QuoteGreetings on the occasion of Chhath Puja: PM Modi
QuoteChhath Puja is an example of Ek Bharat Shreshtha Bharat: PM Modi
QuoteToday we are one of the largest solar power generating countries: PM Modi
QuoteOur country is doing wonders in the solar as well as the space sector. The whole world, today, is astonished to see the achievements of India: PM Modi
QuoteUrge more and more Start-ups and innovators to take full advantage of the huge opportunities being created in India in the space sector: PM Modi
QuoteStudent power is the basis of making India strong. It is the youth of today who would lead India in the journey till 2047: PM Modi
QuoteIn India, Mission LiFE has been launched. The simple principle of Mission LiFE is - Promote a lifestyle which does not harm the environment: PM Modi

ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ಇಂದು ದೇಶದ ಹಲವೆಡೆ ಸೂರ್ಯನ ಆರಾಧನೆಯ ಮಹಾ ಹಬ್ಬವಾದ 'ಛಠ್' ಆಚರಿಸಲಾಗುತ್ತಿದೆ. 'ಛಠ್' ಹಬ್ಬದ ಪ್ರಯುಕ್ತ  ಲಕ್ಷಾಂತರ ಭಕ್ತರು ತಮ್ಮ ಗ್ರಾಮಗಳು, ತಮ್ಮತಮ್ಮ ಮನೆಗಳು, ತಮ್ಮ  ಕುಟುಂಬಗಳಿದ್ದಲ್ಲಿಗೆ ತಲುಪಿದ್ದಾರೆ. 'ಛಠ್' ಮಹಾತಾಯಿ ಎಲ್ಲರಿಗೂ ಸಮೃದ್ಧಿ ಮತ್ತು ಕಲ್ಯಾಣವಾಗಲಿ ಎಂದು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ಸ್ನೇಹಿತರೇ, ನಮ್ಮ ಸಂಸ್ಕೃತಿ, ನಂಬಿಕೆ, ಪ್ರಕೃತಿಯೊಂದಿಗೆ ಎಷ್ಟು ಆಳವಾದ ಸಂಬಂಧವನ್ನು ಹೊಂದಿದೆ ಎಂಬುದಕ್ಕೆ ಸೂರ್ಯ ಆರಾಧನೆಯ ಸಂಪ್ರದಾಯ ಸಾಕ್ಷಿಯಾಗಿದೆ. ಈ ಪೂಜೆಯ ಮೂಲಕ ನಮ್ಮ ಜೀವನದಲ್ಲಿ ಸೂರ್ಯನ ಬೆಳಕಿನ ಮಹತ್ವವನ್ನು ವಿವರಿಸಲಾಗಿದೆ. ಇದರೊಂದಿಗೆ ಏರಿಳಿತಗಳು ಬದುಕಿನ ಅವಿಭಾಜ್ಯ ಅಂಗ ಎಂಬ ಸಂದೇಶವನ್ನೂ ನೀಡಲಾಗಿದೆ. ಆದ್ದರಿಂದಲೇ, ಎಲ್ಲ ಸಂದರ್ಭದಲ್ಲೂ ನಾವು ಒಂದೇ ಮನೋಭಾವವನ್ನು ಹೊಂದಿರಬೇಕು. 'ಛಠ್' ತಾಯಿಯ ಪೂಜೆಯಲ್ಲಿ ವಿವಿಧ ಹಣ್ಣುಗಳು ಮತ್ತು ಠೆಕುವಾವನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇದರ ಉಪವಾಸ ವ್ರತವೂ ಯಾವುದೇ ಕಠಿಣ ಸಾಧನೆಗಿಂತ ಕಡಿಮೆಯೇನಲ್ಲ. ಛಠ್ ಪೂಜೆಯ ಮತ್ತೊಂದು ವಿಶೇಷವೆಂದರೆ ಪೂಜೆಗೆ ಬಳಸುವ ವಸ್ತುಗಳನ್ನು ಸಮಾಜದ ವಿಭಿನ್ನ  ಜನರು ಒಟ್ಟಾಗಿ ತಯಾರಿಸುತ್ತಾರೆ. ಇದರಲ್ಲಿ ಬಿದಿರಿನಿಂದ ಮಾಡಿದ ಬುಟ್ಟಿ ಅಥವಾ ಸುಪಲಿ ಎಂಬ ಬಳ್ಳಿಯನ್ನು ಬಳಸುತ್ತಾರೆ. ಮಣ್ಣಿನ ದೀಪಗಳಿಗೆ ತನ್ನದೇ ಆದ ಮಹತ್ವವೂ ಇದೆ. ಈ ಮೂಲಕ ಕಡಲೆ ಬೆಳೆಯುವ ರೈತರು ಹಾಗೂ ಬತ್ತಾಸು ತಯಾರಿಸುವ ಸಣ್ಣ ಉದ್ದಿಮೆದಾರರ ಮಹತ್ವ ಸಮಾಜದಲ್ಲಿ ನೆಲೆಯೂರಿದೆ. ಅವರ ಸಹಕಾರವಿಲ್ಲದೇ ಛಠ್ ಪೂಜೆ ಪೂರ್ಣಗೊಳ್ಳುವುದಿಲ್ಲ. ಛಠ್ ಹಬ್ಬವು ನಮ್ಮ ಜೀವನದಲ್ಲಿ ಸ್ವಚ್ಛತೆಯ ಮಹತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.  ಈ ಹಬ್ಬದ ಆಗಮನದ ಸಂದರ್ಭದಲ್ಲಿ, ರಸ್ತೆಗಳು, ನದಿಗಳು, ಸ್ನಾನಘಟ್ಟಗಳು, ವಿವಿಧ ನೀರಿನ ಮೂಲಗಳು, ಎಲ್ಲವನ್ನೂ ಸಮುದಾಯ ಮಟ್ಟದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಛಠ್ ಹಬ್ಬವು 'ಏಕ್ ಭಾರತ್- ಶ್ರೇಷ್ಠ ಭಾರತ'ದ ಉದಾಹರಣೆಯಾಗಿದೆ. ಇಂದು ಬಿಹಾರ ಮತ್ತು ಪೂರ್ವಾಂಚಲದ ಜನರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಛಠ್ ಅನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳು ಮತ್ತು ಗುಜರಾತ್ ನ ಹಲವು ಭಾಗಗಳಲ್ಲಿ ಛಠ್ ಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಹಿಂದೆ ಗುಜರಾತಿನಲ್ಲಿ ಛಠ್ ಪೂಜೆ ಅಷ್ಟೊಂದು ಪ್ರಚಲಿತವಾಗಿರಲಿಲ್ಲ ಎಂಬುದು ನನಗೆ ನೆನಪಿದೆ. ಆದರೆ ಕಾಲಾನಂತರದಲ್ಲಿ, ಛಠ್ ಪೂಜೆಯ ಚರಣೆಗಳು ಸಂಪೂರ್ಣ ಗುಜರಾತ್ ನಲ್ಲಿ ಕಾಣಲಾರಂಭಿಸಿವೆ. ನನಗೂ ಇದನ್ನು ನೋಡಿ ತುಂಬಾ ಖುಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಛಠ್ ಪೂಜೆಯ ಸುಂದರವಾದ ಚಿತ್ರಗಳು ವಿದೇಶದಿಂದ ಹರಿದು ಬರುತ್ತಿವೆ ಎಂಬುದನ್ನು ನಾವು ನೋಡುತ್ತೇವೆ. ಅಂದರೆ, ಭಾರತದ ಶ್ರೀಮಂತ ಪರಂಪರೆ, ನಮ್ಮ ನಂಬಿಕೆ, ಪ್ರಪಂಚದ ಮೂಲೆ ಮೂಲೆಯಲ್ಲಿ ತನ್ನ ಗುರುತನ್ನು ಸ್ಥಾಪಿಸುತ್ತಿದೆ. ಈ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬ ಭಕ್ತರಿಗೂ ನನ್ನ ಶುಭಾಶಯಗಳು.

ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ಪವಿತ್ರ ಛಠ್ ಪೂಜೆಯ ಬಗ್ಗೆ ಮಾತನಾಡಿದೆವು, ಭಗವಾನ್ ಸೂರ್ಯನ ಆರಾಧನೆ ಬಗ್ಗೆ ಮಾತನಾಡಿದೆವು. ಹಾಗಾದರೆ ಇಂದು ಸೂರ್ಯನನ್ನು ಪೂಜಿಸುವ ಜೊತೆಗೆ ಅವನು ನೀಡಿದ ವರದ ಬಗ್ಗೆಯೂ ಚರ್ಚಿಸೋಣ. 'ಸೌರಶಕ್ತಿ' ಸೂರ್ಯದೇವನ ವರದಾನ. ಸೌರಶಕ್ತಿ ಇಡೀ ಜಗತ್ತು ತನ್ನ ಭವಿಷ್ಯವನ್ನು ಅದರಲ್ಲಿ ಕಾಣುವಂತಹ ಒಂದು ವಿಷಯವಾಗಿದೆ ಮತ್ತು ಭಾರತಕ್ಕಾಗಿ, ಸೂರ್ಯ ದೇವ ಶತಮಾನಗಳಿಂದ ಕೇವಲ ಪೂಜಿತನಲ್ಲ, ಜೀವನ ವಿಧಾನದ ಕೇಂದ್ರವಾಗಿ ಮಿಳಿತವಾಗಿದ್ದಾನೆ. ಭಾರತವು ಇಂದು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ, ಅದಕ್ಕಾಗಿಯೇ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಒಂದೆನಿಸಿದ್ದೇವೆ. ಸೌರಶಕ್ತಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದೂ ಅಧ್ಯಯನದ ವಿಷಯವಾಗಿದೆ.

ತಮಿಳುನಾಡಿನಲ್ಲಿ ಕಾಂಚೀಪುರಂನಲ್ಲಿ ಥಿರು ಕೆ. ಎಳಿಲನ್ ಎಂಬ ಕೃಷಿಕರೊಬ್ಬರಿದ್ದಾರೆ. ಇವರು  ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ’ ಯ ಲಾಭ ಪಡೆದು ತಮ್ಮ ಜಮೀನಿನಲ್ಲಿ ಹತ್ತು ಅಶ್ವಶಕ್ತಿಯ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಜಮೀನಿಗೆ ವಿದ್ಯುತ್ತಿಗಾಗಿ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಈಗ ಅವರು ಹೊಲದಲ್ಲಿ ನೀರಾವರಿಗಾಗಿ ಸರ್ಕಾರದ ವಿದ್ಯುತ್ ಪೂರೈಕೆಯ ಮೇಲೆ ಅವಲಂಬಿತವಾಗಿಲ್ಲ. ಅದೇ ರೀತಿ ರಾಜಸ್ಥಾನದ ಭರತ್‌ಪುರದಲ್ಲಿ 'ಪಿ.ಎಂ. ಕುಸುಮ್ ಯೋಜನೆ'ಯ ಇನ್ನೊಬ್ಬ ಫಲಾನುಭವಿ ರೈತರಿದ್ದಾರೆ - ಕಮಲ್ ಮೀನಾ. ಕಮಲ್  ಅವರು ತಮ್ಮ ಹೊಲದಲ್ಲಿ ಸೋಲಾರ್ ಪಂಪ್ ಅನ್ನು ಸ್ಥಾಪಿಸಿದರು, ಇದರಿಂದಾಗಿ ಅವರ ವೆಚ್ಚ ಕಡಿಮೆಯಾಗಿದೆ. ವೆಚ್ಚ ಕಡಿಮೆಯಾದುದರಿಂದ ಆದಾಯವೂ ಹೆಚ್ಚಿತು. ಕಮಲಜಿ ಸೋಲಾರ್ ವಿದ್ಯುತ್ ಅನ್ನು ಇತರ ಅನೇಕ ಸಣ್ಣ ಕೈಗಾರಿಕೆಗಳಿಗೆ ಅಳವಡಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಪ್ರದೇಶದಲ್ಲಿ ಮರದ ಕೆಲಸ ಇದೆ, ಹಸುವಿನ ಸಗಣಿಯಿಂದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಇವೆಲ್ಲವುಗಳಿಗೆ ಸೋಲಾರ್ ವಿದ್ಯುತ್ ಬಳಸಲಾಗುತ್ತಿದೆ, ಅವರು 10-12 ಜನರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ, ಅಂದರೆ ಕಮಲ್ ಕುಸುಮ್ ಯೋಜನೆಯಿಂದ ಆರಂಭಿಸಿದ ಉಪಕ್ರಮದ ಪರಿಮಳವು ಬಹಳ ಜನರಿಗೆ ತಲುಪಲಾರಂಭಿಸಿದೆ.

