ಭಾರತ ಜಿ-20 ಅಧ್ಯಕ್ಷತೆ ವಹಿಸಿಕೊಂಡು ಇಂದಿಗೆ 365 ದಿನಗಳಾಗಿವೆ. ಇದು “ವಸುದೈವ ಕುಟುಂಬಕಂ’’ , ಅಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಚೈತನ್ಯವನ್ನು ಪ್ರತಿಬಿಂಬಿಸುವ, ಪುನಃ ಬದ್ಧತೆ ತೋರುವ ಮತ್ತು ಪುನರುಜ್ಜೀವನಗೊಳಿಸುವ ಕ್ಷಣವಾಗಿದೆ. 

ಕಳೆದ ವರ್ಷ ನಾವು ಜವಾಬ್ದಾರಿಯನ್ನು ವಹಿಸಿಕೊಂಡಾಗ, ಇಡೀ ಜಗತ್ತು ಬಹುಮುಖಿ ಸವಾಲುಗಳನ್ನು ಎದುರಿಸುತ್ತಿದ್ದವು. ಅವುಗಳೆಂದರೆ, ಕೋವಿಡ್ -19 ಸಾಂಕ್ರಾಮಿಕದಿಂದ ಚೇತರಿಕೆ, ಹೆಚ್ಚುತ್ತಿರುವ ಹವಾಮಾನ ಅಪಾಯಗಳು, ಹಣಕಾಸು ಅಸ್ಥಿರತೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಾಲ ಬಿಕ್ಕಟ್ಟು, ಬಹುಪಕ್ಷೀಯತೆ ಕುಸಿತ ಸೇರಿ ಹಲವು ಸವಾಲುಗಳಿದ್ದವು. ಸಂಘರ್ಷಗಳು ಮತ್ತು ಸ್ಪರ್ಧೆಗಳ ನಡುವೆಯೇ, ಅಭಿವೃದ್ಧಿ ಸಹಕಾರಕ್ಕೆ ತೊಂದರೆಯಾಯಿತು, ಪ್ರಗತಿಗೆ ಹಿನ್ನಡೆಯಾಯಿತು. 

ಜಿ-20 ಅಧ್ಯಕ್ಷತೆ ವಹಿಸಿಕೊಂಡ ನಂತರ ಭಾರತವು ಯಥಾಸ್ಥಿತಿಗೆ ಪರ್ಯಾಯವಾಗಿ ಹೊಸ ಜಗತ್ತನ್ನು ನೀಡಲು ಪ್ರಯತ್ನಿಸಿತು, ಅದು ಜಿಡಿಪಿ ಕೇಂದ್ರಿತ ಪ್ರಗತಿಯಿಂದ ಮಾನವ ಕೇಂದ್ರಿತ  ಪ್ರಗತಿಯತ್ತ ಬದಲಾಗುವುದು. ಭಾರತವು ನಮ್ಮನ್ನು ವಿಭಜಿಸುವ ಬದಲು ನಮ್ಮನ್ನು ಒಗ್ಗೂಡಿಸುವುದನ್ನು ಜಗತ್ತಿಗೆ ನೆನಪುಮಾಡಿಕೊಡುವ ಗುರಿಯನ್ನು ಹೊಂದಿದೆ. ಅಂತಿಮವಾಗಿ ಸಮಾಲೋಚನೆಗಳು ವಿಕಸನಗೊಳ್ಳಬೇಕಾಗಿತ್ತು–ಕೆಲವರ ಹಿತಾಸಕ್ತಿಗಳು ಹಲವರ ಆಕಾಂಕ್ಷೆಗಳಿಗೆ ದಾರಿ ಮಾಡಿಕೊಡಬೇಕಾಗಿತ್ತು. ಅದಕ್ಕಾಗಿ ನಮಗೆ ತಿಳಿದಿರುವಂತೆ ಬಹುಪಕ್ಷೀಯತೆಯ ಮೂಲಭೂತ ಸುಧಾರಣೆ ಅತ್ಯಗತ್ಯವಾಗಿತ್ತು. 

ಒಗ್ಗೂಡಿದ (ಎಲ್ಲವನ್ನೂ ಒಳಗೊಂಡ), ಮಹತ್ವಾಕಾಂಕ್ಷೆಯ, ಕ್ರಿಯೆ ಆಧರಿತ ಮತ್ತು ನಿರ್ಣಾಯಕ – ಈ ನಾಲ್ಕು ಪದಗಳು ಜಿ-20 ಅಧ್ಯಕ್ಷರಾಗಿ ನಮ್ಮ ಕಾರ್ಯವಿಧಾನವನ್ನು ವ್ಯಾಖ್ಯಾನಿಸುತ್ತವೆ ಮತ್ತು ಎಲ್ಲಾ ಜಿ-20 ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ ಹೊಸದೆಹಲಿ ನಾಯಕ ಘೋಷಣೆ (ಎನ್ ಡಿಎಲ್ ಡಿ), ಈ ತತ್ವಗಳನ್ನು ಪಾಲಿಸುವ ಬಮ್ಮ ಬದ್ಧತೆಯ ಸಂಕೇತವಾಗಿದೆ. 

ಒಗ್ಗೂಡಿದ , ಅಂದರೆ ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಅಧ್ಯಕ್ಷತೆಯ ಹೃದಯಭಾಗವಾಗಿದೆ. ಆಫ್ರಿಕಾ ಒಕ್ಕೂಟ (ಎಯು) ಅನ್ನು ಜಿ-20 ಯ ಖಾಯಂ ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದರಿಂದ ಆಫ್ರಿಕಾದ 55 ರಾಷ್ಟ್ರಗಳನ್ನು ವೇದಿಕೆಗೆ ಸಂಯೋಜಿಸಿತು, ಇದು ಜಾಗತಿಕ ಜನಸಂಖ್ಯೆಯ ಶೇ. 80ರಷ್ಟು ಒಳಗೊಳ್ಳುವಂತೆ ವಿಸ್ತರಣೆ ಮಾಡಿತು. ಈ ಸಕ್ರಿಯ ನಿಲುವು ಜಾಗತಿಕ ಸವಾಲುಗಳು ಮತ್ತು ಅವಕಾಶಗಳ ಕುರಿತು ಹೆಚ್ಚು ಸಮಗ್ರ ಸಂವಾದಕ್ಕೆ ಎಡೆಮಾಡಿಕೊಟ್ಟಿದೆ. 

