌ ಐ ಯೋಜನೆಯ ಲಾಭವನ್ನು ಹೂಡಿಕೆದಾರರು ಪಡೆದುಕೊಳ್ಳುವಂತೆ ಪ್ರಧಾನಮಂತ್ರಿ ಅವರು ಕೋರಿದರು.

ಭಾರತವು ತನ್ನ ಜವಳಿ ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ಸೇರಿಸುತ್ತಿರುವಂತೆಯೇ, ಅದು ಪ್ರವಾಸೋದ್ಯಮ ಕ್ಷೇತ್ರವನ್ನು ಸಹ ಬೆಳೆಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ನರ್ಮದಾ ನದಿಯ ಸುತ್ತ ಮತ್ತು ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ಗಮನಾರ್ಹ ಅಭಿವೃದ್ಧಿಯನ್ನು ಎತ್ತಿ ಹಿಡಿದ ಸಂಸದ ಪ್ರವಾಸೋದ್ಯಮ ಅಭಿಯಾನದ “ಎಂಪಿ ಅಜಬ್ ಹೈ, ಸಬ್ಸೆ ಗಜಬ್ ಹೈ”ಅನ್ನು ನೆನಪಿಸಿಕೊಂಡರು. ರಾಜ್ಯದ ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಅಪಾರ ಸಾಮರ್ಥ್ಯದ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. "ಭಾರತದಲ್ಲಿ ಗುಣಪಡಿಸು" ಮಂತ್ರವು ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ವಲಯದಲ್ಲಿ ಹೂಡಿಕೆ ಅವಕಾಶಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಅವರು ಹೇಳಿದರು. ಸರ್ಕಾರವು ಈ ವಲಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸುತ್ತಿದೆ. ಭಾರತದ ಸಾಂಪ್ರದಾಯಿಕ ಪರಿಹಾರಗಳು ಮತ್ತು ಆಯುಷ್ ಅನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲಾಗುತ್ತಿದೆ ಮತ್ತು ವಿಶೇಷ ಆಯುಷ್ ವೀಸಾಗಳನ್ನು ನೀಡಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಉಪಕ್ರಮಗಳಿಂದ ಮಧ್ಯಪ್ರದೇಶವು ಹೆಚ್ಚು ಪ್ರಯೋಜನ ಪಡೆಯುತ್ತದೆ ಎಂದು ಅವರು ಒತ್ತಿ ಹೇಳಿದರು. ಉಜ್ಜಯಿನಿಯ ಮಹಾಕಾಲ ಮಂದಿರಕ್ಕೆ ಭೇಟಿ ನೀಡುವಂತೆ ಅವರು ಸಂದರ್ಶಕರನ್ನು ಪ್ರೋತ್ಸಾಹಿಸಿದರು, ಅಲ್ಲಿ ಅವರು ಮಹಾಕಾಲನಿಂದ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ದೇಶವು ತನ್ನ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತಿದೆ ಎಂಬುದರ ಅನುಭವ ಪಡೆಯುತ್ತಾರೆ ಎಂದು ಅವರು ಹೇಳಿದರು.

 

|

ಕೆಂಪು ಕೋಟೆಯಿಂದ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಪ್ರಧಾನಿ, ಮಧ್ಯಪ್ರದೇಶದಲ್ಲಿ ಹೂಡಿಕೆ ಮಾಡಲು ಮತ್ತು ಹೂಡಿಕೆ ಹೆಚ್ಚಿಸಲು ಇದು ಸರಿಯಾದ ಸಮಯ ಎಂದು ಹೇಳಿ ತಮ್ಮ ಭಾಷಣ ಮುಕ್ತಾಯ ಮಾಡಿದರು.

ಮಧ್ಯಪ್ರದೇಶ ರಾಜ್ಯಪಾಲ ಶ್ರೀ ಮಂಗುಭಾಯಿ ಛಗನಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಸೇರಿದಂತೆ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಭೋಪಾಲ್‌ ನಲ್ಲಿ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್) 2025 ಮಧ್ಯಪ್ರದೇಶವನ್ನು ಜಾಗತಿಕ ಹೂಡಿಕೆ ಕೇಂದ್ರವಾಗಿ ಸ್ಥಾಪಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಜಿಐಎಸ್‌ ನಲ್ಲಿ ಇಲಾಖಾ ಶೃಂಗಸಭೆ; ಫಾರ್ಮಾ ಮತ್ತು ವೈದ್ಯಕೀಯ ಸಾಧನಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಎಂ ಎಸ್‌ ಎಂ ಇ ಇತ್ಯಾದಿಗಳ ಮೇಲೆ ವಿಶೇಷ ಅಧಿವೇಶನಗಳನ್ನು ಒಳಗೊಂಡಿದೆ. ಇದು ಜಾಗತಿಕ ದಕ್ಷಿಣ ರಾಷ್ಟ್ರಗಳ ಸಮ್ಮೇಳನ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಅಧಿವೇಶನ ಮತ್ತು ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ವಿಶೇಷ ಅಧಿವೇಶನಗಳಂತಹ ಅಂತರರಾಷ್ಟ್ರೀಯ ಅಧಿವೇಶನಗಳನ್ನು ಸಹ ಒಳಗೊಂಡಿದೆ.