ಸ್ನೇಹಿತರೇ, ನೀವು ತಿಂಗಳಪೂರ್ತಿ ವಿದ್ಯುತ್ ಅನ್ನು ಬಳಸಬಹುದು ಮತ್ತು ನಿಮ್ಮ ವಿದ್ಯುತ್ ಬಿಲ್ ಪಡೆಯುವ ಬದಲು ನಿಮಗೆ ವಿದ್ಯುತ್ ಹಣ ಸಿಗುವುದು ಎಂದು ನೀವು ಊಹಿಸಬಹುದೇ? ಸೌರಶಕ್ತಿ ಇದನ್ನು ಕೂಡ ಮಾಡಿ ತೋರಿಸಿದೆ. ಕೆಲವು ದಿನಗಳ ಹಿಂದೆ, ನೀವು ದೇಶದ ಮೊದಲ ಸೂರ್ಯ ಗ್ರಾಮ - ಗುಜರಾತ್‌ನ ಮೊಢೆರಾ ಬಗ್ಗೆ ಸಾಕಷ್ಟು ಕೇಳಿರಬಹುದು. ಮೊಢೆರಾ ಸೂರ್ಯ ಗ್ರಾಮದ ಬಹುತೇಕ ಮನೆಗಳು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಈಗ ಅಲ್ಲಿನ ಹಲವು ಮನೆಗಳಲ್ಲಿ ತಿಂಗಳಾಂತ್ಯದಲ್ಲಿ ವಿದ್ಯುತ್ ಬಿಲ್ ಬರುತ್ತಿಲ್ಲ ಬದಲಾಗಿ ವಿದ್ಯುತ್ ನಿಂದ ಸಂಪಾದನೆಯ ಚೆಕ್ ಬರುತ್ತಿದೆ. ಹೀಗಾಗುತ್ತಿರುವುದನ್ನು ಕಂಡು ಈಗ ದೇಶದ ಹಲವು ಗ್ರಾಮಗಳ ಜನರು ತಮ್ಮ ಗ್ರಾಮವನ್ನೂ ಸೂರ್ಯಗ್ರಾಮವನ್ನಾಗಿ ಪರಿವರ್ತಿಸಬೇಕು ಎಂದು ಪತ್ರ ಬರೆಯುತ್ತಿದ್ದಾರೆ, ಅಂದರೆ ಭಾರತದಲ್ಲಿ ಸೂರ್ಯಗ್ರಾಮಗಳ ನಿರ್ಮಾಣ ದೊಡ್ಡ ಜನಾಂದೋಲನವಾಗುವ ದಿನ ದೂರವಿಲ್ಲ. ಮತ್ತು ಇದರ ಆರಂಭವನ್ನು ಮೊಢೆರಾ ಗ್ರಾಮದ ಜನತೆ ಈಗಾಗಲೇ ಮಾಡಿದ್ದಾರೆ. 

ಬನ್ನಿ 'ಮನದ ಮಾತಿನ' ಕೇಳುಗರಿಗೆ ಮೊಢೆರಾದ ಜನತೆಯನ್ನು ಪರಿಚಯಿಸೋಣ. ಶ್ರೀ ವಿಪಿನ್‌ಭಾಯ್ ಪಟೇಲ್ ಅವರು ಪ್ರಸ್ತುತ ಫೋನ್‌ ಲೈನ್‌ನಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ.

ಪ್ರಧಾನ ಮಂತ್ರಿ - ವಿಪಿನ್ ಭಾಯ್ ನಮಸ್ತೆ! ನೋಡಿ ಈಗ ಮೊಢೆರಾ ಇಡೀ ದೇಶಕ್ಕೆ ಮಾದರಿಯಾಗಿ ಚರ್ಚೆಯ ವಿಷಯವಾಗಿದೆ. ಆದರೆ ನಿಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರು ನಿಮಗೆ ಈ ಬಗ್ಗೆ ಕೇಳಿದಾಗ ನೀವು ಏನೆಲ್ಲ ವಿವರಿಸುತ್ತೀರಿ, ಏನು ಪ್ರಯೋಜನವಾಗಿದೆ?

ವಿಪಿನ್ ಜೀ - ಸರ್, ಜನರು ನಮ್ಮನ್ನು ಕೇಳಿದಾಗ ನಾವು ಹೀಗೆ ಹೇಳುತ್ತೇವೆ, ನಮಗೆ ಈಗ ವಿದ್ಯುತ್ ಬಿಲ್ ಸೊನ್ನೆಯಾಗಿದೆ. ಕೆಲವೊಮ್ಮೆ 70 ರೂಪಾಯಿಯಷ್ಟು ಬಿಲ್ ಬರುತ್ತದೆ ಆದರೆ ಈ ನಮ್ಮ ಇಡೀ ಗ್ರಾಮದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳುತ್ತೇವೆ.

ಪ್ರಧಾನಿ - ಅಂದರೆ ಒಂದು ರೀತಿಯಲ್ಲಿ ಹಿಂದೆ ವಿದ್ಯುತ್ ಬಿಲ್ ಬಗ್ಗೆ ಇದ್ದ ಚಿಂತೆ ದೂರವಾಗಿದೆ.

ವಿಪಿನ್ ಜಿ - ಹೌದು ಸಾರ್, ನಿಮ್ಮ ಮಾತು ಸರಿಯಾಗಿದೆ ಸರ್. ಇದೀಗ ಇಡೀ ಗ್ರಾಮದಲ್ಲಿ ಯಾವುದೇ ಚಿಂತೆಯಿಲ್ಲ. ತಾವು ಮಾಡಿದ ಕೆಲಸ ತುಂಬಾ ಚೆನ್ನಾಗಿದೆ ಎಂದು ಎಲ್ಲರಿಗೂ ಅನಿಸುತ್ತಿದೆ. ಅವರು ಖುಷಿಯಾಗಿದ್ದಾರೆ ಸರ್ ಎಲ್ಲರೂ ಸಂಭ್ರಮ ಪಡುತ್ತಿದ್ದಾರೆ

ಪ್ರಧಾನಿ - ಈಗ ಅವರೇ ತಮ್ಮ ಮನೆಯಲ್ಲಿ ವಿದ್ಯುತ್ ಕಾರ್ಖಾನೆಯ ಮಾಲೀಕರಾಗಿದ್ದಾರೆ. ತಮ್ಮ ಸ್ವಂತ ಮನೆಯ ಛಾವಣಿಯ ಮೇಲೆ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ವಿಪಿನ್ ಜಿ - ಹೌದು ಸರ್, ಸರಿಯಾಗಿದೆ ಸರ್.

ಪ್ರಧಾನ ಮಂತ್ರಿ - ಹಾಗಾದರೆ ಈ ಬದಲಾವಣೆಯು ಹಳ್ಳಿಯ ಜನರ ಮೇಲೆ ಏನು ಪರಿಣಾಮ ಬೀರಿದೆ?

ವಿಪಿನ್ ಜೀ - ಸರ್, ಇಡೀ ಗ್ರಾಮದ ಜನ, ಕೃಷಿ ಮಾಡುತ್ತಿದ್ದಾರೆ, ನಮಗೆ ಇದ್ದ ವಿದ್ಯುತ್ ಗೊಡವೆಯಿಂದ ಮುಕ್ತಿ ಲಭಿಸಿದೆ, ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಹಾಗಾಗಿ ನಿಶ್ಚಿಂತರಾಗಿದ್ದೇವೆ ಸರ್. 

ಪ್ರಧಾನಿ - ಅಂದರೆ, ವಿದ್ಯುತ್ ಬಿಲ್ ಕೂಡ ಇಲ್ಲ ಮತ್ತು ಸೌಲಭ್ಯ ಹೆಚ್ಚಿದೆ.

ವಿಪಿನ್ ಜೀ - ಕಿರಿ ಕಿರಿಯೇ ತಪ್ಪಿದಂತಾಗಿದೆ ಸರ್ ನೀವು ಇಲ್ಲಿಗೆ ಬಂದು ಇಲ್ಲಿ 3D ಶೋ ಉದ್ಘಾಟನೆ ಮಾಡಿದ ಮೇಲಂತೂ ಮೊಢೆರಾ ಗ್ರಾಮದ ಕಿರೀಟಕ್ಕೆ ಮತ್ತಷ್ಟು ಗರಿ ಸೇರಿಸಿದಂತಾಗಿದೆ ಸರ್. ಮತ್ತು ಆ ಕಾರ್ಯದರ್ಶಿಗಳು ಬಂದಿದ್ದರಲ್ಲವೇ ಸರ್...

ಪ್ರಧಾನಿ - ಹೌದು ಹೌದು ...

ವಿಪಿನ್ ಜೀ - ಅದರಿಂದ  ಗ್ರಾಮ ಪ್ರಸಿದ್ಧವಾಗಿ ಹೋಯಿತು ಸರ್.

ಪ್ರಧಾನಮಂತ್ರಿ - ಹೌದು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರ ಸ್ವಆಶಯವಾಗಿತ್ತು. ತಾವು ಇಷ್ಟು ದೊಡ್ಡ ಕೆಲಸ ಮಾಡಿದ್ದೀರಿ ಎಂದ ಮೇಲೆ ನಾನು ಸ್ವತಃ ಅಲ್ಲಿಗೆ ಹೋಗಿ ನೋಡಬೇಕು ಎಂದು ತುಂಬಾ ಆಗ್ರಹಿಸಿದರು. ಸರಿ ವಿಪಿನ್ ಭಾಯಿ ತಮಗೆ ಮತ್ತು ತಮ್ಮ ಗ್ರಾಮದ ಎಲ್ಲಾ ಜನರಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ಜಗತ್ತು ನಿಮ್ಮಿಂದ ಸ್ಫೂರ್ತಿ ಪಡೆಯಲಿ  ಮತ್ತು ಈ ಸೌರಶಕ್ತಿ ಅಭಿಯಾನವು ಮನೆ ಮನೆಗೆ ತಲುಪಲಿ ಎಂದು ಆಶಿಸುತ್ತೇನೆ.