ಭಾರತವು ಎರಡು ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ “ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್‌ ಸಮ್ಮಿಟ್’’ – ಜಾಗತಿಕ ದಕ್ಷಿಣದ ಧ್ವನಿಯಾಗುವ ಬಹುಪಕ್ಷೀಯತೆಯ ಹೊಸ ಉದಯಕ್ಕೆ ಕಾರಣವಾಯಿತು. ಭಾರತವು ಅಂತಾರಾಷ್ಟ್ರೀಯ ಚರ್ಚೆಯಲ್ಲಿ ಜಾಗತಿಕ ದಕ್ಷಿಣದ ಕಾಳಜಿಯನ್ನು ಮುಖ್ಯವಾಹಿನಿಗೆ ತಂದಿತು ಮತ್ತು ಜಾಗತಿಕ ನಿರೂಪಣೆಯನ್ನು ರೂಪಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವ ಯುಗಕ್ಕೆ ನಾಂದಿ ಹಾಡಿತು.

ಎಲ್ಲರನ್ನೂ ಒಳಗೊಳ್ಳುವಿಕೆ ಜಿ-20ಕ್ಕೆ ಭಾರತದ ದೇಶೀಯ ವಿಧಾನವನ್ನು ಸಹ ಪರಿಚಯಿಸಿತು, ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಸೂಕ್ತವಾದ ಪೀಪಲ್ಸ್ ಪ್ರೆಸಿಡೆನ್ಸಿ ಎನಿಸಿತು. "ಜನ ಭಾಗಿದಾರಿ" (ಜನರ ಪಾಲ್ಗೊಳ್ಳುವಿಕೆ) ಕಾರ್ಯಕ್ರಮಗಳ ಮೂಲಕ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯೂನಿಯನ್ ಟೆರಿಟರೀಸ್) ಪಾಲುದಾರರಾಗಿ ಒಳಗೊಂಡಿರುವ ಜಿ-20 1.4 ಶತಕೋಟಿ ನಾಗರಿಕರನ್ನು ತಲುಪಿದೆ ಮತ್ತು ಹಲವು ಅಂಶಗಳ ಮೇಲೆ, ಭಾರತವು ಜಿ-20ರ ಸಾಧಿಸಲೇಬೇಕಾದ ಗುರಿಗಳಿಗೆ ಹೊಂದಿಕೆಯಾಗುವ ವಿಶಾಲವಾದ ಅಭಿವೃದ್ಧಿ ಗುರಿಗಳತ್ತ ಅಂತಾರಾಷ್ಟ್ರೀಯ ಗಮನ ಸೆಳೆದಿರುವುದನ್ನು ಖಾತ್ರಿಪಡಿಸಿತು. 

2030ರ ಕಾರ್ಯಸೂಚಿಯ ನಿರ್ಣಾಯಕ ಮಧ್ಯಭಾಗದಲ್ಲಿ, ಭಾರತವು ಜಿ-20 2023 ಕ್ರಿಯಾ ಯೋಜನೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ ಡಿಜಿಗಳ) ಸಾಧಿಸುವ ನಿಟ್ಟಿನಲ್ಲಿ  ಪ್ರಗತಿಯನ್ನು ವೇಗಗೊಳಿಸಲು, ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ ಮತ್ತು ಸುಸ್ಥಿರ ಪರಿಸರ ಮತ್ತಿತರ ಅಂತರ ಸಂಪರ್ಕಿತ ಸಮಸ್ಯೆಗಳನ್ನು ದೂರಮಾಡುವ ಕ್ರಮ-ಆಧಾರಿತ ವಿಧಾನವನ್ನು ಕೈಗೊಂಡಿದೆ.

ಈ ಪ್ರಗತಿಯನ್ನು ಮುನ್ನಡೆಸುವ ಪ್ರಮುಖ ವಲಯವೆಂದರೆ ಸದೃಢ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ). ಇಲ್ಲಿ ಮೊದಲಿಗೆ ಆಧಾರ್, ಯುಪಿಐ ಮತ್ತು ಡಿಜಿಲಾಕರ್‌ನಂತಹ ಡಿಜಿಟಲ್ ಆವಿಷ್ಕಾರಗಳ ಕ್ರಾಂತಿಕಾರಿ ಪರಿಣಾಮವನ್ನು ನೇರವಾಗಿ ಕಂಡ ಭಾರತವು ನಿರ್ಣಾಯಕ ಶಿಫಾರಸುಗಳನ್ನು ಮಾಡಿದೆ. ಜಿ-20ರ ಮೂಲಕ ನಾವು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ರೆಪೊಸಿಟರಿ (ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರ)ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ, ಇದು ಜಾಗತಿಕ ತಾಂತ್ರಿಕ ಸಹಯೋಗದಲ್ಲಿ ಗಮನಾರ್ಹ ದಾಪುಗಾಲಾಗಿದೆ. 16 ದೇಶಗಳಿಂದ 50 ಕ್ಕೂ ಅಧಿಕ ಡಿಪಿಐಗಳನ್ನು ಒಳಗೊಂಡಿರುವ ಈ ಭಂಡಾರವು ಅಂತರ್ಗತ ಬೆಳವಣಿಗೆಯ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಲು,  ಗ್ಲೋಬಲ್ ಸೌತ್ ಅನ್ನು ನಿರ್ಮಿಸಲು ಹಾಗೂ ಪಾಲನೆ ಮಾಡಲು ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಸಾಧಿಸಲು ಡಿಪಿಐ ಯ ಶಕ್ತಿಯನ್ನು ಬಳಸಿಕೊಳ್ಳುವುದಾಗಿದೆ.  