ಶೃಂಗಸಭೆಯಲ್ಲಿ ಮೂರು ಪ್ರಮುಖ ಕೈಗಾರಿಕಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಆಟೋ ಶೋ ಮಧ್ಯಪ್ರದೇಶದ ವಾಹನ ಸಾಮರ್ಥ್ಯಗಳು ಮತ್ತು ಭವಿಷ್ಯದ ಚಲನಶೀಲತೆ ಪರಿಹಾರಗಳನ್ನು ಪ್ರದರ್ಶಿಸುತ್ತದೆ. ಜವಳಿ ಮತ್ತು ಫ್ಯಾಷನ್ ಎಕ್ಸ್‌ಪೋ ಸಾಂಪ್ರದಾಯಿಕ ಮತ್ತು ಆಧುನಿಕ ಜವಳಿ ತಯಾರಿಕೆಯಲ್ಲಿ ರಾಜ್ಯದ ಪರಿಣತಿಯನ್ನು ಪ್ರದರ್ಶಿಸುತ್ತದೆ. "ಒಂದು ಜಿಲ್ಲೆ-ಒಂದು ಉತ್ಪನ್ನ" (ಒಡಿಒಪಿ) ಗ್ರಾಮವು ರಾಜ್ಯದ ವಿಶಿಷ್ಟ ಕಲೆಗಾರಿಕೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.

60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು, 300ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ಭಾರತದ ನೀತಿ ನಿರೂಪಕರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

 

Click here to read full text speech

  • Devdatta Bhagwan Hatkar March 28, 2025

    नमो नमो🪷🪷
  • AK10 March 24, 2025

    PM NAMO IS THE BEST EVER FOR INDIA!
  • Margang Tapo March 22, 2025

    vande mataram 🇮🇳🦾🦾🦾🦾🇮🇳
  • Jitendra Kumar March 20, 2025

    🙏🇮🇳❤️
  • Prasanth reddi March 17, 2025

    జై బీజేపీ 🪷🪷🤝
  • ram Sagar pandey March 15, 2025

    🌹🌹🙏🙏🌹🌹🌹🙏🏻🌹जय श्रीराम🙏💐🌹जय श्रीकृष्णा राधे राधे 🌹🙏🏻🌹🌹🌹🙏🙏🌹🌹जय माँ विन्ध्यवासिनी👏🌹💐ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹🌹🙏🏻🌹जय श्रीराम🙏💐🌹जय माता दी 🚩🙏🙏
  • ABHAY March 14, 2025

    जय हो
  • SUNIL CHAUDHARY KHOKHAR BJP March 08, 2025

    08/03/2025
  • SUNIL CHAUDHARY KHOKHAR BJP March 08, 2025

    08/03/2025
  • SUNIL CHAUDHARY KHOKHAR BJP March 08, 2025

    08/03/2025
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Boost for Indian Army: MoD signs ₹2,500 crore contracts for Advanced Anti-Tank Systems & military vehicles

Media Coverage

Boost for Indian Army: MoD signs ₹2,500 crore contracts for Advanced Anti-Tank Systems & military vehicles
NM on the go

Nm on the go

Always be the first to hear from the PM. Get the App Now!
...
PM speaks with HM King Philippe of Belgium
March 27, 2025

The Prime Minister Shri Narendra Modi spoke with HM King Philippe of Belgium today. Shri Modi appreciated the recent Belgian Economic Mission to India led by HRH Princess Astrid. Both leaders discussed deepening the strong bilateral ties, boosting trade & investment, and advancing collaboration in innovation & sustainability.

In a post on X, he said:

“It was a pleasure to speak with HM King Philippe of Belgium. Appreciated the recent Belgian Economic Mission to India led by HRH Princess Astrid. We discussed deepening our strong bilateral ties, boosting trade & investment, and advancing collaboration in innovation & sustainability.

@MonarchieBe”