ವಿಪಿನ್ ಜಿ - ಸರಿ ಸರ್. ಸೋಲಾರ್ ಅಳವಡಿಸಿ, ನಿಮ್ಮ ಹಣದಲ್ಲಿಯೇ ಅಳವಡಿಸಿಕೊಳ್ಳಿ, ಇದರಿಂದ ಸಾಕಷ್ಟು ಲಾಭವಿದೆ ಎಂದು ನಾನು ಎಲ್ಲರಿಗೂ ಹೇಳುತ್ತೇನೆ ಸರ್.

ಪ್ರಧಾನಿ - ಹೌದು, ದಯವಿಟ್ಟು ಜನರಿಗೆ ವಿವರಿಸಿ. ತಮಗೆ ಅನಂತ ಶುಭಹಾರೈಕೆಗಳು. ಧನ್ಯವಾದಗಳು ಸಹೋದರ

ವಿಪಿನ್ ಜಿ - ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿ ನನ್ನ ಜೀವನ ಧನ್ಯವಾಯಿತು.

ವಿಪಿನ್ ಭಾಯ್ ಅವರಿಗೆ ಅನಂತ ಧನ್ಯವಾದಗಳು

ನಾವೀಗ ಮೊಢೆರಾ ಗ್ರಾಮದ ಸಹೋದರಿ ವರ್ಷಾ ಬೇನ್ ಅವರೊಂದಿಗೆ ಮಾತನಾಡೋಣ.

ವರ್ಷಾಬೆನ್ - ಹಲೋ, ನಮಸ್ಕಾರ ಸರ್!

ಪ್ರಧಾನ ಮಂತ್ರಿ - ನಮಸ್ತೆ-ನಮಸ್ತೇ ವರ್ಷಾಬೆನ್ | ನೀವು ಹೇಗಿದ್ದೀರಿ

ವರ್ಷಾಬೆನ್ - ನಾನು ಚೆನ್ನಾಗಿದ್ದೇನೆ ಸರ್. ನೀವು ಹೇಗಿದ್ದೀರಿ ?

ಪ್ರಧಾನಿ:- ನಾನು ತುಂಬಾ ಚೆನ್ನಾಗಿದ್ದೇನೆ.

ವರ್ಷಾಬೆನ್ - ನಿಮ್ಮೊಂದಿಗೆ ಮಾತನಾಡಿ ಧನ್ಯಳಾದೆ ಸರ್.

ಪ್ರಧಾನ ಮಂತ್ರಿ - ಸರಿ ವರ್ಷಾಬೆನ್.

ವರ್ಷಾಬೆನ್ - ಹಾಂ ಸರ್

ಪ್ರಧಾನ ಮಂತ್ರಿ- ನೀವು ಮೊಡೆರಾದಲ್ಲಿ, ಮಿಲಿಟರಿ ಕುಟುಂಬದವರು ಅಲ್ಲವೆ.

ವರ್ಷಾಬೆನ್ - ನಾನು ಮಿಲಿಟರಿ ಕುಟುಂಬದವಳು. ಮಾಜಿ ಸೈನಿಕನ ಪತ್ನಿ ಮಾತನಾಡುತ್ತಿದ್ದೇನೆ ಸರ್.

ಪ್ರಧಾನ ಮಂತ್ರಿ - ಹಾಗಾದರೆ ಭಾರತದಲ್ಲಿ ನಿಮಗೆ ಎಲ್ಲೆಲ್ಲಿ ಹೋಗಲು ಅವಕಾಶ ಲಭಿಸಿತ್ತು?

ವರ್ಷಾಬೆನ್ - ರಾಜಸ್ಥಾನದಲ್ಲಿ, ಗಾಂಧಿ ನಗರದಲ್ಲಿ, ಕಚರಾ ಕಾಂಝೋರ್ ಜಮ್ಮು, ಅಲ್ಲೆಲ್ಲಿ ಅವರೊಂದಿಗೆ ಇರುವ ಅವಕಾಶ ಸಿಕ್ಕಿತ್ತು. ಅಲ್ಲಿ ಸಾಕಷ್ಟು ಸೌಲಭ್ಯ ದೊರೆಯುತ್ತಿತ್ತು ಸರ್.

ಪ್ರಧಾನ ಮಂತ್ರಿ - ಹೌದು. ಸೇನೆಯಲ್ಲಿ ತಾವು ಇದ್ದುದರಿಂದ ಹಿಂದಿಯನ್ನೂ ಚೆನ್ನಾಗಿ ಮಾತನಾಡುತ್ತೀರಿ.

ವರ್ಷಾಬೆನ್ - ಹೌದು ಸರ್. ನಾನು ಕಲಿತಿದ್ದೇನೆ ಸರ್..

ಪ್ರಧಾನ ಮಂತ್ರಿ - ಮೊಢೆರಾದಲ್ಲಿ ದೊಡ್ಡ ಬದಲಾವಣೆಯನ್ನು ತಂದಂತಹ ಈ ಸೋಲಾರ್ ರೂಫ್‌ಟಾಪ್ ಪ್ಲಾಂಟ್ ಅನ್ನು ನೀವು ಅಳವಡಿಸಿಕೊಂಡಿದ್ದೀರಿ? ಜನರು ಆರಂಭದಲ್ಲಿ ಏನು ಹೇಳುತ್ತಿದ್ದರೋ ಅದನ್ನು ಕೇಳಿ ನಿಮಗೆ, ಇದರ ಅರ್ಥವೇನು? ಏನು ಮಾಡುತ್ತಿದ್ದಾರೆ ? ಏನಾಗುವುದು ? ಈ ರೀತಿ ಎಂದಾದರೂ ವಿದ್ಯುತ್ ಲಭಿಸುತ್ತದೆಯೇ? ಇವೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬಹುದು. ಈಗ ನಿಮ್ಮ ಅನುಭವವೇನು? ಇದರಿಂದ ಏನು ಪ್ರಯೋಜನವಾಗುತ್ತಿದೆ?

ವರ್ಷಾಬೆನ್ - ತುಂಬಾ ಲಾಭವಿದೆ, ಸಾಕಷ್ಟು ಲಾಭ ದೊರೆಯುತ್ತಿದೆ ಸರ್. ಸರ್, ನಿಮ್ಮಿಂದಾಗಿ ನಮ್ಮ ಗ್ರಾಮದಲ್ಲಿ ಪ್ರತಿದಿನ ದೀಪಾವಳಿ ಆಚರಿಸುತ್ತಿದ್ದೇವೆ. ನಮಗೆ 24 ಗಂಟೆ ವಿದ್ಯುತ್ ಸಿಗುತ್ತಿದೆ, ಬಿಲ್ ಬರುವುದೇ ಇಲ್ಲ. ನಮ್ಮ ಮನೆಯಲ್ಲಿ ಎಲ್ಲಾ ಎಲೆಕ್ಟ್ರಿಕ್ ಸಾಮಾನುಗಳನ್ನು ತಂದಿದ್ದೇವೆ ಸರ್, ನಾವು ಎಲ್ಲವನ್ನೂ ಬಳಸುತ್ತಿದ್ದೇವೆ –ನಮಗೆ ವಿದ್ಯುತ್ ಬಿಲ್ ಬರದಿದ್ದರೆ ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಬಳಸಬಹುದು ಅಲ್ಲವೇ ಸರ್!

ಪ್ರಧಾನಮಂತ್ರಿ - ನೀವು ಹೇಳಿದ ಮಾತು ಸರಿಯಾಗಿದೆ, ನೀವೂ ಕೂಡ ವಿದ್ಯುಚ್ಛಕ್ತಿಯ ಗರಿಷ್ಠ ಬಳಕೆ ಮಾಡಲು ಕೂಡಾ ಮನಸ್ಸು ಮಾಡಿದ್ದೀರಿ.

ವರ್ಷಾಬೆನ್ - ಹೌದು ಸರ್, ಹೌದು| ಸದ್ಯ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಮುಕ್ತ ಮನಸ್ಸಿನಿಂದ ವಾಷಿಂಗ್ ಮೆಷಿನ್, ಎಸಿ, ಎಲ್ಲ ಬಳಸಬಹುದು ಸರ್.

ಪ್ರಧಾನ ಮಂತ್ರಿ - ಮತ್ತು ಹಳ್ಳಿಯ ಉಳಿದ ಜನರು ಸಹ ಇದರಿಂದ ಸಂತೋಷವಾಗಿದ್ದಾರೆಯೇ?

ವರ್ಷಾಬೆನ್ - ತುಂಬಾ ಸಂತೋಷವಾಗಿದ್ದಾರೆ ಸರ್.

ಪ್ರಧಾನಿ - ಅಲ್ಲಿ ಸೂರ್ಯ ದೇವಾಲಯದಲ್ಲಿ ಕೆಲಸ ಮಾಡುವವರು ನಿಮ್ಮ ಪತಿಯೇ? ಅಲ್ಲಿ ನಡೆದ ಲೈಟ್ ಶೋ ಎಷ್ಟು ದೊಡ್ಡ ಕಾರ್ಯಕ್ರಮವಾಗಿತ್ತೆಂದರೆ, ಈಗ ಜಗತ್ತಿನೆಲ್ಲೆಡೆಯಿಂದ ಅತಿಥಿಗಳು ಅಲ್ಲಿಗೆ ಬರುತ್ತಿದ್ದಾರೆ.

ವರ್ಷಾ ಬೆನ್ - ಪ್ರಪಂಚದಾದ್ಯಂತದ ವಿದೇಶಿಯರು ಬರಬಹುದು ಆದರೆ ನೀವು ನಮ್ಮ ಗ್ರಾಮವನ್ನು ವಿಶ್ವದಲ್ಲೇ ಪ್ರಸಿದ್ಧಿಗೊಳಿಸಿದ್ದೀರಿ.

ಪ್ರಧಾನ ಮಂತ್ರಿ - ಹಾಗಾದರೆ ಅಷ್ಟೊಂದು ಅತಿಥಿಗಳು ದೇವಸ್ಥಾನಕ್ಕೆ ನೋಡಲು ಬರುತ್ತಿದ್ದಾರೆ ಅಂದ ಮೇಲೆ ನಿಮ್ಮ ಪತಿಗೆ ಈಗ ಕೆಲಸ ಹೆಚ್ಚಿರಬೇಕು 

ವರ್ಷಾ ಬೆನ್ - ಓಹ್! ಎಷ್ಟೇ ಕೆಲಸ ಹೆಚ್ಚಾದರೂ ಪರವಾಗಿಲ್ಲ ಸರ್, ನನ್ನ ಪತಿಗೆ ಇದರಿಂದ ಯಾವುದೇ ತೊಂದರೆ ಇಲ್ಲ, ನೀವು ನಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸುತ್ತಾ ಸಾಗಿರಿ, ಅಷ್ಟು ಸಾಕು.

ಪ್ರಧಾನಿ - ಈಗ ನಾವೆಲ್ಲರೂ ಒಟ್ಟಾಗಿ ಗ್ರಾಮದ ಅಭಿವೃದ್ಧಿಯನ್ನು ಮಾಡಬೇಕಿದೆ.