ನಮ್ಮ ಒಂದು ಭೂಮಿ ಪರಿಕಲ್ಪನೆಗೆ, ನಾವು ತುರ್ತು, ಶಾಶ್ವತ ಮತ್ತು ಸಮಾನವಾದ ಬದಲಾವಣೆಗಳನ್ನು ತರಲು ನಾವು ಮಹತ್ವಾಕಾಂಕ್ಷೆಯ ಮತ್ತು ಎಲ್ಲರನ್ನೂ ಒಳಗೊಂಡ (ಅಂತರ್ಗತ) ಗುರಿಗಳನ್ನು ಪರಿಚಯಿಸಿದ್ದೇವೆ. “ಹಸಿರು ಅಭಿವೃದ್ಧಿ ಒಪ್ಪಂದ’’ ಘೋಷಣೆಯಂತೆ ಹಸಿವನ್ನು ಎದುರಿಸುವ ಮತ್ತು ಭೂಮಿಯನ್ನು ಸಂರಕ್ಷಿಸುವ ನಡುವಿನ ಆಯ್ಕೆಯ ಸವಾಲುಗಳನ್ನು ಪರಿಹರಿಸುತ್ತದೆ. ಉದ್ಯೋಗ ಮತ್ತು ಜೈವಿಕ ಪೂರಕ ವ್ಯವಸ್ಥೆಗೆ ಪೂಕರವಾಗಿ, ಹವಾಮಾನ ಬಳಕೆಯ ಪ್ರಜ್ಞೆ ಮತ್ತು ಉತ್ಪಾದನೆಯು ಭೂ ಸ್ನೇಹಿಯಾಗಿರುವ ಸಮಗ್ರ ನೀಲನಕ್ಷೆಯನ್ನು ವಿವರಿಸುತ್ತದೆ. ಜೊತೆಗೆ ಜಿ-20 ಘೋಷಣೆಯು 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮಹತ್ವಾಕಾಂಕ್ಷೆಯ ಮೂರು ಪಟ್ಟು ಹೆಚ್ಚಳಕ್ಕೆ ಕರೆ ನೀಡುತ್ತದೆ. ಜಾಗತಿಕ ಜೈವಿಕ ಇಂಧನ ಮೈತ್ರಿ ಸ್ಥಾಪನೆ ಮತ್ತು ಹಸಿರು ಹೈಡ್ರೋಜನ್‌ಗಾಗಿ ಒಂದು ಸಂಘಟಿತ ಉತ್ತೇಜನದೊಂದಿಗೆ, ಸ್ವಚ್ಛವಾದ, ಹಸಿರು ಜಗತ್ತನ್ನು ನಿರ್ಮಿಸುವ ಜಿ-20ಯ ಮಹತ್ವಾಕಾಂಕ್ಷೆಗಳು ನಿರಾಕರಿಸಲಾಗದು. ಇದು ಸದಾ ಭಾರತದ ನೀತಿಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ (ಲೈಫ್) ಮೂಲಕ ಜಗತ್ತು ನಮ್ಮ ಅತ್ಯಂತ ಹಳೆಯ ಪ್ರಾಚೀನ ಸುಸ್ಥಿರ ಸಂಪ್ರದಾಯಗಳಿಂದ ಪ್ರಯೋಜನ ಪಡೆಯಬಹುದು.

ಅಲ್ಲದೆ, ಈ ಘೋಷಣೆಯು ನಮ್ಮ ಹವಾಮಾನ ನ್ಯಾಯ ಮತ್ತು ಸಮಾನತೆಗೆ ನಮ್ಮ ಭದ್ಧತೆಯನ್ನು ಪುನರುಚ್ಚರಿಸುತ್ತದೆ. ಜಾಗತಿಕ ಉತ್ತರದಿಂದ ಗಣನೀಯ ಆರ್ಥಿಕ ಮತ್ತು ತಾಂತ್ರಿಕ ನೆರವಿಗೆ ಒತ್ತಾಯಿಸುತ್ತದೆ . ಇದೇ ಮೊದಲ ಬಾರಿಗೆ, ಅಭಿವೃದ್ಧಿಯ ಹಣಕಾಸಿನ ಪ್ರಮಾಣದಲ್ಲಿ ಅಗತ್ಯವಿರುವ ಭಾರಿ ಏರಿಕೆಯನ್ನು ಗುರುತಿಸಲಾಗಿದ್ದು, ಇದು ಬಿಲಿಯನ್‌ಗಳಿಂದ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳಿಗೇರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು 2030ರ ವೇಳೆಗೆ ತಮ್ಮ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (ಎನ್ ಡಿಸಿಎಸ್) ಈಡೇರಿಸಲು 5.9 ಟ್ರಿಲಿಯನ್ ಡಾಲರ್ ಅಗತ್ಯವಿದೆ ಎಂದು ಜಿ-20 ಒಪ್ಪಿಕೊಂಡಿದೆ.

ಅಗತ್ಯವಿರುವ ಮಹತ್ವದ ಸಂಪನ್ಮೂಲ ಒದಗಿಸುವ ಜತಗೆ ಜಿ-20 ಉತ್ತಮ, ಭಾರಿ ಮತ್ತು ಹೆಚ್ಚು ಪರಿಣಾಮಕಾರಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು. ಏಕಕಾಲದಲ್ಲಿ, ಭಾರತವು ವಿಶ್ವಸಂಸ್ಥೆಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಪ್ರಮುಖ ಅಂಗಗಳ ಪುನರ್ ರಚನೆಯಲ್ಲಿ, ಅದು ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ.

ಲಿಂಗ ಸಮಾನತೆಯು ಘೋಷಣೆಯಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿತ್ತು, ಮುಂದಿನ ವರ್ಷ ಮಹಿಳಾ ಸಬಲೀಕರಣಕ್ಕೆ ಮೀಸಲಾದ  ಕಾರ್ಯಕಾರಿ ಗುಂಪು (ವರ್ಕಿಂಗ್ ಗ್ರೂಪ್) ರಚನೆಯೊಂದಿಗೆ ಸಮಾಪನಗೊಂಡಿತು. ಭಾರತದ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗ ಸಭೆಯ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿಡುವ ಭಾರತದ ಮಹಿಳಾ ಮೀಸಲಾತಿ ಮಸೂದೆ 2023 ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಸಾರುತ್ತದೆ.

