
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಪ್ರಮುಖ 4 ಯೋಜನೆಗಳಿಗೆ ಅನುಮೋದನೆ ನೀಡಿದೆ. ಒಟ್ಟು ಅಂದಾಜು ವೆಚ್ಚ 18,658 ಕೋಟಿ ರೂ. ಆಗಿದೆ. 3 ರಾಜ್ಯಗಳ 15 ಜಿಲ್ಲೆಗಳನ್ನು ಒಳಗೊಂಡ 4 ಯೋಜನೆಗಳು ಅಂದರೆ ಮಹಾರಾಷ್ಟ್ರ, ಒಡಿಶಾ ಮತ್ತು ಛತ್ತೀಸ್ಗಢವನ್ನು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳ ಜಾಲವನ್ನು ಸುಮಾರು 1,247 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.
ಈ ಕೆಳಗಿನ ಯೋಜನೆಗಳು ಸೇರಿವೆ:
i. ಸಂಬಲ್ ಪುರ - ಜರಪ್ಡಾ 3 ಮತ್ತು 4ನೇ ಮಾರ್ಗ(ಸಾಲು)
ii. ಜರ್ಸುಗುಡ - ಸಸನ್ 3ನೇ ಮತ್ತು 4ನೇ ಮಾರ್ಗ(ಸಾಲು)
iii. ಖಾರ್ಸಿಯಾ - ನಯಾ ರಾಯ್ಪುರ್ - ಪರ್ಮಲ್ಕಾಸಾ 5ನೇ ಮತ್ತು 6ನೇ(ಮಾರ್ಗ)ಸಾಲು
iv. ಗೊಂಡಿಯಾ - ಬಲ್ಹರ್ಷಾ ಜೋಡಿ ಮಾರ್ಗ
ರೈಲು ಮಾರ್ಗಗಳ ವಿಸ್ತರಣೆ(ಹೆಚ್ಚಳ) ಸಾಮರ್ಥ್ಯವು ರೈಲುಗಳ ಸಂಚಾರವನ್ನು ಸುಧಾರಿಸುತ್ತದೆ, ಭಾರತೀಯ ರೈಲ್ವೆಗೆ ಹೆಚ್ಚಿನ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಒದಗಿಸುತ್ತದೆ. ಈ ಬಹು-ಮಾರ್ಗಗಳ ಅಭಿವೃದ್ಧಿ ಪ್ರಸ್ತಾವನೆಗಳು ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತದೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಭಾರತೀಯ ರೈಲ್ವೆಯ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಒದಗಿಸುತ್ತದೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಸಮಗ್ರ ಅಭಿವೃದ್ಧಿಯ ಮೂಲಕ ಇದು ಆಯಾ ಭಾಗದ ಜನರಿಗೆ "ಆತ್ಮನಿರ್ಭರ" ಪ್ರದೇಶವನ್ನಾಗಿ ಮಾಡುತ್ತದೆ, ಇದು ಅವರ ಉದ್ಯೋಗ/ಸ್ವ-ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ.
ಈ ಯೋಜನೆಗಳು ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಬಹು-ಮಾದರಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಪರಿಣಾಮವಾಗಿದೆ, ಇದು ಸಮಗ್ರ ಯೋಜನೆಯ ಮೂಲಕ ಸಾಧ್ಯವಾಗಿದೆ ಮತ್ತು ಜನರು, ಸರಕುಗಳು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕ ಒದಗಿಸುತ್ತದೆ.
ಈ ಯೋಜನೆಗಳೊಂದಿಗೆ 19 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು, ಇದು 2 ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ(ಗಡ್ ಚಿರೋಲಿ ಮತ್ತು ರಾಜನಂದಗಾಂವ್) ಸಂಪರ್ಕ ಹೆಚ್ಚಿಸುತ್ತದೆ. ಬಹುಮಾರ್ಗ (ಮಲ್ಟಿ-ಟ್ರ್ಯಾಕಿಂಗ್) ಯೋಜನೆಯು ಸುಮಾರು 3,350 ಹಳ್ಳಿಗಳು ಮತ್ತು ಸುಮಾರು 47.25 ಲಕ್ಷ ಜನಸಂಖ್ಯೆಗೆ ಸಂಪರ್ಕ ಹೆಚ್ಚಿಸುತ್ತದೆ.
ಖರ್ಸಿಯಾ - ನಯಾ ರಾಯ್ ಪುರ - ಪರ್ಮಲ್ಕಾಸಾ ಬಲೋಡಾ ಬಜಾರ್ನಂತಹ ಹೊಸ ಪ್ರದೇಶಗಳಿಗೆ ನೇರ ಸಂಪರ್ಕ ಒದಗಿಸುತ್ತದೆ, ಇದು ಈ ಪ್ರದೇಶದಲ್ಲಿ ಸಿಮೆಂಟ್ ಸ್ಥಾವರಗಳು ಸೇರಿದಂತೆ ಹೊಸ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ಸುಣ್ಣದ ಕಲ್ಲು ಮುಂತಾದ ಸರಕುಗಳ ಸಾಗಣೆಗೆ ಇವು ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವೃದ್ಧಿ ಕಾರ್ಯಗಳು 88.77 ಎಂಟಿಪಿಎ (ವಾರ್ಷಿಕ ದಶಲಕ್ಷ ಟನ್) ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗುತ್ತವೆ. ರೈಲ್ವೆಗಳು ಪರಿಸರ-ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆ ವಿಧಾನವಾಗಿರುವುದರಿಂದ ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸರಕು ಸಾಗಣೆ ವೆಚ್ಚ ಕಡಿಮೆ ಮಾಡಲು, ತೈಲ ಆಮದು(95 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು (477 ಕೋಟಿ ಕೆಜಿ) ಸಹಾಯ ಮಾಡುತ್ತದೆ, ಇದು 19 ಕೋಟಿ ಸಸಿಗಳನ್ನು ನೆಡುವುದಕ್ಕೆ ಸಮಾನವಾಗಿರುತ್ತದೆ.