ವರ್ಷಾ ಬೆನ್ - ಹೌದು, ಹೌದು. ಸರ್ ನಿಮ್ಮ ಜೊತೆ ನಾವಿದ್ದೇವೆ

ಪ್ರಧಾನಮಂತ್ರಿ - ಗ್ರಾಮವು ಈ ಯೋಜನೆಯನ್ನು ಒಪ್ಪಿಕೊಂಡಿತು ಮತ್ತು ನಾವು ನಮ್ಮ ಮನೆಯಲ್ಲಿ ವಿದ್ಯುತ್ ತಯಾರಿಸಬಹುದು ಎಂದು ಗ್ರಾಮಸ್ಥರಿಗೆ ಮನವರಿಕೆಯಾಯಿತು ಹಾಗಾಗಿ ನಾನು ಮೊಢೆರಾದ ಜನರನ್ನು ಅಭಿನಂದಿಸಲು ಬಯಸುತ್ತೇನೆ.

ರೈನ್ ಬೆನ್ -24 ಗಂಟೆಗಳು ಸರ್! ನಮ್ಮ ಮನೆಗೆ ವಿದ್ಯುತ್ ಸರಬರಾಜಿದೆ, ನಾವು ತುಂಬಾ ಸಂತೋಷವಾಗಿದ್ದೇವೆ.

ಪ್ರಧಾನಮಂತ್ರಿ- ಒಳ್ಳೆಯದು! ನಿಮಗೆ ನನ್ನ ಅನಂತ ಶುಭ ಹಾರೈಕೆಗಳು. ಉಳಿದ ಹಣವನ್ನು ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಿ. ನಿಮ್ಮ ಜೀವನಕ್ಕೆ ಪ್ರಯೋಜನವಾಗುವಂತೆ ಆ ಹಣವನ್ನು ಸೂಕ್ತವಾಗಿ ಬಳಸಿ. ನಿಮ್ಮೆಲ್ಲರಿಗೆ ಶುಭ ಹಾರೈಸುತ್ತೇನೆ. ಮತ್ತು ಮೊಢೆರಾದ ಸಮಸ್ತ ಜನತೆಗೆ ನನ್ನ ನಮನಗಳು!

ಸ್ನೇಹಿತರೇ, ವರ್ಷಾಬೆನ್ ಮತ್ತು ಬಿಪಿನ್ ಭಾಯ್ ಹೇಳಿರುವುದು ಇಡೀ ದೇಶಕ್ಕೆ, ಗ್ರಾಮಗಳಿಗೆ ಮತ್ತು ನಗರಗಳಿಗೆ ಸ್ಫೂರ್ತಿಯಾಗಿದೆ. ಮೊಢೆರಾದ ಈ ಅನುಭವವನ್ನು ದೇಶದಾದ್ಯಂತ ಅಳವಡಿಸಿಕೊಳ್ಳಬಹುದಾಗಿದೆ . ಸೂರ್ಯನ ಶಕ್ತಿಯು ಈಗ ಹಣವನ್ನು ಉಳಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ. ಮಂಜೂರ್ ಅಹ್ಮದ್ ಲಾರ್ವಾಲ್ ಎಂಬ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಸ್ನೇಹಿತರೊಬ್ಬರಿದ್ದಾರೆ. ಕಾಶ್ಮೀರದಲ್ಲಿ ಚಳಿಗಾಲದ ಕಾರಣ, ವಿದ್ಯುತ್ ವೆಚ್ಚ ಹೆಚ್ಚು ಇದ್ದುದರಿಂದ ಮಂಜೂರ್ ಜಿ ಅವರ ವಿದ್ಯುತ್ ಬಿಲ್ ಕೂಡ 4 ಸಾವಿರ ರೂಪಾಯಿಗಿಂತ ಹೆಚ್ಚಿರುತ್ತಿತ್ತು, ಆದರೆ, ಮಂಜೂರ್ ಜಿ ಅವರ ಮನೆಗೆ ಸೋಲಾರ್ ರೂಫ್‌ಟಾಪ್ ಪ್ಲಾಂಟ್ ಅಳವಡಿಸಿದ್ದರಿಂದ, ಅವರ ವೆಚ್ಚ ಅರ್ಧಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಒಡಿಶಾದ ಕುನ್ನಿ ದೇವೋರಿ ಎಂಬ ಹೆಣ್ಣು ಮಗಳು ಸೌರಶಕ್ತಿಯನ್ನು ತನಗೆ ಹಾಗೂ ಇತರ ಮಹಿಳೆಯರಿಗೆ ಉದ್ಯೋಗದ ಮೂಲವನ್ನಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಕುನ್ನಿ ಒಡಿಶಾದ ಕೆಂದುರ್ ಜಿಲ್ಲೆಯ ಕರ್ದಾಪಾಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ಸೌರಶಕ್ತಿ ಚಾಲಿತ ರೀಲಿಂಗ್ ಯಂತ್ರದಲ್ಲಿ ರೇಷ್ಮೆಯನ್ನು ನೂಲುವ ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ಸೋಲಾರ್ ಮೆಷಿನ್‌ನಿಂದಾಗಿ ಈ ಬುಡಕಟ್ಟು ಮಹಿಳೆಯರು ವಿದ್ಯುತ್ ಬಿಲ್‌ನ ಹೊರೆಯನ್ನು ಹೊರಬೇಕಾಗಿಲ್ಲ ಮತ್ತು ಅವರಿಗೆ ಆದಾಯ ಲಭಿಸುತ್ತಿದೆ. ಇದು ಸೂರ್ಯದೇವನ ಸೌರಶಕ್ತಿಯ ಏಕೈಕ ವರವಾಗಿದೆ. ವರದಾನ ಮತ್ತು ಪ್ರಸಾದದ ಪರಿಧಿ ಹೆಚ್ಚಿದಷ್ಟೂ ಉತ್ತಮ. ಆದುದರಿಂದ, ನನ್ನ ಪ್ರಾರ್ಥನೆಯೇನೆಂದರೆ, ನೀವೂ ಸಹ ಇದರಲ್ಲಿ ಸೇರಿಕೊಳ್ಳಿ ಮತ್ತು ಇತರರನ್ನು ಸೇರಿಸಿ.

ನನ್ನ ಪ್ರಿಯ ದೇಶವಾಸಿಗಳೇ, ಈಗಷ್ಟೇ ನಾನು ನಿಮ್ಮೊಂದಿಗೆ ಸೂರ್ಯನ ಬಗ್ಗೆ ಮಾತನಾಡುತ್ತಿದ್ದೆ. ಈಗ ನನ್ನ ಗಮನವು ಬಾಹ್ಯಾಕಾಶದ ಕಡೆಗೆ ಹೋಗುತ್ತಿದೆ. ಏಕೆಂದರೆ ನಮ್ಮ ದೇಶ ಸೌರ ಕ್ಷೇತ್ರದ ಜೊತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಅದ್ಭುತಗಳನ್ನು ಸಾಧಿಸುತ್ತಿದೆ. ಇಡೀ ವಿಶ್ವವೇ ಇಂದು ಭಾರತದ ಸಾಧನೆಯನ್ನು ಕಂಡು ಬೆರಗಾಗಿದೆ. ಹಾಗಾಗಿ ‘ಮನದ ಮಾತಿನ’ ಕೇಳುಗರಿಗೆ ಇದನ್ನು ಹೇಳುವ ಮೂಲಕ ಅವರನ್ನೂ ಸಂತೋಷಪಡಿಸಬೇಕು ಎಂದುಕೊಂಡೆ.

ಸ್ನೇಹಿತರೇ, ಈಗ ಕೆಲವು ದಿನಗಳಿಗೆ ಮುನ್ನ, ಭಾರತ ಏಕ ಕಾಲದಲ್ಲಿ 36 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನೆಲೆಗೊಳಿಸಿದನ್ನು ನೀವು ನೋಡಿರಬಹುದು. ದೀಪಾವಳಿ ಹಬ್ಬಕ್ಕೆ ಸರಿಯಾಗಿ ಒಂದು ದಿನ ಮೊದಲು, ದೊರೆತ ಈ ಯಶಸ್ಸು ಒಂದು ರೀತಿಯಲ್ಲಿ ನಮ್ಮ ಯುವಜನತೆಯಿಂದ ದೇಶಕ್ಕೆ ದೊರೆತ ದೀಪಾವಳಿ ಹಬ್ಬದ ವಿಶೇಷ ಉಡುಗೊರೆ ಎಂದೇ ಹೇಳಬಹುದು. ಈ ಲಾಂಚಿಂಗ್ ನಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ ನಿಂದ ಕೊಹಿಮಾವರೆಗೆ ಇಡೀ ದೇಶದಲ್ಲಿ ಡಿಜಿಟಲ್ ಸಂಪರ್ಕಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇದರ ಸಹಾಯದಿಂದ ದೂರ ದೂರದ ಪ್ರದೇಶಗಳು ಕೂಡಾ ದೇಶದ ಉಳಿದ ಭಾಗಗಳೊಂದಿಗೆ ಮತ್ತಷ್ಟು ಸುಲಭವಾಗಿ ಸಂಪರ್ಕ ಹೊಂದುತ್ತವೆ. ದೇಶ ಸ್ವಾವಲಂಬಿಯಾದಾಗ ಯಾವ ರೀತಿ ಯಶಸ್ಸಿನ ಹೊಸ ಶಿಖರಗಳನ್ನು ಸಾಧಿಸಬಹುದು ಎನ್ನುವುದಕ್ಕೆ ಇದು ಕೂಡಾ ಒಂದು ಉದಾಹರಣೆಯಾಗಿದೆ. ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಭಾರತಕ್ಕೆ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ ನೀಡದಂತೆ ತಡೆಯಲಾಗಿದ್ದ ಆ ಹಳೆಯ ಸಮಯ ಕೂಡಾ ನನಗೆ ನೆನಪಿಗೆ ಬರುತ್ತಿದೆ. ಆದರೆ ಭಾರತದ ವಿಜ್ಞಾನಿಗಳು ಕೇವಲ ದೇಶೀಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದು ಮಾತ್ರವಲ್ಲದೇ, ಇಂದು ಇದರ ಸಹಾಯದೊಂದಿಗೆ ಹತ್ತಾರು ಉಪಗ್ರಹಗಳನ್ನು ಏಕಕಾಲಕ್ಕೆ ಒಟ್ಟಿಗೆ ಅಂತರಿಕ್ಷಕ್ಕೆ ಕಳುಹಿಸುತ್ತಿದ್ದಾರೆ. ಈ ಲಾಂಚಿಂಗ್ ನೊಂದಿಗೆ ಭಾರತ ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಒಂದು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿದೆ, ಇದರಿಂದ ಬಾಹ್ಯಾಕಾಶ ವಲಯದಲ್ಲಿ ಭಾರತಕ್ಕೆ ಅವಕಾಶಗಳ ಹೊಸ ಬಾಗಿಲು ಕೂಡಾ ತೆರೆದಿದೆ. 