ಹೊಸ ದೆಹಲಿ ಘೋಷಣೆಯು ನೀತಿ ಸುಸಂಬದ್ಧತೆ, ವಿಶ್ವಾಸಾರ್ಹ ವ್ಯಾಪಾರ ಮತ್ತು ಮಹತ್ವಾಕಾಂಕ್ಷೆಯ ಹವಾಮಾನ ಕ್ರಿಯೆಯ ಮೇಲೆ ಕೇಂದ್ರೀಕರಿಸುವ ಪ್ರಮುಖ ಆದ್ಯತೆಗಳಲ್ಲಿ ಸಹಯೋಗದ ನವೀಕೃತ ಮನೋಭಾವವನ್ನು ಒಳಗೊಂಡಿದೆ. ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ 87 ಫಲಿತಾಂಶಗಳನ್ನು ಮತ್ತು 118 ದಾಖಲೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದು ಹಿಂದಿ ವರ್ಷಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಭೌಗೋಳಿಕ ರಾಜಕೀಯ ವಿಷಯಗಳು ಮತ್ತು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಅವುಗಳ ಪರಿಣಾಮಗಳ ಕುರಿತು ಚರ್ಚೆಗಳನ್ನು ನಡೆಸಿತು. ಭಯೋತ್ಪಾದನೆ ಮತ್ತು ನಾಗರಿಕರ ಪ್ರಜ್ಞಾಶೂನ್ಯ ಹತ್ಯೆ ಸ್ವೀಕಾರಾರ್ಹವಲ್ಲ ಮತ್ತು ನಾವು ಅದನ್ನು ಶೂನ್ಯ-ಸಹಿಷ್ಣುತೆಯ ನೀತಿಯೊಂದಿಗೆ ಪರಿಹರಿಸಬೇಕು. ನಾವು ಹಗೆತನದ ಮೇಲೆ ಮಾನವೀಯತೆಯನ್ನು ಸಾಕಾರಗೊಳಿಸಬೇಕು ಮತ್ತು ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಬೇಕು.

ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು ಅಸಾಧಾರಣವಾದುದನ್ನು ಸಾಧಿಸಿದೆ ಎಂದು ನಾನು ಸಂತೋಷಪಡುತ್ತೇನೆ: ಇದು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಿತು, ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಿತು, ಅಭಿವೃದ್ಧಿಯನ್ನು ಉತ್ತೇಜಿಸಿ ವೇಗ ನೀಡಿತು ಮತ್ತು ಎಲ್ಲೆಡೆ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿತು.
ಮುಂಬರುವ ವರ್ಷಗಳಲ್ಲಿ ಜನರು, ಭೂಮಿ, ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ಸಾಮೂಹಿಕ ಹೆಜ್ಜೆಗಳ ಬದ್ಧತೆ ಪ್ರತಿಧ್ವನಿಸುತ್ತವೆ ಎಂಬ ವಿಶ್ವಾಸದಿಂದ ನಾವು ಜಿ-20 ಅಧ್ಯಕ್ಷತೆಯನ್ನು ಬ್ರೆಜಿಲ್‌ಗ ಹಸ್ತಾಂತರ ಮಾಡುತ್ತಿದ್ದೇವೆ. 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Govt saved 48 billion kiloWatt of energy per hour by distributing 37 cr LED bulbs

Media Coverage

Govt saved 48 billion kiloWatt of energy per hour by distributing 37 cr LED bulbs
NM on the go

Nm on the go

Always be the first to hear from the PM. Get the App Now!
...
ಏಕ್ತಾ ಕಾ ಮಹಾಕುಂಭ್ - ಹೊಸ ಯುಗದ ಉದಯ
February 27, 2025

- ಶ್ರೀ ನರೇಂದ್ರ ಮೋದಿ,
- ಗೌರವಾನ್ವಿತ ಪ್ರಧಾನಮಂತ್ರಿ

ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಯಶಸ್ವಿಯಾಗಿ ಮುಕ್ತಾಯವಾಗಿದೆ. ಏಕತೆಯ ಮಹಾಯಜ್ಞ ಪೂರ್ಣಗೊಂಡಿದೆ. ಒಂದು ರಾಷ್ಟ್ರದ ಪ್ರಜ್ಞೆ ಜಾಗೃತವಾದಾಗ, ಶತಮಾನಗಳಷ್ಟು ಹಳೆಯದಾದ ಅಧೀನತೆಯ ಮನಸ್ಥಿತಿಯ ಸಂಕೋಲೆಗಳಿಂದ ಮುಕ್ತವಾದಾಗ, ಅದು ನವೀಕೃತ ಶಕ್ತಿಯ ತಾಜಾ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡುತ್ತದೆ. ಇದರ ಫಲಿತಾಂಶವನ್ನು ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕ್ತಾ ಕಾ ಮಹಾಕುಂಭ(ಏಕತೆಯ ಮಹಾಕುಂಭ)ದಲ್ಲಿ ವೀಕ್ಷಿಸಲಾಯಿತು.

2024 ಜನವರಿ 22ರಂದು, ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ, ನಾನು ದೇವಭಕ್ತಿ ಮತ್ತು ದೇಶಭಕ್ತಿಯ ಬಗ್ಗೆ ಮಾತನಾಡಿದೆ - ದೈವಿಕ ಮತ್ತು ರಾಷ್ಟ್ರದ ಮೇಲಿನ ಭಕ್ತಿ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದ ಸಮಯದಲ್ಲಿ, ದೇವರು ಮತ್ತು ದೇವತೆಗಳು, ಸಂತರು, ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಮತ್ತು ಜೀವನದ ಎಲ್ಲಾ ಹಂತಗಳ ಜನರು ಒಟ್ಟಿಗೆ ಬಂದರು. ಅಲ್ಲಿ ನಾವು ರಾಷ್ಟ್ರದ ಜಾಗೃತ ಪ್ರಜ್ಞೆಯನ್ನು ಕಂಡೆವು. ಇದು ಏಕತಾ ಕಾ ಮಹಾಕುಂಭ, ಅಲ್ಲಿ 140 ಕೋಟಿ ಭಾರತೀಯರ ಭಾವನೆಗಳು ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ, ಈ ಪವಿತ್ರ ಸಂದರ್ಭಕ್ಕಾಗಿ ಒಟ್ಟುಗೂಡಿದವು.


