ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮ್ಯೂನಿಚ್‌ನಿಂದ ಹಿಂದಿರುಗಿದ ನಂತರ ಅಬುಧಾಬಿಯಲ್ಲಿ ಕೆಲಕಾಲ ತಂಗಿದರು. ಪ್ರಧಾನಮಂತ್ರಿಯವರು ಅರಬ್‌ ಸಂಯುಕ್ತ ಸಂಸ್ಥಾನದ(ಯುಎಇ) ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದರು. 2019ರ ಆಗಸ್ಟ್‌ನಲ್ಲಿ ಪ್ರಧಾನಮಂತ್ರಿಯವರು ಅಬುಧಾಬಿಗೆ ಭೇಟಿ ನೀಡಿದ ಬಳಿಕ ಉಭಯ ನಾಯಕರ ನಡುವೆ ನಡೆದ ಮೊದಲ ವೈಯಕ್ತಿಕ ಭೇಟಿ ಇದಾಗಿದೆ. 

ಕಳೆದ ತಿಂಗಳು ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ತಮ್ಮ ವೈಯಕ್ತಿಕ ಸಂತಾಪವನ್ನು ವ್ಯಕ್ತಪಡಿಸುವುದು ಪ್ರಧಾನಮಂತ್ರಿಯವರು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು. ಘನತೆವೆತ್ತ ಶೇಖ್ ಮುಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶೇಖ್ ತಹ್ನೌನ್ ಬಿನ್ ಜಾಯೆದ್ ಅಲ್ ನಹ್ಯಾನ್, ಉಪಪ್ರಧಾನಿ ಶೇಖ್ ಮನ್ಸೂರ್ ಬಿನ್ ಜಾಯೆದ್ ಅಲ್ ನಹ್ಯಾನ್, ಅಬುಧಾಬಿ ಹೂಡಿಕೆ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಶೇಖ್ ಹಮೀದ್ ಬಿನ್ ಜಾಯೆದ್ ಅಲ್ ನಹ್ಯಾನ್, ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವ ಅಬ್ದುಲ್ಲಾ ಶೇಖ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಇತರರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಸಂತಾಪ ಸೂಚಿಸಿದರು.  

ಯುಎಇಯ ಮೂರನೇ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅಬುಧಾಬಿಯ ಆಡಳಿತಗಾರರಾಗಿದ್ದಕ್ಕಾಗಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿಯವರು ಅಭಿನಂದಿಸಿದರು. 

ಕಳೆದ ಕೆಲವು ವರ್ಷಗಳಿಂದ ಜತನದಿಂದ ಅಭಿವೃದ್ಧಿಪಡಿಸಲಾದ ಭಾರತ-ಯುಎಇ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ವಿವಿಧ ಅಂಶಗಳನ್ನು ಉಭಯ ನಾಯಕರು ಪರಾಮರ್ಶಿಸಿದರು. ಫೆಬ್ರವರಿ 18ರಂದು ನಡೆದ ವರ್ಚುವಲ್ ಶೃಂಗಸಭೆಯಲ್ಲಿ, ಎರಡೂ ದೇಶಗಳು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿದ್ದು, ಇದು ಮೇ 01ರಿಂದ ಜಾರಿಗೆ ಬಂದಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. 2021-22ರ ಹಣಕಾಸು ವರ್ಷದಲ್ಲಿ ಉಭಯ ದೇಶಗಳ ನಡುವೆ ಸುಮಾರು 72 ಬಿಲಿಯನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ. ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಯುಎಇ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿರಂತರವಾಗಿ ಹೆಚ್ಚಾಗಿದೆ ಮತ್ತು ಪ್ರಸ್ತುತ 12 ಶತಕೋಟಿ ಡಾಲರ್ನಷ್ಟಿದೆ.

ವರ್ಚುವಲ್ ಶೃಂಗಸಭೆಯಲ್ಲಿ, ಉಭಯ ನಾಯಕರು ಧ್ಯೇಯ ವಾಕ್ಯವನ್ನು ಸಹ ಬಿಡುಗಡೆ ಮಾಡಿದ್ದರು. ಇದು ವ್ಯಾಪಾರ, ಹೂಡಿಕೆ, ಇಂಧನ, ನವೀಕರಿಸಬಹುದಾದ ಇಂಧನ, ಆಹಾರ ಭದ್ರತೆ, ಆರೋಗ್ಯ, ರಕ್ಷಣೆ, ಕೌಶಲ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಬರುವ ವರ್ಷಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಮಾರ್ಗಸೂಚಿಯನ್ನು ರೂಪಿಸಿದೆ. ಭಾರತ ಮತ್ತು ಯುಎಇ ಈ ಕ್ಷೇತ್ರಗಳಲ್ಲಿ ತಮ್ಮ ನಿಕಟ ಮತ್ತು ಸ್ನೇಹಪರ ಸಂಬಂಧಗಳು ಹಾಗೂ ಜನರ ನಡುವಿನ ಐತಿಹಾಸಿಕ ನಂಟನ್ನು ರೂಪಿಸುವಲ್ಲಿ ಪಾಲುದಾರಿಕೆ ಮುಂದುವರಿಸಿರುವ ಬಗ್ಗೆ ಉಭಯ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. ಭಾರತ-ಯುಎಇ ಬಲವಾದ ಇಂಧನ ಪಾಲುದಾರಿಕೆಯನ್ನು ಹೊಂದಿದ್ದು, ಈಗ ನವೀಕರಿಸಬಹುದಾದ ಇಂಧನದ ಮೇಲೆಯೂ ಗಮನ ಹರಿಸುತ್ತಿವೆ. 

ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ʻಯುಎಇʼಯಲ್ಲಿರುವ 3.5 ದಶಲಕ್ಷ ಭಾರತೀಯ ಸಮುದಾಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಕ್ಕಾಗಿ ಯುಎಇ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು. ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಶೀಘ್ರವೇ ಭಾರತಕ್ಕೆ ಭೇಟಿ ನೀಡುವಂತೆ ಅವರು ಆಹ್ವಾನಿಸಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
ASER 2024 | Silent revolution: Drop in unschooled mothers from 47% to 29% in 8 yrs

Media Coverage

ASER 2024 | Silent revolution: Drop in unschooled mothers from 47% to 29% in 8 yrs
NM on the go

Nm on the go

Always be the first to hear from the PM. Get the App Now!
...

Prime Minister Narendra Modi arrived in Washington DC, USA. During the visit he will be meeting US President Donald Trump and other leaders. He will also be taking part in various other programmes.

|
|
|