ಸ್ನೇಹಿತರೇ, ಅಭಿವೃದ್ಧಿಹೊಂದಿದ ಭಾರತವಾಗುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವ ನಮ್ಮ ದೇಶ, ಎಲ್ಲರ ಪ್ರಯತ್ನದಿಂದಾಗಿಯೇ, ತನ್ನ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಮೊದಲು ಬಾಹ್ಯಾಕಾಶ ವಲಯ, ಸರ್ಕಾರಿ ವ್ಯವಸ್ಥೆಗಳ ವ್ಯಾಪ್ತಿಗೆ ಸೀಮಿತವಾಗಿತ್ತು. ಬಾಹ್ಯಾಕಾಶ ವಲಯವನ್ನು ಭಾರತದ ಯುವಜನತೆಗಾಗಿ, ಭಾರತದ ಖಾಸಗಿ ವಲಯಕ್ಕಾಗಿ ಮುಕ್ತವಾಗಿ ಯಾವಾಗ ತೆರೆಯಲಾಯಿತೋ ಆಗ ಇದರಲ್ಲಿ ಕ್ರಾಂತಿಕಾರಿ ಪರಿವರ್ತನೆಗಳು ಕಂಡುಬರತೊಡಗಿದವು. ಭಾರತೀಯ ಕೈಗಾರಿಕಾ ವಲಯ ಮತ್ತು ನವೋದ್ಯಮಗಳು ಈ ವಲಯದಲ್ಲಿ ಹೊಸ ಹೊಸ ಆವಿಷ್ಕಾರಗಳು ಮತ್ತು ಹೊಸ ಹೊಸ ತಂತ್ರಜ್ಞಾನಗಳನ್ನು ತರುವುದರಲ್ಲಿ ತೊಡಗಿವೆ. ವಿಶೇಷವಾಗಿ IN-SPACe  ಸಹಯೋಗದೊಂದಿಗೆ ಈ ವಲಯದಲ್ಲಿ ಅತಿ ದೊಡ್ಡ ಬದಲಾವಣೆಯಾಗಲಿದೆ. 

IN-SPACe ಮುಖಾಂತರ ಸರ್ಕಾರೇತರ ಕಂಪೆನಿಗಳಿಗೆ ಕೂಡಾ ತಮ್ಮ ಪೇಲೋಡ್ಸ್ ಮತ್ತು ಉಪಗ್ರಹ ಉಡಾವಣೆ ಮಾಡುವ ಸೌಲಭ್ಯ ದೊರೆಯುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ಭಾರತದಲ್ಲಿ ದೊರೆಯುತ್ತಿರುವ ಈ ದೊಡ್ಡ ಅವಕಾಶಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ನಾನು ಹೆಚ್ಚು ಹೆಚ್ಚು ನವೋದ್ಯಮಗಳು ಹಾಗೂ ಆವಿಷ್ಕಾರಕರಲ್ಲಿ ಮನವಿ ಮಾಡುತ್ತಿದ್ದೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ವಿದ್ಯಾರ್ಥಿಗಳ ವಿಷಯಕ್ಕೆ ಬಂದಾಗ, ಯುವಶಕ್ತಿಯ ವಿಷಯ ಬಂದಾಗ, ಮುಂದಾಳತ್ವ ಶಕ್ತಿಯ ವಿಷಯ ಬಂದಾಗ, ನಮ್ಮ ಮನಸ್ಸಿನಲ್ಲಿ ಕೆಲವು ಹಳೆಯ, ಮಾಸಿದ, ಅನೇಕ ಪರಿಕಲ್ಪನೆಗಳು ಮೂಡುತ್ತವೆ. ವಿದ್ಯಾರ್ಥಿ ಬಲದ ಮಾತು ಬಂದಾಗ, ಅದನ್ನು ವಿದ್ಯಾರ್ಥಿ ಸಂಘದ ಚುನಾವಣೆಯೊಂದಿಗೆ ಜೋಡಿಸಿ, ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗುವುದನ್ನು ನಾವು ಅನೇಕ ಬಾರಿ ನೋಡುತ್ತೇವೆ. ಆದರೆ ವಿದ್ಯಾರ್ಥಿ ಶಕ್ತಿಯ ವ್ಯಾಪ್ತಿ ಬಹಳ ವಿಶಾಲವಾದುದು, ಬಹಳ ದೊಡ್ಡದು. ವಿದ್ಯಾರ್ಥಿ ಶಕ್ತಿ ಎನ್ನುವುದು ಭಾರತವನ್ನು ಶಕ್ತಿಶಾಲಿ ಮಾಡುವುದಕ್ಕೆ ಆಧಾರವಾಗಿದೆ. ಭಾರತವನ್ನು 2047 ರವರೆಗೆ ಕರೆದೊಯ್ಯುವವರು ಇಂದಿನ ಯುವಜನತೆಯೇ ತಾನೇ. ಭಾರತ ಶತಮಾನೋತ್ಸವ ಆಚರಿಸುವಾಗ, ಯುವಜನತೆಯ ಈ ಶಕ್ತಿ, ಅವರ ಶ್ರಮ, ಅವರ ಬೆವರು, ಅವರ ಪ್ರತಿಭೆ, ಭಾರತವನ್ನು ಯಾವ ಎತ್ತರಕ್ಕೆ ಕೊಂಡೊಯ್ಯುತ್ತದೆಯೋ ಅದರ ಸಂಕಲ್ಪವನ್ನು ದೇಶ ಇಂದು ಕೈಗೊಳ್ಳುತ್ತಿದೆ. ನಮ್ಮ ಇಂದಿನ ಯುವಜನಾಂಗ, ದೇಶಕ್ಕಾಗಿ ಕೆಲಸ ಮಾಡುತ್ತಿರುವ ರೀತಿ, ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ರೀತಿ ನೋಡಿ ನನ್ನ ಮನಸ್ಸಿನಲ್ಲಿ ಅತ್ಯಂತ ಭರವಸೆ ಮೂಡಿದೆ. ನಮ್ಮ ಯುವಜನತೆ Hakathon ಗಳಲ್ಲಿ ಸಮಸ್ಯೆ ಪರಿಷ್ಕರಿಸುವ ರೀತಿ, ರಾತ್ರಿಯಿಡೀ ಎಚ್ಚರವಾಗಿದ್ದು ಹಲವಾರು ಗಂಟೆಗಳ ಕಾಲ ಕೆಲಸಮಾಡುವ ರೀತಿ ಬಹಳ ಪ್ರೇರಣಾದಾಯಕವಾಗಿದೆ. ಕಳೆದ ವರ್ಷಗಳಲ್ಲಿ ನಡೆದ ಒಂದು ಹ್ಯಾಕಥಾನ್ಸ್ ದೇಶದ ಲಕ್ಷಾಂತರ ಯುವಕರು ಜೊತೆಗೂಡಿ  ಅನೇಕ ಸವಾಲುಗಳನ್ನು ಪರಿಹರಿಸಿದ್ದಾರೆ.  ದೇಶಕ್ಕೆ  ಹೊಸ ಪರಿಹಾರಗಳನ್ನು ನೀಡಿದ್ದಾರೆ.   

ಸ್ನೇಹಿತರೇ, ನಾನು ಕೆಂಪುಕೋಟೆಯಿಂದ ಜೈ ಅನುಸಂಧಾನ್ ಎಂದು ಕರೆ ನೀಡಿದ್ದು ನಿಮಗೆ ನೆನಪಿರಬಹುದು. ನಾನು ಈ ದಶಕವನ್ನು ಭಾರತದ Techade ಮಾಡುವ ಮಾತು ಕೂಡಾ ಆಡಿದ್ದೆ. ನಮ್ಮ ಐಐಟಿ ವಿದ್ಯಾರ್ಥಿಗಳು ಕೂಡಾ ಇದರ ಜವಾಬ್ದಾರಿ ವಹಿಸಿಕೊಂಡಿರುವುದನ್ನು ನೋಡಿ ನನಗೆ ಬಹಳ ಸಂತೋಷವೆನಿಸಿತು. ಇದೇ ತಿಂಗಳು ಅಂದರೆ  ಅಕ್ಟೋಬರ್ 14-15 ರಂದು ಎಲ್ಲಾ 23 ಐಐಟಿಗಳು ತಮ್ಮ ಆವಿಷ್ಕಾರಗಳು ಮತ್ತು ಸಂಶೋಧನಾ ಪ್ರಾಜೆಕ್ಟ್ ಪ್ರದರ್ಶಿಸಲು ಮೊದಲ ಬಾರಿಗೆ ಒಂದೇ ವೇದಿಕೆಗೆ ಬಂದವು. ಈ ವೇದಿಕೆಯಲ್ಲಿ ದೇಶಾದ್ಯಂತ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಸಂಶೋಧಕರು 75 ಕ್ಕಿಂತ ಹೆಚ್ಚು ಅತ್ಯುತ್ತಮ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ಆರೋಗ್ಯ ಸಂರಕ್ಷಣೆ, ಕೃಷಿ, ರೋಬೋಟಿಕ್ಸ್, ಸೆಮಿ ಕಂಡಕ್ಟರ್ಸ್, 5ಜಿ ಕಮ್ಯೂನಿಕೇಷನ್ಸ್ ಹೀಗೆ ಹಲವಾರು ವಿಷಯಗಳನ್ನು ಆಧರಿಸಿ ಆ ಪ್ರಾಜೆಕ್ಟ್ ಗಳನ್ನು ರೂಪಿಸಲಾಗಿತ್ತು. ಈ ಪ್ರಾಜೆಕ್ಟ್ ಗಳೆಲ್ಲವೂ ಒಂದಕ್ಕಿಂತ ಮತ್ತೊಂದು ಉತ್ತಮವಾಗಿದ್ದವು, ಆದರೆ, ನಾನು ಕೆಲವು ಪ್ರಾಜೆಕ್ಟ್ ಗಳ ಕುರಿತಂತೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಐಐಟಿ ಭುವನೇಶ್ವರ್ ನ ಒಂದು ತಂಡವು ನವಜಾತ ಶಿಶುಗಳಿಗಾಗಿ Portable ventilator ಅಭಿವೃದ್ಧಿ ಪಡಿಸಿತ್ತು. ಇದು ಬ್ಯಾಟರಿ ಚಾಲಿತವಾಗಿದೆ ಮತ್ತು ಇದನ್ನು ದೂರ ದೂರದ ಪ್ರದೇಶಗಳಲ್ಲಿ ಸುಲಭವಾಗಿ ಉಪಯೋಗಿಸಬಹುದಾಗಿದೆ. ಅವಧಿ ಪೂರ್ವ ಜನಿಸಿದಂತಹ ಮಕ್ಕಳ ಜೀವ ಉಳಿಸುವುದರಲ್ಲಿ ಇದು ಬಹಳ ಸಹಾಯಕ ಎಂದು ಸಾಬೀತಾಗಬಹುದು. Electric mobility ಆಗಲಿ, ಡ್ರೋನ್ ತಂತ್ರಜ್ಞಾನವಾಗಲಿ, 5 ಜಿ ಆಗಲಿ, ನಮ್ಮ ಬಹುತೇಕ ವಿದ್ಯಾರ್ಥಿಗಳು, ಇದರೊಂದಿಗಿನ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಐಐಟಿಗಳು ಒಂದಾಗಿ ಬಹುಭಾಷೀಯ ಪ್ರಾಜೆಕ್ಟ್ ಕುರಿತಂತೆ ಕೆಲಸ ಮಾಡುತ್ತಿದ್ದು, ಇದು ಸ್ಥಳೀಯ ಭಾಷೆಗಳನ್ನು ಕಲಿಯುವ ವಿಧಾನವನ್ನು ಸುಲಭಗೊಳಿಸುತ್ತದೆ. ಈ ಪ್ರಾಜೆಕ್ಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳ ಸಾಧನೆಗೆ ಕೂಡಾ ಬಹಳ ಸಹಾಯಕವಾಗುತ್ತದೆ.  ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರ್ ಭಾರತದ ಸ್ವದೇಶೀ 5ಜಿ ಟೆಸ್ಟ್ ಬೆಡ್ ತಯಾರಿಕೆಯಲ್ಲಿ ಮುಂಚೂಣಿ ಪಾತ್ರ ವಹಿಸಿದೆಯೆಂದು ತಿಳಿದು ನಿಮಗೆ ಸಂತೋಷವೆನಿಸಬಹುದು. ಖಂಡಿತವಾಗಿಯೂ  ಇದೊಂದು ಅದ್ಭುತ ಆರಂಭವೇ ಆಗಿದೆ.   ಮುಂಬರುವ ದಿನಗಳಲ್ಲಿ ಇಂತಹ ಅನೇಕ ಪ್ರಯತ್ನಗಳು ನಮಗೆ ಕಾಣಸಿಗುತ್ತವೆ ಎಂಬ ಭರವಸೆ ನನಗಿದೆ. ಐಐಟಿಗಳಿಂದ ಸ್ಫೂರ್ತಿ ಪಡೆದು, ಇತರೆ ವಿದ್ಯಾ ಸಂಸ್ಥೆಗಳು ಕೂಡಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧಿತ ತಮ್ಮ ಕಾರ್ಯ ಚಟುವಟಿಕೆಗೆ ವೇಗ ತುಂಬುತ್ತವೆ ಎಂದು ಕೂಡಾ ನನಗೆ ನಂಬಿಕೆ ಇದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಪರಿಸರ ಕುರಿತ ಕಾಳಜಿ ನಮ್ಮ ಸಮಾಜದ ಕಣ ಕಣದಲ್ಲೂ ತುಂಬಿದೆ ಮತ್ತು ನಾವು ನಮ್ಮ ಸುತ್ತಮುತ್ತಲೂ ಇದರ ಇರುವಿಕೆಯ ಅನುಭವ ಹೊಂದುತ್ತೇವೆ. ಪರಿಸರದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಜನರ ಸಂಖ್ಯೆ ದೇಶದಲ್ಲಿ ಕಡಿಮೆಯೇನಿಲ್ಲ. 

ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರಿಂದ ಕೂಡಾ ನಾವು ಬಹಳಷ್ಟು ಕಲಿಯಬಹುದಾಗಿದೆ. ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಬಗ್ಗೆ ಬಹಳ ಉತ್ಸಾಹ ತುಂಬಿದೆ. 20 ವರ್ಷಗಳ ಹಿಂದೆ ಅವರು ನಗರದ ಸಹಕಾರನಗರದ ಒಂದು ಅರಣ್ಯವನ್ನು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡುವುದಕ್ಕೆ ಮುಂದಾಗಿದ್ದರು. ಈ ಕೆಲಸ ಕಷ್ಟದಿಂದ ಕೂಡಿತ್ತು, ಆದರೆ 20 ವರ್ಷಗಳ ಹಿಂದೆ ನೆಟ್ಟ ಆ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ. ಈಗ ಇದರ ಸೌಂದರ್ಯ ಪ್ರತಿಯೊಬ್ಬರ ಮನಸೂರೆಗೊಳ್ಳುತ್ತದೆ. ಇದರಿಂದಾಗಿ ಅಲ್ಲಿ ವಾಸಿಸುವ ಜನರಿಗೆ ಕೂಡಾ ಬಹಳ ಹೆಮ್ಮೆ ಎನಿಸುತ್ತದೆ. ಸುರೇಶ್ ಕುಮಾರ್ ಮತ್ತೊಂದು ಅದ್ಭುತ ಕೆಲಸವನ್ನು ಕೂಡಾ ಮಾಡುತ್ತಾರೆ. ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರನಗರದಲ್ಲಿ ಒಂದು ಬಸ್ ತಂಗುದಾಣವನ್ನು ಕೂಡಾ ನಿರ್ಮಿಸಿದ್ದಾರೆ. ಅವರು ನೂರಾರು ಜನರಿಗೆ ಕನ್ನಡ ಭಾಷೆಯಲ್ಲಿ ಬರೆಯಲಾಗಿರುವ Brass plate ಗಳನ್ನು ಕೂಡಾ ಉಡುಗೊರೆಯಾಗಿ ನೀಡಿದ್ದಾರೆ. ಪರಿಸರ ಮತ್ತು ಸಂಸ್ಕೃತಿ ಎರಡೂ ಒಟ್ಟಾಗಿ ಬೆಳೆದು, ಅರಳಿದರೆ ಯೋಚಿಸಿ ನೋಡಿ...ಇದು ಎಷ್ಟೊಂದು ದೊಡ್ಡ ಉತ್ತಮ ವಿಚಾರವಲ್ಲವೇ. 

ಸ್ನೇಹಿತರೇ, ಇಂದು ಪರಿಸರ ಸ್ನೇಹಿ ಜೀವನ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಕುರಿತಂತೆ ಜನರಲ್ಲಿ ಮೊದಲಿಗಿಂತ ಅತ್ಯಂತ ಹೆಚ್ಚು ಜಾಗೃತಿ ಕಂಡುಬರುತ್ತಿದೆ. ತಮಿಳುನಾಡಿನ ಇಂತಹದ್ದೇ ಒಂದು ಕುತೂಹಲಕಾರಿ ಪ್ರಯತ್ನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ದೊರೆಯಿತು. ಕೊಯಂಬತ್ತೂರಿನ ಅನಾಯಿಕಟ್ಟೀಯಲ್ಲಿ ಬುಡಕಟ್ಟು ಮಹಿಳೆಯರ ಒಂದು ತಂಡದ ಉತ್ತಮ ಪ್ರಯತ್ನ ಇದಾಗಿದೆ. ಈ ಮಹಿಳೆಯರು ರಫ್ತು ಮಾಡುವುದಕ್ಕಾಗಿ ಹತ್ತು ಸಾವಿರ ಪರಿಸರ ಸ್ನೇಹಿ ಟೆರ್ರಕೋಟಾ ಟೀ ಕಪ್ ಗಳನ್ನು ತಯಾರಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ಟೆರ್ರಕೋಟಾ ಟೀ ಕಪ್ಸ್ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ಮಹಿಳೆಯರು ಸ್ವತಃ ಕೈಗೆತ್ತಿಕೊಂಡರು. Clay Mixing ನಿಂದ ಹಿಡಿದು Final Packaging ವರೆಗೂ ಎಲ್ಲಾ ಕೆಲಸವನ್ನೂ ಸ್ವತಃ ತಾವೇ ಮಾಡಿದರು. ಇದಕ್ಕಾಗಿ ಅವರು ತರಬೇತಿಯನ್ನೂ ಪಡೆದುಕೊಂಡಿದ್ದರು. ಈ ಅದ್ಭುತ ಪ್ರಯತ್ನವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ. 

ಸ್ನೇಹಿತರೇ, ತ್ರಿಪುರಾದ ಕೆಲವು ಗ್ರಾಮಗಳು ಕೂಡಾ ಬಹಳ ಉತ್ತಮ ಉದಾಹರಣೆಗಳನ್ನು ನೀಡಿವೆ. ನೀವು ಬಯೋ ವಿಲೇಜ್ ಎನ್ನುವ ಪದವನ್ನು ಖಂಡಿತವಾಗಿಯೂ ಕೇಳಿರಬಹುದು, ಆದರೆ ತ್ರಿಪುರಾದ ಕೆಲವು ಗ್ರಾಮಗಳು Bio-Village 2 ಮೆಟ್ಟಿಲನ್ನು ಏರಿವೆ. Bio-Village 2 ನಲ್ಲಿ ಪ್ರಾಕೃತಿಕ ವಿಕೋಪಗಳಿಂದ ಸಂಭವಿಸುವ ನಷ್ಟವನ್ನು ಯಾವರೀತಿ ಕಡಿಮೆ ಮಾಡಬಹುದು ಎಂಬ ಅಂಶಕ್ಕೆ ಒತ್ತು ನೀಡಲಾಗುತ್ತದೆ. ಇದರಲ್ಲಿ ವಿಭಿನ್ನ ಕ್ರಮಗಳ ಮೂಲಕ ಜನರ ಜೀವನ ಮಟ್ಟವನ್ನು ಮತ್ತಷ್ಟು ಉತ್ತಮವಾಗಿ ಹೇಗೆ ಮಾಡಬಹುದು ಎಂಬ ಕುರಿತು ಸಂಪೂರ್ಣ ಗಮನ ಹರಿಸಲಾಗುತ್ತದೆ. Solar Energy, Biogas, Bee Keeping ಮತ್ತು Bio Fertilizers, ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಕೇಂದ್ರೀಕರಿಸಲಾಗುತ್ತದೆ. ಒಟ್ಟಾರೆ ನೋಡಿದಲ್ಲಿ, ಹವಾಮಾನ ಬದಲಾವಣೆ ವಿರುದ್ಧ ಅಭಿಯಾನಕ್ಕೆ Bio-Village 2 ಸಾಕಷ್ಟು ಬಲ ತುಂಬಲಿದೆ. ಪರಿಸರ ಸಂರಕ್ಷಣೆ ಕುರಿತಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಉತ್ಸಾಹ ನೋಡಿ ನಾನು ಬಹಳ ಸಂತಸಗೊಂಡಿದ್ದೇನೆ. ಕೆಲವು ದಿನಗಳ ಹಿಂದಷ್ಟೇ, ಭಾರತದಲ್ಲಿ ಪರಿಸರ ಸಂರಕ್ಷಣೆಗಾಗಿ ಸಮರ್ಪಿತ Mission Life ಗೆ ಕೂಡಾ ಚಾಲನೆ ನೀಡಲಾಗಿದೆ. ಮಿಷನ್ ಲೈಫ್ ನ ಸರಳ ಸಿದ್ಧಾಂತವೆಂದರೆ – ಪರಿಸರಕ್ಕೆ ನಷ್ಟ ಉಂಟುಮಾಡದಂತಹ ಜೀವನ ಶೈಲಿಯನ್ನು ಉತ್ತೇಜಿಸುವುದು. ನೀವು ಕೂಡಾ ಮಿಷನ್ ಲೈಫ್ ಕುರಿತು ತಿಳಿದುಕೊಳ್ಳಿ, ಅದನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. 