ಪ್ರಯಾಗರಾಜ್‌ನ ಈ ಪವಿತ್ರ ಪ್ರದೇಶದಲ್ಲಿ ಶೃಂಗವರ್‌ಪುರವಿದೆ, ಇದು ಏಕತೆ, ಸಾಮರಸ್ಯ ಮತ್ತು ಪ್ರೀತಿಯ ಪವಿತ್ರ ಭೂಮಿಯಾಗಿದೆ, ಅಲ್ಲಿ ಪ್ರಭು ಶ್ರೀರಾಮ ಮತ್ತು ನಿಷಾದರಾಜ್ ಭೇಟಿಯಾಗಿದ್ದರು. ಅವರ ಸಭೆಯು ಭಕ್ತಿ ಮತ್ತು ಸದ್ಭಾವನೆಯ ಸಂಗಮವನ್ನು ಸಂಕೇತಿಸುತ್ತದೆ. ಇಂದಿಗೂ, ಪ್ರಯಾಗರಾಜ್ ನಮಗೆ ಅದೇ ಮನೋಭಾವದಿಂದ ಸ್ಫೂರ್ತಿ ನೀಡುತ್ತದೆ.

45 ದಿನಗಳ ಕಾಲ, ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಜನರು ಸಂಗಮಕ್ಕೆ ಹೋಗುವುದನ್ನು ನಾನು ನೋಡಿದೆ. ಸಂಗಮದಲ್ಲಿ ಭಾವನೆಗಳ ಅಲೆ ಏರುತ್ತಲೇ ಇತ್ತು. ಪ್ರತಿಯೊಬ್ಬ ಭಕ್ತರೂ ಒಂದೇ ಉದ್ದೇಶದಿಂದ ಬಂದರು - ಅದು ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದಾಗಿತ್ತು. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮವು ಪ್ರತಿಯೊಬ್ಬ ಯಾತ್ರಿಕರನ್ನು ಉತ್ಸಾಹ, ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿತು.

ಪ್ರಯಾಗರಾಜ್‌ನಲ್ಲಿ ನಡೆಯುವ ಈ ಮಹಾಕುಂಭವು ಆಧುನಿಕ ನಿರ್ವಹಣಾ ವೃತ್ತಿಪರರು, ಯೋಜನೆ ಮತ್ತು ನೀತಿ ತಜ್ಞರಿಗೆ ಅಧ್ಯಯನದ ವಿಷಯವಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಈ ಪ್ರಮಾಣದ ಯಾವುದೇ ಸಮಾನಾಂತರ ಅಥವಾ ಉದಾಹರಣೆ ಇಲ್ಲ.

ನದಿಗಳ ಸಂಗಮದ ದಡದಲ್ಲಿರುವ ಪ್ರಯಾಗರಾಜ್‌ನಲ್ಲಿ ಕೋಟ್ಯಂತರ ಜನರು ಹೇಗೆ ಒಟ್ಟುಗೂಡಿದರು ಎಂಬುದನ್ನು ಜಗತ್ತು ಆಶ್ಚರ್ಯದಿಂದ ನೋಡಿತು. ಈ ಜನರಿಗೆ ಯಾವುದೇ ಔಪಚಾರಿಕ ಆಹ್ವಾನಗಳು ಇರಲಿಲ್ಲ, ಯಾವಾಗ ಹೋಗಬೇಕೆಂಬುದರ ಬಗ್ಗೆ ಯಾವುದೇ ಪೂರ್ವ ಸಂವಹನವಿರಲಿಲ್ಲ. ಆದರೂ ಕೋಟ್ಯಂತರ ಜನರು ತಮ್ಮದೇ ಆದ ಇಚ್ಛೆಯಿಂದ ಮಹಾಕುಂಭಕ್ಕೆ ಹೊರಟರು ಮತ್ತು ಪವಿತ್ರ ನೀರಿನಲ್ಲಿ ಪುಣ್ಯಸ್ನಾನ ಮಾಡಿ ಆನಂದ ಅನುಭವಿಸಿದರು.

ಪವಿತ್ರ ಸ್ನಾನದ ನಂತರ ಅಪಾರ ಸಂತೋಷ ಮತ್ತು ತೃಪ್ತಿ ಹೊರಸೂಸಿದ ಆ ಮುಖಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಮಹಿಳೆಯರು, ಹಿರಿಯರು, ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು - ಎಲ್ಲರೂ ಸಂಗಮ ತಲುಪಲು ಒಂದು ಮಾರ್ಗ ಕಂಡುಕೊಂಡರು.

ಭಾರತದ ಯುವಕರ ಅಗಾಧ ಭಾಗವಹಿಸಿದ್ದನ್ನು ನೋಡುವುದೇ ನನಗೆ ವಿಶೇಷವಾಗಿ ಹೃದಯಸ್ಪರ್ಶಿಯಾಗಿತ್ತು. ಮಹಾಕುಂಭದಲ್ಲಿ ಯುವ ಪೀಳಿಗೆಯ ಉಪಸ್ಥಿತಿಯು ಭಾರತದ ಯುವಕರು ನಮ್ಮ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಜ್ಯೋತಿ ಹೊತ್ತವರಾಗಿರುತ್ತಾರೆ ಎಂಬ ಆಳವಾದ ಸಂದೇಶವನ್ನು ರವಾನಿಸುತ್ತದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದಾರೆ.

ಈ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಜನರ ಸಂಖ್ಯೆ ನಿಸ್ಸಂದೇಹವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಆದರೆ ಭೌತಿಕವಾಗಿ ಹಾಜರಿದ್ದವರನ್ನು ಮೀರಿ, ಪ್ರಯಾಗ್‌ರಾಜ್‌ಗೆ ತಲುಪಲು ಸಾಧ್ಯವಾಗದ ಕೋಟ್ಯಂತರ ಜನರು ಈ ಸಂದರ್ಭದೊಂದಿಗೆ ಭಾವನಾತ್ಮಕವಾಗಿಯೂ ಆಳವಾದ ಸಂಪರ್ಕ ಹೊಂದಿದ್ದರು. ಯಾತ್ರಿಕರು ತಂದ ಪವಿತ್ರ ನೀರು ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಆನಂದದ ಮೂಲವಾಯಿತು. ಮಹಾಕುಂಭದಿಂದ ಹಿಂದಿರುಗಿದ ಅನೇಕರನ್ನು ಅವರ ಹಳ್ಳಿಗಳಲ್ಲಿ ಗೌರವದಿಂದ ಸ್ವೀಕರಿಸಲಾಯಿತು, ಸಮಾಜವು ಸಹ ಗೌರವಿಸಿತು.