ಸ್ನೇಹಿತರೇ, ನಾಳೆ, ಅಕ್ಟೋಬರ್ 31 ರಾಷ್ಟ್ರೀಯ ಏಕತಾ ದಿನವಾಗಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲರ ಜಯಂತಿಯ ಶುಭ ಸಂದರ್ಭವಾಗಿದೆ. ಈ ದಿನದಂದು ದೇಶದ ಮೂಲೆ ಮೂಲೆಯಲ್ಲಿ ಏಕತೆಗಾಗಿ ಓಟ ಆಯೋಜಿಸಲಾಗುತ್ತದೆ. ಈ ಓಟ, ದೇಶದಲ್ಲಿ ಏಕತೆಯ ಸೂತ್ರವನ್ನು ಬಲಿಷ್ಠಗೊಳಿಸುತ್ತದೆ, ನಮ್ಮ ಯುವಜನತೆಗೆ ಪ್ರೇರಣೆ ನೀಡುತ್ತದೆ. ಈಗ ಕೆಲವು ದಿನಗಳ ಹಿಂದೆ, ಇಂತಹದ್ದೇ ಭಾವನೆ ನಮ್ಮ ರಾಷ್ಟ್ರೀಯ ಕ್ರೀಡೆಗಳಲ್ಲಿ ನಮಗೆ ಕಂಡುಬಂದಿತ್ತು. ‘ಜುಡೇಗಾ ಇಂಡಿಯಾ ತೋ ಜೀತೇಗಾ ಇಂಡಿಯಾ’ ಈ Theme ನೊಂದಿಗೆ ರಾಷ್ಟ್ರೀಯ ಕ್ರೀಡೆಗಳು ಏಕತೆಯ ಸಂದೇಶವನ್ನು ನೀಡಿದವೋ ಅಂತೆಯೇ ಭಾರತದ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವ ಕೆಲಸವನ್ನೂ ಮಾಡಿದೆ. ಭಾರತದಲ್ಲಿ ಇದುವರೆಗಿನ ರಾಷ್ಟ್ರೀಯ ಕ್ರೀಡೆಗಳ ಬಹು ದೊಡ್ಡ ಆಯೋಜನೆ ಇದಾಗಿತ್ತು ತಿಳಿದು ನಿಮಗೆ ಸಂತೋಷನೆನಿಸುತ್ತದೆ. ಇವುಗಳಲ್ಲಿ 36 ಕ್ರೀಡೆಗಳನ್ನು ಸೇರಿಸಲಾಗಿತ್ತು, ಇವುಗಳ ಪೈಕಿ 7 ಹೊಸಾ ಮತ್ತು ಎರಡು ದೇಶೀಯ ಸ್ಪರ್ಧೆ ಯೋಗಾಸನ ಮತ್ತು ಮಲ್ಲಕಂಭ ಕೂಡಾ ಸೇರಿದ್ದವು. ಚಿನ್ನದ ಪದಕ ಗಳಿಸುವಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಮೂರು ತಂಡಗಳೆಂದರೆ ಸರ್ವೀಸಸ್ ತಂಡ, ಮಹಾರಾಷ್ಟ್ರ ಮತ್ತು ಹರಿಯಾಣದ ತಂಡ. ಈ ಕ್ರೀಡೆಗಳಲ್ಲಿ ಆರು ರಾಷ್ಟ್ರೀಯ ದಾಖಲೆಗಳು ಮತ್ತು ಸುಮಾರು 60 ರಾಷ್ಟ್ರೀಯ ಕ್ರೀಡಾ ದಾಖಲೆಗಳನ್ನು ಕೂಡಾ ಮಾಡಲಾಗಿದೆ.  ಪದಕ ವಿಜೇತರಿಗೆ, ದಾಖಲೆಗಳನ್ನು ಸೃಷ್ಟಿಸಿದವರಿಗೆ, ಈ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡವರನ್ನು, ಎಲ್ಲಾ ಕ್ರೀಡಾಕಾರರಿಗೆ, ಅನೇಕಾನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಈ ಆಟಗಾರರ ಭವ್ಯ ಭವಿಷ್ಯಕ್ಕಾಗಿ ಶುಭ ಕೋರುತ್ತೇನೆ. 

ಸ್ನೇಹಿತರೇ, ಗುಜರಾತ್ ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಯಶಸ್ವಿ ಆಯೋಜನೆಯಲ್ಲಿ ತಮ್ಮ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಮನಃಪೂರ್ವಕವಾಗಿ ಶ್ಲಾಘಿಸುತ್ತೇನೆ. ಗುಜರಾತ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ನವರಾತ್ರಿಯ ಸಂದರ್ಭದಲ್ಲಿ ಆಯೋಜಿಸಲಾಗಿತ್ತೆಂದು ನೀವೆಲ್ಲಾ ನೋಡಿದ್ದೀರಿ. ಈ ಸಮಯದಲ್ಲಿ ಗುಜರಾತ್ ಜನತೆ ಹಬ್ಬದ ಆಚರಣೆಯಲ್ಲಿ ತೊಡಗಿರುತ್ತಾರೆ ಮತ್ತು ಈ ಕ್ರೀಡೆಗಳ ಆನಂದದ ಅನುಭವವನ್ನು ಜನರು ಹೇಗೆ ಆಸ್ವಾದಿಸುತ್ತಾರೆ? ಇಷ್ಟೊಂದು ಭಾರೀ ಸಿದ್ಧತೆ ಹಾಗೂ ಮತ್ತೊಂದೆಡೆ ನವರಾತ್ರಿಯ ಗರ್ಭಾ ಇತ್ಯಾದಿಗಳ ಸಿದ್ಧತೆ. ಈ ಎಲ್ಲಾ ಕೆಲಸವನ್ನೂ ಗುಜರಾತ್ ಒಂದೇ ಬಾರಿಗೆ ಹೇಗೆ ಮಾಡುತ್ತದೆ? ಎನ್ನುವುದು ಈ ಪಂದ್ಯಾವಳಿ ಆಯೋಜನೆಗೆ ಮೊದಲು ನನ್ನ ಮನದಲ್ಲಿ ಮೂಡಿದ್ದ ಪ್ರಶ್ನೆಯಾಗಿತ್ತು ಆದರೆ ಗುಜರಾತ್ ರಾಜ್ಯದ ಜನತೆ ತಮ್ಮ ಅತಿಥಿ ಸತ್ಕಾರದಿಂದ ಎಲ್ಲಾ ಅತಿಥಿಗಳನ್ನೂ ಸಂತೋಷಭರಿತರನ್ನಾಗಿ ಮಾಡಿತು. ಆಹಮದಾಬಾದ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ನಡೆದ ಕಲೆ, ಕ್ರೀಡೆ ಮತ್ತು ಸಂಸ್ಕೃತಿಯ ಸಂಗಮ ಎಲ್ಲರಲ್ಲೂ ಉತ್ಸಾಹ ತುಂಬುವಂತಹದ್ದಾಗಿತ್ತು. ಆಟಗಾರರು ಕೂಡಾ ದಿನದಲ್ಲಿ ಯಾವ ಜಾಗದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೋ ಅಲ್ಲೇ ಸಂಜೆಯ ವೇಳೆ ಗರ್ಭಾ ಮತ್ತು ದಾಂಡಿಯಾದ ವರ್ಣಗಳಲ್ಲಿ ಮುಳುಗೇಳುತ್ತಿದ್ದರು. ಅವರು ಗುಜರಾತಿ ತಿನಿಸುಗಳು ಮತ್ತು ನವರಾತ್ರಿಯ ಚಿತ್ರಗಳನ್ನು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಹಂಚಿಕೊಂಡರು. ಇದನ್ನು ನೋಡುವುದು ನಮಗೆಲ್ಲರಿಗೂ ಬಹಳ ಸಂತೋಷದಾಯಕ ವಿಷಯವಾಗಿದೆ. ಇಂತಹ ಕ್ರೀಡೆಗಳಿಂದ, ಭಾರತದ ವಿವಿಧ ಸಂಸ್ಕೃತಿಯ ಬಗ್ಗೆ ಕೂಡಾ  ತಿಳಿದುಬರುತ್ತದೆ ಅಲ್ಲವೇ. ಇದು ಏಕ್ ಭಾರತ್ ಶ್ರೇಷ್ಠ್ ಭಾರತ್ ಭಾವನೆಯನ್ನು ಕೂಡಾ ಅಷ್ಟೇ ಬಲಿಷ್ಠಗೊಳಿಸುತ್ತದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ನವೆಂಬರ್ ತಿಂಗಳಿನಲ್ಲಿ 15 ತಾರೀಖಿನಂದು ನಮ್ಮ ದೇಶ ಬುಡಕಟ್ಟು ಜನರ ಗೌರವ ದಿನವನ್ನು ಆಚರಿಸುತ್ತದೆ.  ನಿಮಗೆ ನೆನಪಿರಬಹುದು. ದೇಶವು ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಬುಡಕಟ್ಟು ಪರಂಪರೆ ಮತ್ತು ಗೌರವದ ಆಚರಣೆಯನ್ನು ಆರಂಭಿಸಿತು. ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಲಕ್ಷಾಂತರ ಜನರನ್ನು ಒಗ್ಗೂಡಿಸಿದ್ದರು. ಅವರು ಭಾರತದ ಸ್ವಾತಂತ್ರ್ಯ ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದರು. ನಾವು ಧರತೀ ಆಬಾ ಬಿರ್ಸಾ ಮುಂಡಾ ಅವರಿಂದ ಕಲಿಯುವಂತಹದ್ದು ಬಹಳಷ್ಟಿದೆ. ಸ್ನೇಹಿತರೇ, ಧರತೀ ಆಬಾ ಬಿರ್ಸಾ ಮುಂಡಾ ಅವರ ವಿಷಯ ಬಂದಾಗ, ಅವರ ಅಲ್ಪ ಜೀವನಕಾಲದತ್ತ ದೃಷ್ಟಿ ಹರಿಸಿ ನೋಡಿದಾಗ, ನಾವು ಇಂದು ಕೂಡಾ ಅದರಿಂದ ಬಹಳಷ್ಟು ಕಲಿಯಬಹುದಾಗಿದೆ. ಧರತೀ ಆಬಾ ಅವರು ಹೀಗೆಂದು ಹೇಳಿದ್ದರು – ಈ ಭೂಮಿ ನಮ್ಮದು, ನಾವು ಇದರ ರಕ್ಷಕರು. ಅವರ ಈ ವಾಕ್ಯದಲ್ಲಿ ತಾಯ್ನೆಲಕ್ಕಾಗಿ ಕರ್ತವ್ಯದ ಭಾವನೆ ತುಂಬಿದೆ ಮತ್ತು ಪರಿಸರಕ್ಕಾಗಿ ನಮ್ಮ ಕರ್ತವ್ಯದ ಭಾವನೆಯೂ ಅಡಗಿದೆ. ನಾವು ನಮ್ಮ ಬುಡಕಟ್ಟು ಸಂಸ್ಕೃತಿಯನ್ನು ಮರೆಯಬಾರದು, ಅದರಿಂದ ಎಂದಿಗೂ ಸ್ವಲ್ಪವೂ ಕೂಡಾ ದೂರ ಸರಿಯಬಾರದೆಂದು ಅವರು ಯಾವಾಗಲೂ ಒತ್ತಿ ಹೇಳುತ್ತಿದ್ದರು. ಇಂದು ಕೂಡಾ ನಮ್ಮ ದೇಶದ ಬುಡಕಟ್ಟು ಸಮಾಜದಿಂದ ಪ್ರಕೃತಿ ಮತ್ತು ಪರಿಸರ ಕುರಿತಂತೆ ನಾವು ಬಹಳಷ್ಟು ಕಲಿಯಬಹುದಾಗಿದೆ. 

    ಸ್ನೇಹಿತರೇ, ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯ ಸಂದರ್ಭದಲ್ಲಿ, ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ವಸ್ತು ಸಂಗ್ರಹಾಲಯ ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿತ್ತು.  ಸಮಯ ದೊರೆತಾಗ ಇದನ್ನು ನೋಡಲು ಖಂಡಿತವಾಗಿಯೂ ಹೋಗಬೇಕೆಂದು ನಾನು ಯುವಜನತೆಯಲ್ಲಿ ಮನವಿ ಮಾಡುತ್ತೇನೆ. ನವೆಂಬರ್ 1 ರಂದು ಅಂದರೆ ನಾಡಿದ್ದು, ನಾನು ಗುಜರಾತ್-ರಾಜಸ್ತಾನ್ ನ ಗಡಿಯಲ್ಲಿರುವ ಮಾನ್ ಗಢ್ ನಲ್ಲಿರುತ್ತೇನೆ ಎಂದು ನಿಮಗೆ ಹೇಳಲು ಬಯಸುತ್ತೇನೆ. ಭಾರತದ ಸ್ವತಂತ್ರ ಸಂಗ್ರಾಮ ಮತ್ತು ನಮ್ಮ ಸಮೃದ್ಧ ಬುಡಕಟ್ಟು ಪರಂಪರೆಯಲ್ಲಿ ಮಾನಗಢ್ ಗೆ ಬಹಳ ವಿಶಿಷ್ಟ ಸ್ಥಾನವಿದೆ. ಇಲ್ಲಿ ನವೆಂಬರ್ 1913 ರಲ್ಲಿ ಒಂದು ಭೀಕರ ಹತ್ಯಾಕಾಂಡ ನಡೆಯಿತು. ಇದರಲ್ಲಿ ಬ್ರಿಟಿಷರು ಸ್ಥಳೀಯ ಬುಡಕಟ್ಟು ಜನರನ್ನು ನಿರ್ದಯೆಯಿಂದ ಕೊಂದು ಹಾಕಿದರು. ಈ ಹತ್ಯಾಕಾಂಡದಲ್ಲಿ ಒಂದು ಸಾವಿರಕ್ಕೂ ಅಧಿಕ ಬುಡಕಟ್ಟು ಜನಾಂಗದವರು ತಮ್ಮ ಪ್ರಾಣ ಕಳೆದುಕೊಂಡರೆಂದು ಹೇಳಲಾಗುತ್ತದೆ. ಈ ಬುಡಕಟ್ಟು ಚಳುವಳಿಯ ನೇತೃತ್ವವನ್ನು ಗೋವಿಂದ್ ಗುರು ವಹಿಸಿದ್ದರು, ಇವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವಂತಹದ್ದಾಗಿದೆ.  ನಾನು ಇಂದು ಎಲ್ಲಾ ಬುಡಕಟ್ಟು ಹುತಾತ್ಮರಿಗೆ ಮತ್ತು ಗೋವಿಂದ್ ಗುರು ಅವರ ಅದಮ್ಯ ಸಾಹಸ ಮತ್ತು ಶೌರ್ಯಕ್ಕೆ ನಮನ ಸಲ್ಲಿಸುತ್ತೇನೆ. ನಾವು ಈ ಅಮೃತ ಕಾಲದಲ್ಲಿ ಭಗವಾನ್ ಬಿರ್ಸಾ ಮುಂಡಾ, ಗೋವಿಂದ್ ಗುರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಎಷ್ಟು ನಿಷ್ಠೆಯಿಂದ ಅನುಸರಿಸುತ್ತೇವೆಯೋ, ನಮ್ಮ ದೇಶ ಅಷ್ಟೇ ಎತ್ತರವನ್ನು ಮುಟ್ಟುತ್ತದೆ. 

    ನನ್ನ ಪ್ರೀತಿಯ ದೇಶವಾಸಿಗಳೇ, ಬರುವ ನವೆಂಬರ್ 8 ರಂದು ಗುರುಪೂರಬ್ ಆಚರಿಸಲಾಗುತ್ತದೆ. ಗುರು ನಾನಕ್ ಅವರ ಪ್ರಕಾಶ್ ಪರ್ವ್ ನಮ್ಮ  ನಂಬಿಕೆಗೆ ಎಷ್ಟು ಮಹತ್ವದ್ದೋ ನಮಗೆ ಕಲಿಯಲು ಕೂಡಾ ಅಷ್ಟೇ ದೊರೆಯುತ್ತದೆ. ಗುರು ನಾನಕ್ ದೇವ್ ಅವರು ತಮ್ಮ ಇಡೀ ಜೀವನದಲ್ಲಿ ಮಾನವೀಯತೆಯ ಬೆಳಕನ್ನು ಪಸರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ದೇಶವು, ಗುರುಗಳು ಪಸರಿಸಿದ ಬೆಳಕನ್ನು ಜನತೆಗೆ ತಲುಪಿಸುವುದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ. ಗುರು ನಾನಕ್ ದೇವ್ ಅವರ 550 ನೇ ಪ್ರಕಾಶ ಪರ್ವವನ್ನು ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಆಚರಿಸುವ ಸೌಭಾಗ್ಯ ದೊರೆತಿತ್ತು. ದಶಕಗಳ ಕಾಯುವಿಕೆಯ ನಂತರ, ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನಿರ್ಮಾಣ ನೋಡುವುದು ಕೂಡಾ ಅಷ್ಟೇ ಆಹ್ಲಾದಕರ. ಕೆಲವು ದಿನಗಳ ಹಿಂದಷ್ಟೇ, ನನಗೆ ಹೇಮಕುಂಡ್ ಸಾಹಿಬ್ ಗಾಗಿ ರೋಪ್ ವೇ ಗಾಗಿ ಅಡಿಗಲ್ಲು ಇಡುವ ಸೌಭಾಗ್ಯ ಕೂಡಾ ದೊರೆತಿತ್ತು. ನಾವು ನಮ್ಮ ಗುರುಗಳ ಚಿಂತನೆಗಳಿಂದ ನಿರಂತರವಾಗಿ ಕಲಿಯುತ್ತಿರಬೇಕು, ಅದಕ್ಕಾಗಿ ಸಮರ್ಪಣಾ ಭಾವ ಹೊಂದಬೇಕು. ಇದೇ ದಿನ ಕಾರ್ತೀಕ ಮಾಸದ ಹುಣ್ಣಿಮೆ ಕೂಡಾ ಆಗಿದೆ. ಈ ದಿನದಂದು ನಾವು ತೀರ್ಥಕ್ಷೇತ್ರಗಳಲ್ಲಿ, ನದಿಗಳಲ್ಲಿ ಸ್ನಾನ ಮಾಡುತ್ತೇವೆ, ಸೇವೆ ಸಲ್ಲಿಸುತ್ತೇವೆ ಮತ್ತು ದಾನ ಮಾಡುತ್ತೇವೆ. ನಾನು ನಿಮ್ಮೆಲ್ಲರಿಗೂ ಈ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತೇನೆ. ಮುಂಬರುವ ದಿನಗಳಲ್ಲಿ ಅನೇಕ ರಾಜ್ಯಗಳು, ತಮ್ಮ ರಾಜ್ಯೋತ್ಸವವನ್ನು ಕೂಡಾ ಆಚರಿಸಲಿವೆ. ಆಂಧ್ರಪ್ರದೇಶ ತಮ್ಮ ಸಂಸ್ಥಾಪನಾ ದಿನ ಆಚರಿಸಲಿದೆ, ಕೇರಳ ಪಿರವಿ ಆಚರಿಸುತ್ತದೆ. ಕರ್ನಾಟಕ ರಾಜ್ಯೋತ್ಸವ ಆಚರಿಸಲಿವೆ. ಇದೇ ರೀತಿ ಮಧ್ಯಪ್ರದೇಶ, ಛತ್ತೀಸ್ ಗಢ್ ಮತ್ತು ಹರಿಯಾಣಾ ಕೂಡಾ ತಮ್ಮ ತಮ್ಮ ರಾಜ್ಯೋತ್ಸವ ಆಚರಿಸಲಿವೆ.  ನಾನು ಈ ಎಲ್ಲ ರಾಜ್ಯಗಳ ಜನತೆಗೂ ಶುಭಾಶಯಗಳನ್ನು ಹಾರೈಸುತ್ತೇನೆ. ನಮ್ಮ ಎಲ್ಲಾ ರಾಜ್ಯಗಳಲ್ಲಿ, ಪರಸ್ಪರರಿಂದ ಕಲಿಯುವ, ಸಹಯೋಗ ನೀಡುವ ಮತ್ತು ಒಟ್ಟಾಗಿ ಕೆಲಸ ಮಾಡುವ ಸ್ಫೂರ್ತಿ ಎಷ್ಟು ಬಲಿಷ್ಠವಾಗಿರುತ್ತದೆಯೋ ನಮ್ಮ ದೇಶ ಅಷ್ಟೇ ಪ್ರಗತಿಯಾಗುತ್ತದೆ. ನಾವು ಇದೇ ಭಾವನೆಯೊಂದಿಗೆ ಮುಂದೆ ಸಾಗುತ್ತೇವೆಂಬ ಭರವಸೆ ನನಗಿದೆ. ನೀವೆಲ್ಲರೂ ನಿಮ್ಮ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಿಂದಿರಿ. ಮನ್ ಕಿ ಬಾತ್ ನಲ್ಲಿ ಮುಂದಿನ ಭೇಟಿಯವರೆಗೆ ನನಗೆ ಅನುಮತಿ ನೀಡಿ. ನಮಸ್ಕಾರ. ಧನ್ಯವಾದ. 

 

 

 

 

  • shuchita Khanna July 13, 2025

    sir with all this development we really need to work on waste segregation and it should be done from ground root level and from societies ,schools ,colleges etc with awareness and practical workshops giving proper places to take them and to recycle reuse reduce ,pls see to it sir
  • Vikramjeet Singh July 12, 2025

    Modi 🙏🙏🙏
  • Dibakar lohar July 10, 2025

    🙏🙏🙏🙏
  • Jagmal Singh June 28, 2025

    Namo
  • Virudthan May 18, 2025

    🔴🔴🔴JAI SHRI RAM🌺 JAI HIND🔴🔴🔴 🔴🔴BHARAT MATA KI JAI🔴🔴🔴🔴🔴🔴🔴🔴🔴🔴JAI SHRI RAM🌺 JAI HIND🔴🔴🔴 🔴🔴BHARAT MATA KI JAI🔴🔴🔴🔴🔴🔴🔴
  • Ratnesh Pandey April 16, 2025

    भारतीय जनता पार्टी ज़िंदाबाद ।। जय हिन्द ।।
  • Ratnesh Pandey April 10, 2025

    🇮🇳जय हिन्द 🇮🇳
  • Jitendra Kumar April 02, 2025

    🙏🇮🇳❤️
  • Dr srushti March 29, 2025

    namo
  • DASARI SAISIMHA February 27, 2025

    🚩🪷
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
What Happened After A Project Delayed By 53 Years Came Up For Review Before PM Modi? Exclusive

Media Coverage

What Happened After A Project Delayed By 53 Years Came Up For Review Before PM Modi? Exclusive
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives due to a road accident in Pithoragarh, Uttarakhand
July 15, 2025

Prime Minister Shri Narendra Modi today condoled the loss of lives due to a road accident in Pithoragarh, Uttarakhand. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Saddened by the loss of lives due to a road accident in Pithoragarh, Uttarakhand. Condolences to those who have lost their loved ones in the mishap. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”