ಕಳೆದ ಕೆಲವು ವಾರಗಳಲ್ಲಿ ನಡೆದದ್ದು ಅಭೂತಪೂರ್ವ ಮತ್ತು ಮುಂಬರುವ ಶತಮಾನಗಳಿಗೆ ಭದ್ರ ಅಡಿಪಾಯ ಹಾಕಿದೆ.

ಯಾರೂ ಊಹಿಸಿದ್ದಕ್ಕಿಂತ ಹೆಚ್ಚಿನ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸಿದರು. ಕುಂಭಮೇಳದ ಹಿಂದಿನ ಅನುಭವಗಳ ಆಧಾರದ ಮೇಲೆ ಆಡಳಿತವು ಹಾಜರಾತಿಯನ್ನು ಅಂದಾಜು ಮಾಡಿತ್ತು.

ಈ ಏಕ್ತಾ ಕಾ ಮಹಾಕುಂಭದಲ್ಲಿ ಅಮೆರಿಕದ ಜನಸಂಖ್ಯೆಯ ಸುಮಾರು 2 ಪಟ್ಟು ಜನರು ಭಾಗವಹಿಸಿದ್ದರು.

ಆಧ್ಯಾತ್ಮಿಕ ವಿದ್ವಾಂಸರು ಕೋಟ್ಯಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ವಿಶ್ಲೇಷಿಸಿದರೆ, ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವ ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಕಂಡುಕೊಂಡರು. ಇದು ಹೊಸ ಭಾರತದ ಭವಿಷ್ಯವನ್ನು ಬರೆಯುವ ಹೊಸ ಯುಗದ ಉದಯ ಎಂದು ನಾನು ನಂಬುತ್ತೇನೆ.

ಸಾವಿರಾರು ವರ್ಷಗಳಿಂದ, ಮಹಾಕುಂಭವು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸಿದೆ. ಪ್ರತಿ ಪೂರ್ಣಕುಂಭದಲ್ಲೂ ಸಂತರು, ವಿದ್ವಾಂಸರು ಮತ್ತು ಚಿಂತಕರು ತಮ್ಮ ಕಾಲದಲ್ಲಿ ಸಮಾಜದ ಸ್ಥಿತಿಗತಿ ಕುರಿತು ಚರ್ಚಿಸಲು ಸಭೆ ಸೇರುತ್ತಿದ್ದರು. ಅವರ ಪ್ರತಿಬಿಂಬಗಳು ರಾಷ್ಟ್ರ ಮತ್ತು ಸಮಾಜಕ್ಕೆ ಹೊಸ ದಿಕ್ಕು ತೋರಿದ್ದವು. ಪ್ರತಿ 6 ವರ್ಷಗಳಿಗೊಮ್ಮೆ, ಅರ್ಧಕುಂಭದ ಸಮಯದಲ್ಲಿ, ಈ ವಿಚಾರಗಳನ್ನು ಪರಿಶೀಲಿಸಲಾಗುತ್ತಿತ್ತು. 144 ವರ್ಷಗಳ ಕಾಲ ನಡೆದ 12 ಪೂರ್ಣಕುಂಭ ಕಾರ್ಯಕ್ರಮಗಳ ನಂತರ, ಬಳಕೆಯಲ್ಲಿಲ್ಲದ ಸಂಪ್ರದಾಯಗಳನ್ನು ಕೈಬಿಡಲಾಯಿತು, ಹೊಸ ವಿಚಾರಗಳನ್ನು ಸ್ವೀಕರಿಸಲಾಯಿತು ಮತ್ತು ಹೊಸ ಸಂಪ್ರದಾಯಗಳನ್ನು ಸೃಷ್ಟಿಸಲಾಯಿತು.

144 ವರ್ಷಗಳ ನಂತರ, ಈ ಮಹಾಕುಂಭದಲ್ಲಿ, ನಮ್ಮ ಸಂತರು ಮತ್ತೊಮ್ಮೆ ಭಾರತದ ಅಭಿವೃದ್ಧಿ ಪ್ರಯಾಣಕ್ಕಾಗಿ ನಮಗೆ ಹೊಸ ಸಂದೇಶ ನೀಡಿದ್ದಾರೆ. ಆ ಸಂದೇಶ ಅಭಿವೃದ್ಧಿ ಹೊಂದಿದ ಭಾರತ – ವಿಕಿಸಿತ ಭಾರತ.

ಈ ಏಕ್ತಾ ಕಾ ಮಹಾಕುಂಭದಲ್ಲಿ, ಪ್ರತಿಯೊಬ್ಬ ಯಾತ್ರಿಕರು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಯುವಕರಾಗಿರಲಿ ಅಥವಾ ವೃದ್ಧರಾಗಿರಲಿ, ಹಳ್ಳಿಗಳಿಂದ ಅಥವಾ ನಗರಗಳಿಂದ, ಭಾರತದಿಂದ ಅಥವಾ ವಿದೇಶಗಳಿಂದ, ಪೂರ್ವ ಅಥವಾ ಪಶ್ಚಿಮದಿಂದ, ಉತ್ತರ ಅಥವಾ ದಕ್ಷಿಣದಿಂದ, ಜಾತಿ, ಧರ್ಮ ಮತ್ತು ಸಿದ್ಧಾಂತ ಲೆಕ್ಕಿಸದೆ ಒಟ್ಟುಗೂಡಿದರು. ಇದು ಕೋಟ್ಯಂತರ ಜನರಲ್ಲಿ ವಿಶ್ವಾಸ ತುಂಬಿದ ಏಕ ಭಾರತ - ಶ್ರೇಷ್ಠ ಭಾರತ ದೃಷ್ಟಿಕೋನದ ಸಾಕಾರವಾಗಿತ್ತು. ಈಗ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯಕ್ಕಾಗಿ ನಾವು ಒಂದೇ ಉತ್ಸಾಹದಲ್ಲಿ ಒಟ್ಟಿಗೆ ಸೇರಬೇಕು.

ಚಿಕ್ಕ ಹುಡುಗನಾಗಿದ್ದಾಗ, ಶ್ರೀಕೃಷ್ಣನು ತನ್ನ ತಾಯಿ ಯಶೋಧೆಗೆ ತನ್ನ ಬಾಯಿಯೊಳಗಿನ ಇಡೀ ಬ್ರಹ್ಮಾಂಡದ ಚಿತ್ರವನ್ನು ಬಹಿರಂಗಪಡಿಸಿದ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದೇ ರೀತಿ, ಈ ಮಹಾಕುಂಭದಲ್ಲಿ, ಭಾರತದ ಜನರು ಮತ್ತು ಇಡೀ ವಿಶ್ವದ ಜನರು ಭಾರತದ ಸಾಮೂಹಿಕ ಶಕ್ತಿಯ ಬೃಹತ್ ಸಾಮರ್ಥ್ಯ ಕಂಡಿದ್ದಾರೆ. ನಾವು ಈಗ ಈ ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮನ್ನು ಅರ್ಪಿಸಿಕೊಳ್ಳಬೇಕು.

ಈ ಹಿಂದೆ, ಭಕ್ತಿ ಚಳವಳಿಯ ಸಂತರು ಭಾರತದಾದ್ಯಂತ ನಮ್ಮ ಸಾಮೂಹಿಕ ಸಂಕಲ್ಪದ ಬಲವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಸ್ವಾಮಿ ವಿವೇಕಾನಂದರಿಂದ ಶ್ರೀ ಅರಬಿಂದೋವರೆಗೆ, ಪ್ರತಿಯೊಬ್ಬ ಮಹಾನ್ ಚಿಂತಕರೂ ನಮ್ಮ ಸಾಮೂಹಿಕ ಸಂಕಲ್ಪದ ಶಕ್ತಿಯನ್ನು ನಮಗೆ ನೆನಪಿಸಿದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರು ಸಹ ಇದನ್ನೇ ಅನುಭವಿಸಿದರು. ಸ್ವಾತಂತ್ರ್ಯಾ ನಂತರ, ಈ ಸಾಮೂಹಿಕ ಶಕ್ತಿಯನ್ನು ಸರಿಯಾಗಿ ಗುರುತಿಸಿ ಎಲ್ಲರ ಕಲ್ಯಾಣವನ್ನು ಹೆಚ್ಚಿಸುವಲ್ಲಿ ಬಳಸಿದ್ದರೆ, ಅದು ಹೊಸದಾಗಿ ಸ್ವತಂತ್ರ ರಾಷ್ಟ್ರಕ್ಕೆ ಒಂದು ದೊಡ್ಡ ಶಕ್ತಿಯಾಗುತ್ತಿತ್ತು. ದುರದೃಷ್ಟವಶಾತ್, ಇದನ್ನು ಮೊದಲೇ ಮಾಡಲಾಗಿಲ್ಲ. ಆದರೆ ಈಗ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಜನರ ಈ ಸಾಮೂಹಿಕ ಶಕ್ತಿ ಹೇಗೆ ಒಟ್ಟಿಗೆ ಬರುತ್ತಿದೆ ಎಂಬುದನ್ನು ವೀಕ್ಷಿಸಲು ನನಗೆ ಸಂತೋಷವಾಗಿದೆ.

ವೇದಗಳಿಂದ ವಿವೇಕಾನಂದರವರೆಗೆ, ಪ್ರಾಚೀನ ಗ್ರಂಥಗಳಿಂದ ಆಧುನಿಕ ಉಪಗ್ರಹಗಳವರೆಗೆ, ಭಾರತದ ಶ್ರೇಷ್ಠ ಸಂಪ್ರದಾಯಗಳು ಈ ರಾಷ್ಟ್ರವನ್ನು ರೂಪಿಸಿವೆ. ಒಬ್ಬ ನಾಗರಿಕನಾಗಿ, ನಮ್ಮ ಪೂರ್ವಜರು ಮತ್ತು ಸಂತರ ನೆನಪುಗಳಿಂದ ನಾವು ಹೊಸ ಸ್ಫೂರ್ತಿ ಪಡೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಈ ಏಕ್ತಾ ಕಾ ಮಹಾಕುಂಭವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ನಮಗೆ ಸಹಾಯ ಮಾಡಲಿ. ಏಕತೆಯನ್ನು ನಮ್ಮ ಮಾರ್ಗದರ್ಶಿ ತತ್ವವನ್ನಾಗಿ ಮಾಡಿಕೊಳ್ಳೋಣ. ರಾಷ್ಟ್ರ ಸೇವೆಯೇ ದೈವಿಕ ಸೇವೆ ಎಂಬ ತಿಳಿವಳಿಕೆಯೊಂದಿಗೆ ನಾವು ಕೆಲಸ ಮಾಡೋಣ.

ಕಾಶಿಯಲ್ಲಿ ನನ್ನ ಚುನಾವಣಾ ಪ್ರಚಾರ ಸಮಯದಲ್ಲಿ, "ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ" ಎಂದು ನಾನು ಹೇಳಿದ್ದೆ. ಇದು ಕೇವಲ ಭಾವನೆಯಲ್ಲ, ನಮ್ಮ ಪವಿತ್ರ ನದಿಗಳ ಸ್ವಚ್ಛತೆಯ ಕಡೆಗೆ ಜವಾಬ್ದಾರಿಯ ಕರೆಯೂ ಆಗಿತ್ತು. ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದಲ್ಲಿ ನಿಂತಾಗ, ನನ್ನ ಸಂಕಲ್ಪ ಇನ್ನಷ್ಟು ಬಲವಾಯಿತು. ನಮ್ಮ ನದಿಗಳ ಸ್ವಚ್ಛತೆಯು ನಮ್ಮ ಸ್ವಂತ ಜೀವನಕ್ಕೆ ಆಳವಾಗಿ ಸಂಬಂಧಿಸಿದೆ. ನಮ್ಮ ನದಿಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಅವುಗಳನ್ನು ಜೀವ ನೀಡುವ ತಾಯಂದಿರಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಮಹಾಕುಂಭವು ನಮ್ಮ ನದಿಗಳ ಸ್ವಚ್ಛತೆಯ ಕಡೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡಿದೆ.

ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸುವುದು ಸುಲಭದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನಮ್ಮ ಭಕ್ತಿಯಲ್ಲಿ ಯಾವುದೇ ನ್ಯೂನತೆಗಳಿದ್ದರೆ ನಮ್ಮನ್ನು ಕ್ಷಮಿಸುವಂತೆ ನಾನು ಗಂಗಾ ಮಾತೆ, ಯಮುನಾ ಮಾತೆ ಮತ್ತು ಸರಸ್ವತಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ. ಜನತಾ ಜನಾರ್ದನರನ್ನು ನಾನು ದೈವತ್ವದ ಸಾಕಾರವಾಗಿ ನೋಡುತ್ತೇನೆ. ಅವರಿಗೆ ಸೇವೆ ಸಲ್ಲಿಸುವ ನಮ್ಮ ಪ್ರಯತ್ನಗಳಲ್ಲಿ ಯಾವುದೇ ನ್ಯೂನತೆಗಳಿದ್ದರೆ, ನಾನು ಜನರ ಕ್ಷಮೆ ಕೋರುತ್ತೇನೆ.

ಮಹಾಕುಂಭಕ್ಕೆ ಕೋಟ್ಯಂತರ ಜನರು ಭಕ್ತಿಯಿಂದ ಬಂದರು. ಅವರಿಗೆ ಸೇವೆ ಸಲ್ಲಿಸುವುದು ಕೂಡ ಅದೇ ರೀತಿಯ ಭಕ್ತಿಯಿಂದ ನಿರ್ವಹಿಸಲಾದ ಜವಾಬ್ದಾರಿಯಾಗಿತ್ತು. ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, ಯೋಗಿ ಜಿ ಅವರ ನೇತೃತ್ವದಲ್ಲಿ ಆಡಳಿತ ಮತ್ತು ಜನರು ಒಟ್ಟಾಗಿ ಈ ಏಕ್ತಾ ಕಾ ಮಹಾಕುಂಭವನ್ನು ಯಶಸ್ವಿಗೊಳಿಸಿದರು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ, ಏಕ್ತಾ ಕಾ ಮಹಾಕುಂಭದಲ್ಲಿ ಆಡಳಿತಗಾರರಾಗದೆ, ಬದಲಾಗಿ, ಎಲ್ಲರೂ ಶ್ರದ್ಧಾಭರಿತ ಸೇವಕರಾಗಿದ್ದರು. ನೈರ್ಮಲ್ಯ ಕಾರ್ಮಿಕರು, ಪೊಲೀಸರು, ದೋಣಿ ಚಾಲಕರು, ಚಾಲಕರು, ಆಹಾರ ಪೂರೈಸುವ ಸ್ವಯಂಸೇವಕರು - ಎಲ್ಲರೂ ದಣಿವರಿಯದೆ ಕೆಲಸ ಮಾಡಿದರು. ಅನೇಕ ಅನನುಕೂಲತೆಗಳನ್ನು ಎದುರಿಸುತ್ತಿದ್ದರೂ ಪ್ರಯಾಗರಾಜ್ ಜನರು ಯಾತ್ರಿಕರನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ ರೀತಿ ವಿಶೇಷವಾಗಿ ಸ್ಫೂರ್ತಿದಾಯಕವಾಗಿತ್ತು. ಅವರಿಗೆ ಮತ್ತು ಉತ್ತರ ಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.

ನಮ್ಮ ದೇಶದ ಉಜ್ವಲ ಭವಿಷ್ಯದ ಬಗ್ಗೆ ನನಗೆ ಯಾವಾಗಲೂ ಅಚಲ ವಿಶ್ವಾಸವಿದೆ. ಈ ಮಹಾಕುಂಭ ವೀಕ್ಷಿಸುವುದು ನನ್ನ ನಂಬಿಕೆಯನ್ನು ಹಲವು ಪಟ್ಟು ಬಲಪಡಿಸಿದೆ.

140 ಕೋಟಿ ಭಾರತೀಯರು ಏಕ್ತಾ ಕಾ ಮಹಾಕುಂಭವನ್ನು ಜಾಗತಿಕ ಸಂದರ್ಭವನ್ನಾಗಿ ಪರಿವರ್ತಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ನಮ್ಮ ಜನರ ಸಮರ್ಪಣೆ, ಭಕ್ತಿ ಮತ್ತು ಪ್ರಯತ್ನಗಳಿಂದ ಪ್ರೇರಿತನಾಗಿ, 12 ಜ್ಯೋತಿರ್ಲಿಂಗಗಳಲ್ಲಿ

ಮೊದಲನೆಯದಾದ ಶ್ರೀ ಸೋಮನಾಥನನ್ನು ಶೀಘ್ರದಲ್ಲೇ ಭೇಟಿ ಮಾಡಿ, ಈ ಸಾಮೂಹಿಕ ರಾಷ್ಟ್ರೀಯ ಪ್ರಯತ್ನಗಳ ಫಲವನ್ನು ಅವರಿಗೆ ಅರ್ಪಿಸುತ್ತೇನೆ, ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ.

ಮಹಾಕುಂಭದ ಭೌತಿಕ ರೂಪವು ಮಹಾಶಿವರಾತ್ರಿಯಂದು ಯಶಸ್ವಿಯಾಗಿ ಪರಾಕಾಷ್ಠೆ ತಲುಪಿರಬಹುದು, ಆದರೆ ಗಂಗೆಯ ಶಾಶ್ವತ ಹರಿವಿನಂತೆಯೇ, ಮಹಾಕುಂಭವು ಜಾಗೃತಗೊಳಿಸಿದ ಆಧ್ಯಾತ್ಮಿಕ ಶಕ್ತಿ, ರಾಷ್ಟ್ರೀಯ ಪ್ರಜ್ಞೆ ಮತ್ತು ಏಕತೆ ಮುಂದಿನ ಪೀಳಿಗೆಗಾಗಿ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.